ಜೀವ ಭಕ್ಷಕಗಳಾಗುತ್ತಿರುವ ಜೀವರಕ್ಷಕ ಔಷಧಿಗಳು-ಆಂಟಿಬಯೋಟಿಕ್

ಜೀವ ಭಕ್ಷಕಗಳಾಗುತ್ತಿರುವ ಜೀವರಕ್ಷಕ ಔಷಧಿಗಳು ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿ ಕಂಡುಬಂದಿದೆ. ಪದೇ ಪದೇ ಆಂಟಿಬಯೋಟಿಕ್ ಬಳಸುವುದು, ರೋಗದ ಲಕ್ಷಣಗಳನ್ನು ಅಭ್ಯಸಿಸಿ ಡಾ||ಗೂಗಲ್ ಸಹಾಯದಿಂದ ನೀವೇ ವೈದ್ಯರಾಗಿ, ನಿಮ್ಮ ರೋಗಕ್ಕೆ ನೀವೇ ಸ್ವಯಂ ಔಷಧಿಗಳನ್ನು ಆಯ್ಕೆ ಮಾಡಿ ಬಳಸಿದಲ್ಲಿ ಮುಂದಾಗುವ ದುರಂತಕ್ಕೆ ನೀವೇ ಹೊಣೆಗಾರರಾಗುತ್ತೀರಿ.

ಜೀವ ಭಕ್ಷಕಗಳಾಗುತ್ತಿರುವ ಜೀವರಕ್ಷಕ ಔಷಧಿಗಳು-ಆಂಟಿಬಯೋಟಿಕ್

ಒಂದು ಮುಂಜಾನೆ ನನ್ನ ಮನೆಯ ಸಮೀಪದ ಮೆಡಿಕಲ್ ಶಾಪ್‍ಗೆ ವಿಪರೀತ ತಲೆನೋವು ತಾಳಲಾರದೆ ವಿಕ್ಸ್ ತರಲೆಂದು ಹೋಗಿದ್ದೆ. ಆ ಬಡಾವಣೆಗೆ ಅದೊಂದೇ ಔಷಧಿ ಅಂಗಡಿಯಾದ ಕಾರಣದಿಂದಲೇ ಏನೋ ಮುಂಜಾನೆಯೇ ಬಹಳ ಜನಸಂದಣಿ ಇತ್ತು. ನನ್ನ ಮುಂದುಗಡೆ ಸರದಿ ಸಾಲಲ್ಲಿ ನಡು ಹರೆಯದ ಯುವಕನೊಬ್ಬ ನಿಂತಿದ್ದ. ಪದೇ ಪದೇ ಸೀನುತ್ತಿದ್ದ ಮತ್ತು ಕರವಸ್ತ್ರದಿಂದ ಮೂಗಿನಿಂದ ಸುರಿಯುತ್ತಿದ್ದ ನೆಗಡಿಯನ್ನು ಒರೆಸುತ್ತಿದ್ದ. ಹವಾನಿಯಂತ್ರಿತ ಔಷಧಿ ಅಂಗಡಿಯಲ್ಲೂ ಆತ ಚಡಪಡಿಸುತ್ತಿದ್ದ. ಔಷಧಿ ಅಂಗಡಿಯ ನೌಕರನ ಬಳಿ ಆತ ವಿಪರೀತ ಶೀತ, ತಲೆನೋವು ಮತ್ತು ಮೈಕೈ ನೋವು ಇದೆ ಯಾವುದಾದರೂ ಮಾತ್ರೆ ನೀಡಿ ಸಾಯಂಕಾಲದೊಳಗೆ ಕಡಮೆಯಾಗಬೇಕು, ರಾತ್ರಿ ಬೆಂಗಳೂರಿಗೆ ಹೋಗಲಿಕ್ಕಿದೆ, ನಾಳೆ ಬೇರೆ ಕೆಲಸದ ದಿನ, ಸ್ವಲ್ಪ ಸ್ಟ್ರಾಂಗ್ ಡೋಸ್ ಔಷಧಿಯನ್ನೇ ನೀಡಿ ಎಂದು ವಿಶೇಷವಾದ ವಿನಂತಿಯನ್ನು ಮಾಡಿದ್ದು.

ಔಷಧಿ ಅಂಗಡಿಯಾತನಿಗೆ ನಾನು ವೈದ್ಯನೆಂದು ತಿಳಿದಿಲ್ಲವೋ ಏನೋ ಗೊತ್ತಿಲ್ಲ. ಆತ ಆ ವ್ಯಕ್ತಿಯ ಬಳಿ ಜ್ವರ ಇದೆಯಾ?, ಆಲರ್ಜಿ ಇದೆಯಾ?, ಹೀಗೆ ಒಂದೆರಡು ಪ್ರಶ್ನೆ ಕೇಳಿ ಒಂದೆರಡು ನಿಮಿಷದಲ್ಲಿ ಒಳಗೆ ಹೋಗಿ ನಾಲ್ಕಾರು ಬಗೆಯ ಔಷಧಿಗಳನ್ನು ತಂದು ಮೇಜಿನ ಮೇಲೆ ಸುರಿದ. ಅಲ್ಲೇ ಇದನ್ನೆಲ್ಲಾ ನೋಡುತ್ತಿದ್ದ ನನಗೆ ಕುತೂಹಲ ಜಾಸ್ತಿಯಾಗಿತ್ತು. ಕೌತುಕ ತಾಳಲಾರದೆ ಔಷಧಿಯ ಹತ್ತಿರ ಕಣ್ಣು ಹಾಯಿಸಿದೆ. ಒಂದಷ್ಟು ಆಂಟಿಬಯೋಟಿಕ್‍ಗಳು, ನೋವು ನಿವಾರಕಗಳು, ಆಂಟಿಹಿಸ್ಟಮಿನ್ ಗುಳಿಗೆಗಳು ಮತ್ತು ಒಂದಷ್ಟು ಆಂಟಾಸಿಡ್ (ಹೊಟ್ಟೆ ಉರಿ ಕಡಮೆಯಾಗಿಸುವ ಔಷಧಿ) ಮತ್ತು ವಿಟಮಿನ್ ಗುಳಿಗೆಗಳನ್ನು ನೀಡಿ, ಔಷಧಿ ಸೇವನೆಯ ಬಗ್ಗೆಯು ಒಂದಿಷ್ಟು ಉಚಿತ ಮಾಹಿತಿ ನೀಡಿದ. ಒಂದು ಡೋಸ್ ಈಗಲೇ ತೆಗೆದುಕೊಳ್ಳಿ ಎಂದು ಹೇಳಿ ಒಂದು ಬಿಸ್ಲೆರಿ ನೀರಿನ ಬಾಟಲನ್ನು ಎದುರಿಗಿಟ್ಟ.  ಆ ಯುವಕ ನಾಲ್ಕೈದು ಗುಳಿಗೆಗಳನ್ನು ಒಂದೇ ಏಟಿಗೆ ನುಂಗಿ ನೀರು ಕುಡಿದು ಮಗದೊಮ್ಮೆ ಜೋರಾಗಿ ಸೀನಿದ ಮತ್ತು ಈ ಬಾರಿ ಸುರಿಯುತ್ತಿದ್ದ ನೆಗಡಿಯನ್ನು ಅಂಗಿಯ ತೋಳಿನಿಂದ ಒರೆಸಿದ.

ಔಷಧಿ ನೀಡಿದ ವ್ಯಕ್ತಿ ಕೇಳಿದ ಹಣವನ್ನು ನೀಡಿ ಚಿಲ್ಲರೆಗೂ ಕಾಯದೆ ಆ ವ್ಯಕ್ತಿ ಅಲ್ಲಿಂದ ಕಾಲುಕಿತ್ತ. ನಾನು ನಿಂತಲ್ಲೇ ದಂಗಾಗಿ ಹೋದೆ. ನನ್ನ ಬಳಿ “ಸಾರ್ ನಿಮಗೆ ಯಾವ ಔಷಧಿ ನೀಡಲಿ” ಎಂದು ಕೇಳಿದಾಗಲೇ ನಾನು ಇಹಲೋಕಕ್ಕೆ ಬಂದಿದ್ದು!!! “ನಿಮಗೂ ಜ್ವರ ಇದೆಯಾ?” ಎಂದು ಆತ ಕೇಳುವ ಮೊದಲು ನಾನು ಅಲ್ಲಿಂದ ಜಾಗ ಖಾಲಿ ಮಾಡಿದ್ದೆ. ಯಾತಕ್ಕಾಗಿ ನಾನು ಮೆಡಿಕಲ್ ಶಾಪ್‍ಗೆ ಬಂದಿದ್ದೆ ಎಂಬುದನ್ನು ಮರೆತಿದ್ದೆ. ಮನೆಗೆ ತಲುಪಿ ಸಾವರಿಸಿಕೊಂಡು ಪತ್ನಿಯ ಬಳಿ ಬಂದು ಸ್ಟ್ರಾಂಗ್ ಕಾಫಿ ಕೊಡು ಎಂದು ಆದೇಶ ನೀಡುವ ಮೊದಲೇ ಹಬೆಯಾಡುವ ಕಾಫಿ ರೆಡಿಯಾಗಿತ್ತು. ಎಲ್ಲಿ ನೀವು ತಂದ “ವಿಕ್ಸ್” ಎಂದು ಆಕೆ ಕೇಳಿದಾಗಲೇ ನನ್ನ ಮರೆವಿನ ಅರಿವು ನನಗಾಗಿದ್ದು. ಅಯ್ಯೋ ಮರೆತು ಬಿಟ್ಟೆ ಎಂದು ಹೇಳುವ ಮೊದಲೇ ನನ್ನಾಕೆ “ಈ ವಯಸ್ಸಲ್ಲೂ ಏನು ಮರೆವು ನಿಮ್ಮದು” ಎಂದು ಗೊಣಗುತ್ತಾ ಮರೆಯಾದಳು. ನಾನಿನ್ನೂ ‘ಮೆಡಿಕಲ್ ಶಾಪ್’ನ ಘಟನೆಯ ಗುಂಗಿನಲ್ಲೇ ಇದ್ದೆ.

ಔಷಧಿ ಅಂಗಡಿಗಳ ಮಾಲಿಕರೇ ಮೊದಲ ವೈದ್ಯರು. 

ಮೇಲೆ ತಿಳಿಸಿದ ಘಟನೆ ನಮ್ಮ ದೇಶದ ಮೂಲೆಮೂಲೆಯಲ್ಲಿ ಪ್ರತಿದಿನವೂ ನಡೆಯುತ್ತಿರುತ್ತದೆ. ಔಷಧಿ ಅಂಗಡಿಯಲ್ಲಿ ಮಾಲಿಕರು ಅಥವಾ ನೌಕರರು ದಿನನಿತ್ಯ “ವೈದ್ಯರ” ಪಾತ್ರವನ್ನು ನಿರಾತಂಕವಾಗಿ ವರ್ಷಾನೂ ವರ್ಷಗಳಿಂದ ನಿಭಾಯಿಸುತ್ತಿದ್ದಾರೆ. ಅವರ ಬಳಿ ಔಷಧಿ ಮಾರುವ ಲೈಸನ್ಸ್ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರೋಗಿಗಳಿಗೆ ಔಷಧಿಯನ್ನು ಯಾವುದೇ ಅಡೆತಡೆ ಇಲ್ಲದೇ ನೀಡುತ್ತಲೇ ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಂತೂ ತಲೆನೋವು, ಹಲ್ಲುನೋವು, ಹೊಟ್ಟೆನೋವು, ವಾಂತಿ, ಭೇದಿ, ಹೊಟ್ಟೆ ಉರಿ, ಶೀತ, ಕೆಮ್ಮು, ನೆಗಡಿ ಇತ್ಯಾದಿಗಳಿಗೆ ಔಷಧಿ ಅಂಗಡಿಗಳ ಮಾಲಿಕರೇ ಮೊದಲ ವೈದ್ಯರು. ಅವರು ನೀಡಿದ ಔಷಧಿಯಲ್ಲಿ ಕಡಮೆಯಾಗದಿದ್ದರೆ ಮಾತ್ರ ವೈದ್ಯರ ಬಳಿ ಬರುತ್ತಾರೆ. ಕೆಲವೊಮ್ಮೆ ವೈದ್ಯರ ಬಳಿ ತಲುಪಿದಾಗ ರೋಗಿಯ ರೋಗ ಉಲ್ಬಣವಾಗಿ, ವಿಪರೀತ ಹಂತಕ್ಕೆ ತಲುಪಿರುತ್ತದೆ.

ಇನ್ನು ಕೆಲವೊಮ್ಮೆ ಔಷಧಿ ಇಲ್ಲದೆ ಗುಣವಾಗುವ ರೋಗಗಳಿಗೂ ಅನಗತ್ಯ ಔಷಧಿ ಸೇವನೆ ಮಾಡಲಾಗುತ್ತದೆ. ಔಷಧಿ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಔಷಧಿ ನೀಡಬಾರದು ಎಂಬ ಕಾನೂನು ಇದ್ದರೂ ಈ ರೀತಿಯ ಮೆಡಿಕಲ್ ಔಷಧಿಗಾರಿಕೆ ನಮ್ಮ ಭಾರತ ದೇಶದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಮೇಲೆ ತಿಳಿಸಿದ ಯುವಕನಿಗೆ ಆಗಿರುವುದು ವೈರಾಣುವಿನ ಸೋಂಕುನಿಂದಾದ ಶೀತ ಮತ್ತು ತಲೆನೋವು. ಈ ರೀತಿಯ ಸಂದರ್ಭಗಳಲ್ಲಿ ಆಂಟಿಬಯೋಟಿಕ್ ಔಷಧಿಯ ಅಗತ್ಯವೇ ಇರುವುದಿಲ್ಲ. ಮೇಲಾಗಿ ಆಂಟಿಬಯೋಟಿಕ್ ಔಷಧಿಗಳಿಂದ ವೈರಾಣುಗಳ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಅನಗತ್ಯವಾಗಿ ಇಲ್ಲಿ ಆಂಟಿಬಯೋಟಿಕ್ ಔಷಧಿಯನ್ನು ಬಳಸಿ, ಮುಂದೆ ನಿಜವಾಗಿಯೂ ಆಂಟಿಬಯೋಟಿಕ್ ಅಗತ್ಯವಿರುವ ಸಂದರ್ಭಗಳಲ್ಲಿ ಪುನಃ ಬಳಸಿದಾಗ ಅದರ ತೀವ್ರತೆ ಮತ್ತು ಗುಣಮಟ್ಟ ಕಡಮೆಯಾಗುವ ಸಾಧ್ಯತೆ ಇರುತ್ತದೆ.

ಪದೇ ಪದೇ ಆಂಟಿಬಯೋಟಿಕ್ ಬಳಸುವುದು, (ಅಗತ್ಯವಿಲ್ಲದಿದ್ದರೂ) ಸ್ವಯಂ ಔಷಧಿಗಾರಿಕೆ, ಸರಿಯಾದ ಪ್ರಮಾಣದಲ್ಲಿ ಬಳಸದೇ ಇರುವುದು, ಸರಿಯಾದ ದಿನಗಳವರೆಗೆ ಒಂದು ಸಂಪೂರ್ಣ ಕೋರ್ಸ್ ಆಂಟಿಬಯೋಟಿಕ್ ತೆಗೆದುಕೊಳ್ಳದಿರುವುದು ಇತ್ಯಾದಿ ಕಾರಣದಿಂದಾಗಿ ಆಂಟಿಬಯೋಟಿಕ್ ಪ್ರತಿರೋದ ಶಕ್ತಿಯನ್ನು ಬ್ಯಾಕ್ಟೀರಿಯಾಗಳು ಗಳಿಸಿಕೊಳ್ಳುತ್ತದೆ. ಮುಂದೆ ನಿಜವಾಗಿಯೂ ಮಾರಣಾಂತಿಕ ಅಥವಾ ಪ್ರಾಣಾಂತಕಾರಿ ಸೋಂಕು ಬಂದಾಗ ಈ ಆಂಟಿಬಯೋಟಿಕ್‍ಗಳು ‘ಬ್ಯಾಕ್ಟೀರಿಯಾ’ಗಳ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಾಗದೆ ರೋಗಿಯ ಜೀವಕ್ಕೂ ತುತ್ತು ಬರುವ ಸಾಧ್ಯತೆ ಹೆಚ್ಚಾಗುತ್ತದೆ.

ಜೀವ ಭಕ್ಷಕಗಳಾಗುತ್ತಿರುವ ಜೀವರಕ್ಷಕ ಔಷಧಿಗಳು-ಆಂಟಿಬಯೋಟಿಕ್

ಆಂಟಿಬಯೋಟಿಕ್ ಪ್ರತಿರೋಧಕತೆ ಯಾಕಾಗಿ ಬರುತ್ತದೆ?:

ಬ್ಯಾಕ್ಟೀರಿಯಾ ಎಂದರೆ ಕೇವಲ ಒಂದು ಜೀವಕೋಶವಿರುವ ಸೂಕ್ಷಾಣು ಜೀವಿಯಾಗಿದ್ದು, ದೇಹದ ಎಲ್ಲೆಡೆ (ಒಳಗೆ ಮತ್ತು ಹೊರಗೆ) ಇರುತ್ತದೆ. ಹೆಚ್ಚಿನ ಬ್ಯಾಕ್ಟೀರಿಯಾಗಳು ನಿರುಪದ್ರವಿಯಾಗಿದ್ದು, ನಮ್ಮ ದೇಹದೊಳಗಡೆ ಬದುಕುತ್ತಿರುತ್ತವೆ. ಹೆಚ್ಚಿನ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಕರುಳು (Intestine)ನಲ್ಲಿ ಕಾಣಸಿಗುತ್ತದೆ. ಕೆಲವೊಂದು ಬ್ಯಾಕ್ಟೀರಿಯಾಗಳು ದೇಹದ ಪ್ರತಿರೋಧಕ ಶಕ್ತಿ ಕಡಮೆಯಾದಾಗ ಸೋಂಕನ್ನು ಉಂಟುಮಾಡಿ ರೋಗಕ್ಕೆ ಕಾರಣವಾಗುತ್ತದೆ. ಇನ್ನೂ ಕೆಲವು ಬ್ಯಾಕ್ಟೀರಿಯಾಗಳು ನಿಜವಾಗಿಯೂ ಉಪದ್ರಕಾರಕ ಜೀವಿಯಾಗಿದ್ದು ಆಕಸ್ಮಿಕವಾಗಿ ದೇಹದೊಳಗೆ ಸೇರಿದಲ್ಲಿ ರೋಗಕ್ಕೆ ನಾಂದಿ ಹಾಡುತ್ತದೆ. ಇನ್ನು ವೈರಾಣುಗಳು (virus) ಬ್ಯಾಕ್ಟೀರಿಯಾಗಳಿಗಿಂತಲೂ ಚಿಕ್ಕದಾದ ಜೀವಿಯಾಗಿದ್ದು, ಮನುಷ್ಯನ ದೇಹದ ಜೀವಕೋಶದ ಹೊರಗೆ ಬದುಕಲಾರವು. ಆರೋಗ್ಯವಂತ ಜೀವಕೋಶಗಳನ್ನು ಆಕ್ರಮಿಸಿಕೊಂಡು ರೋಗಕ್ಕೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾಗಳನ್ನು ಎದುರಿಸಲು ಮತ್ತು ನಿರ್ನಾಮ ಮಾಡಲು ಬಳಸುವ ಔಷಧಿಯನ್ನು “ಆಂಟಿಬಯೋಟಿಕ್” ಎನ್ನುತ್ತಾರೆ.

ಈ ಆಂಟಿಬಯೋಟಿಕ್‍ಗಳು ಬ್ಯಾಕ್ಟೀರಿಯಾವನ್ನು ನಾಶಮಾಡುತ್ತದೆ, ಇಲ್ಲವೇ ಅವುಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಿ ರೋಗ ಉಂಟಾಗದಂತೆ ನೋಡಿಕೊಳ್ಳುತ್ತವೆ. ಆದರೆ ಈ ಆಂಟಿಬಯೋಟಿಕ್‍ಗಳಿಂದ ವೈರಾಣುಗಳಿಗೆ (virus) ಯಾವುದೇ ಹಾನಿ ಆಗುವುದಿಲ್ಲ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವೈರಾಣುವಿನ ಸೋಂಕಿನಿಂದ ಆದ ಶೀತ, ಜ್ವರ, ಗಂಟಲು ಕೆರೆತ, ಕೆಮ್ಮುಗಳಿಗೆ ಆಂಟಿಬಯೋಟಿಕ್ ಅವಶ್ಯಕತೆ ಇರುವುದಿಲ್ಲ. ಆಂಟಿಬಯೋಟಿಕ್ ಪ್ರತಿರೋಧಕತೆ ಎಂದರೆ, ಬ್ಯಾಕ್ಟೀರಿಯಗಳು ಆಂಟಿಬಯೋಟಿಕ್ ಔಷಧಿಯ ಪರಿಣಾಮವನ್ನು ಮೆಟ್ಟಿನಿಂತು ರೋಗವನ್ನು ಉಲ್ಬಣಗೊಳಿಸುವ ಪ್ರಕ್ರಿಯೆ. ಈ ಆಂಟಿಬಯೋಟಿಕ್ ಪ್ರತಿರೋಧಕತೆ ಒಂದು ಜಾಗತಿಕವಾದ ಸಮಸ್ಯೆಯಾಗಿದ್ದು ಮುಂದುವರಿದ ದೇಶಗಳಲ್ಲಿ ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿ ಕಂಡುಬಂದಿದೆ.

ಆಂಟಿಬಯೋಟಿಕಗಳ ಪ್ರತಿರೋಧಕಕ್ಕೆ ಮುಖ್ಯ ಕಾರಣಗಳೆಂದರೆ :

1. ಅತಿಯಾದ ಆಂಟಿಬಯೋಟಿಕ್‍ಗಳ ಸೇವನೆ.
2. ಅನಗತ್ಯವಾಗಿ ಆಂಟಿ ಬಯೋಟಿಕ್ ಔಷಧಿಗಳ ಸೇವನೆ. ಉದಾ:- ಶೀತ, ಕೆಮ್ಮು, ಪ್ಲೂ, ಇತ್ಯಾದಿ…
3. ಸರಿಯಾದ ಪ್ರಮಾಣದಲ್ಲಿ ಆಂಟಿಬಯೋಟಿಕ್ ಔಷಧಿ ಬಳಸದಿರುವುದು.
4. ನಿಗದಿತ ದಿನಗಳವರೆಗೆ ಆಂಟಿಬಯೋಟಿಕ್ ಔಷಧಿ ಬಳಸದಿರುವುದು.
5. ಸ್ವಯಂ ಔಷಧಿಗಾರಿಕೆ, ಅಂದರೆ ವೈದ್ಯರ ಸಲಹೆ ಇಲ್ಲದೆ ತಾವೇ ರೋಗಿ ಮತ್ತು ವೈದ್ಯರಾಗಿ, ರೋಗಕ್ಕೆ ತಾವು ಔಷಧಿ ನಿರ್ಣಯ ಮಾಡಿ ಔಷಧಿ ಸೇರಿಸುವ ಹುಂಬತನ.

ಈ ರೀತಿ ಆಂಟಿಬಯೋಟಿಕ್‍ಗಳನ್ನು ದುರ್ಬಳಕೆ ಮಾಡಿದಾಗ, ಕೆಲವೊಮ್ಮೆ ಹಲವಾರು ಬ್ಯಾಕ್ಟೀರಿಯಾಗಳು ಔಷಧಿಗಳ ಪರಿಣಾಮವನ್ನು ಮೆಟ್ಟಿನಿಂತು ತಮ್ಮ ದೇಹದ ಆಕೃತಿಗಳಲ್ಲಿ ಬದಲಾವಣೆ ಮಾಡಿಕೊಂಡು, ವಿಪರೀತ ಪರಿಸ್ಥಿತಿಯಲ್ಲೂ ಬದುಕುವ ದಾರಿ ಕಂಡು ಕೊಳ್ಳುತ್ತವೆ ಮತ್ತು ಹೊಸದಾದ ದೇಹರಚನೆ ಉಳ್ಳ  ಹೊಸತೊಂದು ಬ್ಯಾಕ್ಟೀರಿಯಾಗಳ ಜನನಕ್ಕೆ ಕಾರಣವಾಗಿ, ಹೊಸದಾದ ರೋಗವನ್ನು ಹುಟ್ಟು ಹಾಕುತ್ತದೆ. ತಮ್ಮ ದೇಹದ ರಚನೆಯನ್ನು ಮಾರ್ಪಾಡು ಮಾಡಿಕೊಂಡು ಆಂಟಿಬಯೋಟಿಕ್ ಔಷಧಿಗಳು ತಮ್ಮ ದೇಹದ ಜೀವಕೋಶಗಳ ಒಳಗೆ ಸೇರದಂತೆ ಮಾಡಿಕೊಂಡು ವಿಷಮ ಪರಿಸ್ಥಿತಿಯಲ್ಲೂ ಬದುಕಲು ಕಲಿತುಕೊಂಡು, ಹೊಸ ರೀತಿಯ ದೇಹ ರಚನೆ ಉಳ್ಳ ಬ್ಯಾಕ್ಟೇರಿಯಾಗಳ ಉಗಮಕ್ಕೆ ಕಾರಣವಾಗಿರುತ್ತದೆ ಮತ್ತು ಈ ರೀತಿ ಹುಟ್ಟಿಕೊಂಡ ಬ್ಯಾಕ್ಟೀರಿಯಾಗಳು ಮತ್ತಷ್ಟು ಉಗ್ರಸ್ವರೂಪದಲ್ಲಿ ರೋಗಿಯನ್ನು ಕಾಡಿ, ಮಾರಣಾಂತಿಕವಾದ ಸೋಂಕಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಬಳಸುವ ಆಂಟಿ ಬಯೋಟಿಕ್ ರೋಗದ ಮೇಲೆ ಮತ್ತು ರೋಗ ಉಂಟುಮಾಡುವ ಬ್ಯಾಕ್ಟೀರಿಯಾದ ಮೇಲೆ ಯಾವುದೇ ಪರಿಣಾಮ ಬೀರದೆ, ರೋಗಿಯ ರೋಗ ಉಲ್ಬಣವಾಗುತ್ತದೆ.

ಆಂಟಿಬಯೋಟಿಕ್ ಪ್ರತಿರೋದಕತೆ ತಡೆಯುವಲ್ಲಿ ರೋಗಿಯ ಪಾತ್ರ :

1. ನಿಮ್ಮ ವೈದ್ಯರು ಸೂಚಿಸಿದ ಆಂಟಿ ಬಯೋಟಿಕ್ ಔಷಧಿಯನ್ನು ಅದೇ ಪ್ರಮಾಣದಲ್ಲಿ ಸೇವಿಸಿರಿ. ಯಾವತ್ತೂ ಡೋಸ್‍ನ್ನು ವೈದ್ಯರ ಸಲಹೆಯಿಲ್ಲದೆ ಬದಲಿಸಬೇಡಿ.
2. ಆಂಟಿಬಯೋಟಿಕ್ ಪ್ರತಿರೋಧಕತೆಯ ಬಗ್ಗೆ ನಿಮಗಿರುವ ಕಾಳಜಿಯನ್ನು ವೈದ್ಯರ ಬಳಿ ಮುಕ್ತವಾಗಿ ಹೇಳಿ.
3. ಆಂಟಿಬಯೋಟಿಕ್ ಇಲ್ಲದೆಯೇ ರೋಗ ಮತ್ತು ರೋಗದ ಲಕ್ಷಣಗಳನ್ನು ನಿವಾರಿಸಲು ಯಾವುದಾದರೂ ಅಗತ್ಯ ಕ್ರಮಗಳಿದ್ದಲ್ಲಿ ಅದನ್ನೇ ವೈದ್ಯರ ಬಳಿ ತಿಳಿದುಕೊಂಡು ಅನುಸರಿಸಿ.
4. ಯಾವುದೇ ಕಾರಣಕ್ಕೂ ವೈದ್ಯರ ಬಳಿ “ಆಂಟಿಬಯೋಟಿಕ್” ಬಳಸಿ ರೋಗದಿಂದ ಬೇಗನೆ ವಾಸಿಮಾಡಿ ಎಂದು ಒತ್ತಡ ಹಾಕಬೇಡಿ.
5. ನಿಮಗಾಗಿ ಸೂಚಿಸಿದ ಆಂಟಿ ಬಯೋಟಿಕ್ ಔಷಧಿಯನ್ನು ಸಂಪೂರ್ಣವಾಗಿ ಬಳಸಿ, ರೋಗದ ಲಕ್ಷಣಗಳು ಕಡಮೆಯಾಗಿದೆ ಎಂದು ನೀವೇ ಔಷಧಿಯನ್ನು ನಿಲ್ಲಿಸಬೇಡಿ. ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿರಿ.
6. ಆಂಟಿಬಯೋಟಿಕ್ ಔಷಧಿಯನ್ನು ಉಳಿಸಿ ಹಣ ಉಳಿಸುವ ಜಾಣತನ ಒಳ್ಳೆಯದಲ್ಲ.
7. ಬೇರೆಯವರಿಗೆ ನೀಡಿದ ಆಂಟಿಬಯೋಟಿಕ್ ಔಷಧಿಯನ್ನು ನೀವು ಬಳಸಲೇಬಾರದು.
8. ಉಳಿದ ಆಂಟಿಬಯೋಟಿಕ್ ಔಷಧಿಗಳನ್ನು ನಿರ್ದಾಕ್ಷಿಣವಾಗಿ ಎಸೆದುಬಿಡಿ. ಮುಂದಿನ ಬಾರಿ ಬೇಕಾಗುತ್ತದೆ ಎಂದು ಶೇಖರಣೆ ಮಾಡುವ ಉಸಾಬಾರಿ ಬೇಡವೇ ಬೇಡ.
9. ಸಾಮಾನ್ಯ ವೈರಲ್ ಜ್ವರ, ಶೀತ, ಕೆಮ್ಮು, ಪ್ಲೂ ಇತ್ಯಾದಿಗಳಿಗೆ ಆಂಟಿಬಯೋಟಿಕ್ ಅಗತ್ಯ ಇರುವುದಿಲ್ಲ. ಸ್ವಯಂ ಔಷಧಿಗಾರಿಕೆ ಬೇಡವೇ ಬೇಡ. ಸಂದೇಹವಿದ್ದಲ್ಲಿ ವೈದ್ಯರನ್ನು ಸಮಾಲೋಚಿಸಿ ವೈದ್ಯರು ಸೂಚಿಸಿದಲ್ಲಿ ಮಾತ್ರ ಬಳಸಬೇಕು.
10. ವೈದ್ಯರು ದಿನಕ್ಕೆರಡು ಬಾರಿ ಆಂಟಿಬಯೋಟಿಕ್ ಸೇವಿಸಿರಿ ಎಂದಿದ್ದಲ್ಲಿ ದಿನಕ್ಕೆರಡೇ ಬಾರಿ ಸೇವಿಸಿರಿ. ರೋಗ ಬೇಗನೆ ಕಡಮೆಯಾಗಲೆಂದು ದಿನಕ್ಕೆ ಮೂರು ಬಾರಿ ಸೇವಿಸುವ ಅತಿ ಬುದ್ಧಿವಂತಿಕೆ ಬೇಡ. ಅದೇ ರೀತಿ ದಿನಕ್ಕೆ ಮೂರು ಬಾರಿ ಸೇವಿಸಲು ಹೇಳಿದ್ದರೆ ಎರಡು ಬಾರಿ ಮಾತ್ರ ಸೇವಿಸಿ ಹಣ ಉಳಿಸವು ಜಿಪುಣತನ ಕೂಡ ಮಾಡಬೇಡಿ.
11. ರೋಗ ಬರದಂತೆ ತಡೆಗಟ್ಟುವ ಲಸಿಕೆಗಳು ಇದ್ದಲ್ಲಿ, ವೈದ್ಯರ ಬಳಿ ಕೇಳಿ ತಿಳಿದುಕೊಂಡು ಲಸಿಕೆ ಹಾಕಿಸಿಕೊಳ್ಳುವುದು ಬಹಳ ಮುಖ್ಯ. ಈ ರೀತಿ ಲಸಿಕೆ ಹಾಕಿಸಿಕೊಂಡಲ್ಲಿ ರೋಗ ಬರದಂತೆ ತಡೆಗಟ್ಟಿದ್ದಲ್ಲಿ ಆಂಟಿಬಯೋಟಿಕ್‍ಗಳ ದುರ್ಬಳಕೆಯನ್ನು ತಪ್ಪಿಸಬಹುದು.

ಆಂಟಿಬಯೋಟಿಕ್ ಪ್ರತಿರೋಧಕತೆ ತಡೆಯುವಲ್ಲಿ ವೈದ್ಯರ ಪಾತ್ರ

1. ಅತೀ ಅಗತ್ಯವಿದ್ದಲ್ಲಿ ಮಾತ್ರ ಆಂಟಿಬಯೋಟಿಕ್ ಔಷಧಿಯನ್ನು ಬಳಸುವುದು. ರೋಗದ ಲಕ್ಷಣಗಳನ್ನು ಮತ್ತು ರೋಗವನ್ನು ಆಂಟಿಬಯೋಟಿಕ್  ಔಷಧಿಯಿಲ್ಲದೆ ಚಿಕಿತ್ಸೆ ಮಾಡಲು ಸಾಧ್ಯವಿದ್ದಲ್ಲಿ ಆಂಟಿಬಯೋಟಿಕ್ ಬಳಕೆ ಮಾಡಬಾರದು. ರೋಗಿಗಳಿಗೆ ತಿಳಿಹೇಳಿ, ಸಾಂತ್ವನ ಹೇಳಿ ಧೈರ್ಯ ತುಂಬಿ ಆಂಟಿಬಯೋಟಿಕ್‍ಗಳ ಅಡ್ಡ ಪರಿಣಾಮಗಳ ಬಗೆ ಮನವರಿಕೆ ಮಾಡಿ ತಾಳ್ಮೆಯಿಂದ ವರ್ತಿಸುವಂತೆ ತಿಳಿ ಹೇಳಿ ರೋಗ ಗುಣ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ವೈದ್ಯರು ಮಾಡಲೇ ಬೇಕಾದ ಅನಿವಾರ್ಯತೆ ಇದೆ. ವಿಷಾದನೀಯ ವಿಚಾರ ಎಂದರೆ ಎಲ್ಲವೂ ವ್ಯಾಪಾರಿಕರಣವಾಗಿರುವ ಈ ಕಾಲಘಟ್ಟದಲ್ಲಿ ವೈದ್ಯ – ರೋಗಿಯ ಸಂಬಂಧವೂ ಹಳಸಿದೆ. ಮೊದಲೆಲ್ಲಾ ನಂಬಿಕೆಯ ತಳಹದಿಯ ಮೇಲೆ ಹೆಚ್ಚಿನ ರೋಗಗಳು ಗುಣವಾಗುತ್ತಿತ್ತು. ಈಗ ಯಾವ ರೋಗಿಯೂ ಕಾಯುವ ಮನೋಸ್ಥಿತಿಯಲ್ಲಿ ಇಲ್ಲ. ದಿನ ಬೆಳಗಾಗುವುದರೊಳಗೆ ರೋಗ ಗುಣವಾಗದಿದ್ದಲ್ಲಿ ವೈದ್ಯರ ಪ್ರಾಮಾಣಿಕತೆ ಮತ್ತು ಪಾಂಡಿತ್ಯವನ್ನೇ ಪ್ರಶ್ನಿಸುವ ರೋಗಿಗಳು ಜಾಸ್ತಿಯಾಗಿರುವುದೇ ನಮ್ಮ ಸಮಾಜದ ಬಹುದೊಡ್ಡ ದುರಂತ.
2. ಅಗತ್ಯವಿದ್ದ ರೋಗಿಗಳಿಗೆ ಆಂಟಿಬಯೋಟಿಕ್ ಔಷಧಿ ನೀಡಿದ ಬಳಿಕ, ಸರಿಯಾದ ಪ್ರಮಾಣದಲ್ಲಿ, ಸೂಕ್ತ ದಿನಗಳವರೆಗೆ ಔಷಧಿ ಸೇವನೆ ಮಾಡುವಂತೆ ತಿಳಿ ಹೇಳಬೇಕು.
3. ರೋಗಿಯನ್ನು ಆಂಟಿಬಯೋಟಿಕ್ ಔಷಧಿ ನೀಡಿದ ಬಳಿಕ ನಿಯಮಿತವಾಗಿ ಬರಹೇಳಿ, ರೋಗದ ತೀವ್ರತೆ ಲಕ್ಷಣಗಳು ಮತ್ತು ಅಡ್ಡ ಪರಿಣಾಮಗಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಆಂಟಿಬಯೋಟಿಕ್‍ಗಳಿಂದ ರೋಗದ ಮೇಲೆ ಯಾವುದೇ ಪರಿಣಾಮ ಬೀರಿಲ್ಲವಾದಲ್ಲಿ, ಔಷಧಿಯನ್ನು ಬದಲಿಸಲು ಬೇಕಾದ ಸೂಕ್ತ ಪರೀಕ್ಷೆಗಳನ್ನು ಮಾಡಿ ಬದಲಿಸತಕ್ಕದ್ದು.
4. ರೋಗ ಬೇಗನೆ ಗುಣವಾಗಲಿ ಎಂದು, ಒಂದೇ ಬಾರಿಗೆ ಅತೀ ಹೆಚ್ಚು ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವ ಆಂಟಿಬಯೋಟಿಕ್ (Broad Spectrum Antibiotics) ಬಳಸಬಾರದು. ಮೊದಲಾಗಿ ಕಡಿಮೆ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವ (Narrow Spectrum Antibiotics) ಔಷಧಿಗಳನ್ನು ಬಳಸಿ, ರೋಗವನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಈಗಿನ ಬದಲಾದ ಸಾಮಾಜಿಕ ಮತ್ತು ವ್ಯಾಪಾರಿಕ ವಾತಾವರಣದಲ್ಲಿ, ವೈದ್ಯರೂ ಕೂಡಾ ಬಳಕೆದಾರರ ವೇದಿಕೆಯ ಒಳಗೆ ಸೇರಿ, ಕಾನೂನಿನ ಪರಿದಿಯಲ್ಲಿ ವೈದ್ಯರು ಶಿಕ್ಷಾರ್ಹವೆಂದೂ ದೇಶದ ಕಾನೂನು ಹೇಳಿದ್ದರೂ, ಎಲ್ಲಾ ವೈದ್ಯರುಗಳು ಮನುಕುಲದ ಉನ್ನತಿ ಮತ್ತು ಹಿತದ ದೃಷ್ಟಿಯಿಂದ ವೈದ್ಯ ವೃತ್ತಿಯ ರಾಜಧರ್ಮವನ್ನು ಎತ್ತಿ ಹಿಡಿದಲ್ಲಿ ಈ ಬ್ಯಾಕ್ಟೀರಿಯಾಗಳ ಆರ್ಭಟ ಮತ್ತು ಮನುಕುಲದ ಮೇಲಿನ ರುದ್ರನರ್ತನವನ್ನು ಖಂಡಿತವಾಗಿಯೂ ಕಡಮೆ ಮಾಡಬಹುದು.

ಜೀವ ಭಕ್ಷಕಗಳಾಗುತ್ತಿರುವ ಜೀವರಕ್ಷಕ ಔಷಧಿಗಳು-ಆಂಟಿಬಯೋಟಿಕ್

ನಗ್ನ ಸತ್ಯಗಳು:

1. 2 ಮಿಲಿಯನ್ ಮಂದಿ ವ್ಯಕ್ತಿಗಳು, ಅಮೇರಿಕಾ ದೇಶವೊಂದರಲ್ಲಿಯೇ ಪ್ರತಿ ವರ್ಷ ‘ಆಂಟಿಬಯೋಟಿಕ್ ಪ್ರತಿರೋಧಕ” ಸೋಂಕಿನಿಂದ ಬಳಲುತ್ತಿದ್ದು ಇದರಲ್ಲಿ ಸುಮಾರು 23,000 ಮಂದಿ ಸಾವನ್ನಪ್ಪುತ್ತಾರೆ.
2. 2,50,000 ಮಂದಿ ಪ್ರತಿ ವರ್ಷ ಆಂಟಿಬಯೋಟಿಕ್ ಔಷಧಿಯ ಅತಿಯಾದ ಬಳಕೆಯಿಂದಾಗಿ ಕರುಳಿನ ಒಳಭಾಗದಲ್ಲಿ ಕ್ಲೋಸ್ಟ್ರಿಡಿಯಾ ಡಿಫಿಸಿಲ್ (Clostridia Difficile) ಬ್ಯಾಕ್ಟೀರಿಯಾದ ಸೋಂಕಿನಿಂದ ಅಮೇರಿಕಾದಲ್ಲಿ ಬಳಲುತ್ತಾರೆ. ಇದರಲ್ಲಿ ಸುಮಾರು 14,000 ಮಂದಿ ಪ್ರತಿ ವರ್ಷ ಸಾವನ್ನಪ್ಪುತ್ತಾರೆ.
3. ಜಗತ್ತಿನಲ್ಲಿ ಅತೀ ಹೆಚ್ಚು ಬಳಸಲ್ಪಡುವ ಔಷಧಿ ಎಂದರೆ ಆಂಟಿಬಯೋಟಿಕ್. ಇದರಲ್ಲಿ 50% ಮಂದಿಗೆ ಔಷಧಿ ಅಗತ್ಯವಿರುವುದಿಲ್ಲ.
4. ಆಂಟಿಬಯೋಟಿಕ್ ದುರ್ಬಳಕೆಯಿಂದಾಗಿ ಉಂಟಾಗುವ ವೆಚ್ಚ ಅಮೇರಿಕಾ ದೇಶವೊಂದರಲ್ಲಿಯೇ ವರ್ಷಕ್ಕೆ ಸುಮಾರು 20 ಮಿಲಿಯನ್ ಡಾಲರ್ ಆಗಿರುತ್ತದೆ ಮತ್ತು ಮಾನವ ಸಂಪನ್ಮೂಲ ಸೋರಿಕೆಯಿಂದಾಗುವ ನಷ್ಟ ಸುಮಾರು 35 ಮಿಲಿಯನ್ ಡಾಲರ್ ಪ್ರತಿ ವರ್ಷಕ್ಕೆ ಆಗುತ್ತದೆ.
5. ಭಾರತದ ಔಷಧಿ ಕಂಪೆನಿಗಳ ಮಾರುಕಟ್ಟೆ ವ್ಯವಹಾರ ಸುಮಾರು 35 ಸಾವಿರ ಕೋಟಿಗೂ ಮೀರಿದ್ದು, ಇದರಲ್ಲಿ ಸಿಂಹ ಪಾಲು (20,000ಕೋಟಿ) ಆಂಟಿಬಯೋಟಿಕ್‍ಗೆ ಸಲ್ಲುತ್ತದೆ. ಇದರಲ್ಲಿ ಸರಿಸುಮಾರು 40% ಅನಗತ್ಯವಾಗಿಯೇ ಬಳಸಲಾಗುತ್ತದೆ ಎಂಬ ಸಂದೇಹ ಇದೆ.
6. ಆಂಟಿಬಯೋಟಿಕ್ ಬಳಕೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ, ಕಳೆದ ದಶಕದಲ್ಲಿ ಬರೋಬ್ಬರಿ ಶೇಕಡಾ 62% ಹೆಚ್ಚಾಗಿ, ಭಾರತ ಅಗ್ರಸ್ಥಾನ ಗಳಿಸಿದೆ. 2001ರಲ್ಲಿ 8 ಬಿಲಿಯನ್ ಯೂನಿಟ್‍ಗಳಷ್ಟು ಇದ್ದ ಬಳಕೆ 2010ರಲ್ಲಿ 13 ಬಿಲಿಯನ್ ಯೂನಿಟ್‍ಗೆ ಏರಿದೆ. 125 ಕೋಟಿಯಷ್ಟು ಇರುವ ಭಾರತ ಜನಸಂಖ್ಯೆಯಲ್ಲಿ ಪ್ರತಿಯೊಬ್ಬ ಭಾರತೀಯ ವರ್ಷ ಒಂದರಲ್ಲಿ 11 ಆಂಟಿಬಯೋಟಿಕ್ ಮಾತ್ರೆ ಬಳಸುತ್ತಾನೆ ಎಂಬುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಅಮೇರಿಕಾದಲ್ಲಿ ಪ್ರತಿಯೊಬ್ಬ ಪ್ರಜೆ ಸರಸರಿ ವರ್ಷವೊಂದರಲ್ಲಿ 22 ಆಂಟಿಬಯೋಟಿಕ್ ಮಾತ್ರೆ, ಚೀನಾದಲ್ಲಿ ಸರಸರಿ 7 ಆಂಟಿಬಯೋಟಿಕ್‍ನ್ನು ಬಳಸುತ್ತಾರೆ ಎಂದು ತಿಳಿದು ಬಂದಿದೆ.

ಕೊನೆ ಮಾತು:

ಔಷಧಿ ಸೇವನೆ ಎಂಬುವುದು ಆಧುನಿಕ ಜೀವನ ಶೈಲಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ದೈನಂದಿನ ಅನಿವಾರ್ಯತೆಯಾಗಿರುವುದು ಈ ಶತಮಾನದ ಬಹುದೊಡ್ಡ ದುರಂತ. ಪ್ರತಿಯೊಬ್ಬ ವ್ಯಕ್ತಿಯೂ ಜ್ವರ, ತಲೆನೋವು, ಸ್ನಾಯು ನೋವು, ವಾಂತಿ, ನೆಗಡಿ, ಶೀತ, ಕೆಮ್ಮು, ದಮ್ಮು ಹೀಗೆ ಯಾವುದಾದರೂ ಒಂದು ಕಾರಣದಿಂದ ಔಷಧಿ ತಿನ್ನುವ ಖಯಾಲಿ ಬೆಳೆಸಿಕೊಂಡಿರುವುದು ಬಹಳ ದೌರ್ಭಾಗ್ಯದ ಸಂಗತಿ. 1923ರಲ್ಲಿ ಅಲೆಗ್ಸಾಂಡರ್ ಪ್ಲೆಮಿಂಗ್ ಎಂಬ ಪುಣ್ಯಾತ್ಮ ‘ಪೆನಿಸಿಲಿನ್’ ಎಂಬ ಜೀವರಕ್ಷಕ ಔಷಧಿ ಕಂಡು ಹಿಡಿದ ಬಳಿಕ, ಕೋಟ್ಯಾಂತರ ಮಂದಿಯ ಜೀವ ಉಳಿದದಂತೂ ಸತ್ಯವಾದ ಮಾತು. ಆದರೆ ಈಗೀಗ ಜನರು ಜೀವರಕ್ಷಕ ಆಂಟಿಬಯೋಟಿಕ್ ಔಷಧಿಗಳನ್ನು ಬಳಸುವ ಪರಿನೋಡಿದರೆ ಬಹುಷಃ ಅಲೆಗ್ಸಾಂಡರ್ ಪ್ಲೆಮಿಂಗ್‍ನ ಆತ್ಮ ಗೋರಿಯೊಳಗೆ ಯಾಕಾಗಿ ಈ ಜೀವರಕ್ಷಕ ಔಷಧಿ ಕಂಡು ಹಿಡಿದೆ ಎಂದು ಪರಿತಪಿಸುತ್ತಿರಲೂಬಹುದು ಎಂದರೂ ತಪ್ಪಗಾಲಿಕ್ಕಿಲ್ಲ.

ಜೀವರಕ್ಷಕ ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೆ ಯಾವಾತ್ತೂ ತೆಗೆದುಕೊಳ್ಳಬೇಡಿ ಮತ್ತು ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಇಲ್ಲವಾದಲ್ಲಿ ಜೀವರಕ್ಷಕ ಔಷಧಿಗಳು ತಮ್ಮ ಸತ್ವವನ್ನು ಕಳೆದುಕೊಂಡು ಕೇವಲ ನಿರ್ಜಿವ ಔಷಧಿಗಳಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ರೋಗ ನಿರೋಧಕ ಜೀವರಕ್ಷಕ ಔಷಧಿಗಳ ಆಯ್ಕೆಯನ್ನು ವೈದ್ಯರಿಗೆ ಬಿಡಿ. ನಿಮ್ಮ ದೇಹದ ತೂಕ, ದೇಹದ ಪ್ರಕೃತಿ, ರೋಗದ ಲಕ್ಷಣ ಮತ್ತು ರೋಗ ಉಂಟುಮಾಡುವ ಬ್ಯಾಕ್ಟೀರಿಯಾಗಳ ಬಗ್ಗೆ ಅಭ್ಯಸಿಸಿ ವೈದ್ಯರು ಔಷಧಿ ನೀಡಿದ ಬಳಿಕವಷ್ಟೇ ಔಷಧಿಯನ್ನು ಔಷಧಿಯ ರೀತಿಯಲ್ಲಿಯೇ ಬಳಸಿ. ಅಂರ್ತಜಾಲದ ಮೂಲಕ ಜಾಲಾಡಿ, ರೋಗದ ಲಕ್ಷಣಗಳನ್ನು ಅಭ್ಯಸಿಸಿ ಡಾ||ಗೂಗಲ್ ಸಹಾಯದಿಂದ ನೀವೇ ವೈದ್ಯರಾಗಿ, ನಿಮ್ಮ ರೋಗಕ್ಕೆ ನೀವೇ ಸ್ವಯಂ ಔಷಧಿಗಳನ್ನು ಆಯ್ಕೆ ಮಾಡಿ ಬಳಸಿದಲ್ಲಿ ಮುಂದಾಗುವ ದುರಂತಕ್ಕೆ ನೀವೇ ಹೊಣೆಗಾರರಾಗುತ್ತೀರಿ.

ನೀವು ಮಾಡಿದ ತಪ್ಪಿನಿಂದಾಗಿ ನೀವು ಸಾಯುವುದರ ಜೊತೆಗೆ, ಜೀವರಕ್ಷಕ ಔಷಧಿಗಳೂ ಸತ್ವಹೀನವಾಗಿ, ಬ್ಯಾಕ್ಟೀರಿಯಾಗಳು ಆ ಜೀವರಕ್ಷಕ ಆಂಟಿಬಯೋಟಿಕ್ ಔಷಧಿಗಳ ಎದುರು ವಿಜೃಂಭಿಸಿ, ಮನುಕುಲವನ್ನೇ ನುಂಗಿ ನೀರು ಕುಡಿಯುವ ದಿನಗಳು ದೂರವಿಲ್ಲ. ಅತಿಯಾದರೆ ಅಮೃತವೂ ವಿಷವಾಗಬಲ್ಲುದು ಎಂಬ ಮಾತಿನಂತೆ, ನಿಮಗಿರುವ ಅಲ್ಪಸ್ವಲ್ಪ ಔಷಧಿಗಳ ಜ್ಞಾನವನ್ನು, ಅತಿಯಾದ ಔಷಧಿ ಸೇವನೆಗಳಿಗೆ ಬಳಸಿದಲ್ಲಿ ನಿಮ್ಮ ಆರೋಗ್ಯದ ಮೇಲೆ ದುಷ್ಟರಿಣಾಮವಾಗುವುದರ ಜೊತೆಗೆ, ಜೀವರಕ್ಷಕ ಔಷಧಿಗಳು ಕಳಾಹೀನವಾಗಿ, ಹೊಸಹೊಸ ರೋಗಗಳು ಹುಟ್ಟಿಕೊಂಡು ಮನುಕುಲಕ್ಕೆ ಮಾರಕವಾಗಬಹುದು ಮತ್ತು ಔಷಧಿಗಳನ್ನು ಔಷಧಿಯ ರೀತಿಯಲ್ಲಿ ಸೇವಿಸಿದಲ್ಲಿ ಮಾತ್ರ ಸದೃಡ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣವಾಗಬಹುದು.

Dr.-Murali-Mohana-Chuntaru.

ಡಾ|| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ
ಹೊಸಂಗಡಿ, ಮಂಜೇಶ್ವರ- 671 323
ದೂ.: 04998-273544, 235111  ಮೊ.: 98451 35787
www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!