ಜಂತು ಹುಳುಗಳ ಸಮಸ್ಯೆ ನಮ್ಮ ಬಹುದೊಡ್ಡ ಆರೋಗ್ಯ ಸಮಸ್ಯೆ

ಜಂತು ಹುಳುಗಳ ಸಮಸ್ಯೆ ನಮ್ಮ ಭಾರತದ ಬಹುದೊಡ್ಡ ಆರೋಗ್ಯ ಸಮಸ್ಯೆ. ಬೇರೆ ಬೇರೆ ರೀತಿಯಲ್ಲಿ ಮಕ್ಕಳ ಹೊಟ್ಟೆ ಸೇರಿದ ಈ ಹುಳುಗಳು ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಮಾರಕವಾಗಿ ಕಾಡುತ್ತದೆ. ರಾಷ್ಟ್ರೀಯ ಹುಳ ನಿರ್ಮೂಲನ ದಿನ – ಫೆಬ್ರವರಿ 10 ರಂದು 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಹುಳ ನಿರ್ಮೂಲನ ಔಷಧಿ ನೀಡಲಾಗುತ್ತದೆ.

national-deworming-day ಜಂತು ಹುಳುಗಳ ಸಮಸ್ಯೆ ನಮ್ಮ ಬಹುದೊಡ್ಡ ಆರೋಗ್ಯ ಸಮಸ್ಯೆ

ಮಣ್ಣಿನಿಂದ ವರ್ಗಾವಣೆಯಾಗುವ ಜಂತು ಹುಳುಗಳ ಸಮಸ್ಯೆ ನಮ್ಮ ಭಾರತದ ಬಹುದೊಡ್ಡ ಆರೋಗ್ಯ ಸಮಸ್ಯೆ ಎಂದರೆ ಅತಿಶಯೋಕ್ತಿಯಾಗದು. ನಮ್ಮ ಭಾರತ ದೇಶವೊಂದರಲ್ಲಿಯೇ 1 ರಿಂದ 14 ವರ್ಷದ ವರೆಗೆನ ಸುಮಾರು 25 ಕೋಟಿ ಮಕ್ಕಳು ಈ ಹುಳದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಮಕ್ಕಳ ಹೊಟ್ಟೆ ಸೇರಿದ ಈ ಹುಳುಗಳು, ಆಹಾರ ದೇಹಕ್ಕೆ ಸೇರದಂತೆ ತಡೆದು, ರಕ್ತಹೀನತೆ, ನಿಶ್ಯಕ್ತಿ, ಅಪೌಷ್ಟಿಕತೆ ಉಂಟುಮಾಡಿ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಮಾರಕವಾಗಿ ಕಾಡುತ್ತದೆ. ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಪಡೆಯಲು ಭಾರತ ಸರಕಾರ 2015 ರಲ್ಲಿ ಅಂಗನವಾಡಿ ಮತ್ತು ಶಾಲೆಗಳನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯ ಹುಳು ನಿರ್ಮೂಲನ ದಿನಾಚರಣೆ ಆರಂಭಿಸಿತು. 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ವರ್ಷಂಪ್ರತಿ ಫೆಬ್ರವರಿ 10 ರಂದು ಹುಳ ನಿರ್ಮೂಲನ ಔಷಧಿ ನೀಡುವ ರಾಷ್ಟ್ರೀಯ ಆರೋಗ್ಯ ಆಂದೋಲನ ಆರಂಭಿಸಿತು. ಫೆಬ್ರವರಿ 10 ರಂದು ಅನಿವಾರ್ಯಕಾರಣದಿಂದ ಬದಲಾಗದ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಫೆಬ್ರವರಿ 15 ರಂದು ನೀಡಲಾಗುತ್ತದೆ.

ಇನ್ನು ಕೆಲವೊಂದು ರಾಜ್ಯಗಳಲ್ಲಿ ಈ ಹುಳುಗಳ ಸಮಸ್ಯೆ ಜಾಸ್ತಿ ಇದ್ದ ಕಾರಣದಿಂದ ವಾರ್ಷಿಕವಾಗಿ ಎರಡು ಬಾರಿ ಈ ಹುಳ ನಿರ್ಮೂಲನ ದಿನಾಚರಣೆ ಮಾಡಲಾಗುತ್ತದೆ. ಫೆಬ್ರವರಿ 10 ಮತ್ತು ಆಗಸ್ಟ್ 10 ರಂದು ಎರಡು ಬಾರಿ ನಡೆಸಲಾಗುತ್ತದೆ. ಉದಾಹರಣೆಗೆ ತ್ರಿಪುರ ರಾಜ್ಯವೊಂದರಲ್ಲಿಯೆ 60 ಶೇಕಡಾ ಮಕ್ಕಳು ಹುಳದ ಭಾದೆಯಿಂದ ಬಳಲುತ್ತಿದ್ದಾರೆ. ಈ ಕಾರಣದಿಂದ ತ್ರಿಪುರ ರಾಜ್ಯದಲ್ಲಿ ವರ್ಷಕ್ಕೆರಡು ಬಾರಿ ನಡೆಸಲಾಗುತ್ತದೆ. ಭಾರತ ಸರಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಇದರ ಎಲ್ಲಾ ಮಾರ್ಗ ಸೂಚಿಗಳನ್ನು ಪಾಲಿಸಿ ಈ ಹುಳ ನಿರ್ಮೂಲನ ಕಾರ್ಯ ನಡೆಸಲಾಗುತ್ತದೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಒಟ್ಟು ಸೇರಿ ಭಾರತ ಸರಕಾರದ ಮಾರ್ಗದರ್ಶನದಲ್ಲಿ ಈ ಅಭಿಯಾನ ನಡೆಸಿ ದೇಶವನ್ನು ಹುಳ ಮುಕ್ತವಾಗಿಸಿ, ಮಕ್ಕಳ ದೈಹಿಕ ಮಾನಸಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣದ ಕಲ್ಪಿಸುವ ಮಹದಾಸೆಯನ್ನು ಈ ರಾಷ್ಟ್ರೀಯ ಹುಳ ನಿರ್ಮೂಲನ ದಿನಾಚರಣೆ ಹೊಂದಿದೆ ಎಂದರೂ ಅತಿಶಯೋಕ್ತಿಯಾಗಲಾರದು.

“ರಕ್ತ ಹೀರುವ ಜೀವ ಹಿಂಡುವ ಜಂತು ಹುಳಗಳು”

ಪ್ರಾಣ ಹಿಂಡುವ ಜಂತು ಹುಳಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಮನುಷ್ಯನ ದೇಹದೊಳಗೆ ಸೇರಿಕೊಳ್ಳುವ ಹುಳಗಳು ಮನುಷ್ಯನ ರಕ್ತವನ್ನು ಹೀರಿ, ರಕ್ತಹೀನತೆಯನ್ನುಂಟು ಮಾಡಿ, ಹತ್ತು ಹಲವು ರೋಗಗಳಿಗೆ ರಹದಾರಿ ಮಾಡಿಕೊಡುತ್ತದೆ. ಮುಂದುವರಿದ ರಾಷ್ಟ್ರಗಳಾದ ಅಮೇರಿಕಾ, ಇಂಗ್ಲೇಡ್, ರಷ್ಯಾ, ಆಸ್ಟ್ರೇಲಿಯಾ, ಜರ್ಮನಿ, ಯುರೋಪ್‍ಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಣಸಿಗದಿದ್ದರೂ, ಮುಂದುವರಿಯುತ್ತಿರುವ ಮತ್ತು ಆರ್ಥಿಕವಾಗಿ ಸಾಕಷ್ಟು ಸಭಲವಾಗಿರದ ರಾಷ್ಟ್ರಗಳಲ್ಲಿ ಈ ಜಂತು ಹುಳುಗಳು ಜನರನ್ನು ಕಾಡುವ ಪರಿ ಅಷ್ಟಿಷ್ಟಲ್ಲ. ಮೂಲಭೂತ ಸೌಕರ್ಯಗಳ ಕೊರತೆ, ಅಪೌಷ್ಟಿಕತೆ, ಕೊಳಚೆ ಪ್ರದೇಶಗಳು, ಬಡತನ, ಅಜ್ಞಾನ ಅನಕ್ಷರತೆ, ಸ್ವಚ್ಛತೆಯ ಕೊರತೆ, ಶುದ್ಧ ನೀರು ಮತ್ತು ಸ್ವಚ್ಛವಾದ ಆಹಾರದ ಕೊರತೆ ಇತ್ಯಾದಿಗಳಿಂದಾಗಿ ಜಂತು ಹುಳುಗಳ ಕಾಟ ಜಾಸ್ತಿಯಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕಲುಷಿತ ನೀರಿನ ಮತ್ತು ಆಹಾರದ ಮುಖಾಂತರ ದೇಹವನ್ನು ಪ್ರವೇಶಿಸುವ ಈ ಜಂತು ಹುಳಗಳು, ರಕ್ತಹೀನತೆ, ಅಜೀರ್ಣ, ಅಲರ್ಜಿ ಉಂಟಾಗುವಂತೆ ಮಾಡಿ, ದೇಹದ ಬೆಳೆವಣಿಗೆಯನ್ನು ಕುಂಠಿತಗೊಳಿಸುವಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ.

ಏನಿದು ಜಂತು ಹುಳಗಳು ?

ನಮ್ಮ ಹೊಟ್ಟೆಯಲ್ಲಿ ಕಂಡುಬರುವ ಹುಳಗಳನ್ನು ಅವುಗಳ ಆಕಾರ, ಆಕೃತಿ ಮತ್ತು ಪ್ರಕೃತಿಗಳಿಗನುಗುಣವಾಗಿ ವಿಭಾಗಿಸಲಾಗುತ್ತದೆ ಮತ್ತು ವಿಧ ವಿಧದ ಹೆಸರುಗಳಿಂದ ಕರೆಯಲಾಗುತ್ತದೆ. ಗುಂಡುಹುಳ (ಪಿನ್ ವರ್ಮ್), ದುಂಡು ಹುಳ (ರೌಂಡ್ ವರ್ಮ್), ಕೊಕ್ಕೆಹುಳ (ಹೂಕ್‍ವರ್ಮ್), ಚಾವಟಿಹುಳ (ವಿಪ್ ವರ್ಮ), ಗಿನಿಯಾ ಹುಳ (ಗಿನಿಯಾ ವರ್ಮ್), ಲಾಡಿ ಹುಳ (ಟೀಪ್ ವರ್ಮ್) ಎಂಬುದಾಗಿ ಹತ್ತು ಹಲವು ಬಗೆಯ ಹೊಟ್ಟೆ ಹುಳುಗಳು ನಮ್ಮ ದೇಹದಲ್ಲಿ ಕಾಣಸಿಗುತ್ತದೆ. ದುಂಡು ಹುಳಗಳು ಹೆಚ್ಚಾಗಿ ಹದಿಹರೆಯದ ಶಾಲೆಯ ಮಕ್ಕಳಲ್ಲಿ ಕಂಡು ಬರುತ್ತದೆ. ಗುಂಪು ಗುಂಪಾಗಿ ಹಾಸ್ಟೆಲುಗಳಲ್ಲಿ ಮತ್ತು ಶಿಬಿರಗಳಲ್ಲಿ ಜೀವಿಸುವ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.

ಉಗುರುಗಳನ್ನು ಉದ್ದನೆ ಬೆಳೆಯಲು ಬಿಡದೆ ಸ್ವಚ್ಛವಾಗಿಡುವುದು, ದೇಹದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು. ಆಹಾರ ಸೇವಿಸುವ ಮೊದಲು ಕೈ ಕಾಲುಗಳನ್ನು ಶುಭ್ರವಾಗಿ ತೊಳೆಯುವುದರಿಂದ ಈ ಹುಳುಗಳ ಕಾಟ ಕಡಿಮೆ ಮಾಡಬಹುದು. ಇಲ್ಲವಾದಲ್ಲಿ ನಿರಂತರವಾಗಿ ಈ ಹುಳಗಳ ಮೊಟ್ಟೆಗಳು ನೀರು ಮತ್ತು ಆಹಾರದ ಮುಖಾಂತರ ಕರುಳನ್ನು ಸೇರಿ ನಿರಂತರ ಕಿರುಕುಳ ನೀಡಬಹುದು. ಗಿನಿಯಾ ಹುಳಗಳ ಕಾಟ ಈಗ ಬಹಳ ಕಡಿಮೆಯಾಗಿದ್ದು, ಲಾಡಿಹುಳ ಹೆಚ್ಚಾಗಿ ಮಾಂಸಾಹಾರಿಗಳಲ್ಲಿ ಕಾಣಸಿಗುತ್ತದೆ. ಮೀನು ಮಾಂಸದ ಮುಖಾಂತರ (ಫಿಶ್ ಲಾಡಿಹುಳ), ದನದ ಮಾಂಸದ ಮುಖಾಂತರ (ಬೀಪ್ ಲಾಡಿ ಹುಳ) ಮತ್ತು ಹಂದಿಮಾಂಸದ ಮುಖಾಂತರ (ಪೋರ್ಕ್ ಟೀಪ್ ವರ್ಮ್) ದೇಹಕ್ಕೆ ಸೇರಿಕೊಳ್ಳಬಹುದು. ಸರಿಯಾಗಿ ಬೇಯಿಸಿದೇ ಮಾಂಸಹಾರ ಮಾಡಿದಲ್ಲಿ ಈ ರೀತಿ ತೊಂದರೆ ಕಾಣಿಸಿಕೊಳ್ಳುತ್ತದೆ. ಚಾವಟಿ ಅಥವಾ ಚಾಟಿ ಹುಳುಗಳು (ವಿಪ್ ವರ್ಮ್) ಹೆಚ್ಚಾಗಿ ಕರುಳಿನ ಒಳಭಾಗದ ಪದರವನ್ನು ಗಟ್ಟಿಯಾಗಿ ಕಚ್ಚಿಕೊಂಡು ರಕ್ತ ಹೀರುವುದರಿಂದ ರಕ್ತಹೀನತೆ, ರಕ್ತಸ್ರಾವ ಮತ್ತು ಕರುಳಿನ ಉರಿಯೂತ ಕಾಣಿಸಿಕೊಳ್ಳಬಹುದು.

ದುಂಡು ಹುಳಗಳು ಜಗತ್ತಿನ ಸುಮಾರು 25-30 ಶೇಕಡಾ ಮಂದಿಯನ್ನು ಕಾಡುತ್ತದೆ. ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳಿಲ್ಲದಿದ್ದರೂ, ಈ ದುಂಡುಹುಳಗಳ ಸಂಖ್ಯೆ ಕರುಳಲ್ಲಿ ಜಾಸ್ತಿಯಾದಾಗ ಅಜೀರ್ಣ, ಹಸಿವಿಲ್ಲದಿರುವುದು, ಪದೇ ಪದೇ ಹೊಟ್ಟೆನೋವು, ಬೆಳವಣಿಗೆ ಕುಂಠಿತವಾಗುವುದು, ಅಲರ್ಜಿ ಚರ್ಮದಲ್ಲಿ ತುರಿಕೆ, ದಡಿಕೆ ಕಾಣಿಸಿಕೊಳ್ಳುತ್ತದೆ. ಕೊಕ್ಕೆಹುಳಗಳ ನಮ್ಮ ಭಾರತದಲ್ಲಿ ಅತೀ ಹೆಚ್ಚಾಗಿ ಕಾಣಸಿಗುತ್ತದೆ. ಏನಿಲ್ಲವೆಂದರೂ ಭಾರತವೊಂದರಲ್ಲೆ ಸುಮಾರು 300 ಮಿಲಿಯನ್ ಮಂದಿ (30ಕೋಟಿ ಜನರು) ಈ ಕೊಕ್ಕೆ ಹುಳದ ಬಾಧೆಯಿದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಕೊಕ್ಕೆ ಹುಳಗಳ ಮರಿಗಳು ಮತ್ತು ಮೊಟ್ಟೆಗಳು ಮಣ್ಣಿನಲ್ಲಿ ಹೇರಳವಾಗಿದ್ದು, ಪಾದದ ಚರ್ಮದ ಮುಖಾಂತರ ಶರೀರವನ್ನು ಪ್ರವೇಶಿಸುತ್ತದೆ. ಕೊಕ್ಕೆ ಹುಳದ ಪೀಡಿತರು ಹೆಚ್ಚಾಗಿ ರಕ್ತಹೀನತೆ (ಅನೀಮಿಯಾ) ಯಿಂದ ಬಳಲುತ್ತಾರೆ.

ಹುಳಗಳು ಹೇಗೆ ದೇಹವನ್ನು ಪ್ರವೇಶಿಸುತ್ತದೆ?

1. ಅಶುದ್ಧವಾದ ನೀರು ಮತ್ತು ಕಲುಷಿತ ಆಹಾರಗಳ ಮುಖಾಂತರ ದೇಹಕ್ಕೆ ಸೇರುತ್ತದೆ.

2. ಬಯಲು ಪ್ರದೇಶಗಳ ಹೊಲ ಗದ್ದೆಗಳಲ್ಲಿ, ತೋಟ, ಗುಡ್ಡೆಗಳಲ್ಲಿ ಪಾದರಕ್ಷೆ ಇಲ್ಲದೆ ನಡೆದಾಡುವುದರಿಂದ ಕಾಲಿನ ಚರ್ಮದ ಮುಖಾಂತರ ದೇಹವನ್ನು ಪ್ರವೇಶಿಸುತ್ತದೆ.

3. ಬಯಲು ಪ್ರದೇಶಗಳಲ್ಲಿ ಮಲವಿಸರ್ಜನೆ ಮಾಡುವುದರಿಂದ, ಮಲಗಳ ಮುಖಾಂತರ ಇತರರಿಗೆ ಹರಡಬಹುದು.

4. ದನ, ಹಂದಿ ಮಾಂಸಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಬೇಯಿಸದೇ ಸೇವಿಸುವುದರಿಂದ ದೇಹವನ್ನು ಸೇರಿಕೊಳ್ಳುತ್ತದೆ.

5. ನಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ಕೊಳಚೆ ಪ್ರದೇಶಗಳಿಗೆ ಅನುವು ಮಾಡಿದಲ್ಲಿ, ಈ ಹೊಟ್ಟೆಹುಳಗಳು ವಂಶಾಭಿವೃದ್ಧಿ ಮಾಡಿಕೊಂಡು ಪರೋಕ್ಷ್ಷವಾಗಿ ದೇಹಕ್ಕೆ ಬರಲು ರಹದಾರಿ ಮಾಡಿಕೊಡುತ್ತದೆ.

ಹೊಟ್ಟೆಹುಳಗಳಿಂದ ಆಗುವ ಅಪಾಯಗಳು

1. ಅಜೀರ್ಣ, ಅಪೌಷ್ಟಿಕತೆ ಮತ್ತು ಹಸಿವಿಲ್ಲದಿರುವುದು : ಹೊಟ್ಟೆಹುಳಗಳು ಮಕ್ಕಳ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಕರುಳಿನ ಒಳ ಪದರಕ್ಕೆ ಅಂಟಿಕೊಂಡು ಪರಾವಲಂಬಿಗಳಂತೆ ಬದುಕಿ ಈ ಜೀವಿಗಳು, ಮಕ್ಕಳು ಸೇವಿಸಿದ ಆಹಾರದ ಸತ್ವಗಳನ್ನು ದೇಹ ಸೇರದ0ತೆ ತಡೆದು, ಅಪೌಷ್ಟಿಕತೆಗೆ ದಾರಿ ಮಾಡಿ ಮಕ್ಕಳ ದೈಹಿಕ ಬೆಳವಣಿಗೆಗೆ ತಡೆಯೊಡ್ಡುತ್ತದೆ. ಮಕ್ಕಳ ಹಸಿವನ್ನು ದೂರಮಾಡಿ ಪರೋಕ್ಷವಾಗಿ ಆಹಾರದ ಸೇವನೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಸಮತೋಲಿನ ಆಹಾರ ಸೇವಿಸಿದರೂ ಬಳಸಿಕೊಳ್ಳಲು ಸಾಧ್ಯವಾಗಿದೆ, ಮಕ್ಕಳ ಬೆಳವಣಿಗೆ ಕುಂಠಿತವಾಗಿ, ದೃಷ್ಟಿಗಳ ಅಂಧತ್ವಕ್ಕೆ, ರೋಗ ನಿರೋಧಕ ಶಕ್ತಿಯನ್ನು ಕಡಿಮೆಯಾಗಲೂ ಕಾರಣವಾಗುತ್ತದೆ. ದೇಹದ ತೂಕ ಕಡಿಮೆಯಾಗಿ, ಪ್ರೋಟೀನ್, ವಿಟಮಿನ್ ಮತ್ತು ಪೋಷಕಾ0ಶಗಳ ಕೊರತೆಯಿಂದಾಗಿ ದೇಹದ ಆರೋಗ್ಯದ ಮೇಲೆ ವ್ಯತ್ತಿರಕ್ತ ಪರಿಣಾಮ ಬೀರುತ್ತದೆ.

2. ಕೊಕ್ಕೆ ಹುಳಗಳು (ಹೂಕ್‍ವರ್ಮ್) ಕರುಳಿನ ಒಳ ಭಾಗದಿಂದ ರಕ್ತವನ್ನು ಹೀರಿ ತನ್ನ ಹಸಿವನ್ನು ಇಂಗಿಸಿಕೊಳ್ಳುತ್ತದೆ. ಏನಿಲ್ಲವೆಂದರೂ ಪ್ರತಿ ಹುಳಗಳು ದಿನವೊಂದಕ್ಕೆ 0.2 ಮಿಲೀ ಲೀಟರ್ ರಕ್ತವನ್ನು ಹೀರುತ್ತದೆ. ಈ ರೀತಿ ರಕ್ತವನ್ನು ಕಳಕೊಂಡಾಗ ವ್ಯಕ್ತಿ ರಕ್ತಹೀನತೆಗೆ ಒಳಗಾಗಿ ಕ್ಷೀಣವಾಗುತ್ತಾನೆ. ಒಬ್ಬ ವ್ಯಕ್ತಿಯ ದೇಹದಲ್ಲಿ 100ರಿಂದ 150 ಕೊಕ್ಕೆ ಹುಳುಗಳಿದ್ದಲ್ಲಿ ದಿನವೊಂದಕ್ಕೆ ಒಂದರಿಂದ 2 ಚಮಚದಷ್ಟು ರಕ್ತ ಕಳಕೊಂಡಲ್ಲಿ, ಒಂದೇ ವರ್ಷಗಳಲ್ಲಿ ವ್ಯಕ್ತಿ ಖಂಡಿತವಾಗಿಯೂ ರಕ್ತ ಹೀನತೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಹಸಿವಿಲ್ಲದಿರುವುದು, ಪೌಷ್ಟಿಕಾಂಶದ ಕೊರತೆ, ಕಬ್ಬಿಣದ ಕೊರತೆ, ಕ್ಯಾಲರಿಗಳ ಕೊರತೆ ಎಲ್ಲಾ ಸೇರಿಕೊಂಡು ಸಮಸ್ಯೆಯನ್ನು ಬಿಗಡಾಯಿಸುತ್ತದೆ.

3. ಅಲರ್ಜಿ, ತುರಿಕೆ, ದಡಿಕೆ, ಚರ್ಮದಲ್ಲಿ ಕೆರೆತ, ಶ್ವಾಸನಾಳದ ಅಲರ್ಜಿ ಇವೆಲ್ಲವೂ ಹೊಟ್ಟೆ ಹುಳುವಿನಿಂದ ಕಾಣಸಿಗುವ ಸಾಮಾನ್ಯ ತೊಂದರೆಗಳು. ಈ ರೀತಿಯ ತೊಂದರೆಗಳು ಪದೇ ಪದೇ ಕಾಡುತ್ತಿದ್ದಲ್ಲಿ ಕುಟುಂಬ ವೈದ್ಯರ ಸಲಹೆ ಅತೀ ಅವಶ್ಯಕ.

4. ಆಗಾಗ ಕಾಡುವ ಹೊಟ್ಟೆ ನೋವು, ಪದೇ ಪದೇ ಕಾಣುವ ಸಣ್ಣ ಜ್ವರ, ಮಲ ವಿಸರ್ಜನೆಯ ಸಮಯದಲ್ಲಿ ಗುಧದ್ವಾರದ ಬಳಿ ವಿಪರೀತ ತುರಿಕೆ ಇವೆಲ್ಲವೂ ಹೊಟ್ಟೆಯಲ್ಲಿನ ಹುಳುಗಳ ಪ್ರಾಥಾಮಿಕ ಲಕ್ಷಣಗಳು. ಸಕಾಲದಲ್ಲಿ ಸೂಕ್ತ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತೀ ಅವಶ್ಯಕ

ನಿಯಂತ್ರಣ ಹೇಗೆ?

1. ಶುದ್ಧವಾದ ಕುಡಿಯುವ ನೀರನ್ನೇ ಬಳಸಬೇಕು.

2. ಆಹಾರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ರಸ್ತೆ ಬದಿಯ ಗಾಡಿಗಳಲ್ಲಿ ಸ್ವಚ್ಛತೆಯಿಲ್ಲದ ಹೊಟೇಲುಗಳಲ್ಲಿ ಆಹಾರ ಸೇವನೆ ಮಾಡಲೇಬಾರದು. ಕಲುಷಿತ ಆಹಾರ ಸೇವನೆಯಿಂದ ಅತಿ ಬೇಧಿ, ಕಾಲೆರಾ, ಹೆಪಟೈಟಿಸ್ ಮುಂತಾದ ರೋಗಗಳು ಹರಡಬಲ್ಲದು.

3. ಬಯಲು ಪ್ರದೇಶಗಳಲ್ಲಿ ಮಲವಿಸರ್ಜನೆ ಮಾಡಲೇಬಾರದು. ಮಲವಿಸರ್ಜನೆಗೆ ಪಾಯಿಖಾನೆಗಳನ್ನು ಬಳಸಬೇಕು. ಪರಿಸರ ನಿರ್ಮಲ್ಯವನ್ನು ಯಾವತ್ತೂ ಕಾಯ್ದುಕೊಳ್ಳುವುದರಿಂದ, ಈ ಪರವಾಲಂಬಿ ಹೊಟ್ಟೆಹುಳಗಳ ಸಂಖ್ಯೆಯನ್ನು ನಿಯಂತ್ರಿಸಿ ರೋಗ ಹರಡುವುದನ್ನು ತಡೆಗಟ್ಟಬಹುದು.

4. ಪಾದರಕ್ಷೆಯನ್ನು ಹೊಲಗದ್ದೆಗಳಲ್ಲಿ ಬಯಲು ಪ್ರದೇಶಗಳಲ್ಲಿ ಗುಡ್ಡ ಕಾಡುಗಳಲ್ಲಿ ಅಲೆದಾಡುವಾಗ  ಧರಿಸಲೇಬೇಕು.

5. ಕಾಲಕಾಲಕ್ಕೆ ಕುಟುಂಬ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಅತೀ ಅಗತ್ಯ. ಚರ್ಮದಲ್ಲಿನ ತುರಿಕೆ, ಕಡಿತ ಮತ್ತು ಪದೇ ಪದೇ ಕಾಡುವ ಹೊಟ್ಟೆನೋವು, ಗುಧದ್ವಾರದ ಬಳಿ ತುರಿಕೆ (ಮಲವಿಸರ್ಜನೆಯ ಸಮಯದಲ್ಲಿ), ಮಕ್ಕಳಲ್ಲಿ ಹಸಿವಿಲ್ಲದಿರುವುದು, ಅಜೀರ್ಣ ಮುಂತಾದ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ಕುಟುಂಬ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳಿ.

ಯಾವ ಔಷಧಿ ಬಳಸಲಾಗುತ್ತದೆ?

ಆಲ್ಬೆಂಡಜೋಲ್ 400mg ಮತ್ತು ಮೆಬೆಂಡಜೋಲ್ 500 mg ಔಷಧಿಯನ್ನು ಹುಳ ನಿರ್ಮೂಲನೆಗೆ ಬಳಸಲಾಗುತ್ತದೆ. ಈ ಎರಡೂ ಔಷಧಿ ಸಿಂಗಲ್ ಡೋಸ್ ಔಷಧಿ ಆಗಿರುತ್ತದೆ.

1. ನಿರ್ದಿಷ್ಟ ಭೌಗೋಳಿಕ ಪರಿಸರದಲ್ಲಿ 50 ಶೇಕಡಕ್ಕಿಂತ ಜಾಸ್ತಿ ಮಕ್ಕಳು ಹುಳದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ವಾರ್ಷಿಕವಾಗಿ ಮೇಲೆ ತಿಳಿಸಿದ ಒಂದು ಔಷಧಿಯನ್ನು ವರ್ಷದಲ್ಲಿ ಎರಡು ಬಾರಿ ನೀಡಲಾಗುತ್ತದೆ. 2 ರಿಂದ 14 ವರ್ಷದ ಎಲ್ಲಾ ಮಕ್ಕಳಿಗೆ ಈ ರೀತಿ ನೀಡಲಾಗುತ್ತದೆ.

2. 24 ತಿಂಗಳುಗಳಿಗಿಂತ ಚಿಕ್ಕ ಮಕ್ಕಳಿಗೆ ಆಲ್ಬೆಂಡಜೋಲ್ 200mg ಮಾತ್ರೆ ಬಳಸಲಾಗುತ್ತದೆ. (ಅರ್ಧ ಮಾತ್ರೆ)

3. ನಿರ್ದಿಷ್ಟ ಭೌಗೋಳಿಕ ಪರಿಸರದಲ್ಲಿ ಹುಳದ ಸಮಸ್ಯೆ 20 ರಿಂದ 50 ಶೇಕಡಾದ ಒಳಗೆ ಇದ್ದಲ್ಲಿ ವಾರ್ಷಿಕವಾಗಿ ಒಮ್ಮೆ ಮಾತ್ರ ನೀಡಲಾಗುವುದು. 2 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈ ಔಷಧಿ ನೀಡಲಾಗುತ್ತದೆ.

ಈ ಮೇಲೆ ತಿಳಿಸಿದ ಎರಡೂ ಔಷಧಿಗಳನ್ನು ಮಕ್ಕಳಲ್ಲಿ ಸುರಕ್ಷಿತವಾಗಿ ಬಳಸಬಹುದಾಗಿದೆ. ಈ ಔಷಧಿಯನ್ನು ನೀಡುವುದರ ಜೊತೆಗೆ ಮಕ್ಕಳಲ್ಲಿ ಪರಿಸರದ ಸ್ವಚ್ಛತೆ, ಪರಿಸರದ ನೈರ್ಮಲ್ಯ , ಕೈ ತೊಳೆಯುವಿಕೆ ಪಾದರಕ್ಷೆ ಬಳಸುವಿಕೆ (ಬರಿಗಾಲಿನಲ್ಲಿ ಓಡಾಡದಂತೆ) ಮುಂತಾದವುಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ. ಅದೇ ರೀತಿ ಬಯಲು ಶೌಚ ಕ್ರಿಯೆಯನ್ನು ಮಾಡದಂತೆ ಮನವೊಲಿಸಿ, ಹುಳ ಹರಡದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಆಲ್ಬೆಂಡಜೋಲ್ ಔಷಧಿ ಶೇಕಡಾ 75 ಮಂದಿಯಲ್ಲಿ ಮತ್ತು ಮೆಬೆಂಡಜೋಲ್ ಔಷಧಿ ಶೇಕಡಾ 15 ಮಂದಿಯಲ್ಲಿ ಪರಿಣಾಮಕಾರಿ ಎಂದೂ ತಿಳಿದು ಬಂದಿದೆ.

ಗರ್ಭಿಣಿಯರಲ್ಲಿಯೂ 3 ತಿಂಗಳು ಗರ್ಭಾವಸ್ಥೆ ಕಳೆದ ಬಳಿಕ ಈ ಔಷಧಿ ಬಳಸಬಹುದು ಎಂದು ವಿಶ್ವ ಸಂಸ್ಥೆ ಅಂಗೀಕರಿಸಿದೆ. ಆಲ್ಬೆಂಡಜೋಲ್ ಔಷಧಿ ಚಾಕೋಲೇಟ್ ಮಾದರಿಯ ಮಾತ್ರೆಯಾಗಿದ್ದು, ಮಕ್ಕಳಿಗೆ ಔಷಧಿ ಎಂಬ ಭಾವನೆ ಬರಬಾರದು ಎಂಬ ದೃಷ್ಟಿಯಿಂದ ಈ ರೂಪದಲ್ಲಿ ಔಷಧಿಯನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಹುಳದ ತೊಂದರೆಯಿಂದ ರಕ್ತಹೀನತೆ ತುಂಬಾ ತೀವ್ರವಾಗಿದ್ದಲ್ಲಿ, ಈ ಹುಳದ ಔಷಧಿ ಜೊತೆಗೆ 200mg ಫೆರಸ್ ಸಲ್ಫೇಡ್ ದಿನಕ್ಕೆ ಮೂರು ಬಾರಿ, ಮೂರು ತಿಂಗಳ ಕಾಲ ನೀಡಲಾಗುತ್ತದೆ. ಇದರ ಜೊತೆಗೆ ರೋಗಿಯ ಅಗತ್ಯಕ್ಕನುಗುಣವಾಗಿ ಪೋಲಿಕ್ ಆಸಿಡ್ ಮತ್ತು ವಿಟಮಿನ್ ಃ12 ಔಷಧಿಯನ್ನಾಗಿ ನೀಡಲಾಗುತ್ತದೆ.

ಕೊನೆ ಮಾತು

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ಜಂತು ಹುಳಗಳು ಆಕಾರದಲ್ಲಿ ಚಿಕ್ಕದಾದರೂ, ಬಹಳ ಸಂಕೀರ್ಣವಾದ ಸಮಸ್ಯೆಗಳನ್ನು ತಂದೊಡ್ಡಿ ಬಹಳಷ್ಟು ದೈಹಿಕ ಮಾನಸಿಕ ರೋೀಗಕ್ಕೆ ನಾಂದಿ ಹಾಡಬಹುದು. ಬೆಳೆಯುವ ಮಕ್ಕಳನ್ನು ಹೆಚ್ಚಾಗಿ ಕಾಡುವ ಈ ಹುಳಗಳನ್ನು ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ನೀಡದಿದ್ದಲ್ಲಿ ಮಗುವಿನ ದೈಹಿಕ ಮಾನಸಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಕಡಿವಾಣ ಹಾಕಿ ಹತ್ತು ಹಲವು ರೋಗಗಳಿಗೆ ಕಾರಣವಾಗಬಹುದು. ಸಮಸ್ಯೆ ಚಿಕ್ಕದಾದರೂ ಹಲವಾರು ಸಣ್ಣಸಣ್ಣ ಸಮಸ್ಯೆಗಳು ಒಂದಾಗಿ ಮುಂದೊಂದು ದಿನ ಭೂತಕಾರವಾಗಿ ಬೆಳೆದು ನಿಂತು ವ್ಯಕ್ತಿಯನ್ನು ರೋಗಗಳ ಹಂದರವಾಗಿ ಮಾಡುವ ಸಾಮಥ್ರ್ಯವನ್ನು ಈ ಹೊಟ್ಟೆ ಹುಳಗಳು ಖಂಡಿತವಾಗಿಯೂ ಹೊಂದಿದೆ.

ಈ ಕಾರಣಕ್ಕಾದರೂ ಅಸಡ್ಡೆ ಮಾಡದೇ ಸಕಾಲದಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದರಲ್ಲೇ ನಮ್ಮೆಲ್ಲರ ಜಾಣತನ ಮತ್ತು ಹಿತ ಅಡಗಿದೆ. ತಲೆಯೊಳಗೊಂದು ಸಂಶಯದ ಹುಳು ಹೊಕ್ಕಿದಲ್ಲಿ ಹೇಗೆ ಮನುಷ್ಯ ಗೊಂದಲಗಳ ಹಂದರವಾಗಿ ಮನಸಿಕವಾಗಿ ಕುಗ್ಗಿಹೋಗುತ್ತಾನೋ, ಹಾಗೆಯೇ ದೇಹದೊಳಗೆ ಜಂತುಹುಳುಗಳು ಸೇರಿದಲ್ಲಿ ಮನುಷ್ಯ ದೈಹಿಕವಾಗಿ ದುರ್ಬಲವಾಗುತ್ತಾನೆ ಎಂಬ ಕಟುಸತ್ಯವನ್ನು ಅರಿತುಕೊಂಡು ಸಾಕಷ್ಟು ಮುಂಜಾಗರೂಕತೆ ವಹಿಸಿದಲ್ಲಿ ಮುಂದೊದಗುವ ಅನಾಹುತವನ್ನು ತಡೆಗಟ್ಟಬಹುದು.

dr-muralee-mohan

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!