ಪಾರ್ಕಿನ್‍ಸನ್ ಖಾಯಿಲೆ : ಚಿಕಿತ್ಸೆ- ನಿರ್ವಹಣೆ ಹೇಗೆ?

ಪಾರ್ಕಿನ್‍ಸನ್ ಖಾಯಿಲೆ ಹಿರಿಯ ನಾಗರೀಕರಲ್ಲಿ ಹೆಚ್ಚಾಗಿ ಕಂಡು ಬರುವ ನರಗಳ ದುರ್ಬಲತೆ ಅಥವಾ ಅಸಹಜತೆಯ ರೋಗ. ಪಾರ್ಕಿನ್‍ಸನ್ ರೋಗಕ್ಕೆ ಸೂಕ್ತ ಚಿಕಿತ್ಸೆ ಇನ್ನೂ ಬಂದಿಲ್ಲ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಖಾಯಿಲೆ ತೀವ್ರವಾಗಿ ವ್ಯಕ್ತಿ ಸಂರ್ಪೂಣವಾಗಿ ಅಂಗ ವಿಕಲನಾಗುತ್ತಾನೆ.

ಪಾರ್ಕಿನ್‍ಸನ್ ಖಾಯಿಲೆ : ಚಿಕಿತ್ಸೆ- ನಿರ್ವಹಣೆ ಹೇಗೆ?

ಪಾರ್ಕಿನ್‍ಸನ್ ಎಂಬ ನಡುಕದ ಖಾಯಿಲೆ ಮೆದುಳಿನ ನರಮಂಡಲಗಳಿಗೆ ಸಂಬಂಧಿಸಿದ ಸಂಕೀರ್ಣ ಖಾಯಿಲೆಯಾಗಿದ್ದು, ಸಾಮಾನ್ಯವಾಗಿ ಇಳಿ ವಯಸ್ಸಿನಲ್ಲಿ ಕಂಡು ಬರುತ್ತದೆ. “ಪಾರ್ಕಿನ್‍ಸನ್” ಖಾಯಿಲೆ ಇರುವ ರೋಗಿಗಳಲ್ಲಿ ದೇಹದ ಚಲನವಲನೆಗಳಲ್ಲಿ ವ್ಯತ್ಯಾಸವಾಗುವ ದೇಹಸ್ಥಿತಿ ಕಂಡುಬರುತ್ತದೆ. ಮೆದುಳಿನ ಅಸಹಜತೆಯ ಈ ಖಾಯಿಲೆಯಲ್ಲಿ ನಡುಕ, ಕಂಪಿಸುವುದು, ನಡೆದಾಡಲು ಕಷ್ಟವಾಗುವುದು, ಚಲನವಲನೆಗೆ ತೊಂದರೆ ಮತ್ತು ಸಂವಹನದ ತೊಂದರೆ ಉಂಟಾಗಬಹುದು. ಪುರುಷರಲ್ಲಿ ಜಾಸ್ತಿ ಕಂಡು ಬರುವ ಈ ರೋಗ, ಹೆಚ್ಚು 60 ವರ್ಷಗಳ ನಂತರ ಕಂಡು ಬರುತ್ತದೆ.

ಹಿರಿಯ ನಾಗರೀಕರಲ್ಲಿ ಹೆಚ್ಚಾಗಿ ಕಂಡು ಬರುವ ನರಗಳ ದುರ್ಬಲತೆ ಅಥವಾ ಅಸಹಜತೆಯ ರೋಗಗಳಲ್ಲಿ ಪಾರ್ಕಿನ್‍ಸನ್ ಕೂಡ ಒಂದಾಗಿದೆ. ಅತೀ ವಿರಳ ಸಂದರ್ಭಗಳಲ್ಲಿ ಯುವಕರಲ್ಲಿ ಬರುವ ಸಾಧ್ಯತೆ ಇದೆ. ಕೆಲವೊಮ್ಮೆ ಅನುವಂಶಿಕವಾಗಿಯೂ ಕುಟುಂಬಸ್ಥರಲ್ಲಿ ಕಾಡಲೂಬಹುದು. ಒಂದು ಕುಟುಂಬದಲ್ಲಿ ನರಗಳ ಖಾಯಿಲೆಯ ಹಿನ್ನಲೆ ಇದ್ದಲ್ಲಿ, ಆ ಕುಟುಂಬದ ಯುವಕ ಯುವತಿಯರಲ್ಲಿ ಈ ನರಗಳ ದೌರ್ಬಲ್ಯತೆ ಪಾರ್ಕಿನ್‍ಸನ್ ರೋಗದ ರೂಪದಲ್ಲಿ ಕಾಣಿಸಬಹುದು. ಪ್ರತಿ ಒಂದು ಲಕ್ಷ ಜನರಲ್ಲಿ 70 ಜನರು ಈ ಸತಾಯಿಸುವ ಕಂಪನ ವ್ಯಾಧಿ ಪಾರ್ಕಿನ್‍ಸನ್ ನರಾಂಗ ವ್ಯೂಹದ ಕಾಯಿಲೆಯಿಂದ ಬಳಲುತ್ತಿದ್ದಾರೆ. ನರಮಂಡಲದ ಕಾಯಿಲೆಗಳಲ್ಲಿ ಮರೆವಿನ ರೋಗ ಅಲ್ವೀಮರ್ಸ್ ನಂತರದ ಸ್ಥಾನ ಶಾಶ್ವತವಾಗಿ ಈ ಪಾರ್ಕಿನ್‍ಸನ್ ರೋಗಕ್ಕೆ ಮೀಸಲಾಗಿದೆ.

ಏನಿದು ಪಾರ್ಕಿನ್‍ಸನ್ ಖಾಯಿಲೆ?

ನಮ್ಮ ದೇಹದ ಚಲನವಲನಗಳನ್ನು, ಸ್ನಾಯುಗಳು ಮತ್ತು ನರಗಳು ನಿಯಂತ್ರಿಸುತ್ತದೆ. ಶರೀರದಲ್ಲಿನ ಸ್ನಾಯುಗಳ ಚಲನೆಗೆ ಸಹಾಯಕವಾಗಲು ನರಕೋಶಗಳು ಮೆದುಳಿನಲ್ಲಿ ಡೋಪಾಮೈನ್ ಎಂಬ ರಾಸಾಯನಿಕವನ್ನು ಉಪಯೋಗಿಸುತ್ತವೆ. ಆದರೆ ಕಾರಣಾಂತರಗಳಿಂದ ಮೆದುಳಿನ ನರಕೋಶಗಳು ಡೊಪಾಮೈನನ್ನು ನಾಶ ಪಡಿಸಲು ಆರಂಭಿಸಿದಾಗ, ಈ ಪಾರ್ಕಿನ್‍ಸನ್ ರೋಗ ಆರಂಭವಾಗುತ್ತದೆ. ಈ ಡೋಪಾಮೈನ್ ನಾಶಕ್ಕೆ ಹಲವಾರು ಕಾರಣಗಳು ಇರಬಹುದು. ಅನುವಂಶೀಕ ಕಾರಣವೂ ಇರಬಹುದು. ಇಲ್ಲವಾದಲ್ಲಿ ದೇಹದ ಪ್ರೋಟಿನ್‍ಗಳು ದೇಹದ ವಿರುದ್ಧವೇ ತೊಡತಟ್ಟಿ ಸಮರ ಸಾರಿದಲ್ಲಿ ದೇಹದ ಜೀವಕೋಶಗಳ ವಿರುದ್ಧವೇ ಆಂಟಿ ಬಾಡಿಗಳು ಅಥವಾ ಪ್ರತಿರೋಧಗಳು ಉತ್ಪನ್ನವಾಗಿ ನರಕೋಶಗಳನ್ನು ಮತ್ತು ಜೀವಕೋಶಗಳನ್ನು ಕಾಡುತ್ತವೆ.

ಮೆದುಳಿನ ಭಾಗವಾಗಿರುವ ನರಕೋಶಗಳು ಡೋಪಮೈನ್ ಇಲ್ಲದೆ, ಸರಿಯಾಗಿ ಸಂದೇಶಗಳನ್ನು ರವಾನಿಸಲಾರವು. ಇದರಿಂದ ಸ್ನಾಯುಗಳ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಈ ವೈಫಲ್ಯಕ್ಕೆ ಯಾವುದೇ ಚಿಕಿತ್ಸೆ ಮಾಡಿಸದಿದ್ದಲ್ಲಿ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಯಾವ ಕಾರಣಕ್ಕಾಗಿ ಈ ರೀತಿ ಮೆದುಳಿನ ಕೋಶಗಳು ನಶಿಸುತ್ತವೆ ಎನ್ನುವುದರ ಬಗ್ಗೆ ಬಹಳ ಸಂಶೋಧನೆಗಳು ನಡೆಯುತ್ತ್ತಲೇ ಇದೆ.ಇನ್ನೂ ಸೂಕ್ತವಾದ, ಸಮಂಜಸವಾದ ಕಾರಣ ಸಿಗದಿರುವುದೇ ಸೋಜಿಗದ ಅಂಶವಾಗಿದೆ. ಸಂಶೋಧನೆಗಳಿಂದ ನಾಶಕ್ಕೆ ಕಾರಣವಾದ ನಿಗೂಢ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಚಿಕಿತ್ಸೆಗೆ ಅನುಕೂಲವಾಗಬಹುದು. ಚಿಕ್ಕ ವಯಸ್ಸಿನಲ್ಲಿ ನರಕೋಶಗಳು ಡೋಪಮೈನ್‍ಗೆ ಹೆಚ್ಚು ಸಂವೇದನಶೀಲವಾಗಿಲ್ಲದ ಕಾರಣ ಪಾರ್ಕಿನ್‍ಸನ್ ಖಾಯಿಲೆ ಮಕ್ಕಳಲ್ಲಿ ಕಂಡು ಬರುವುದು ವಿರಳ.

ಲಕ್ಷಣಗಳು ಏನು?

ಆರಂಭದ ಹಂತದಲ್ಲಿ ಪಾರ್ಕಿನ್‍ಸನ್ ಖಾಯಿಲೆಯ ಲಕ್ಷಣಗಳು ಬಹಳ ಸೌಮ್ಯವಾಗಿರುತ್ತದೆ.

1.ಆರಂಭದಲ್ಲಿ ಒಂದೇ ಕಾಲಿನಲ್ಲಿ ಅಥವಾ ಕೈಯಲ್ಲಿ ನಡುಕ ಅಥವಾ ಕಾಲು ಸೆಟೆತ ಹಾಗೂ ಕಾಲು ಎಳೆತ ಕಾಣಿಸಿಕೊಳ್ಳಬಹುದು. ದೇಹದ ಒಂದು ಅಥವಾ ಎರಡು ಭಾಗಗಳಲ್ಲಿ ಪಾರ್ಕಿನ್‍ಸನ್ ಲಕ್ಷಣಗಳು ಕಾಣಿಸಲೂಬಹುದು.

2.ದೇಹದ ಸಮತೋಲನ ಮತ್ತು ನಡಿಗೆ ಕಷ್ಟವಾಗಬಹುದು. ಚಲನೆಗೆ ತೊಂದರೆಗಳು, ಚಲನೆ ಆರಂಭಿಸಲು ಕಷ್ಟವಾಗುವುದು, ಕುರ್ಚಿಯಿಂದ ಎದ್ದೇಳಲು ಕಷ್ಟವಾಗುವುದು, ನಡಿಗೆಯನ್ನು ಮುಂದುವರಿಸಲು ತಡಕಾಡುವುದು, ಚಲನೆ ನಿಧಾನವಾಗುವುದು ಇತ್ಯಾದಿ.

3.ಸ್ನಾಯುಗಳಲ್ಲಿ ನೋವು, ಸ್ನಾಯು ಸೆಟೆಯುವುದು ಅಥವಾ ಪೆಡಸಾಗುವುದು ಕಾಣಿಸುತ್ತದೆ. ಈ ಲಕ್ಷಣಗಳು ಹೆಚ್ಚಾಗಿ ಕಾಲುಗಳಲ್ಲಿ ಕಾಣಿಸುತ್ತದೆ.

4.ಆಹಾರ ನುಂಗಲು ಕಷ್ಟವಾಗುವುದು, ಜೊಲ್ಲು ಸುರಿಸುವುದು ಮತ್ತು ಸೋರುವುದು, ಮುಖವು ಮುಖವಾಡ ಧರಿಸಿದಂತೆ ನಿರ್ಭಾವುಕವಾಗುವುದು.

5.ರೆಪ್ಪೆ ಮಿಟಿಕಿಸುವುದು, ಮಲಬದ್ಧತೆ, ಕೈಕಾಲುಗಳಲ್ಲಿ ಕಂಪನ, ಚಲನೆ ನಿಧಾನವಾಗುವುದು, ಕೈಯ ಸೂಕ್ಷ್ಮ ಚಲನೆ ಕಡಮೆಯಾಗುವುದು, ಬರವಣಿಗೆ ಕಷ್ಟುವಾಗುವುದು ಹಾಗೂ ಓದಲು ಕಷ್ಟವಾಗುವುದು, ಕೈ ಕಾಲುಗಳು ಸ್ಥಿರವಾಗುವಾಗ ಅಥವಾ ಚಲನೆಯಲ್ಲಿರುವಾಗ ಕಂಪಿಸುವುದು.

6.ಚಲಿಸುವಾಗ ಕೈಕಾಲು ಒಟ್ಟೊಟ್ಟಾಗಿ ಚಲಿಸುವುದು.

7.ಆಯಾಸಗೊಂಡರೆ, ಉದ್ವೇಗದಲ್ಲಿದ್ದರೆ ಅಥವಾ ಒತ್ತಡದ ಸನ್ನಿವೇಶಗಳಲ್ಲಿ ನಡುಕದ ತೀವ್ರತೆ ಹೆಚ್ಚಾಗುತ್ತದೆ. ಕೊನೆಗೆ ತಲೆ, ತುಟಿ, ನಾಲಗೆ ಹಾಗೂ ಕಾಲುಗಳಲ್ಲಿಯೂ ನಡುಕ ಕಂಡು ಬರುತ್ತದೆ.

8.ಧ್ವನಿ ಇಳಿಯುವುದು, ಏರಿಳಿತ ಕಡಮೆಯಾಗುವುದು, ದೇಹ ಬಾಗುವುದು, ಹಾಸಿಗೆಯಿಂದ ಎದ್ದಾಗ ಬೆವರುವುದು, ಜೊಲ್ಲು ಸುರಿಯುವುದು, ದೇಹದ ಉಷ್ಣಾತೆ ಕಡಮೆಯಾಗುವುದು, ದೇಹದ ರಕ್ತದೊತ್ತಡ ಕಡಮೆಯಾಗುವುದು

9.ಇದರ ಜೊತೆಗೆ ಆತಂಕ, ಒತ್ತಡ, ಉದ್ವೇಗದಿಂದ ಗೊಂದಲ ಉಂಟಾಗುತ್ತದೆ.

10.ಮರೆವು, ಖಿನ್ನತೆ, ತಲೆ ಸುತ್ತುವುದು, ನೆನಪಿನ ಶಕ್ತಿ ಕುಂದುವುದು ಹಾಗೂ ಬುದ್ಧಿ ಮಾಂಧ್ಯತೆಯೂ ಬರಬಹುದು. ಮುಂದುವರಿದ ಹಂತದಲ್ಲಿ ವಿಪರೀತವಾದ ಮರೆಗುಳಿತನ ಮತ್ತು ಮಾನಸಿಕ ಖಿನ್ನತೆ.

ಕಂಡು ಹಿಡಿಯುವುದು ಹೇಗೆ?

ದೈಹಿಕ ಪರೀಕ್ಷೆಗಳು ಮತ್ತು ದೇಹದ ರೋಗದ ಲಕ್ಷಣಗಳನ್ನು ಆಧರಿಸಿ ನುರಿತ ವೈದ್ಯರು ಪಾರ್ಕಿನ್‍ಸನ್ ರೋಗವನ್ನು ಕಂಡು ಹಿಡಿಯುತ್ತಾರೆ. ವಿಶೇಷವಾಗಿ ವಯಸ್ಕರಲ್ಲಿ ಈ ಖಾಯಿಲೆಯ ಲಕ್ಷಣಗಳನ್ನು ಗುರುತಿಸುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಖಾಯಿಲೆ ತೀವ್ರವಾದರೆ ರೋಗದ ಲಕ್ಷಣಗಳು ಸ್ಪಷ್ಟವಾಗಿ ತಿಳಿದುಬರುತ್ತದೆ.

ಚಿಕಿತ್ಸೆ ಹೇಗೆ?

ಪಾರ್ಕಿನ್‍ಸನ್ ರೋಗಕ್ಕೆ ಸೂಕ್ತ ಚಿಕಿತ್ಸೆ ಇನ್ನೂ ಬಂದಿಲ್ಲ. ರೋಗದ ಲಕ್ಷಣಗಳನ್ನು ನಿಯಂತ್ರಿಸುವುದೇ ಚಿಕಿತ್ಸೆಯ ಪ್ರಾಥಮಿಕ ಉದ್ದೇಶವಾಗಿರುತ್ತದೆ. ಔಷಧಿಗಳು ಮೆದುಳಿನ ಡೊಪಮೈನ್ ಮಟ್ಟವನ್ನು ಹೆಚ್ಚಿಸಿ, ರೋಗದ ಲಕ್ಷಣಗಳನ್ನು ನಿಯಂತ್ರಿಸುತ್ತವೆ. ದಿನದ ಕೆಲವು ಸಮಯದಲ್ಲಿ ಔಷಧಿಯ ಪ್ರಭಾವವು ತಗಲದ ಕಾರಣ, ಲಕ್ಷಣಗಳು ಮರುಕಳಿಸುವ ಸಾಧ್ಯತೆ ಇದೆ. ನುರಿತ ವೈದ್ಯರು, ಔಷಧಿಯ ಪ್ರಮಾಣ, ಅಂತರ ಮತ್ತು ಔಷಧಿಯ ವಿಧಾನವನ್ನು ಮತ್ತು ತೆಗೆದುಕೊಳ್ಳುವ ರೀತಿಯನ್ನು ಮಾರ್ಪಾಡು ಮಾಡಿ ರೋಗವನ್ನು ಹತೋಟಿಗೆ ತರುತ್ತಾರೆ. ವೈದ್ಯರ ಅನುಮತಿ ಇಲ್ಲದೆ ಔಷಧಿಯನ್ನು ಬದಲಿಸಬೇಡಿ ಮತ್ತು ಜಾಸ್ತಿ ಔಷಧ ತೆಗೆದುಕೊಳ್ಳಲೇ ಬಾರದು. ಚಿಕಿತ್ಸೆ ಯಶಸ್ವಿಯಾಗಿರಲು  ಸಹಕಾರವೇ ಅವಶ್ಯಕ.

ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿ. ಯಾವುದೇ ಕಾರಣಕ್ಕೆ ಔಷಧಿಯನ್ನು ನಿಲ್ಲಿಸಬಾರದು. ಕೆಲವೊಮ್ಮೆ ಔಷಧಿಗಳಿಂದ ತೀವ್ರ ವಾಂತಿ, ವಾಕರಿಕೆ, ಅತೀಸಾರ, ಭೇದಿ, ಉನ್ಮಾದ, ಭ್ರಮೆ, ಮುಂತಾದ ಅಡ್ಡ ಪರಿಣಾಮ ಬರುವ ಸಾಧ್ಯತೆ ಇದೆ. ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ತೆಗೆದುಕೊಳ್ಳಿ. ಸ್ವಯಂ ಔಷಧಿಗಾರಿಕೆ ಪ್ರಾಣಪಾಯ ತಂದೊಡ್ಡಬಹುದು. ಈ ರೋಗದ ಚಿಕಿತ್ಸೆಯಲ್ಲಿ ರೋಗಿಯ, ವೈದ್ಯರ ಮತ್ತು ರೋಗಿಯ ಕುಟುಂಬಸ್ಥರ ಸಂಪೂರ್ಣ ಸಹಕಾರ ಮತ್ತು ಹೊಂದಾಣಿಕೆ ಅತೀ ಅಗತ್ಯವಾಗಿರುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಖಾಯಿಲೆ ತೀವ್ರವಾಗಿ ವ್ಯಕ್ತಿ ಸಂರ್ಪೂಣವಾಗಿ ಅಂಗ ವಿಕಲನಾಗುತ್ತಾನೆ. ಒಂದು ಹಂತದಲ್ಲಿ ಮೆದುಳಿನ ಎಲ್ಲ ಕಾರ್ಯ ಚಟುವಟಿಕೆಗಳು ನಿಂತು ಹೋಗಿ ವ್ಯಕ್ತಿ ಬೇಗನೆ ಮರಣ ಹೊಂದಬಹುದು. ಹೆಚ್ಚಿನ ಜನರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಾರೆ ಎನ್ನುವುದೇ ಸಮಾಧಾನಕರ ಅಂಶ.

ನಿರ್ವಹಣೆ ಹೇಗೆ?

1.ಜೀವನಶೈಲಿಯನ್ನು ಬದಲು ಮಾಡಿಕೊಳ್ಳಲೇಬೇಕು. ಮಾನಸಿಕ ಒತ್ತಡವನ್ನು ಕಡಮೆ ಮಾಡಿಕೊಂಡು, ಸಾಕಷ್ಟು ವಿಶ್ರಾಂತಿ ಪಡೆಯಬೇಕು.

2.ದೇಹದ ಸಧ್ಯದ ಪರಿಸ್ಥಿತಿ ಮತ್ತು ಚಲನೆಗೆ ಪೂರಕವಾದ ಒಗ್ಗುವ ರೀತಿಯ ವ್ಯಾಯಾಮಗಳನ್ನೇ ಮಾಡಬೇಕು. ದೇಹವನ್ನು ವಿಪರೀತವಾಗಿ ದಂಡಿಸಿಕೊಳ್ಳಬೇಡಿ.

3. ಉತ್ತಮವಾದ ಸಮತೋಲಿತವಾದ ವಿಟಮಿನ್ ಮತ್ತು ಪ್ರೋಟಿನ್‍ಯುಕ್ತ ಪೋಷಕಾಂಶಗಳಿರುವ ಆಹಾರವನ್ನು ಹೆಚ್ಚು ಸೇವಿಸಿ. ಆಹಾರ ನುಂಗಲು ಕಷ್ಟವಾದಲ್ಲಿ ಆಹಾರ ತಜ್ಞರ ಬಳಿ ಸಲಹೆ ಕೇಳಿ ದೇಹಕ್ಕೆ ಒಗ್ಗುವ ಆಹಾರವನ್ನೇ ತಿನ್ನತಕ್ಕದ್ದು. ನಿಮ್ಮ ಆಹಾರ, ಪಾನೀಯಗಳಲ್ಲಿ ದೇಹ ಸ್ಥಿತಿಗೆ ಪೂರಕವಾದ ರೀತಿಯಲ್ಲಿ ಬದಲಾವಣೆ ಮಾಡತಕ್ಕದ್ದು.

4. ದೈಹಿಕ ಚಿಕಿತ್ಸೆ, ವಾಕ್ ಚಿಕಿತ್ಸೆ ಮತ್ತು ವೃತ್ತಿಪರವಾದ ಚಿಕಿತ್ಸೆಗಳನ್ನು ತಜ್ಞ ವೈದ್ಯರ ಬಳಿ ಪಡೆದುಕೊಂಡು, ಜೀವನಶೈಲಿಯನ್ನು ಬದಲಿಸಿ.

5. ಮನೆಯಲ್ಲಿ ಹೆಚ್ಚು ಓಡಾಡುವ ಜಾಗಗಳಲ್ಲಿ ಬಿದ್ದು ಗಾಯಗಳಾಗುವುದನ್ನು ತಪ್ಪಿಸಲು ಅಲ್ಲಲ್ಲಿ ಕೈ ಹಿಡಿಕೆಗಳನ್ನು ಅಳವಡಿಸಬೇಕು.

6. ಶೌಚಾಲಯವನ್ನು ಶುಚಿಯಾಗಿಡತಕ್ಕದ್ದು. ವಿಶೇಷ ಆಹಾರ ಸೇವಿಸುವ ಉಪಕರಣಗಳು, ಹಾಸಿಗೆ ಎತ್ತರಿಸುವ ಸಾಧನ, ಗಾಲಿಕುರ್ಚಿ, ಶವರ್ ಕುರ್ಚಿ, ವಾಕರ್ ಇತ್ಯಾದಿ ಸಹಾಯಕ ಸಾಧನಗಳನ್ನು ಬಳಸಿ ಮನೆಯಲ್ಲಿ ಯಾವತ್ತೂ ಸಹಾಯಕರನ್ನು ಇಟ್ಟುಕೊಂಡು ಓಡಾಡಿ.

7. ನಿಮ್ಮ ದೈಹಿಕ ಮತ್ತು ಮಾನಸಿಕ ಅಸಹಜತೆಯನ್ನು ಎದುರಿಸಲು ಸಾಮಾಜಿಕ ಕಾರ್ಯಕರ್ತರು, ಮನೆ ಪರಿಚಾರಿಕೆಯರು ಮತ್ತು ಮಿತ್ರ ಸಮಾಲೋಚಕರನ್ನು ಬಳಸಿಕೊಳ್ಳಿ.

8. ಬದುಕನ್ನು ಧೈರ್ಯವಾಗಿ ಎದುರಿಸಿ. ತಮ್ಮ ದೈಹಿಕ ನ್ಯೂನತೆಗಳನ್ನು ದೊಡ್ಡದು ಮಾಡಿ ಮಾನಸಿಕವಾಗಿ ಕೊರಗಿದಲ್ಲಿ ಮಾನಸಿಕ ಶಾಂತಿ ನೆಮ್ಮದಿ ಹಾಳಾಗಿ ಆರೋಗ್ಯದ ಮೇಲೂ ದುಷ್ಟರಿಣಾಮ ಬೀರಬಹುದು.

9. ಧನಾತ್ಮಕ ಚಿಂತನೆ, ಯೋಗ, ಧ್ಯಾನ ಪ್ರಾಣಯಾಮ, ಸಂಗೀತ ಆಲಿಸುವಿಕೆ, ನಿಮಗೆ ಇಷ್ಟವಾದ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು, ನಿಮ್ಮ ದೈಹಿಕ ಅಂಗವೈಕಲ್ಯವನ್ನು ಧೈರ್ಯದಿಂದ ಎದುರಿಸಿ.

10.ಇತರರ ಎದುರು ಅಸಾಯಕರಾಗಿ ಅವರಿಂದ ಹೆಚ್ಚಿನ ಸಹಾಯ ಅನುಕಂಪ, ಕರುಣೆ ಮತ್ತು ಸ್ವಾಂತನಕ್ಕಾಗಿ ಹೆಚ್ಚು ಹಾತೊರೆಯಬೇಡಿ. ಯಾಕೆಂದರೆ ನಿಮ್ಮ ನಿರೀಕ್ಷೆ ಹುಸಿಯಾದಾಗ ನಿಮಗೆ ಮತ್ತಷ್ಟು ಮಾನಸಿಕವಾಗಿ ನೋವು ಉಂಟಾಗಬಹುದು.

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 98451 35787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!