ಮಳೆಗಾಲದಲ್ಲಿ ಬಂದೊದಗುವ ಚರ್ಮಕಾಯಿಲೆಗಳು- ಆರ್ಯುವೇದದ ಪರಿಹಾರ

ಮಳೆಗಾಲದಲ್ಲಿ ಬಂದೊದಗುವ ಚರ್ಮಕಾಯಿಲೆಗಳು  ಹಲವು ರೀತಿಯಲ್ಲಿ ಭಾದಿಸುವುದು ಸಹಜ. ಬೇಸಿಗೆಯ ಬಿಸಿಯ ಬೇಯ್ಗೆ, ಬಿಸಿ ಒಣಹವೆಯ ವಾತಾವರಣದ ಜೊತೆಗೆ, ಬದಲಾದ ತಂಪು ಪಸೆಯಿಂದ ಕೂಡಿದ ವಾತಾವರಣ ಚರ್ಮದಲ್ಲಿ ಪರಿವರ್ತನೆಯನ್ನು ತಂದು ಚರ್ಮದ ಸೋಂಕು ಹಾಗು ಹಲವು ಬಗೆಯ ಚರ್ಮಕಾಯಿಲೆಗೆ ಕಾರಣವಾಗುತ್ತದೆ. ಅದರಲ್ಲೂ ಫಂಗಲ್ ಸೋಂಕು ಅತಿಹೆಚ್ಚಾಗಿ ಕಾಣಸಿಗುತ್ತದೆ, ಅಷ್ಟೇ ಅಲ್ಲದೆ, ಪರಜೀವಿಗಳ ಹಾಗು ಬಾಕ್ಟೀರಿಯಗಳ ಸೋಂಕು ಸಹ ಕಾಣಬಹುದು.

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಚರ್ಮವ್ಯಾಧಿಗಳು

1. ಹುಳಕಡ್ಡಿ ಅಥವ ಗಜಕರ್ಣ: ಇದನ್ನು ರಿಂಗ್‍ವರ್ಮ್ ಎಂದು ಕರೆಯುವುದು ಸಹಜ. ಹುಳಕಡ್ಡಿ ಒಬ್ಬರಿಂದ ಇನ್ನೋಬ್ಬರಿಗೆ ಹರಡುವ ಸಾಮಾನ್ಯ ಕಾಯಿಲೆಯಾಗಿದೆ. ಪ್ರಪಂಚದ 20%ದಷ್ಟು ಜನ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪ್ರಾಣಿಗಳಿಂದಲೂ ಇದು ಹರಡುವ ಸಾಧ್ಯತೆ ಹೆಚ್ಚು. ತ್ರೈಕೊಫೈಲಟೊನ್ ಮೈಕ್ರೊಸ್ಪೊರಮ್, ಮತ್ತು ಎಪಿಡರ್ಮೊಪೈಟಾನ್ ಎಂಬ ರೋಗಾಣುಗಳಿಂದ ಹರಡುವ ವ್ಯಾಧಿ. ಈ ರೋಗಾಣುಗಳು ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಪಸೆಯುಕ್ತ ವಾತಾವರಣದಲ್ಲಿ ಬಹುಬೇಗ ಹರಡುತ್ತದೆ. ಮಕ್ಕಳಲ್ಲಿ ಇದು ಸುಲಭದಲ್ಲಿ ಹಬ್ಬುತ್ತದೆ.

ಲಕ್ಷಣಗಳು : ಕೆಂಪಾದ ತುರಿಕೆಯಿಂದ ಕೂಡಿದ ಹರಡಿದ ವೃತ್ತಾಕಾರದ ಸುತ್ತಳತೆಯನ್ನು ಹೊಂದಿರುವ, ಚರ್ಮದ ಸೊಂಕು. ತೊಡೆಸಂಧಿ, ಕಾಲು, ಕೈ, ಸ್ಥನ ಕುತ್ತಿಗೆ ತಲೆ ಹೀಗೆ ಹೆಚ್ಚು ಪಸೆ, ತಂಪಾದ ದೇಹದ ಭಾಗಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹಳೆಯದಾದದಂತೆ, ಚರ್ಮವು ದಪ್ಪಗಾಗಿ, ಕಪ್ಪಾಗಿ ಹಾಗು ಗಾಯಗಳನ್ನು ಹೊಂದಿರುತ್ತದೆ.

2. ಒಣ ಚರ್ಮದ ಉರಿ ಊತ: ಚರ್ಮವು ಪ್ರಕೃತಿಯಲ್ಲಾಗುವ ಬದಲಾವಣೆಗಳಿಂದ ಒಣಗಿದಂತಾಗಿ, ತುರಿಕೆಯಿಂದ ಕೂಡಿರುತ್ತದೆ. ತುರಿಕೆಯು ಎಷ್ಟರಮಟ್ಟಿಗೆ ಇರುತ್ತದೆಂದರೆ ತುರಿಸುತ್ತಾ ತುರಿಸುತ್ತಾ ಗಾಯವು ಆಗುವ ಸಾಧ್ಯತೆಗಳು ಹೆಚ್ಚು. ನಂತರ ಇದರಿಂದ ಇನ್ನಿತರ ಸೋಂಕುಗಳಾಗುವುದು ಸಹಜ. ಅಲರ್ಜಿ, ನೀರಿನ ದೊಷ, ವ್ಯಾಧಿಕ್ಷಮತ್ವದ ಕೊರತೆ, ಸೊಂಕು, ರಕ್ತನಾಳಗಳ ಸಮಸ್ಯೆಗಳಿಂದ ಈ ತೊಂದರೆ ಬಂದೊದಗುತ್ತದೆ.

ಲಕ್ಷಣಗಳು: ಕೆಂಪಾದ, ಒಣಗಿದ ಚರ್ಮ, ಕೆಲವೊಮ್ಮೆ ಊತ, ಗಾಯ ಕಾಣಸಿಗುತ್ತದೆ. ತುಂಬಾ ದಿನಗಳ ನಂತರ ಆ ಜಾಗವು ಕಪ್ಪಾಗುವ ಸಾದ್ಯತೆಗಳು ಹೆಚ್ಚು. ಕಾರಣಕ್ಕೆ ತಕ್ಕಂತೆ ದೇಹದ ಯಾವ ಭಾಗದಲ್ಲಾದರು ಈ ಸಮಸ್ಯೆ ಕಾಣಸಿಗುತ್ತದೆ.

3. ಇಸುಬು ಅಥವ ಹುಳಕಜ್ಜಿ: ಕಣ್ಣಿಗೆ ಕಾಣದ ಸಣ್ಣ ಹುಳುಗಳಿಂದ ಇಸುಬು ಹರಡುತ್ತದೆ. ಸರ್ಕೊಪ್ಟಸ್ ಸ್ಕೇಬೀಸ್ ಎಂದು ಅದರ ಹೆಸರು. ಈ ರೋಗದ ಮತ್ತೊಂದು ಹೆಸರು ಸ್ಕೇಬೀಸ್ ಎಂದು. ಮಳೆಗಾಲದ ಅನುಕೂಲ ವಾತಾವರಣ ಅವುಗಳು ಹರಡಲು ಸಹಾಯಕವಾಗಿದೆ, ಹತ್ತುಕೊಟಿಗೂ ಅಧಿಕ ಜನ ಈ ರೋಗಕ್ಕೆ ತುತ್ತಾಗುತ್ತಾರೆ ಎಂದು ಅಂದಾಜಿಸಲಾಗಿದೆ. ಚರ್ಮವನ್ನು ಕೊರೆದು ಒಳಕ್ಕೆ ನುಸುಳುವ ಸಾಮಥ್ರ್ಯವನ್ನು ಈ ರೋಗಾಣುಗಳು ಹೊಂದಿರುತ್ತವೆ. ಚರ್ಮದ ಕೆಳಭಾಗದಲ್ಲಿ   ಮೊಟ್ಟೆಗಳನ್ನು ಇಟ್ಟು ಸಂತಾನಾಬಿವೃದ್ದಿಯನ್ನು ಪೋಶಿಸುತ್ತದೆ. ರಾತ್ರಿಯ ಹೊತ್ತಿನಲ್ಲಿ ಹೆಚ್ಚು ಜಗೃತವಾಗಿರುವ ಈ ಹುಳುಗಳು ಹಲವಾರು ಚರ್ಮ ಸಮಸ್ಯೆಯನ್ನು ತರುತ್ತದೆ.

ಲಕ್ಷಣಗಳು: ತುರಿಕೆ, ಕೆಂಪಾದ ಮೊಡವೆಯ ರೀತಿಯ ಚರ್ಮದ ಆಕಾರ, ಚರ್ಮ ಕಿತ್ತಿದಂತಾಗುವುದು, ಅಲ್ಲಲ್ಲೆ ಚರ್ಮದಲ್ಲಿ ಕೊರೆದಂತೆ ಕಾಣುತ್ತದೆ. ಕೈ, ಕಾಲು, ಗುಪ್ತ್ತಾಂಗ, ಮುಖದ ಪ್ರದೇಶ,ಕುತ್ತಿಗೆ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

Vaidyaloka_rain-season_skin-diseases. ಮಳೆಗಾಲದಲ್ಲಿ ಬಂದೊದಗುವ ಚರ್ಮಕಾಯಿಲೆಗಳು- ಆರ್ಯುವೇದದ ಪರಿಹಾರ4. ಸೋರಿಯಾಸಿಸ್: ವ್ಯಾಧಿ ಕ್ಷಮತ್ವದ ಕೊರತೆಯಿಂದ ಕಾಣಿಸಿಕೊಳ್ಳುವ ರೋಗ ಸೋರಿಯಾಸಿಸ್. ಜನ್ಮಕ್ಕೆ ಅಂಟಿದ ರೊಗವೇನೊ ಎಂಬಂತೆ ಬಾದಿಸುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಲ್ಲ. ದೇಹದ ಪ್ರಕೃತಿಯಲ್ಲಾಗುವ ವ್ಯತ್ಯಾಸ ಹಾಗು ವಂಶವಾಹಿನಿಯ ದೋಷದಿಂದ ಈ ರೋಗವನ್ನು ತರುತ್ತದೆ. ಮಳೆ-ಚಳಿಗಾಲದ ಹವಾಮಾನ, ಮಾನಸಿಕ ಹಿಂಸೆ, ನೋವು ನಿವಾರಕ ಮಾತ್ರೆಗಳು, ಬಿ.ಪಿ.ಗೆಂದು ತೆಗೆದುಕೊಳ್ಳುವ ಕೆಲವು ಮಾತ್ರೆಗಳೂ ಈ ರೋಗವನ್ನು ಉಲ್ಬಣಗೊಳಿಸುತ್ತದೆ.

ಲಕ್ಷಣಗಳು: ಸಾಮಾನ್ಯವಾಗಿ ಈ ರೊಗವು ಕೈ ಗಂಟಿನ ಹಿಂಬಾಗ, ಮಂಡಿಮುಂಭಾಗ, ಹೊಕ್ಕಳ ಸುತ್ತಾ, ತಲೆಯಲ್ಲಿ ಕಾಣಸಿಗುತ್ತದೆ. ಕೆಂಪಾದ, ತುರಿಕೆಯುಕ್ತವಾದ, ಹೊಟ್ಟಿನಂತೆ ಚರ್ಮ ಉದುರುವ ಸಾಮಾನ್ಯ ಲಕ್ಷಣಗಳನ್ನು ಈ ರೋಗವು ಹೊಂದಿದೆ. ರೋಗವು ಹೆಚ್ಚಾದಂತೆ ಗಂಟು ಸಂಧಿ ನೋವುಗಳು ಹೆಚ್ಚಾಗುತ್ತದೆ. ಸೊರಿಯಾಟಿಕ್ ಆತ್ರೈಟೀಸ್ ಎಂದು ಇದನ್ನು ಕರೆಯುತ್ತಾರೆ. ಉಗುರಿನಲ್ಲಿ ತೂತುಬೀಳುವುದನ್ನು ಈ ರೋಗದಲ್ಲಿ ಕಾಣಬಹುದು.

Also Read: ಸೋರಿಯಾಸಿಸ್ ಮುಕ್ತಿಗೆ ಆಯುರ್ವೇದ ಚಿಕಿತ್ಸೆ

5. ಉದರ್ದ: ಆಹಾರದ ವ್ಯತ್ಯಾಸ, ಮಳೆ ಚಳಿಯ ಹವಾಗುಣ ದೇಹದಲ್ಲಿ ಕೆಲವೊಂದು ವ್ಯತ್ಯಾಸವನ್ನು ತರುತ್ತದೆ. ಅಂತಹ ವ್ಯತ್ಯಾಸವು ಚರ್ಮದಲ್ಲಾಗುವ ಉದರ್ದಕಾಯಿಲೆಯು ಒಂದು. ಪ್ರಪಂಚದಲ್ಲಿ 20 ಪ್ರತಿಷತದಷ್ಟು ಜನ ಇದರಿಂದ ಬಳಲುತ್ತಿದ್ದಾರೆ.

ಲಕ್ಷಣಗಳು: ಇರುವೆ ಕಡಿದಂತೆ ದೇಹದ ಭಾಗಗಳಲ್ಲಿ ಚರ್ಮವು ತಕ್ಷಣಕ್ಕೆ ಎದ್ದು ನಿಲ್ಲುತ್ತದೆ. ತುರಿಕೆ, ನೊವು, ಗಾಯವು ಆಗುತ್ತದೆ. ಹೆಚ್ಚಾದಂತೆಲ್ಲಾ ಹೊಟ್ಟೆನೋವು, ವಾಂತಿ, ಉಸಿರಾಟದ ತೊಂದರೆ ಕಾಣಸಿಗುತ್ತದೆ.

6. ಬೆರಳಿನ ಸೋಂಕು ಅಥವ ಕೆಸರು ಹುಣ್ಣು: ಮಳೆಗಾಲದಲ್ಲಿ ಕೆಸರಿನ ಸಂಪರ್ಕ ಸಾಮಾನ್ಯ, ಎಚ್ಚರ ವಹಿಸದೆ, ಶುಚಿತ್ವವನ್ನು ಕಾಪಾಡುವಲ್ಲಿ ವಿಫಲವಾದಾಗ ಬೆರಳಿನ ಸೊಂಕು ಉಂಟಾಗುತ್ತದೆ. ಸದಾ ನೀರು ಕೆಸರಿನಲ್ಲಿ ಕೆಲಸಮಾಡುವವರು, ಆಟಗಾರರು, ಕೂಲಿ ಕಾರ್ಮಿಕರು, ರೈತರು ಈ ರೋಗಕ್ಕೆ ಸುಲಭದಲ್ಲಿ ತುತ್ತಾಗುತ್ತಾರೆ.

ಲಕ್ಷಣಗಳು: ಬೆರಳು ಸಂಧಿಗಳ ಚರ್ಮ ಒಡೆದಂತಾಗುವುದು, ತೆವವಾದ ನೋವಿನಿಂದ ಕೂಡಿದ ಬೆರಳು ಸಂಧಿ, ಬಿಳಿಯಾದ ಸುಕ್ಕುಕಟ್ಟಿ ಪೆಡಸಿಂತಾಗುವ ಬೆರಳು ಸಂಧಿಗಳಿಂದ ಕೆಟ್ಟ ವಾಸನೆ ಹೊರಹೊಮ್ಮುತ್ತದೆ. ಬಾಕ್ಟಿರಿಯ, ಫಂಗಸ್‍ಗಳಿಂದ ಇದು ಉಂಟಾಗುತ್ತದೆ. ಸಕ್ಕರೆ ಕಾಯಿಲೆ, ವಯಸ್ಸಾದವರು, ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಇದರಿಂದ ಹೆಚ್ಚು ತೊಂದರೆ ಅನುಭವಿಸುತ್ತಾರೆ.

7. ಉಗುರಿನ ಸೊಂಕು: ನೀರಿನಲ್ಲಿ ಹೆಚ್ಚುಕಾಲ ಕಳೆಯುವುದರಿಂದ, ಬಹಳಕಾಲ ಹಸಿಯಾದ ಕೈ, ಕಾಲು ಚಿಲಗಳನ್ನು ಬಳಸುವುದರಿಂದ, ರೊಗನಿರೋಧಕ ಶಕ್ತಿಯ ಕೊರತೆಯಿಂದ, ಈ ರೋಗವು ಉಂಟಾಗುತ್ತದೆ. ವಯಸ್ಸಾದ ಹಾಗು ಸಣ್ಣಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಫಂಗಲ್ ಹಾಗು ಬಾಕ್ಟಿರಿಯಗಳು ಈ ರೋಗಕ್ಕೆ ಮುಖ್ಯಕಾರಣ.

ಲಕ್ಷಣಗಳು: ಉಗುರು ಉದಿದಂತಾಗುವುದು, ಉಗುರು ಒಣಗಿದ, ತುಂಡಾದಂತೆ, ದಪ್ಪಗಾದಂತೆ ಕಾಣುತ್ತದೆ. ಹಳದಿಯ ಬಣ್ಣವು ಉಗುರಿನ ತುದಿಯಲ್ಲಿ ಕಂಡುಬರುತ್ತದೆ. ಉಗುರು ಉದುರುವುದು, ನೋವು, ಕೆಟ್ಟವಾಸನೆ ಮುಂತಾದ ಲಕ್ಷಣಗಳು ಕಂಡುಬರುತ್ತದೆ.

ಮುನ್ನೆಚ್ಚರಿಕೆಗಳು:

ಮಳೆಗಾಲದಲ್ಲಿ ಬಂದೊದಗುವ ಚರ್ಮಕಾಯಿಲೆಗಳು- ಆರ್ಯುವೇದದ ಪರಿಹಾರ1. ಸಾಕುಪ್ರಾಣಿಗಳನ್ನು ಮಕ್ಕಳಿಂದ ದೂರವಿಡಿ ಹಾಗು ಅವುಗಳನ್ನು ಮುಟ್ಟಿದ ನಂತರ ಶುಚಿತ್ವವನ್ನು ಕಾಪಾಡಿ.

2. ಮಳೆಯಲ್ಲಿ ನೆನೆದ ತಕ್ಷಣ ಬಟ್ಟೆಗಳನ್ನು ಬದಲಾಯಿಸುವುದು ಹಾಗು ಶುಚಿತ್ವವನ್ನು ಕಾಪಾಡುವುದು, ಪಸೆ ನಿಲ್ಲದ ಹಾಗೆ ನೊಡಿಕೊಳ್ಳುವುದು.

3. ಕೆಸರಿನಿಂದ ಕೊಳೆಯಾದ ತಕ್ಷಣ ಶುದ್ದ ನೀರಿನಿಂದ ತೊಳೆಯುವುದು.

4. ಮಕ್ಕಳನ್ನು ಮಣ್ಣಿನಲ್ಲಿ ಬಹುಕಾಲ ಆಡದಂತೆ ಮುನ್ನೆಚ್ಚರಿಕೆ ವಹಿಸಿ.

5. ರೋಗಲಕ್ಷಣಗಳು ಕಂಡ ತಕ್ಷಣ ವೈದ್ಯರ ಸಲಹೆ ಪಡೆಯುವುದು.

6. ನೀರಿನಲ್ಲಿ ಹೆಚ್ಚುಕಾಲ ಕಳೆಯುವವರು ರಬ್ಬರ್ ಕೈ ಚೀಲ ಹಾಗು ಕಾಲುಚೀಲಗಳನ್ನು ಬಳಸುವುದು ಸೂಕ್ತ.

7. ಮನೆಯ ಸುತ್ತ ಕೆಸರು ನಿಲ್ಲದಂತೆ ನೊಡಿಕೊಳ್ಳಿ.

8. ಚಳಿಗಾಳಿಗೆ ಮೈ ಒಡ್ಡದಿರಿ.

9. ಬರಿಕಾಲಿನಲ್ಲಿ ಒಡಾಡದಿರಿ.

ಚರ್ಮರೋಗಕ್ಕೆ ಆರ್ಯುವೇದದ ಪರಿಹಾರ:

1. ಮಳೆಗಾಲದಲ್ಲಿ ಮಳೆಯ ಪ್ರಭಾವದಿಂದ ವಾತ ದೋಷವು ದೇಹದಲ್ಲಿ ಹೆಚ್ಚಾಗುತ್ತದೆ. ಇದರಿಂದ ತ್ವಚೆಯು ರೂಕ್ಷತೆಯನ್ನು ಹೊಂದುತ್ತದೆ. ರೂಕ್ಷತ್ವಚೆಯ ಕಾರಣ ದೇಹವು ಹಲವು ಸೋಂಕು ಹಾಗು ಚರ್ಮರೋಗಗಳು ಬರುತ್ತವೆ.

2. ಮಳೆಗಾಲದಲ್ಲಿ ಪ್ರತೀ ದಿನವೂ ಎಣ್ಣೆ ಸ್ನಾನವನ್ನು ಮಾಡುವುದರಿಂದ ತ್ವಚೆಯ ಸ್ನಿಗ್ಧತೆ ಸಮತೊಲನಗೊಳ್ಳುತ್ತದೆ.

3. ಮಳೆಗಾಲದಲ್ಲಿ ಹಳೆ ಅಕ್ಕಿ, ಹಳೆಯ ದ್ವಿದಳ ಧಾನ್ಯಗಳನ್ನು ಬಳಸುವುದು ಸೂಕ್ತ. ಇದರಿಂದ ಸೋಂಕು ದೇಹದಲ್ಲಿ ಹರಡದಂತೆ ಕಾಪಾಡುತ್ತದೆ.

4. ಮಳೆಗಾಲದಲ್ಲಿ ಜೇನುತುಪ್ಪದ ಬಳಕೆ ಚರ್ಮದ ಉಷ್ಣತ್ವನ್ನು ಹೆಚ್ಚಿಸಿ ಚರ್ಮವನ್ನು ಕಾಂತಿಯುತವಾಗಿಯು ಸೊಂಕುರಹಿತವಾಗಿಯೂ ಕಾಪಾಡುತ್ತದೆ.

5. ಮಳೆಗಾಲದಲ್ಲಿ ಸುಗಂಧ ದ್ರವ್ಯಗಳಾದ ಚಂದನ, ನಿಗುಂಡಿ, ಎಲ, ಕರ್ಪೂರ ಮುಂತಾದವುಗಳಿಂದ ಮಾಡಿದ ಲೇಪವು ಚರ್ಮ ಕಾಂತಿ, ಹೆಚ್ಚಿಸಿ ಸೋಂಕು, ಪರಜಿಜೀವಿಗಳು ಹರಡದಂತೆ ಕಾಪಾಡುತ್ತದೆ.

6. ಮಳೆಗಾಲದ ಚರ್ಮರೋಗವನ್ನು ಹೋಗಲಾಡಿಸುವಲ್ಲಿ ಚಂದನ, ಕುಟಜ, ರಾಸ್ನ , ನಿಂಬ,ಅಮೃತ, ಎರಂಡ, ಸಾಲರಿವ, ಮಂಜಿಷ್ಟ, ಉಶಿರ, ನಿಶಾ, ಹರೀತಕಿ, ಬಾಕುಚಿ, ಚರ್ಕಮರ್ದ, ಕರಂಜ, ಆರಗ್ವದ, ಬಲ್ಲಾತಕ, ಗಂಧಕ, ಗೈರಿಕ, ತುತ್ತ, ತಂಕಣ, ಹೀಗೆ ಹಲವಾರು ದ್ರವ್ಯಗಳನ್ನು ಬಳಸಲಾಗುತ್ತದೆ.

7. ನೀರಿನ ಸದ್ಭಳಕೆ, ಉಟೋಪಚಾರದ ನೀತಿ ಹಾಗು ಸಮತೋಲಿತ ನಿದ್ದೆಯು ಮಳೆಗಾಲದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಬಹುದು.

ಡಾ. ಸುದರ್ಶನ್ ಕೆ. ಆಚಾರ್ ಉದ್ಗೀತಾ ಕ್ಲಿನಿಕ್, ಎಸ್‍ಎಲ್‍ಎನ್ ಟೆಂಪಲ್ ರೋಡ್, ಓಲ್ಡ್ ಟೌನ್, ಭದ್ರಾವತಿ Dr Sudarshan K Achar Shivamogga Udgeetha Ayurvedic Clinic

ಡಾ. ಸುದರ್ಶನ್ ಕೆ. ಆಚಾರ್
ಉದ್ಗೀತಾ ಕ್ಲಿನಿಕ್, ಎಸ್ಎಲ್ಎನ್ ಟೆಂಪಲ್ ರೋಡ್,
ಓಲ್ಡ್ ಟೌನ್, ಭದ್ರಾವತಿ
ಮೊ.: 9964278800
E mail: sudarshan.k.achar@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!