ಆರ್ಥಿಕ ಆರೋಗ್ಯ ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿ-ಗತಿಯ ಸೂಚಕ. ದುರ್ಬಲ ಆರ್ಥಿಕ ಆರೋಗ್ಯದಿಂದ ಒಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆಯೆಂದು ಅನೇಕ ಸಂಶೋಧನೆಗಳಿಂದ ತಿಳಿದುಬಂದಿದೆ. ಆರ್ಥಿಕ ಆರೋಗ್ಯ ನಿರ್ವಹಿಸುವುದು, ಮಾನಸಿಕವಾಗಿ ಧೃಢವಾಗಿ, ಸಕಾರಾತ್ಮಕವಾಗಿ ಯೋಚಿಸುತ್ತಾ ಸರಳ ಜೀವನವನ್ನು ನಡೆಸುವುದನ್ನು ಕಲಿಯೋಣ.
ಮಹಾಮಾರಿಯ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಮನೆಯಲ್ಲಿರುವುದು, ಲಾಕ್ಡೌನ್ ಮತ್ತು ಸೀಲ್ಡೌನ್ ಅಸ್ತ್ರಗಳು ಜಾರಿಯಲ್ಲಿದ್ದು, ಬಡವ ಹಾಗು ಮಧ್ಯಮ ವರ್ಗದವರ ಆರ್ಥಿಕ ಪರಿಸ್ಥಿತಿ ಅಧೋಗತಿಯಲ್ಲಿದೆ. ಇಂಥಹ ಸಂಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಏಕೆಂದರೆ, ಆರ್ಥಿಕ ಮತ್ತು ಶಾರೀರಿಕ ಆರೋಗ್ಯ ಜೊತೆಜೊತೆಯಲ್ಲಿ ಸಾಗುತ್ತದೆ.
‘ಆರ್ಥಿಕ ಆರೋಗ್ಯ’ ವೆನ್ನುವುದು ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿ-ಗತಿಯ ಸೂಚಕ. ಆರೋಗ್ಯದಾಯಕ ಮತ್ತು ಆನಂದದಾಯಕ ಜೀವನ ನಡೆಸಲು, ದೈಹಿಕ ಆರೋಗ್ಯದಂತೆ, ಆರ್ಥಿಕ ಆರೋಗ್ಯ ಕೂಡಾ ಮುಖ್ಯವಾಗಿರುತ್ತದೆ. ಏಕೆಂದರೆ, ದುರ್ಬಲ ಆರ್ಥಿಕ ಆರೋಗ್ಯದಿಂದ ಒಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆಯೆಂದು ಅನೇಕ ಸಂಶೋಧನೆಗಳಿಂದ ತಿಳಿದುಬಂದಿದೆ. ಆರ್ಥಿಕ ಆರೋಗ್ಯ ಸಂಸ್ಥೆಯ ಪ್ರಕಾರ, ಆರ್ಥಿಕ ಆರೋಗ್ಯವೆಂದರೆ, ಒಬ್ಬ ವ್ಯಕ್ತಿಯ ಹಣಕಾಸಿನ ಮತ್ತು ಆರ್ಥಿಕತೆಯ ಸಂಪನ್ಮೂಲಗಳು, ಆತನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸೌಖ್ಯಗಳಿಗೆ ಅನ್ವಯವಾಗುವ ಹಾಗೂ ಪರಿಣಾಮ ಬೀರುವ ಅಂಶಗಳು.
ಆರ್ಥಿಕ ಆರೋಗ್ಯಕ್ಕೆ ತ್ರಿಸೂತ್ರಗಳು:
ಈ ಕೆಳಕಂಡ ಮೂರು ಸರಳಸೂತ್ರಗ¼ ಪಾಲಿಸುವುದರ ಮೂಲಕ ನೀವು ನಿಮ್ಮ ಆರ್ಥಿಕ ಆರೋಗ್ಯವನ್ನು ಸಧೃಢವಾಗಿಟ್ಟುಕೊಳ್ಳಬಹುದು
1. ವಿಶ್ಲೇಷಣೆ : ನಿವ್ವಳ ಆಸ್ತಿ ಮತ್ತು ಆರ್ಥಿಕ ಯೋಜನೆ ಹಾಗೂ ಹೂಡಿಕೆ ಹಂಚಿಕೆಯನ್ನು ಕಾಲಕಾಲಕ್ಕೆ ವಿóಶ್ಲೇಷಿಸುವುದು ಮತ್ತು ಅದಕ್ಕನುಸಾರವಾಗಿ ಕ್ರಮ ಕೈಗೊಳ್ಳುವುದು.
2. ಆಯವ್ಯಯ (ಬಜೆಟ್) : ನಿಮ್ಮ ಆಯವ್ಯಯವನ್ನು ಸಿದ್ದಪಡಿಸಿಕೊಂಡು ಅದಕ್ಕನುಸಾರವಾಗಿ ವರ್ತಿಸುವುದು.
3. ನಿಯಂತ್ರಣ : ನಿಮ್ಮ ಖರ್ಚು, ಉಳಿತಾಯ ಮತ್ತು ಹೂಡುವಿಕೆಯ ಮೇಲೆ ನಿಯಂತ್ರಣವಿರಲಿ.
ಕೋವಿಡ್ – 19 ವಿರುದ್ಧ ಸಮರದ ಸಂದರ್ಭದಲ್ಲಿ ಸುಖ ಜೀವನಕ್ಕೆ ದಶ ಆರ್ಥಿಕ ಸೂತ್ರಗಳು:
1. ಸರಳ ಜೀವನ ನಡೆಸಿ.
2. ಜೀವನ ಶೈಲಿಯಲ್ಲಿ ಶಿಸ್ತಿರಲಿ.
3. ಕೂಡಿಟ್ವ ಹಣವನ್ನು ಜೋಪಾನವಾಗಿ ಬಳಸಿ.
4. ದೈನಂದಿನ ಖರ್ಚಿನ ಬಗ್ಗೆ ನಿಗಾವಹಿಸಿ.
5. ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಿ.
6. ಕೊಳ್ಳುಬಾಕತನ ಬೇಡ.
7. ದುಂದುವೆಚ್ಚ ಮಾಡಬೇಡಿ.
8. ಖಾಸಗೀ ವ್ಯಕ್ತಿಗಳಿಂದ ಬಡ್ಡಿ ಸಾಲವನ್ನು ಪಡೆಯಬೇಡಿ.
9. ಆರ್ಥಿಕ ಶಿಸ್ತನ್ನು ಮರೆಯಬೇಡಿ.
10. ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ.
ಸೈಬರ್ ವಂಚನೆಯ ಬಗ್ಗೆ ಎಚ್ಚರವಿರಲಿ:
ಸಾರ್ವಜನಿಕರಿಗೆ ಕೋವಿಡ್-19 ಸಂಕಷ್ಟದ ಸಮಯವಾದರೆ, ಸೈಬರ್ ಖದೀಮರಿಗೆ ನಿಮ್ಮ ಹಣ ಮಾಯ ಮಾಡಲು ಸುಸಮಯ. ವಿವಿಧ ರೀತಿಯ ಸಾಲಗಳಿಗೆ ಮಾಸಿಕ ಕಂತು ಪಾವತಿಸುವುದನ್ನು ಮೂರು ತಿಂಗಳ ಮುಂದೂಡುವುದನ್ನು ರಿಸರ್ವ್ ಬ್ಯಾಂಕ್ ಅವಕಾಶ ನೀಡಿದೆ. ಮಾಸಿಕ ಕಂತಿನ ವಿನಾಯತಿ ಕೊಡಿಸುವುದಾಗಿ ಸೈಬರ್ ವಂಚಕರು ನಿಮ್ಮನ್ನು ವಂಚಿಸಬಹುದು. ಬ್ಯಾಂಕ್ ಅಧಿಕಾರಿಯಂತೆಯೇ ಕರೆಮಾಡುವ ಸೈಬರ್ ವಂಚಕರು ಉಪಾಯವಾಗಿ ನಿಮ್ಮನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳಬಹುದು. ನಿಮ್ಮ ಬ್ಯಾಂಕ ಖಾತೆ ವಿವರ, ಓಟಿಪಿ ಯನ್ನು ಯಾವುದೇ ಕಾರಣಕ್ಕೂ ಯಾರಿಗೂ ನೀಡಬೇಡಿ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವವರು ಅಗತ್ಯವಿದ್ದಲ್ಲಿ ಮಾಸಿಕ ಕಂತು ಪಾವತಿಸುವುದನ್ನು ಮುಂದೂಡಬಹುದು. ಈ ವಿಷಯದ ಬಗ್ಗೆ ಬ್ಯಾಂಕನ್ನು ನೇರವಾಗಿ ಸಂಪರ್ಕಿಸಬಹುದು.
ದೇಣಿಗೆ ನೀಡುವಾಗ ಹುಷಾರಾಗಿರಿ:
ಕೋವಿಡ್-19ರ ವಿರುದ್ದ ಸಮರ ಸಾರಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ದೇಣಿಗೆ ನೀಡುವಾಗ ಎಚ್ಚರವಿರಲಿ. ದೇಣಿಗೆಯನ್ನು ನೀಡುವಾಗ ಸೂಕ್ತ ಮಾರ್ಗದ ಮೂಲಕ ಪಾವತಿಸಿ. ನಕಲೀ ಯುಪಿಐ – ಐಡಿ ಗಳಬಗ್ಗೆ ಎಚ್ಚರವಿರಲಿ. ಸಂಘಸಂಸ್ಥೆಗಳಿಗೆ ದೇಣಿಗೆ ನೀಡುವಾಗ ಸಹಾ ನೀವು ನೀಡುವ ದೇಣಿಗೆ ಸೂಕ್ತ ವ್ಯಕ್ತಿಗೆ/ಸಂಸ್ಥೆಗೆ/ನಿಧಿಗೆ ತಲುಪುವ ಬಗ್ಗೆ ಖಾತರಿಪಡಿಸಿಕೊಳ್ಳಿ.
ಸರಳ ಜೀವನ ನಡೆಸೋಣ:
1. ಸರಳ ಜೀವನ : ಉನ್ನತ ಚಿಂತನೆ ಎಂಬುದು ಮಹಾತ್ಮಾ ಗಾಂಧೀಜಿಯ ಮಾತು. ಜಗತ್ತಿನಲ್ಲಿ ಯಾರು ಶ್ರೀಮಂತರೆಂದರೆ ‘ಅತೀ ಸರಳವಾಗಿ ಬದುಕುವವನೇ’ ಎಂಬ ಮಾತಿದೆ. ಕೊರೊನ-19 ರ ವಿರುದ್ದ ಹೋರಾಟದ ಭಾಗವಾಗಿ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗಿದೆ ಮತ್ತು ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಬೇಕಾಗಿದೆ. ಕೆಲವರಿಗೆ ಕೆಲಸವಿಲ್ಲ ಕೆಲವರಿಗೆ ಸಂಬಳ ಕಡಿತ ಮತ್ತೆ ಕೆಲವರಿಗೆ ವರಮಾನವೇ ಇಲ್ಲ. ಇಂಥಹ ಪರಿಸ್ಥಿತಿಯಲ್ಲಿ ಆರ್ಥಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಐಷಾರಾಮೀ ಜೀವನವನ್ನು ತ್ಯಜಿಸಿ ಅಗತ್ಯ ಖರ್ಚುಗಳನ್ನು ಮಾತ್ರ ಮಾಡಬೇಕಾಗಿದೆ. ಉತ್ತಮ ಆರ್ಥಿಕ ಶಿಸ್ತಿನಿಂದ ಮಾತ್ರ ಈ ಸಂಕಷ್ಟವನ್ನು ಎದುರಿಸಬಹುದು.
2. ಮನಿ ಚಾಲೆಂಜ್ : ವಾರಕ್ಕೆ ಇಷ್ಟೇ ಹಣವನ್ನು ಖರ್ಚು ಮಾಡಬೇಕೆನ್ನುವ ಮನಿ ಚಾಲೆಂಜನ್ನು ನಿಮಗೆ ನೀವೇ ಹಾಕಿಕೊಂಡರೆ, ಸಾಕಷ್ಟು ಹಣ ಉಳಿತಾಯ ಮಾಡಬಹುದು. ಆರ್ಥಿಕ ಸಂಕಷ್ಟದಲ್ಲಿ ನೀವು ಉಳಿಸಿದ ಹಣವೇ ನಿಮ್ಮನ್ನು ರಕ್ಷಿಸಬಲ್ಲದು.
3. ಆರ್ಥಿಕ ಯೋಜನೆ: ಬದುಕು ಬೆಳಗಿಸುವ ಆರ್ಥಿಕ ಯೋಜನೆಗಳಿಂದ ಮುಂಬರುವ ಅಪಾಯಗಳನ್ನು ತಡೆಯೋಣ. ಇದೇ ಆರ್ಥಿಕ ಆರೋಗ್ಯದ ಗುಟ್ಟು. ಇಂದು ಅನುಭವಿಸುವ ನೋವು ನಿಮ್ಮ ಭವಿಷ್ಯದ ಕಷ್ಟಗಳಿಗೆ ಎದೆಯೊಡ್ಡುವ ಧೈರ್ಯ ತುಂಬುತ್ತದೆ ಎಂಬುದನ್ನು ಮರೆಯದಿರೋಣ. ಹಣ ನಿರ್ವಹಣೆಯ ಕೌಶಲ್ಯವನ್ನು ಬಳಸಿಕೊಂಡು ಸರಳ ಜೀವನ ನಡೆಸಬೇಕಿದೆ. ಈಸಬೇಕು ಇದ್ದು ಜೈಸಬೇಕು ಎಂಬ ದಾಸವಾಣಿಯಂತೆ ಮಾನಸಿಕವಾಗಿ ಧೃಢವಾಗಿ, ಸಕಾರಾತ್ಮಕವಾಗಿ ಯೋಚಿಸುತ್ತಾ ಸರಳ ಜೀವನವನ್ನು ನಡೆಸುವುದನ್ನು ಕಲಿಯೋಣ.
4. ಆರ್ಥಿಕ ಶಿಸ್ತಿನ ಮೂಲಕ ಆರೋಗ್ಯ: ಹಣಕಾಸು ಸಾಕ್ಷರತೆ, ಉಳಿತಾಯ, ಹಣದ ಸದ್ಬಳಕೆ ಮತ್ತು ಆರ್ಥಿಕ ಶಿಸ್ತಿನ ಮೂಲಕ ಆರ್ಥಿಕ ಆರೋಗ್ಯವನ್ನು ಹೊಂದಿ ಕೋವಿಡ್-19 ವಿರುದ್ದ ಹೋರಾಡೋಣ. ಜೀವನಪೂರ್ತೀ ಈ ಪರಿಸ್ಥಿತಿ ಇರುವುದಿಲ್ಲ. ಸಕಾರಾತ್ಮಕ ಚಿಂತನೆಯಿರಲಿ. ರಸ್ತೆಯಲ್ಲಿ ತಿರುವಿದ್ದಂತೆ, ಸುರಂಗದ ಕೊನೆಯಲ್ಲಿ ಬೆಳಕಿರುವಂತೆ ಮುಂದೆ ಉತ್ತಮ ದಿನಗಳು ಬಂದೇ ಬರಲಿವೆ. ಕಾಂಚಾಣಂ ಕಾರ್ಯಸಿದ್ದಿ!
ಆರೋಗ್ಯವೇ ಸಂಪತ್ತು:
ಇಂದು ಎಲ್ಲೆಲ್ಲೂ ಕೋವಿಡ್-19ರ ಅಟ್ಟಹಾಸ
ಎಲ್ಲರಿಗೂ ಅವರವರ ಮನೆಯಲ್ಲೇ ಸೆರೆವಾಸ
ಮಾಡಲು ಕೆಲಸವಿಲ್ಲ, ಆದಾಯ ಬರಂಗಿಲ್ಲ
ಕೂಡಿಟ್ಟ ಹಣವೇ ಆಪತ್ಬಾಂಧವ ನಮಗೆಲ್ಲ!!
ನೆನಪಿರಲಿ ಕೂತು ತಿಂದರೆ ಕುಡಿಕೆ ಹೊನ್ನು ಸಾಲಲ್ಲ
ಆರ್ಥಿಕ ಆರೋಗ್ಯಕ್ಕೆ ಆರ್ಥಿಕ ಶಿಸ್ತು ಬೇಕೇಬೇಕಲ್ಲ
ವೃಥಾ ಖರ್ಚಿಗೆ ಹಾಕೋಣ ಕಡಿವಾಣ
ಆರ್ಥಿಕ ಶಿಸ್ತಿನಿಂದ ಆರ್ಥಿಕ ಆರೋಗ್ಯ ಪಡೆಯೋಣ!!