ಮುಟ್ಟಾಗುವುದು ಅಥವಾ ಋತುಸ್ರಾವ ಸ್ತ್ರೀಯರ ದೇಹದಲ್ಲಿ ಪ್ರಾಕೃತವಾಗಿ ಆಗುವ ಒಂದು ಪ್ರಕ್ರಿಯೆ. ಒಂದು ತಿಂಗಳ ಕಾಲ ಗರ್ಭಚೀಲದಲ್ಲಿ ಕೂಡಿರುವ ರಕ್ತ ಹಾಗೂ ಇತರೆ ಗರ್ಭದ ಜೀವಕೋಶವನ್ನು ಹೊರಹಾಕುವ ಪ್ರಕ್ರಿಯೆ ಇದಾಗಿದೆ. ಈ ರಕ್ತವು ಅಶುದ್ದ ಅಲ್ಲದಿದ್ದರು ಗರ್ಭಾಶಯದ ಆರೋಗ್ಯವನ್ನು ಕಾಯ್ದಿರಿಸಲು ಸರಿಯಾದ ಸಮಯ ಹಾಗೂ ಸರಿಯಾದ ಪ್ರಮಾಣದಲ್ಲಿ ಮುಟ್ಟಾಗುವುದು ಆರೋಗ್ಯವಂತ ಗರ್ಭಕೋಶ ಹೊಂದಲು ಪ್ರಮುಖವಾಗುತ್ತದೆ.
ಮುಟ್ಟಾಗುವ ಸ್ತ್ರೀಯನ್ನು ರಜಸ್ವಲ ಎಂದು ತಿಳಿಸಲಾಗಿದೆ. 3-5 ದಿನಗಳ ಕಾಲ ಗರ್ಭಾಶಯದಿಂದ ಹೊರಹಾಕಲ್ಫಡುವ ರಕ್ತವು ಸ್ತ್ರೀಯರಲ್ಲಿ ಹಲವು ದೈಹಿಕ. ಮಾನಸಿಕ, ಬದಲಾವಣೆ ತರುತ್ತದೆ. ಆದ್ದರಿಂದ ಈ ಸಮಯದಲ್ಲಿ ಕೆಲವು ನಿರ್ಬಂದಗಳನ್ನು, ಸಲಹೆ ಸೂಚನೆಯನ್ನು, ನಿಗದಿತ ಜೀವನಶೈಲಿಯನ್ನು ಪಾಲಿಸಲು ಆಯುರ್ವೇದದಲ್ಲಿ ರಜಸ್ವಲ ಪರಿಚರ್ಯ ಎಂದು ಉಲ್ಲೇಖಿಸಲಾಗಿದೆ.
ಸ್ವಚ್ಚತೆಯನ್ನು, ರೋಗನಿರೋಧಕ ಶಕ್ತಿಯನ್ನು, ಗರ್ಭಧರಿಸುವ ಸಾಮಥ್ರ್ಯವನ್ನು ಕಾಯ್ದಿರಿಸಿಕೊಳ್ಳಲು, ಸ್ತ್ರೀಯ ಆರೋಗ್ಯವನ್ನು ರಕ್ಶಿಸಿಕೊಳ್ಳಲು ಈ ಪರಿಚರ್ಯ ತಿಳಿಸಲಾಗಿದೆ.
- ಪ್ರಮುಖವಾಗಿ ಸ್ತ್ರೀಯರು ಈ ಸಮಯದಲ್ಲಿ ಸ್ಟ್ರೆಸ್ ಫ್ರೀ ಅಥವಾ ಮಾನಸಿಕ ಒತ್ತಡ ರಹಿತವಾಗಿರಬೇಕು ಮತ್ತು ಒಳ್ಳೆಯ ಸಕಾರಾತ್ಮಕ, ಸಾತ್ವಿಕ ಆಲೋಚನೆಯನ್ನು ಮಾಡಬೇಕು. ಏಕೆಂದರೆ ಮಾನಸಿಕ ಒತ್ತಡ ದೇಹದಲ್ಲಿನ ಹಾರ್ಮೋನ್ಗಳ ಸ್ರಾವದ ಪ್ರಮಾಣವನ್ನು ಏರುಪೇರುಗೊಳಿಸಿ ಮುಂದೆ ಪಿಸಿಓಡಿ, ಬಂಜೆತನ, ಗರ್ಭಾಶಯದ ಹಲವು ಸಮಸ್ಯೆಯನ್ನು ಉತ್ಪತ್ತಿಮಾಡುತ್ತದೆ. ಆದ್ದರಿಂದ ಕೌಟುಂಬಿಕ, ಸಾಮಾಜಿಕ ಹಾಗೂ ಉದ್ಯೋಗದ ಪರಿಸರದಲ್ಲಿನ ಒತ್ತಡವನ್ನು ತಡೆಗಟ್ಟಬೇಕು ಮತ್ತು ಮಾನಸಿಕವಾಗಿ ಶಾಂತವಾಗಿರಬೇಕು.
- ಸ್ತ್ರೀಯರು ಈ ಸಮಯದಲ್ಲಿ ಹೆಚ್ಚಿನ ದೈಹಿಕ ಶ್ರಮವುಳ್ಳ, ಕಾರ್ಯಗಳನ್ನು, ಕಠಿಣ ವ್ಯಾಯಾಮವನ್ನು ಮಾಡಬಾರದು. ಏಕೆಂದರೆ ಮುಟ್ಟಿನ ಸಮಯದಲ್ಲಿ ವಾತ ದೋಷದ ಪ್ರಮಾಣ ಹೆಚ್ಚಾಗುತ್ತದೆ. ಸ್ತ್ರೀಯು ಶ್ರಮವುಳ್ಳ ಕೆಲಸದಲ್ಲಿ ತೊಡಗಿದಾಗ ವಾತ ದೇಹದಲ್ಲಿ ಇನ್ನೂ ಹೆಚ್ಚಾಗಿ ರಕ್ತಸ್ರಾವದ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಅಂದಾಜು 50-80mಟ ನಷ್ಟು ರಕ್ತದ ಪ್ರಮಾಣಾವನ್ನು ದೇಹವು ಮುಟ್ಟಿನಿಂದ ಕಳೆದುಕೊಳ್ಳುವುದರಿಂದ ದೇಹದ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಕಠಿಣ ಚಟುವಟಿಕೆಯಿಂದ ದೂರವಿದ್ದು, ದೇಹದ ಶಕ್ತಿಯನ್ನು ಕಾಯ್ದಿರಿಸಿಕೊಳ್ಳಬೇಕು ಮತ್ತು ದೇಹಕ್ಕೆ ಅವಶ್ಯ ವಿಶ್ರಾಮ ನೀಡಬೇಕು.
- ಮುಟ್ಟಿನ ಸಂದರ್ಭದಲ್ಲಿ ಜೀರ್ಣಶಕ್ತಿಯ ಪ್ರಮಾಣ ಪ್ರಾಕೃತವಾಗಿ ಕಡಿಮೆಯಾಗುವುದರಿಂದ, ಸುಲಭವಾಗಿ ಜೀರ್ಣವಾಗುವ ಸಾತ್ವಿಕ ಆಹಾರಗಳಾದ ಅನ್ನ, ಹಾಲು, ಬಾರ್ಲಿ, ಹಣ್ಣುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಹೆಚ್ಚು ಖಾರ, ಉಪ್ಪು, ಮಸಾಲೆ, ಕರಿದ ಪದಾರ್ಥ, ಮಾಂಸಾಹಾರ ಹಾರ್ಮೋನ್ ಗಳ ಪ್ರಮಾಣವನ್ನು ವ್ಯತ್ಯಾಸಗೊಳಿಸುವುದರಿಂದ ಸೇವಿಸಬಾರದು.
- ಮುಖ್ಯವಾಗಿ ಸ್ತ್ರೀಯು ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು. ಈ ಸಂದರ್ಭದಲ್ಲಿ ಸ್ತ್ರೀ ಜನನಾಂಗದ ಅಸಿಡಿಕ್ ವ್ಯಾಲ್ಯೂ ಕಡಿಮೆ ಇರುತ್ತದೆ. ಗರ್ಭಕೋಶದ ಒಳಪದರದ ಜೀವಕಣಗಳು ಹಾನಿಯಾಗುವುದರಿಂದ ಲೈಂಗಿಕ ಕ್ರಿಯೆ ಮಾಡಿದರೆ ಸೋಂಕು ಸುಲಭವಾಗಿ ಸಂಭವಿಸುತ್ತದೆ.
- ದಿನದಲ್ಲಿ ನಿದ್ರೆ ಮಾಡುವುದು, ರಾತ್ರಿಯಲ್ಲಿ ಜಾಗರಣೆಮಾಡುವುದು, ಅಭ್ಯಂಜನ (ಎಣ್ಣೆ ಸ್ನಾನ) ಮಾಡುವುದನ್ನು ಈ ಕಾಲದಲ್ಲಿ ನಿಷೇಧಿಸಲಾಗಿದೆ.
ಇಂತಹ ಮಾರ್ಪಾಡು ಅಥವಾ ವಿಶಿಷ್ಠ ನಿಯಮಗಳನ್ನು ಪಾಲಿಸಿದರೆ ಯಾವುದೇ ತಡೆ ಅಥವಾ ನಿರ್ಭಂದ ರಹಿತವಾಗಿ, ಪ್ರಾಕೃತವಾಗಿ ಸ್ರಾವವಾಗಲು ಸಹಕಾರಿಯಾಗುತ್ತದೆ ಮತ್ತು ಸ್ತ್ರೀಯು ತನ್ನ ಗರ್ಭಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ಡಾ. ಮಹೇಶ್ ಶರ್ಮಾ ಎಂ
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪ್ರತೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
9964022654
drsharmamysr@gmail.com