ಹೃದಯ ರೋಗಗಳನ್ನು ತಡೆಗಟ್ಟುವುದು ಹೇಗೆ?

ಹೃದಯ ರೋಗಗಳನ್ನು ತಡೆಗಟ್ಟುವುದು ಹೇಗೆ? ಹೃದಯ  ರೋಗಗಳನ್ನು ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ತಡೆಗಟ್ಟಬಹುದು. ಅತಿಯಾದ ಮಧ್ಯಪಾನ, ಧೂಮಪಾನ ಖಂಡಿತವಾಗಿಯೂ ಹೃದಯ ರೋಗಗಳಿಗೆ ನೇರ ರಹದಾರಿ ನೀಡಬಹುದು. ಧೂಮಪಾನ ಮಧ್ಯಪಾನ ಬರೀ ಹೃದಯಕ್ಕೆ ಮಾತ್ರವಲ್ಲ, ದೇಹದ ಎಲ್ಲಾ ಅಂಗಾಂಗಗಳಿಗೆ ಮತ್ತು ಸಮಾಜದ ಒಳಿತಿಗೆ ಯಾವತ್ತೂ ಪೂರಕವಲ್ಲ.

heart-day

ಇರುವುದೊಂದೇ ಹೃದಯ ಜೋಪಾನ

ಜಗತ್ತಿನಾದ್ಯಂತ ಸೆಪ್ಟಂಬರ್ 29ನ್ನು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತಿದೆ. ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, 2000ನೇ ಇಸವಿಯಲ್ಲಿ ಆರಂಭವಾದ ಈ ಆಚರಣೆಯನ್ನು ಪ್ರತಿ ವರ್ಷ ಸೆಪ್ಟಂಬರ್ 29ರಂದು ಬೇರೆ ಬೇರೆ ತಿರುಳನ್ನು (Theme) ಇಟ್ಟುಕೊಂಡು ಆಚರಿಸಲಾಗುತ್ತಿದೆ. 2011 ರವರೆಗೆ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ಆಚರಿಸಲಾಗುತ್ತಿತ್ತು. 2012 ರಿಂದ ಖಾಯಂ ಆಗಿ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ. 2021 ರ ಆಚರಣೆಯ ತಿರುಳು “ ಕನೆಕ್ಟ್ ದಿ ಹಾರ್ಟ್” ಅಂದರೆ “ಹೃದಯವನ್ನು ಜೋಡಿಸಿ” ಎಂಬುದಾಗಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ ಕನಿಷ್ಠವೆಂದರೂ 18.6 ಮಿಲಿಯನ್ ಜನರು ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳಿಂದ ಸಾಯುತ್ತಾರೆ.

ಕ್ಯಾನ್ಸರ್, ಏಡ್ಸ್, ಮಲೇರಿಯಾ ಈ ಮೂರು ರೋಗಗಳನ್ನು ಒಟ್ಟು ಸೇರಿಸಿದರೆ ಆಗುವ ವರ್ಷಾವಧಿ ಮರಣದ ಸಂಖ್ಯೆಗಿಂತಲೂ ಹೃದಯ ಸಂಬಂಧಿ ರೋಗಗಳಿಂದ ಉಂಟಾಗುವ ಮರಣ ಹೆಚ್ಚು ಎಂದು ಅಂಕಿ ಅಂಶಗಳಿಂದ ಸಾಭೀತಾಗಿದೆ. ಇದೀಗ ಮಾರಣಾಂತಿಕ ಕಾಯಿಲೆಯ ಪಟ್ಟಿಯ ಮೊದಲ ಸ್ಥಾನದಲ್ಲಿ ಹೃದಯ ಸಂಬಂಧಿ ರೋಗ ವಿರಾಜಮಾನವಾಗಿದೆ. ಈ ಹೃದಯ ಸಂಬಂಧಿ ರೋಗಗಳಲ್ಲಿ ಸುಮಾರು 80 ಶೇಕಡಾ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಉತ್ತಮ ವ್ಯಾಯಾಮ, ತಂಬಾಕು ಮತ್ತು ಮಧ್ಯಪಾನ ಸೇವನೆಯನ್ನು ತ್ಯಜಿಸುವುದು, ಉತ್ತಮ ಆಹಾರ ಪದ್ಧತಿ ಹಾಗೂ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡಲ್ಲಿ, ಹೃದಯಾಘಾತದ ಅನುಪಾತನನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. 2000ನೇ ಇಸವಿಯಲ್ಲಿ ದೈಹಿಕ ಚಟುವಟಿಕೆ (Physical Activity) ಎಂಬ ತಿರುಳನ್ನು ಇಟ್ಟುಕೊಂಡು ಆರಂಭವಾದ ಈ ಆಚರಣೆ ಪ್ರತಿ ವರ್ಷ ಬೇರೆ ಬೇರೆ ತಿರುಳನ್ನು ಇಟ್ಟುಕೊಂಡು ಜನರಲ್ಲಿ ಆಹಾರ ಪದ್ಧತಿ, ಜೀವನ ಶೈಲಿ ಮತ್ತು ಹೃದಯ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಆದರೂ ವೈಜ್ಞಾನಿಕತೆ, ವೈಚಾರಿಕತೆ ಮತ್ತು ಆಧುನಿಕತೆ ಬೆಳೆದಂತೆಲ್ಲಾ ಜನರು ಹೆಚ್ಚು ಆಲಸಿಗಳಾಗಿ ದೈಹಿಕ ಕಸರತ್ತನ್ನು ಕಡಿಮೆಯಾಗಿ ಮಾನಸಿಕ ಒತ್ತಡ ಜಾಸ್ತಿಯಾಗಿ ಹೊಸಹೊಸ ರೋಗಗಳು ಹುಟ್ಟ ತೊಡಗಿದೆ ಮತ್ತು ಬೆಳವಣಿಗೆ ಹೊಂದಿದ ರಾಷ್ಟ್ರಗಳಲ್ಲಿ ಹೃದಯಘಾತ ಮುಂತಾದ ಹೃದಯ ಸಂಬಂಧಿರೋಗಗಳು ಬಹುಮುಖ್ಯ ರೋಗವಾಗಿ ಹೊರಹೊಮ್ಮಿದೆ. ಭಾರತದಂತಹ ಬೆಳವಣಿಗೆ ಹೊಂದುತ್ತಿರುವ ದೇಶಗಳಲ್ಲಿಯೂ ಹೃದಯಾಘಾತ ಮುಂತಾದ ರೋಗಗಳು ಬದಲಾಗುತ್ತಿರುವ ಜೀವನ ಪದ್ಧತಿ, ನಗರೀಕರಣ ಮತ್ತು ಕಲುಷಿತ ವಾತಾವರಣದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಅಂಕಿ ಅಂಶಗಳ ಪ್ರಕಾರ 2020ರ ಹೊತ್ತಿಗೆ ವಿಶ್ವದ ಹೃದಯರೋಗಿಗಳ ಸಂಖ್ಯೆಯ ಮೂರನೇ ಒಂದಂಶದಷ್ಟು ಬೃಹತ್ ಕಾಣಿಕೆ ಭಾರತವೊಂದರಿಂದಲೇ ಸಿಗುತ್ತದೆ ಎಂದು ಅಂದಾಜಿಸಲಾಗಿದೆ. ಮೊದಲೇ ಬಡತನ, ಅನಕ್ಷರತೆ ಮೂಡನಂಬಿಕೆಗಳ ಬೀಡಾಗಿರುವ ಭಾರತ ದೇಶಕ್ಕೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನೀಕರಣ, ವ್ಯಾಪಾರೀಕರಣ, ಕೈಗಾರೀಕರಣ ಮತ್ತು ಕಲುಷಿತ ವಾತಾವರಣದಿಂದಾಗಿ ಹೃದಯ ಸಂಬಂಧಿ ರೋಗಗಳು ಬಹು ದೊಡ್ಡ ಸಮಸ್ಯೆಯಾಗಿ ಬೆಳೆದು ನಿಂತಲ್ಲಿ ಅಶ್ಚರ್ಯವೇನಿಲ್ಲ.

ಭಾರತ ದೇಶವೊಂದರಲ್ಲಿಯೇ 30 ಲಕ್ಷ ಮಂದಿ ವಾರ್ಷಿಕವಾಗಿ ಹೃದಯಘಾತಕ್ಕೆ ತುತ್ತಾಗುತ್ತಾರೆ. ಇದರಲ್ಲಿ 15 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ ಇದರಲ್ಲಿ 15 ಶೇಕಡಾ ಮಂದಿ ಆಸ್ಪತ್ರೆ ತಲುಪುವ ಮೊದಲೇ ಜೀವ ಕಳೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿನವರು 30 ಮತ್ತು 40ರ ಹರೆಯದವರು ಆಗಿರುವುದು ವಿಷಾದನೀಯ ವಿಚಾರ. ಆದರೆ ಸಮಾಧಾನಕರ ವಿಚಾರವೆಂದರೆ ಇದರಲ್ಲಿ 80 ಶೇಕಡಾ ಹೃದಯಘಾತವನ್ನು ಸಂಪೂರ್ಣವಾಗಿ ತಡೆದುಕೊಳ್ಳಲು ಸಾಧ್ಯವಿದೆ.

ಹೃದಯ ರೋಗಗಳನ್ನು ತಡೆಗಟ್ಟುವುದು ಹೇಗೆ?

ಹೆಚ್ಚಿನ ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳನ್ನು ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ತಡೆಗಟ್ಟಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.

1. ದೈಹಿಕ ವ್ಯಾಯಾಮ : ದೈಹಿಕ ವ್ಯಾಯಾಮ ಅಥವಾ ಕಸರತ್ತು ಹೃದಯದ ಆರೋಗ್ಯಕ್ಕೆ ಅತೀ ಅವಶ್ಯಕ ಕನಿಷ್ಠ ಪಕ್ಷ ದಿನಕ್ಕೆ 30ನಿಮಿಷಗಳ ಬಿರುಸು ನಡಿಗೆ ಮಾಡಲೇ ಬೇಕು. ಹೀಗೆ ಮಾಡಿದಲ್ಲಿ ಹೃದಯಾಘಾತವನ್ನು ಶೇಕಡಾ 60ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಸಾರಿ ಹೇಳಿವೆ. ಈಗಿನ ಒತ್ತಡದ ಧಾವಂತದ ಬದುಕಿನಲ್ಲಿ ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಅತಿಯಾದ ಕೆಲಸದ ಒತ್ತಡ, ತೀವ್ರ ತರವಾದ ಪೈಪೋಟಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದ ರಸದೂತಗಳ ಸ್ರವಿಕೆ ಏರುಪೇರಾಗಿ ಹೃದಯದ ಆರೋಗ್ಯದ ಮೇಲೆ ವ್ಯಕ್ತಿರಕ್ತ ಪರಿಣಾಮ ಬೀರುತ್ತದೆ. ಅತಿಯಾದ ಮಾನಸಿಕ ಒತ್ತಡ ಕೂಡಾ ಹೃದಯಘಾತಕ್ಕೆ ಪರೋಕ್ಷವಾಗಿ ಕಾರಣವಾಗಬಲ್ಲದು.

2. ಅನಾರೋಗ್ಯಕರವಾದ ಆಹಾರ ಪದ್ಧತಿ : ನಮ್ಮ ಹಿರಿಯರು ಯಾವಾಗಲೂ ಹೇಳುವ ಮಾತು “ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬುದು ಅಕ್ಷರಶಃ ಸತ್ಯ. ನಮ್ಮ ಆಹಾರಕ್ಕೂ ಹೃದಯಕ್ಕೂ ನೇರ ಸಂಬಂಧವಿದೆ. ಅತಿಯಾದ ಕೊಬ್ಬಿನಂಶ ಇರುವ ಅತಿಯಾದ ಸೋಡಿಯಂ ಇರುವ ಕರಿದ ತಿಂಡಿಗಳು ಮತ್ತು ಸಿದ್ಧ ಆಹಾರವನ್ನು ತೆಗೆದುಕೊಳ್ಳಬಾರದು. ಹಸಿ ತರಕಾರಿಗಳು ಮತ್ತು ಹಣ್ಣು ಹಂಪಲುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಸಿದ್ಧ ಆಹಾರಗಳು ಮತ್ತು ಪರಿಷ್ಕರಿಸಿದ ಆಹಾರಗಳಿಗೆ ಹೆಚ್ಚಾಗಿ ಹೆಚ್ಚು ಪ್ರಕ್ಟೋಸ್ ಇರುವ ಸಿಹಿಕಾರಕ ವಸ್ತುಗಳನ್ನು ಸೇರಿಸಲಾಗುತ್ತದೆ. ಇಂತಹ ಆಹಾರ ಪದಾರ್ಥಗಳು ರಕ್ತದಲ್ಲಿನ ಟೈಗ್ಲಿಸರೈಡ್ ಎಂಬ ಕೊಬ್ಬಿನ ಅಂಶವನ್ನು ಹೆಚ್ಚು ಮಾಡಿ ಹೃದಯಾಘಾತದ ಸಂಭವವನ್ನು ಹೆಚ್ಚು ಮಾಡಬಹುದು. ಆಮ್ಲಯುಕ್ತ ಪೇಯಗಳು ಮತ್ತು ರಾಸಾಯನಿಕ ಮಿಶ್ರಿತ ಸಿದ್ಧ ಆಹಾರಗಳೂ ಕೂಡಾ ಹೃದಯದ ಆರೋಗ್ಯಕ್ಕೆ ಮಾರಕವಾಗಬಲ್ಲದು.

3. ಜೀವನ ಶೈಲಿಯ ಬದಲಾವಣೆ : ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಮಾನಸಿಕ ಒತ್ತಡದ ವಾತಾವರಣವಿದ್ದಲ್ಲಿ ಹೃದಯದ ಮೇಲೆ ದುಷ್ಪರಿಣಾಮ ಬೀರಬಹುದು. ಕೆಲಸದ ಒತ್ತಡದಿಂದ ನಿದ್ದೆ ಕಡಿಮೆಯಾದಲ್ಲಿ ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಮತ್ತು ಇತರ ಲವಣಗಳು ಶೇಖರಣೆಗೊಂಡು ಹೃದಯಾಘಾತವಾಗುವ ಸಂಭವ ಜಾಸ್ತಿ ಇರುತ್ತದೆ. ಅದೇ ರೀತಿ ಮಾನಸಿಕ ಒತ್ತಡದಿಂದ ರಸದೂತಗಳ ಏರುಪೇರು ಉಂಟಾಗಿ ಹೃದಯಕ್ಕೆ ಮಾರಕವಾಗಬಹುದು. ಅಮೇರಿಕಾದ ಹೃದಯ ಸಂಘದ ಅಂಕಿಅಂಶಗಳ ಪ್ರಕಾರ ದಿನದಲ್ಲಿ 2ಗಂಟೆಗಳಿಗಿಂತಲೂ ಜಾಸ್ತಿ ಹೊತ್ತು ಟಿವಿ ನೋಡುಗರಲ್ಲಿ 125ಶೇಕಡಾ ಹೆಚ್ಚು ಹೃದಯಾಘಾತವಾಗುವ ಸಂಭವವಿರುತ್ತದೆ. ಅತಿಯಾದ ಮಧ್ಯಪಾನ, ಧೂಮಪಾನ ಖಂಡಿತವಾಗಿಯೂ ಹೃದಯ ರೋಗಗಳಿಗೆ ನೇರ ರಹದಾರಿ ನೀಡಬಹುದು. ಧೂಮಪಾನ ಮಧ್ಯಪಾನ ಬರೀ ಹೃದಯಕ್ಕೆ ಮಾತ್ರವಲ್ಲ, ದೇಹದ ಎಲ್ಲಾ ಅಂಗಾಂಗಗಳಿಗೆ ಮತ್ತು ಸಮಾಜದ ಒಳಿತಿಗೆ ಯಾವತ್ತೂ ಪೂರಕವಲ್ಲ.

4. ಬೊಜ್ಜು, ಅನುವಂಶಿಯತೆ ಮತ್ತಿತರ ಕಾರಣಗಳು : ಅತಿಯಾದ ಬೊಜ್ಜು ಯಾವತ್ತೂ ಹೃದಯದ ಬದ್ಧವೈರಿ. ಇದು ಯಾವ ಕಾಲಕ್ಕೂ ಹೃದಯಾಘಾತಕ್ಕೆ ಮುನ್ನುಡಿ ಬರೆಯಬಹುದು. ಈಗಿನ ಬದಲಾದ ಆಹಾರ ಪದ್ಧತಿಯಿಂದಾಗಿ, ಚಿಕ್ಕ ಮಕ್ಕಳಲ್ಲೂ ಬೊಜ್ಜು ಜಾಸ್ತಿಯಾಗಿ ಕೇವಲ ಮೂವತ್ತರ ಆಸು ಪಾಸಿನಲ್ಲಿಯೇ ಹೃದಯಾಘಾತ ವಾಗುವ ಆತಂಕಕಾರಿ ಬೆಳವಣಿಗೆ ಕಂಡು ಬರುತ್ತದೆ. ಮೊದಲೆಲ್ಲಾ 50, 60ರ ಆಸುಪಾಸಿನಲ್ಲಿ ಆಗುತ್ತಿದ್ದ ಹೃದಯಾಘಾತ ಈಗೀಗ ಮೂವತ್ತರ ಯುವಕರಲ್ಲಿ ಬರುವುದು ನಿಜಕ್ಕೂ ಬಹಳ ಆಘಾತÀಕಾರಿ ವಿಚಾರ ಅದೇ ರೀತಿ ಅನುವಂಶೀಯತೆ ಕೂಡ ಹೃದ್ರೋಗಕ್ಕೆ ಕಾರಣವಾಗಬಹುದು. ವಂಶವಾಹಿನಿಗಳ ಮುಖಾಂತರ ಬರುವ ಹೃದಯಘಾತಕ್ಕೆ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಹೆಚ್ಚಿನ ಮಾರ್ಪಾಡು ಮಾಡಿ ಹೃದಯಕ್ಕೆ ಹೆಚ್ಚು ತೊಂದರೆ ಆಗದಂತೆ ನಿಗಾ ವಹಿಸಬೇಕು. ಅದೇರೀತಿ ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ರೋಗಿಗಳು ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವವರು ಮತ್ತು ದೇಹದ ತೂಕ ಜಾಸ್ತಿ ಇರುವವರು, ಸಾಕಷ್ಟು ಮುಂಜಾಗರೂಕತೆ ವಹಿಸಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಮಾರ್ಪಾಡು ಮಾಡಿದಲ್ಲಿ ಹೃದ್ರೋಗ ಸಂಬಂಧಿ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಈ ಕಾರಣಕ್ಕಾಗಿಯೇ ಬಲ್ಲವರು ಹೇಳುತ್ತಾರೆ “ Obesity does not runs in the family but nobody runs in the family”

5. ನಿಯಮಿತವಾಗಿ ಕುಟುಂಬ ವೈದ್ಯರ ಮಾರ್ಗದರ್ಶನ : ಹೃದಯ ರೋಗಕ್ಕೆ ಪೂರಕವಾದ ವಾತಾವರಣವುಳ್ಳ ವ್ಯಕ್ತಿಗಳು ಅಂದರೆ ಹೆಚ್ಚಿನ ಬೊಜ್ಜು ಅಧಿಕ ದೇಹದ ಭಾರ, ಅಧಿಕ ರಕ್ತದೊತ್ತಡ ಮಧುಮೇಹ ರೋಗಿಗಳು ಮತ್ತು ಅನುವಂಶೀಯವಾಗಿ ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಸಾಧ್ಯತೆ ಇರುವವರು ಜೀವನ ಶೈಲಿ ಮತ್ತು ಆಹಾರದ ಮಾರ್ಪಾಡುವಿನ ಜೊತೆಗೆ ನಿಯಮಿತವಾಗಿ ವೈದ್ಯರಿಂದ ಪರೀಕ್ಷೆಗೊಳಗಾಗಿರಬೇಕು ಮತ್ತು ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ ಪರಿಹಾರ ಮತ್ತು ಮಾರ್ಗದರ್ಶನ ತೆಗೆದುಕೊಂಡಲ್ಲಿ ಪರಿಣಾಮಕಾರಿಯಾಗಿ ಹೃದಯಾಘಾತವನ್ನು ತಡೆಗಟ್ಟಬಹುದು. ನೆನಪಿರಲಿ ಶೇಕಡಾ 80ರಷ್ಟು ಹೃದಯಾಘಾತಗಳನ್ನು ಖಂಡಿತವಾಗಿಯೂ ತಡೆಗಟ್ಟಬಹುದು ಎಂದು ಸಂಶೋಧನೆಗಳು ಸಾರಿ ಹೇಳಿದೆ.

ನಿಮ್ಮ ಹೃದಯದ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ಹೃದಯವು ರಕ್ತಮಾಂಸಖಂಡಗಳಿಂದ ಕೂಡಿದ್ದು ಮೃದುವಾದ ಟೊಳ್ಳಾದ ಒಂದು ಅಂಗಾಂಗವಾಗಿದ್ದು ಹೆಚ್ಚಾಗಿ ಎದೆಗೂಡಿನ ಮಧ್ಯಭಾಗದಲ್ಲಿ ಉಪಸ್ಥಿತವಾಗಿರುತ್ತದೆ. ಹೃದಯದ ಎಡ ಮತ್ತು ಬಲ ಭಾಗಗಳಲ್ಲಿ ಶ್ವಾಸಕೋಶಗಳು ಮತ್ತು ಹಿಂದಿನ ಭಾಗದಲ್ಲಿ ಬೆನ್ನು ಮೂಳೆಗಳು ಮತ್ತು ಮುಂದೆ ಎದೆಗೂಡಿನ ಮೂಳೆಗಳು ಇರುತ್ತದೆ. ಹೃದಯದ ಸುತ್ತ ತೆಳ್ಳನೆಯ ಪದರವೊಂದು ಹೃದಯದ ಸುತ್ತಲೂ ಆವರಿಸಿಕೊಂಡಿರುತ್ತದೆ. ಹೃದಯದ ಮಧ್ಯ ದಲ್ಲಿ ಪರದೆಯೊಂದಿದ್ದು ಹೃದಯವನ್ನು ಎಡ ಮತ್ತು ಬಲ ಭಾಗಗಳಾಗಿ ವಿಭಜಿಸಿರುತ್ತದೆ.

ಸಾಮಾನ್ಯವಾಗಿ ಮನುಷ್ಯರಲ್ಲಿ ಹೃದಯ ಗಾತ್ರ ಒಂದು ಕೈ ಮುಷ್ಠಿಯಷ್ಟು ಇರುತ್ತದೆ. ಮಹಿಳೆಯರಲ್ಲಿ 250ರಿಂದ 300ಗ್ರಾಂ ತೂಗುವ ಹೃದಯ ಪುರುಷರಲ್ಲಿ 300ರಿಂದ 350 ಗ್ರಾಂ ತೂಗುತ್ತದೆ. ನಮ್ಮ ದೇಹದಲ್ಲಿ ಒಟ್ಟು 5ರಿಂದ 6ಲೀಟರ್ ರಕ್ತವಿದ್ದು ಪ್ರತಿ ನಿಮಿಷಕ್ಕೆ 5ಲೀಟರ್‍ನಷ್ಟು ರಕ್ತವನ್ನು ಹೊರ ಹಾಕಲಾಗುತ್ತದೆ. ಹೃದಯವು ಯಾವತ್ತೂ ಚಲನೆಯಲ್ಲಿ ಇರುತ್ತದೆ. ಮತ್ತು ಪ್ರತಿ ಬಾರಿ ಸಡಿಲ ಮತ್ತು ಸಂಕುಚಿತಗೊಳ್ಳುವುದರ ಮೂಲಕ, ಪ್ರತಿ ಸ್ಪಂದನದಲ್ಲಿಯೂ 60ರಿಂದ 80 ಮೀ.ಲೀ ರಕ್ತವನ್ನು ಹೃದಯದಿಂದ ಹೊರದೂಡಿ. ರಕ್ತನಾಳಗಳಲ್ಲಿ ರಕ್ತ ಮುಂದಕ್ಕೆ ಚಲಿಸುವಂತೆ ಮಾಡುತ್ತದೆ.

ದೇಹದ ರಕ್ತನಾಳಗಳಲ್ಲಿ ಚಲಿಸುವ ರಕ್ತ ಅಂಗಾಂಗಳಿಗೆ ಆಮ್ಲಜನಕ ಪೂರೈಸಿದ ಬಳಿಕ, ನೀಲವರ್ಣಕ್ಕೆ ತಿರುಗಿ ಹೃದಯದ ಬಲಭಾಗಕ್ಕೆ ತಲುಪುತ್ತದೆ. ಹೃದಯದ ಬಲಭಾಗದಿಂದ ನೀಲವರ್ಣದ ಆಮ್ಲಜನಕ ರಹಿತ ರಕ್ತವನ್ನು ಹೃದಯವು ಶ್ವಾಸಕೋಶಗಳಿಗೆ ರಕ್ತನಾಳಗಳ ಮೂಲಕ ತಲುಪಿಸುತ್ತದೆ. ಶ್ವಾಸಕೋಶಗಳಲ್ಲಿ ಆಮ್ಲಜನಕ ಹೀರಿಕೊಂಡು ರಕ್ತ ಕೆಂಪುಬಣ್ಣಕ್ಕೆ ಪರಿವರ್ತನೆಗೊಂಡು ಎಡಭಾಗದ ಹೃದಯಕ್ಕೆ ತಲುಪುತ್ತದೆ. ಎಡಭಾಗದ ಹೃದಯದಿಂದ ಆಮ್ಲಜನಕಯುಕ್ತ ರಕ್ತ ಆಯೋರ್ಟ ಎಂಬ ಮುಖ್ಯ ರಕ್ತನಾಳದ ಮೂಲಕ ದೇಹದ ಎಲ್ಲಾ ಭಾಗಗಳಿಗೂ ತಲುಪುತ್ತದೆ. ಒಟ್ಟಿನಲ್ಲಿ ಹೃದಯದ ಕೆಲಸವೆಂದರೆ ರಕ್ತವನ್ನು ನಿರಂತರವಾಗಿ ಚಲನೆಯಲ್ಲಿರುವಂತೆ ಮಾಡುವುದು.

ಪ್ರತಿ ನಿಮಿಷಕ್ಕೆ ಸುಮಾರು 72 ಬಾರಿ ಹೃದಯ ಮಿಡಿಯುತ್ತಲೇ ಇರುತ್ತದೆ. ಅಂದರೆ 60 ವಯಸ್ಸಿನ ವ್ಯಕ್ತಿ ಹುಟ್ಟಿನಿಂದ ಸರಿ ಸುಮಾರು ಇನ್ನೂರ ಐವತ್ತು ನೂರು ಕೋಟಿ ಬಾರಿ ಅಂದರೆ 2.5 ಮಿಲಿಯನ್ ಬಾರಿ ಮಿಡಿಯುತ್ತದೆ. ಮಕ್ಕಳಲ್ಲಿ ಹೃದಯದ ಮಿಡಿತ ನಿಮಿಷಕ್ಕೆ ಸುಮಾರು 90ರಿಂದ 100 ಬಾರಿ ಇರುತ್ತದೆ. ಗಾಬರಿ, ಭಯ, ನೋವು ನಲಿವು, ಸಂತಸ, ಉದ್ವೇಗದ ಸಮಯದಲ್ಲಿ ಹೃದಯವು ಹೆಚ್ಚು ಬಾರಿ ಮಿಡಿಯುತ್ತದೆ. ತಾಯಿಯ ಗರ್ಭದಲ್ಲಿರುವಾಗಲೇ ಮೂರನೇ ವಾರದಿಂದಲೇ ಹೃದಯ ಮಿಡಿಯಲು ಆರಂಭವಾಗುತ್ತದೆ. ವಿಶ್ರಾಂತಿ ಇಲ್ಲದೆ ದುಡಿಯುವುದು ಅಂಗವೆಂದರೆ ಹೃದಯ ಮಾತ್ರ. ಹೃದಯ ಸ್ತಂಭನವಾದಲ್ಲಿ ಸಾವು ಖಚಿತ. 3ರಿಂದ 4 ನಿಮಿಷಗಳ ಕಾಲ ಹೃದಯದ ಮಿಡಿತ ನಿಂತಲ್ಲಿ ಮೆದುಳು ನಿಷ್ಕ್ರಿಯವಾಗಿ ಸಾವು ಕಟ್ಟಿಟ್ಟ ಬುತ್ತಿ.

ಸದಾ ಸ್ಪಂದಿಸುವ ಹೃದಯದ ಮಾಂಸ ಖಂಡಗಳಿಗೆ ರಕ್ತದ ಅವಶ್ಯಕತೆ ಅತೀ ಅಗತ್ಯ. ಹೃದಯದ ಒಳಗೆ ರಕ್ತವಿದ್ದರೂ ಹೃದಯದ ಮಾಂಸಖಂಡಗಳಿಗೆ ಬಲ ಮತ್ತು ಎಡ ಭಾಗದ ಕರೋನರಿ ರಕ್ತನಾಳಗಳ ಮೂಲಕ ಅಯೋರ್ಟ ಮುಖ್ಯ ರಕ್ತನಾಳಗಳಿಂದ ರಕ್ತ ಸರಬರಾಜು ಆಗುತ್ತದೆ. ಈ ಎಡ ಮತ್ತು ಬಲ ಕರೋನರಿ ರಕ್ತನಾಳಗಳು ಹೃದಯದ ಮಿಡಿತಕ್ಕೆ ಅತೀ ಅವಶ್ಯಕ. ಅತಿಯಾದ ಕೊಲೆಸ್ಟ್ರೋಲ್, ಟೈಗ್ಲಿಸಲೈಡ್, ಧೂಮಪಾನ, ಮಧ್ಯಪಾನಗಳಿಂದ ಅಥವಾ ಅಧಿಕ ರಕ್ತದೊತ್ತಡಗಳಿಂದ ಮಧುಮೇಹ ರೋಗಗಳಿಂದ ಈ ಎಡ ಮತ್ತು ಬಲ ಕರೋನರಿ ರಕ್ತನಾಳಗಳು ಪೆಡಸುಗೊಂಡಲ್ಲಿ ಪರಿಣಾಮಕಾರಿ ರಕ್ತದ ಚಲನೆಗೆ ತೊಂದರೆಯಾದಲ್ಲಿ, ಹೃದಯಾಘಾತ ಆಗದ ಸಂಭವ ಹೆಚ್ಚುತ್ತದೆ. ಜೀವನ ಶೈಲಿ ಬದಲಾವಣೆ, ಉತ್ತಮ ಆಹಾರ ಪದ್ಧತಿ ಅಳವಡಿಕೆ ಮತ್ತು ನಿಯಮಿತವಾದ ದೈಹಿಕ ವ್ಯಾಯಾಮಗಳಿಂದ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಿದಲ್ಲಿ ನೂರುಕಾಲ ಸುಖವಾಗಿ ಬದುಕಬಹುದು.

ವಸಡು ರೋಗ ಮತ್ತು ಹೃದಯ ಸಂಬಂಧಿ ರೋಗಗಳು

ವಸಡಿನ ಆರೋಗ್ಯ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಬಹಳ ಹತ್ತಿರದ ಸಂಬಂಧವಿದೆ. ಬಾಯಿಯ ಆರೋಗ್ಯ ಮತ್ತು ಹೃದಯದ ಆರೋಗ್ಯಕ್ಕೆ ನೇರವಾದ ಸಂಬಂಧವಿರುವುದಂತೂ ಸತ್ಯ. ಶೇಕಡಾ 30 ರಿಂದ 35ರಷ್ಟು ವಸಡು ಸಂಬಂಧ ರೋಗಕ್ಕೆ ಒಳಗಾದವರಿಗೆ, ಹೃದಯಘಾತವಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ಕಾರಣದಿಂದಲೇ ನಾವೆಲ್ಲರೂ ವಸಡಿನ ಆರೋಗ್ಯವನ್ನು ಹತೋಟಿಯಲ್ಲಿ ಇಟ್ಟು ಕೊಳ್ಳುವುದು ಅತೀ ಅವಶ್ಯಕ ಮತ್ತು ಈಗಿನ ನಮ್ಮ ನಾಗರಿಕ ಜೀವನ ಶೈಲಿಯಲ್ಲಿ ಅನಿವಾರ್ಯವೂ ಕೂಡ. ಇದರ ಜೊತೆಗೆ ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಇರುವ ಅಥವಾ ಅಧಿಕ ರಕ್ತದ ಒತ್ತಡ ಇರುವ ರೋಗಿಗಳಲ್ಲಿ ವ್ಯಾಯಾಮ ಕೊರತೆ, ವಿಪರೀತ ಒತ್ತಡದ ಜೀವನ ಶೈಲಿ, ಬೊಜ್ಜು, ಧೂಮಪಾನ ಇತ್ಯಾದಿಗಳು ಸೇರಿಕೊಂಡು ವಸಡಿನ ರೋಗಗಳಿಗೆ ನಾಂದಿ ಹಾಡುತ್ತದೆ.

ಸಾಮಾನ್ಯವಾಗಿ ವಸಡಿನ ರೋಗವನ್ನು ಹೊಂದಿರುವ ರೋಗಿಗಳಲ್ಲಿ ಹಲ್ಲಿನ ಸುತ್ತ ಇರುವ ದಂತಪಾಚಿ ಮತ್ತು ದಂತಕಿಟ್ಟಗಳಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಗಳು ಸೇರಿಕೊಂಡಿರುತ್ತವೆ. ಈ ಬ್ಯಾಕ್ಟೀರಿಗಳ ಸಂಖ್ಯೆ ವೃದ್ದಿಸಿದಂತೆ, ವ್ಯಕ್ತಿಯ ರಕ್ತನಾಳಗಳು ಪೆಡಸುಗೊಂಡು, ರಕ್ತನಾಳಗಳ ಒಳಗೆ ಪಾಚಿ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಈ ರೀತಿ ರಕ್ತನಾಳಗಳ ಒಳಗೆ ಪಾಚಿಕಟ್ಟಿಕೊಳ್ಳುವುದಕ್ಕೆ Atheroslerosis or Artierioslerosis ಎಂದು ಹೇಳಲಾಗುತ್ತದೆ. ಈ ರೀತಿ ರಕ್ತನಾಳಗಳಲ್ಲಿ ಪಾಚಿಕಟ್ಟಿಕೊಂಡಲ್ಲಿ, ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅದೇ ರೀತಿ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ಕೊಡಲಾಗುವ ಕೆಲವೊಂದು ಔಷಧಿಗಳು ಕೂಡಾ ವಸಡಿನ ಅನಿಯಂತ್ರಿತ ಬೆಳವಣಿಗೆಗೆ ಕಾರಣವಾಗಬಹುದು ಮತ್ತು ಈ ಅನಿಯಂತ್ರಣ ಬೆಳವಣಿಗೆಯಿಂದ, ವಸಡಿನ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಕಷ್ಟವಾಗಬಹುದು ಮತ್ತು ವಸಡು ಸಂಬಂಧಿ ರೋಗಗಳಿಗೆ ಕಾರಣೀಭೂತವಾಗಬಹುದು. ಉದಾ : ‘Nifidifine’ ಎಂಬ ಔಷಧಿ ಸಾಮಾನ್ಯವಾಗಿ ವಸಡಿನ ಅನಿಯಂತ್ರಿತ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಹಂತದಲ್ಲಿ ವೈದ್ಯರನ್ನು ಕಂಡು ಬೇರೆ ಸೂಕ್ತ ಔಷಧಿಯನ್ನು ತೆಗೆದು ಕೊಂಡಲ್ಲಿ, ಅನಿಯಂತ್ರಿತ ವಸಡು ಬೆಳವಣಿಗೆಯನ್ನು ತಡೆಗಟ್ಟಿ ವಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಹೃದಯಾಘಾತ ತಪ್ಪಿಸಲು ನೀವು ಓನು ಮಾಡಬೇಕು?

1. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ದಂತ ವೈದ್ಯರ ಬಳಿ ದಂತ ತಪಾಸಣೇ ಮಾಡಿಸಿಕೊಳ್ಳಿ
2. ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ದಂತ ವೈದ್ಯರ ಬಳಿ ಹಲ್ಲುಗಳನ್ನು ಶುಚಿಗೊಳಿಸಿಕೊಳ್ಳಬೇಕು. ಹಲ್ಲುಗಳ ಸುತ್ತ ಬೆಳೆಯುವ ದಂತ ಕಿಟ್ಟದಲ್ಲಿರುವ ಬ್ಯಾಕ್ಟೀರಿಯಾಗಳು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ
3. ನಿಮ್ಮ ಹಲ್ಲುಗಳು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಅಲುಗಾಡಲು ಆರಂಭವಾದಲ್ಲಿ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಿಕೊಳ್ಳಿ. ಹಲ್ಲುಗಳ ಸುತ್ತ ಎಲುಬು ಕರಗಿ ಹಲ್ಲು ಅಲುಗಾಡುತ್ತಿದ್ದಲ್ಲಿ ವಸಡು ಸಂಬಂಧಿ ರೋಗ ಅಥವಾ ಮಧುಮೇಹ ರೋಗ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ವ್ಯಕ್ತಿಗಳಿಗೆ ಹೃದಯಾಘಾತವಾಗುವ ಸಾಧ್ಯತೆ ಇತರರಿಗಿಂತ ಎರಡು ಪಟ್ಟು ಜಾಸ್ತಿ ಇರುತ್ತದೆ
4. ನಿಮ್ಮ ವಸಡುಗಳಲ್ಲಿ ರಕ್ತ ಒಸರುತ್ತಿದ್ದಲ್ಲಿ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಿಕೊಳ್ಳಿ. ವಸಡುಗಳಲ್ಲಿ ರಕ್ತ ಒಸರುತ್ತಿದ್ದಲ್ಲಿ ಅದು ವಸಡು ರೋಗದ ಪ್ರಾಥಮಿಕ ಲಕ್ಷಣವಾಗಿರುತ್ತದೆ. ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಮುಂದೆ ಉಂಟಾಗುವ ವಸಡು ರೋಗ ಮತ್ತು ಹೃದಯಾಘಾತದಂತಹ ಸಮಸ್ಯೆಗಳನ್ನು ಆರಂಭದಲ್ಲಿಯೇ ತಪ್ಪಿಸಬಹುದಾಗಿದೆ.
5. ನಿಮ್ಮ ಬಾಯಿಯಲ್ಲಿ ದುರ್ವಾಸನೆ ಬರುತ್ತಿದ್ದಲ್ಲಿ ತಕ್ಷಣವೇ ದಂತ ವೈದ್ಯರ ಬಳಿ ತೋರಿಸಬೇಕು. ಬಾಯಿ ದುರ್ವಾಸನೆ ಎನ್ನುವುದು ವಸಡು ರೋಗದ ಪ್ರಮುಖ ಲಕ್ಷಣವಾಗಿರುತ್ತದೆ. ಸಕಲದಲ್ಲಿ ಚಿಕಿತ್ಸೆ ಪಡೆದಲ್ಲಿ ಮುಂಬರುವ ಅನಾಹುತವನ್ನು ತಪ್ಪಿಸಬಹುದಾಗಿದೆ.

ಕೊನೆ ಮಾತು

ಹೃದಯಾಘಾತ ಎನ್ನುವುದು ಬಹಳ ಶಕ್ತಿಶಾಲಿಯಾದ ರೋಗ ಮತ್ತು ಇದಕ್ಕೆ ಕೊಲ್ಲುವ ಶಕ್ತಿ ಬಹಳ ಅಧಿಕವಾಗಿರುತ್ತದೆ. ಒಂದು ವೇಳೆ ಬದುಕಿ ಉಳಿದರೂ ಮಾನಸಿಕ ಸಾಮಥ್ರ್ಯವನ್ನು ಕುಗ್ಗಿಸುತ್ತದೆ. ದುಬಾರಿ ಶಸ್ತ್ರ ಚಿಕಿತ್ಸೆ ಮಾಡಿದರೂ, ಮಾನಸಿಕವಾಗಿ ಉಡುಗಿ ಹೋಗಿ ಮೊದಲಿನಂತೆ ಪರಿಣಾಮಕಾರಿಯಾಗಿ ಕೆಲಸಮಾಡಲು ಹೆಚ್ಚು ಸಮಯ ತೆಗೆದು ಕೊಳ್ಳಬಹುದು. ಒಟ್ಟಿನಲ್ಲಿ ಕುಟುಂಬದ ಆರ್ಥಿಕತೆಗೆ ಕೊಡಲಿ ಏಟು ನೀಡಿ, ಮಾನಸಿಕವಾಗಿ ಕುಗ್ಗಿಸಿ, ದುಡಿವ ವಯಸ್ಸಿನ ಕುಟುಂಬದ ಆಧಾರ ಸ್ತಂಭವಾದ ಮನೆಯ ಯಜಮಾನ ಹೃದಯಾಘಾತದಿಂದ ಮೃತಪಟ್ಟರೆ, ಇಡೀ ಕುಟುಂಬವೇ ತಲ್ಲಣಿಸಿ ಹೋಗುತ್ತಿದೆ.

ಈ ಕಾರಣದಿಂದಲೇ ಸಕಾಲದಲ್ಲಿ ನಾವೆಲ್ಲಾ ಎಚ್ಚೆತ್ತುಕೊಂಡು ಜಾಗೃತರಾಗಿ ಸೂಕ್ತ ಜೀವನಶೈಲಿ, ಆರೋಗ್ಯಕರ ಆಹಾರ ಪದ್ಧತಿ ಅಗತ್ಯ ವ್ಯಾಯಾಮ ಮುಂತಾದವುಗಳಿಂದ ಮಾನಸಿಕ ನೆಮ್ಮದಿ ಪಡೆದು, ತಂಬಾಕು ಹಾಗೂ ಮಧ್ಯಪಾನ ಮುಂತಾದ ದುಶ್ಚಟಗಳಿಂದ ದೂರವಿದ್ದಲ್ಲಿ, ಹೃದಯಾಘಾತ ಎಂಬ ಪೆಡಂಬೂತವನ್ನು ಹೊಸಕಿ ಹಾಕುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಆರೋಗ್ಯ ಪೂರ್ಣವಾದ ದೈಹಿಕ ಮತ್ತು ಮಾನಸಿಕ ಜೀವನ ಶೈಲಿಯೇ ಹೃದಯಾಘಾತ ಎಂಬ ರೋಗವನ್ನು ಎದುರಿಸಿ ಗೆಲ್ಲಬಲ್ಲ ಬಹುದೊಡ್ಡ ಬ್ರಹ್ಮಾಸ್ತ್ರ ಎಂದರೂ ತಪ್ಪಲ್ಲ.

ನೆನಪಿರಲಿ, ನೀವು ಆಹಾರ ಸೇವಿಸುವಾಗ ಔಷಧಿಯಂತೆ ಸೇವಿಸಿ. ಇಲ್ಲವಾದಲ್ಲಿ ಔಷಧಿಯನ್ನೇ ಆಹಾರವಾಗಿ ಸೇವಿಸಬೇಕಾದ ಅನಿವಾರ್ಯತೆ ಬರಲೂಬಹುದು. ಜೋಕೆ!!

dr-muralee-mohan

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!