ಕೋವಿಡ್  ಕಾಟ – ಕವಲು ದಾರಿಯಲ್ಲಿ ದಂತ ವೈದ್ಯರು

ಕೋವಿಡ್  ಕಾಟ ಹಿನ್ನಲೆಯಲ್ಲಿ ದಂತ ವೈಧ್ಯರು ದಂತ ಚಿಕಿತ್ಸಾಲಯವನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಸಂದಗ್ದತೆಗೆ ಸಿಲುಕಿದ್ದಾರೆ. ಖಾಸಗಿ ದಂತ ಚಿಕಿತ್ಸಾಲಯಗಳನ್ನು ಮುಚ್ಚಿ ಎಂದು ಆದೇಶ ನೀಡಿದರೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ.

ಜಗತ್ತಿನೆಲ್ಲೆಡೆ ಕೊವಿಡ್-19 ಎಂಬ ಮಹಾಮಾರಿಯ ಅಟ್ಟಹಾಸ ಕಾಡ್ಗಿಚ್ಚಿನಂತೆ ಹರಡುತ್ತಿದೆ.  ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಮತ್ತು ಸಂಪೂರ್ಣ ರಕ್ಷಣೆ ನೀಡುವ ಲಸಿಕೆ ಇಲ್ಲದ ಕಾರಣದಿಂದಾಗಿ ರೋಗ ನಿಯಂತ್ರಣಕ್ಕೆ  ತರಲು ವೈದ್ಯರು, ಸರ್ಕಾರ ಮತ್ತು ವಿಜ್ಞಾನಿಗಳು ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರೋಗ ತಡೆಗಟ್ಟುವುದು ಮತ್ತು ರೋಗ ಬಾರದಂತೆ ಎಚ್ಚರ ವಹಿಸುವುದೊಂದೇ ನಮಗಿರುವ ದಾರಿಯಾಗಿದೆ.  ಮರಣದ ಪ್ರಮಾಣ ಈ ರೋಗದಲ್ಲಿ ಶೇಕಡಾ 3 ರಿಂದ 5 ರಷ್ಟು ಇರುವುದರಿಂದ ರೋಗ ಹರಡುತ್ತಿರುವ ವೇಗ ನೋಡಿದಾಗ ದಿಗಿಲು ಹುಟ್ಟಿಸುತ್ತದೆ.  ಜನರು ಮನೆಯೊಳಗೇ ಇದ್ದು ವೈರಾಣುವಿಗೆ ತೆರೆದುಕೊಳ್ಳದಿದ್ದಲ್ಲಿ, ರೋಗ ತನ್ನಿಂತಾನೇ ನಿಯಂತ್ರಣಕ್ಕೆ ಬರುತ್ತದೆಇದು ದಿನ ಬೆಳಗಾಗುವುದರಲ್ಲಿ ಆಗುವುದಿಲ್ಲಜನರು ಸಂಯಮದಿಂದ ವರ್ತಿಸಬೇಕು.

ಪ್ರತಿಯೊಬ್ಬ ಪ್ರಜೆಯೂ ಈ ರೋಗವನ್ನು ಜಯಿಸುವಲ್ಲಿ ವೈದ್ಯರಷ್ಟೇ ಪ್ರಮುಖ ಪಾತ್ರ ವಹಿಸುತ್ತಾರೆ.  ತಾಳ್ಮೆ, ಸಂಯಮ ಮತ್ತು ಶಾಂತಿ ರೀತಿಯಲ್ಲಿ ವರ್ತಿಸಿದಲ್ಲಿ ರೋಗ ಖಂಡಿತವಾಗಿಯೂ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ.  ಈ ರೋಗದ ವೈರಾಣು ಕೋವಿಡ್-19 ಸೀನಿದಾಗ ಮತ್ತು ಕೆಮ್ಮಿದಾಗ ದೇಹ ದ್ರವ್ಯಗಳ ಮತ್ತು ಕಿರುಹನಿಗಳ ಮುಖಾಂತರ ಹರಡುವ ಹೆಚ್ಚಿನ ಸಾಧ್ಯತೆ ಇದೆ ಎಂದು ನಮಗೆಲ್ಲಾ ತಿಳಿದಿದೆ ಮತ್ತು ಬಾಯಿ, ಮೂಗು ಕಣ್ಣು ಮುಂತಾದವುಗಳನ್ನು ಸ್ಪರ್ಶಿಸಿದಲ್ಲಿ ರೋಗ ಬೇಗ ಹರಡುತ್ತದೆ ಎಂದೂ ತಿಳಿದುಬಂದಿದೆ.  ಅತಿ ಹೆಚ್ಚು ರೋಗ ಹರಡುವ ಸಾಧ್ಯತೆ ದಂತವೈಧ್ಯರ ಚಿಕಿತ್ಸೆಯ ಸಂದರ್ಭದಲ್ಲಿ ಎಂದು ಅಂಕಿಅಂಶಗಳಿಂದ ತಿಳಿಸಿದೆ.  ದಂತ ಚಿಕಿತ್ಸೆ ಸಮಯದಲ್ಲಿ ಶೇಕಡಾ 95 ರಷ್ಟು ಮಂದಿಗೆ ರೋಗ ಹರಡುವ ಸಾಧ್ಯತೆ ಇರುವುದರಿಂದ ಸರ್ಕಾರವೇ ಎಲ್ಲಾ ದಂತ ಚಿಕಿತ್ಸೆಗಳನ್ನು  ಮುಚ್ಚಲು ನಿರ್ದೇಶನ ನೀಡಿರುತ್ತದೆದೇಶದಾದ್ಯಂತ ಎಲ್ಲಾ ದಂತ ಚಿಕಿತ್ಸಾಲಯದಲ್ಲಿ  ದಂತ ಚಿಕಿತ್ಸೆ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದೆ.

ಏಕೆ ಆತಂಕ?

ದಂತ ಚಿಕಿತ್ಸೆಯ ಸಮಯದಲ್ಲಿ ದಂತ ವೈಧ್ಯರು ಹಲ್ಲಿನಲ್ಲಿ ರಂಧ್ರ ಮಾಡಲು ಬಳಸುವ ಏರೋಟರ್ ಹ್ಯಾಂಡ್ ಫೀಸು ಮತ್ತು ತ್ರೀ ವೇ ಸಿರಿಂಜ್ ಎಂಬ ಸಲಕರಣೆಯನ್ನು ಬಳಸುವಾಗ ರೋಗಿಯ ಬಾಯಿಂದ ಅತೀ ಹೆಚ್ಚು ಕಿರುಹನಿಗಳು ಸೃಷ್ಟಿಯಾಗುತ್ತದೆ.  ಈ ಕಿರುಹನಿಗಳಲ್ಲಿ ಲಕ್ಷಾಂತರ ಕೋವಿಡ್-19 ವೈರಾಣುಗಳು ಇರುತ್ತದೆ.  ಈ ಕಾರಣದಿಂದ ಶಂಕಿತ ಅಥವಾ ರೋಗ ಲಕ್ಷಣಗಳಿಲ್ಲದ ವೈರಾಣು ಹೊಂದಿರುವ ರೋಗಿಗಳಿಂದ ಬಹಳ ಸುಲಭವಾಗಿ ವೈರಾಣುಗಳು ದಂತ ವೈಧ್ಯರಿಗೆ, ಸಹಾಯಕರಿಗೆ ಮತ್ತು ಇತರ ರೋಗಿಗಳಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.  ಈ ಕಾರಣದಿಂದ ದಂತ ಚಿಕಿತ್ಸೆಯ ಸಂದರ್ಭ ಕೋವಿಡ್-19 ವೈರಾಣು ಹರಡುವ ಸಾಧ್ಯತೆಯ ಪ್ರಮಾಣ ಶೇಕಡಾ 90ಕ್ಕಿಂತಲೂ ಜಾಸ್ತಿ ಇರುತ್ತದೆ.

ದಂತ ವೈಧ್ಯರು ರೋಗಿಯ ಬಾಯಿ, ಮೂಗು ಮತ್ತು ಮುಖದ ಸುತ್ತ ಹೆಚ್ಚು ಸ್ಪರ್ಶಿಸುವ ಕಾರಣದಿಂದ ಅತಿ ಹೆಚ್ಚು ರೋಗ ಹರಡುವ ಸಾಧ್ಯತೆ ದಂತ ಚಿಕಿತ್ಸಾಲಯದಲ್ಲಿ ಇರುತ್ತದೆ.  ಈ ಕಾರಣದಿಂದ ದಂತ ವೈದ್ಯರು, ಅವರ ಸಹಾಯಕರು, ಇವರ ರೋಗಿಗಳು ಮತ್ತು ಅವರ ಜೊತೆ ಬಂದವರು ಹಾಗೂ ಸಮಾಜಕ್ಕೆ ಅತೀ ಹೆಚ್ಚು ಅಪಾಯವಿರುತ್ತದೆ.  ಸಾಂಕ್ರಾಮಿಕ ರೋಗವಾದ ಕೋವಿಡ್-19 ಬಹಳ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದಂತ ವೈಧ್ಯರು ದಂತ ಚಿಕಿತ್ಸಾಲಯವನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಸಂದಗ್ದತೆಗೆ ಸಿಲುಕಿದ್ದಾರೆ.  ಇನ್ನು ತುರ್ತು ಚಿಕಿತ್ಸೆ ನೀಡಲು ಬೇಕಾದ ರಕ್ಷಣಾ ಪರಿಕರಣೆಗಳು ದುಬಾರಿ ಮತ್ತು ಅವುಗಳ ಲಭ್ಯತೆಯ ಕೊರತೆಯಿಂದಾಗಿ ಸುರಕ್ಷಿತವಾಗಿ ತುರ್ತು ಚಿಕಿತ್ಸೆ ನಡಲು ಸಾಧ್ಯವಾಗದ ಸ್ಥಿತಿಯಲ್ಲಿ ಖಾಸಗಿ ದಂತ ವೈಧ್ಯರು ಸಿಲುಕಿದ್ದಾರೆ.

ಯಾವ ಚಿಕಿತ್ಸೆ ಮಾಡಬಾರದು?

ಹಲ್ಲು ಶುಚಿಗೊಳಿಸುವುದು.  ಹಲ್ಲು ತುಂಬಿಸುವುದು,  ಬೇರುನಾಳ ಚಿಕಿತ್ಸೆ, ವಕ್ರದಂತ ಚಿಕಿತ್ಸೆ, ಹಲ್ಲಿನ ಸೌಂದರ್ಯವರ್ಧಕ ಚಿಕಿತ್ಸೆಗಳು ಮತ್ತು ಹಲ್ಲು ಕಟ್ಟಿಸುವುದು ಇತ್ಯಾದಿ.  ಈ ಎಲ್ಲಾ ಚಿಕಿತ್ಸೆಗಳು ತುರ್ತು ದಂತ ಚಿಕಿತ್ಸೆ ಸೇವೆಗಳಲ್ಲಿ ಬರುವುದಿಲ್ಲದ ಕಾರಣ ಈ ಎಲ್ಲಾ ಚಿಕಿತ್ಸೆಗಳನ್ನು ಮುಂದೂಡಬಹುದಾಗಿದೆ.

ಯಾವ ಚಿಕಿತ್ಸೆ ಮಾಡಬಹುದು?

ಅತಿಯಾದ ಹಲ್ಲುನೋವು ಇದ್ದಾಗ ಅಥವಾ ಹಲ್ಲಿನ ಒಳಗೆ ಕೀವು ತುಂಬಿಕೊಂಡು ಮುಖ ಊದಿಕೊಂಡಾಗ ಬರೀ ಔಷಧಿ ನೀಡಿದಲ್ಲಿ ನೋವು ಶಮನವಾಗದೇ ಇರಬಹುದು.  ಇಂತಹ ಸಂದರ್ಭಗಳಲ್ಲಿ ಹಲ್ಲಿನ ಮುಖಾಂತರ ಯಂತ್ರಗಳ ಮೂಲಕ ಹಲ್ಲಿನ ಒಳಗೆ ರಂಧ್ರ ಕೊರೆದು ಕೀವು ತೆಗೆಯಬೇಕಾದ ಅನಿವಾರ್ಯತೆ ಇರುತ್ತದೆ. ಅಥವಾ ಕೀವು ತುಂಬಿಕೊಂಡು ಮುಖ ಊದಿಕೊಂಡಿದ್ದಲ್ಲಿ ಸಣ್ಣದಾದ ಗಾಯ/ಗೀರು ಮಾಡಿ ಕೀವು ಹೊರಬರುವಂತೆ ಮಾಡಬೇಕಾಗುತ್ತದೆ.

ಇಂತಹಾ ಚಿಕಿತ್ಸೆಗಳನ್ನು ತುರ್ತು ದಂತ ಚಿಕಿತ್ಸೆ ಎಂದು ಪರಿಗಣಿಸಿ ಸಾಕಷ್ಟು ಮುಂಜಾಗರೂಕತಾ ಪರಿಕರಗಳಾದ ಕೈಚೀಲ, ಮುಖಕವಚ, ಕನ್ನಡಕ, ತಲೆಕವಚ ಮತ್ತು ಗೌನ್ïಗಳನ್ನು ಬಳಸಿ ತಕ್ಷಣವೇ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇರುತ್ತದೆ.  ಇದಲ್ಲದೇ ಗರ್ಭಿಣಿಯರು, ಮಧುಮೇಹಿ ರೋಗಿಗಳು ಮತ್ತು ರಕ್ಷಣಾ ವ್ಯವಸ್ಥೆ ಹದಗೆಟ್ಟ ರೋಗಿಗಳಲ್ಲಿ ಕೀವು ತುಂಬಿದ ಹಲ್ಲಿನಿಂದ ಮಾರಣಾಂತಿಕ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.  ಅಂತಹವರಿಗೂ ತುರ್ತು ಚಿಕಿತ್ಸೆ ಅನಿವಾರ್ಯವಾಗಿರುತ್ತದೆ.  ಅದೇ ರೀತಿ ಬಾಯಿಯಲ್ಲಿ ನಿಯಂತ್ರಣಕ್ಕೆ ಬಾರದ ರಕ್ತಸ್ರಾವ, ವಸಡಿನಲ್ಲಿ ರಕ್ತಸ್ತಾವ ಇದ್ದಾಗ ತುರ್ತು ಚಿಕಿತ್ಸೆಯ ಅವಶ್ಯವಿರುತ್ತದೆ.

ಸರ್ಕಾರ ಏನು ಮಾಡಬೇಕು?

1. ಎಲ್ಲಾ ಖಾಸಗಿ ದಂತ ಚಿಕಿತ್ಸಾಲಯ ಮುಚ್ಚಿದ ಕಾರಣದಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 24 ಗಂಟೆಗಳ ಕಾಲ ದಂತ ವೈಧ್ಯ್ಯರು ಲಭ್ಯವಿರುವಂತೆ ಮಾಡಬೇಕು.

2. ಅತೀ ಅಗತ್ಯ ತುರ್ತು ದಂತ ಚಿಕಿತ್ಸೆ ಮಾತ್ರ ಮಾಡಲು ಅನುಮತಿ ನೀಡಬೇಕು.

3. ಕೋವಿಡ್-19 ರೋಗಾಣು ಹರಡುವ ಸಾಧ್ಯತೆ ಹೆಚ್ಚು ಇರುವುದರಿಂದ ಸೂಕ್ತ ರಕ್ಷಣಾ ಪರಿಕರಗಳಾದ ಎನ್-95 ಮುಖಕವಚ, ತಲೆಕವಚ, ಗೌನು ಮತ್ತಿತರ ರಕ್ಷಣಾ ಸಲಕರಣೆಗಳನ್ನು ಆದ್ಯತೆ ಮೇರೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ದಂತ ಚಿಕಿತ್ಸಾಲಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರಕುವಂತೆ ಮಾಡಬೇಕು.

4. ಕೆಲವೊಂದು ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ದಂತ ಸಲಕರಣೆಗಳ ಸೌಲಭ್ಯವಿರುವುದಿಲ್ಲ.  ಅಂತಹ ನಗರ/ಊರುಗಳಲ್ಲಿ, ಖಾಸಗಿ ದಂತ ಚಿಕಿತ್ಸಾಲಯಗಳನ್ನು ಗುರುತಿಸಿ ತುರ್ತು ಚಿಕಿತ್ಸೆ, ನೀಡಲು ಅನುಮತಿ ನೀಡಬೇಕು ಮತ್ತು ಅದಕ್ಕೆ ಪೂರಕವಾದ ಪರ್ಸನಲ್ ಪ್ರೊಟೆಕ್ಷನ್ ಸಲರಣೆಗಳಾದ ಗ್ಲೌಸ್, ಎನ್.-95 ಮಾಸ್ಕ್ ಗೌನ್ ಮತ್ತಿತರ ಸಲಕರಣೆಗಳನ್ನು ನೀಡಬೇಕು.

5. ಈಗ ನಮ್ಮ ದೇಶದಲ್ಲಿ ಕೊರೋನ ಹರಡುತ್ತಿರುವ ಪರಿಯನ್ನು ಗಮನಿಸಿದಾಗ ಕನಿಷ್ಟ 3 ತಿಂಗಳುಗಳ ಕಾಲ ಖಾಸಗಿ ದಂತಚಿಕಿತ್ಸೆಯ ತೆರೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ದಂತ ಚಿಕಿತ್ಸೆ ಎನ್ನುವುದು ಹೆಚ್ಚು ಸೌಂಧರ್ಯವರ್ಧಕ ಚಿಕಿತ್ಸೆ ಎಂದು ಬದಲಾಗಿರುವುದು ನಿಜವಾದ ಮಾತು.   ಆದರೂ ಶೇಕಡಾ 20 ರಷ್ಟು ಚಿಕಿತ್ಸೆಗಳು ರೋಗಿಯ ನೋವು ನಿವಾರಣೆ, ಹಲ್ಲು ಕೀಳಿಸುವುದು ಮತ್ತು ಕೀವು ತೆಗೆಯುವುದು ಮುಂತಾದ ತುರ್ತು ಚಿಕಿತ್ಸಾ ಸೇವೆಗಳ ಅಡಿಯಲ್ಲಿ ಬರುತ್ತದೆ.  ಇಂತಹ ಚಿಕಿತ್ಸೆಗಳನ್ನು ಮುಂದೂಡಲು ಸಾಧ್ಯವಿಲ್ಲ.  ಮುಂದೂಡಿದಲ್ಲಿ ಜೀವಕ್ಕೆ ಕುತ್ತು ಎಂಬ ಸಾಧ್ಯತೆಯೂ ಇರುತ್ತದೆ.  ಸೌಂಧರ್ಯವರ್ಧಕ ಇತರ ಚಿಕಿತ್ಸೆಗಳನ್ನು ಖಂಡಿತವಾಗಿಯೂ ಮುಂದೂಡಬಹುದಾಗಿದೆ.  ಈ ನಿಟ್ಟಿನಲ್ಲಿ ರೋಗಿಗಳ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ತಕ್ಷಣವೇ ಸ್ಪಂದಿಸಬೇಕಾದ ಅನಿವಾರ್ಯ ಕಾಲ ಘಟ್ಟದಲ್ಲಿ ನಾವಿಂದು ನಿಂತಿದ್ದೇವೆ.

ಖಾಸಗಿ ದಂತ ಚಿಕಿತ್ಸಾಲಯಗಳನ್ನು ಮುಚ್ಚಿ ಎಂದು ಆದೇಶ ನೀಡಿದರೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ 24 ಗಂಟೆಗಳ ಕಾಲ ತುರ್ತು ದಂತ ಚಿಕಿತ್ಸೆಗಳನ್ನು ನೀಡಲು ಬೇಕಾದ ದಂತ ವೈಧ್ಯರು ಮತ್ತು ಸುರಕ್ಷಿತ ಸಲಕರಣೆಗಳನ್ನು ಒದಗಿಸಲು ದೊಡ್ಡ ಹೊಣೆಗಾರಿಕೆ ಸರ್ಕಾರ ಮತ್ತು ಆರೊಗ್ಯ ಇಲಾಖೆಯ ಮೇಲಿದೆಒಟ್ಟಿನಲ್ಲಿ ದುಬಾರಿ ಡೊನೇಶನ್ ನೀಡಿ ಬಿಡಿಎಸ್ ಪದವಿ ಪಡೆದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದಂತ ಚಿಕಿತ್ಸಾಲಯ ತೆರೆದ ದಂತ ವೈದ್ಯರು ಕೊರೋನಾ ವೈರಾಣುವಿನ ಕಾಟದಿಂದಾಗಿ ಕವಲು ದಾರಿಯಲ್ಲಿ ನಿಂತಿರುವುದಂತೂ ಸತ್ಯವಾದ ಮಾತು ಆದಷ್ಟು ಬೇಗ ಕೊರೋನಾ ಮಾರಿ ತೊಲಗಿ ಎಲ್ಲರೂ ಆರೋಗ್ಯವಂತರಾಗಲೀ ಮತ್ತು ಎಲ್ಲರ ಮುಖದಲ್ಲಿ ಮಂದಹಾಸ ಮಗದೊಮ್ಮೆ ಮೂಡಿಬರಲಿ ಎನ್ನುವುದೇ ಎಲ್ಲಾ ದಂತ ವೈದ್ಯರ ಒಕ್ಕೊರಲಿನ ಆಶಯವಾಗಿದೆ.

Also Read: ದಂತ ವೈದ್ಯರ ದಿನ – ಮಾರ್ಚ್ 6 : ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ದಂತ ವೈದ್ಯರ ಪಾತ್ರ 

Dr.-Murali-Mohana-Chuntaru.

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!