ಕ್ಯಾನ್ಸರ್ ಜಾಗೃತಿ ದಿನ – ನವೆಂಬರ್ 7 : ಕ್ಯಾನ್ಸರ್ ಗುಣಪಡಿಸಲಾಗದ ಖಾಯಿಲೆಯಲ್ಲ.

ಕ್ಯಾನ್ಸರ್  ಜಾಗೃತಿ  ದಿನವನ್ನು  ಕ್ಯಾನ್ಸರ್, ಅದರ ಚಿಕಿತ್ಸೆ ಮತ್ತು  ರೋಗಲಕ್ಷಣಗಳ ಬಗ್ಗೆ ಜನರಿಗೆ ತಿಳಿಸಲು ನವೆಂಬರ್ 7 ರಂದು ಭಾರತದಲ್ಲಿ ಆಚರಿಸಲಾಗುತ್ತದೆ. ಕ್ಯಾನ್ಸರ್ ರೋಗ ಬಂದಿದೆ ಎಂದಾದ ಕೂಡಲೇ ಮನಸಿಕವಾಗಿ ಕುಗ್ಗಿ ಹೋಗಿ ತನ್ನ ದಿನ ಮುಗಿಯಿತು ಎನ್ನುವ ಮನೋಭಾವ ಖಂಡಿತಾ ಸಲ್ಲದು. ಈಗಿನ ಕಾಲಘಟ್ಟದಲ್ಲಿ ಕ್ಯಾನ್ಸರ್ ಖಂಡಿತವಾಗಿಯೂ ಗುಣಪಡಿಸಲಾಗದ ಖಾಯಿಲೆಯಲ್ಲ.

Cancer-awareness-day ಕ್ಯಾನ್ಸರ್ ಜಾಗೃತಿ ದಿನ - ನವಂಬರ್- 7 : ಕ್ಯಾನ್ಸರ್ ಗುಣಪಡಿಸಲಾಗದ ಖಾಯಿಲೆಯಲ್ಲ.

ಕ್ಯಾನ್ಸರ್ ರೋಗ ಮನುಕುಲದ ಬಹು ದೊಡ್ಡ ಶತ್ರು. ಅನಾದಿ ಕಾಲದಿಂದಲೂ ಈ ರೋಗ ಮನುಕುಲವನ್ನು ಕಾಡುತ್ತಿದೆ. ಅಚ್ಚ ಕನ್ನಡದಲ್ಲಿ ಕ್ಯಾನ್ಸರ್ ರೋಗವನ್ನು ‘ಅರ್ಬುದ ರೋಗ’ ಎಂದು ಕರೆಯಲಾಗುತ್ತದೆ. ‘ಏಡಿ’ ಎಂಬ ಪ್ರಾಣಿಯನ್ನು ‘ಅರ್ಬುದ’ ಎಂದೂ ಕರೆಯಲಾಗುತ್ತದೆ. ಈ ‘ಏಡಿ’ಯ ವಿಶೇಷವೆಂದರೆ ತಾನು ಒಮ್ಮೆ ತನ್ನ ಕದಂಬ ಬಾಹುಗಳಲ್ಲಿ ತನ್ನ ಆಹಾರವನ್ನು ಹಿಡಿದು ಕೊಂಡರೆ ತನ್ನ ಪ್ರಾಣ ಹೋದರೂ ತನ್ನ ಬಾಹುಗಳ ಹಿಡಿತವನ್ನು ಸಡಿಲಿಸುವುದಿಲ್ಲ. ಈ ಕಾರಣದಿಂದಲೇ ಕ್ಯಾನ್ಸರ್ ರೋಗಕ್ಕೆ ‘ಅರ್ಬುದ ರೋಗ’ ಎಂಬ ಅನ್ವರ್ಥ ನಾಮ ಬಂದಿದೆ.

ಕ್ಯಾನ್ಸರ್ ರೋಗ ಅಂದ ಕೂಡಲೇ ನಾವೆಲ್ಲಾ ಒಮ್ಮಲೆ ದಿಗಿಲುಗೊಳ್ಳುತ್ತೇವೆ. ಹಿಂದಿನ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯರ ಸೇವೆ ದುರ್ಲಬವಾಗಿತ್ತು. ಬಡತನ, ಅನಕ್ಷರತೆ ಮತ್ತು ಮೂಲಭೂತ ಸೌಕಾರ್ಯಗಳ ಕೊರತೆಯಿಂದಾಗಿ ರೋಗವನ್ನು ಪತ್ತೆ ಹಚ್ಚುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿರುತ್ತಿತ್ತು. ಆ ಕಾರಣದಿಂದಲೇ ಕ್ಯಾನ್ಸರ್  ಗುಣಪಡಿಸಲಾಗದ ಖಾಯಿಲೆ ಎಂಬ ಹಣೆಪಟ್ಟಿ ಪಡೆದು ಕೊಂಡಿತು. ಆದರೆ ತಂತ್ರಜ್ಞಾನ ಪರಿಣಿತ ವೈದ್ಯರ ಲಭ್ಯತೆ ಮತ್ತು ಜನರ ತಿಳುವಳಿಕೆಯ ಮಟ್ಟ ಏರಿದಂತೆ ಜನರಲ್ಲಿ ಅರ್ಬುದ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡತೊಡಗಿದೆ ಮತ್ತು ಈಗಿನ ಕಾಲಘಟ್ಟದಲ್ಲಿ ಕ್ಯಾನ್ಸರ್ ಖಂಡಿತವಾಗಿಯೂ ಗುಣಪಡಿಸಲಾಗದ ಖಾಯಿಲೆಯಲ್ಲ.

ಪ್ರಾರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಪರಿಣಾಮಕಾರಿ ಔಷಧಿ ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಮುಖವಾಗಬಹುದು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್  ರೋಗವನ್ನು ಗೆದ್ದು ಸುಖ ಜೀವನ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಸಮಾಧಾನಕರ ಅಂಶ. ಅಕ್ಷರತೆ, ಬಡತನ ನಿರ್ಮೂಲನ ಗುಣಮಟ್ಟದ ವ್ಶೆಜ್ಷಾನಿಕ ಪರಿಷ್ಕಾರಗಳು ಮತ್ತು ತಾಂತ್ರಿಕ ಹಾಗೂ ವ್ಶೆಜ್ಞಾನಿಕ ಕೌಶಲತೆಗಳಿಂದ, ಆರಂಭಿಕ ಹಂತದಲ್ಲಿ ಕ್ಯಾನ್ಸರ್ ರೋಗ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಜನರಲ್ಲಿ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು ಎಂಬ ಭಾವನೆ ಮೂಡಿಸುವಲ್ಲಿ ವೈದ್ಯಕೀಯ ಜಗತ್ತು ಯಶಸ್ಸು ಕಂಡಿದೆ ಎಂದರೂ ತಪ್ಪಲ್ಲ. ಆದರೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆ.

ಯಾಕೆಂದರೆ ಹಿಂದಿನ ಕಾಲದಲ್ಲಿ ಕ್ಯಾನ್ಸರ್ ಇಳಿ ವಯಸ್ಸಿನ ರೋಗವಾಗಿತ್ತು. 60-70ರ ಹರೆಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ರೋಗ, ಈಗೀಗ 30-40 ಹರೆಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ. ವಾತಾವರಣದಲ್ಲಿ ವ್ಯತ್ಯಾಸ ಹವಾಮಾನ ವೈಪರಿತ್ಯ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಕಲುಷಿತಗೊಂಡ ನೀರು, ಗಾಳಿ, ಆಹಾರ ಮತ್ತು ವಿಪರೀತ ಒತ್ತಡದ ಜೀವನದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಬೀಡಿ, ಸಿಗರೇಟು, ಗುಟ್ಕಾ ಮುಂತಾದ ದುಶ್ಚಟಗಳ ಸಹವಾಸದಿಂದಾಗಿ ಹೆಚ್ಚು ಹೆಚ್ಚು ಯುವಜನತೆ 30-40ರ ಆಸುಪಾಸಿನಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವುದು ಆತಂಕಕಾರಿ ವಿಚಾರವೇ ಸರಿ.

ಕ್ಯಾನ್ಸರ್ ಅಂಕಿ-ಅಂಶಗಳು

ಕ್ಯಾನ್ಸರ್ ಹೆಚ್ಚುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ ಮುಂದಿನ ಸ್ಥಾನಗಳಲ್ಲಿದೆ. ಗುಜರಾತ್‍ನಲ್ಲಿ 2017ರಲ್ಲಿ 3750 ಇದ್ದ ಕ್ಯಾನ್ಸರ್ ರೋಗಿಗಳ ಸಂಖ್ಯೆ 2018ರಲ್ಲಿ 72,100ಕ್ಕೆ ಏರಿದೆ(ಶೇಕಡಾ 18%) ಕರ್ನಾಟಕದಲ್ಲಿ 2017 ರಲ್ಲಿ 3500 ರಷ್ಟು ಇದ್ದ ಕ್ಯಾನ್ಸರ್ ರೋಗಿಗಳ ಸಂಖ್ಯೆ 2018 ರಲ್ಲಿ 20,000ಕ್ಕೆ ಏರಿದೆ.(ಶೇಕಡಾ 12%) ಬಾಯಿ ಕ್ಯಾನ್ಸರ್ ಗರ್ಭಕೋಶ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್‍ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಬಾಯಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಆಗಾಧ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು 2019ರ ರಾಷ್ಟ್ರೀಯ ಆರೋಗ್ಯ ನೀತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಬುದ ರೋಗಕ್ಕೆ ಕಾರಣಗಳು

1. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆ.
2. ಧೂಮಪಾನ ಮತ್ತು ಮಧ್ಯಪಾನ.
3. ಅನುವಂಶೀಯ ಕಾರಣಗಳು.
4. ಆರಾಮದಾಯಕ ಜೀವನ ಶೈಲಿ, ಅನಾರೋಗ್ಯಪೂರ್ಣ ಆಹಾರದ ಪದ್ಧತಿ ಮತ್ತು ಒತ್ತಡದ ಜೀವನ ಇತ್ಯಾದಿ.
5. ವಿಕಿರಣದ ಮುಖಾಂತರ.
6. ಅತಿಯಾದ ಗರ್ಭನಿರೋಧಕ ಮಾತ್ರೆಗಳು ಮತ್ತು ಕೃತಕ ರಸದೂತ ಮಾತ್ರೆಗಳ ಅನಿಯಂತ್ರಿತ ಬಳಕೆ.
7. ವಾತಾವರಣದ ವೈಪರೀತ್ಯ, ವಾಯು ಮಾಲಿನ್ಯ, ವೃತ್ತಿ ಸಂಬಂಧಿ ಕ್ಯಾನ್ಸರ್ ಕಾರಕ ವಸ್ತುಗಳ ದೇಹಕ್ಕೆ ಸೇರುವುದರಿಂದ.
8. ಅನಾರೋಗ್ಯಕರವಾದ ಲೈಗಿಂಕ ಜೀವನ ಮತ್ತು ಹತ್ತು ಹಲವಾರು ಲೈಗಿಂಕ ಸಂಬಂಧಗಳು, ಹಲವಾರು ಬಾರಿ ಗರ್ಭಧರಿಸುವುದು ಇತ್ಯಾದಿ.
9. ಹೆಪಟೈಟಿಸ್ ಬಿ ಮತ್ತು ಸಿ ವೈರಸ್‍ನ ಸೋಂಕು, ಎಬ್‍ಸ್ಟೈನ್ ಬಾರ್ ವೈರಸ್, ಹ್ಯೂಮನ್ ಪಾಪಿಲೋಮ ವೈರಸ್ ಇತ್ಯಾದಿ ವೈರಸ್ ಸೋಂಕಿನಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.

ತಡೆಗಟ್ಟುವುದು ಹೇಗೆ?

1. ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ವರ್ಜಿಸಬೇಕು. ಗುಟ್ಕಾ, ಪಾನ್‍ಪರಾಗ್  ಮುಂತಾದ ತಂಬಾಕು ಉತ್ಪನ್ನಗಳು ಮನುಕುಲದ ದೊಡ್ಡ ವೈರಿ ಮತ್ತು ಕ್ಯಾನ್ಸರ್ ಕಾರಕ ವಸ್ತುಗಳು. ತಂಬಾಕನ್ನು ಯಾವುದೇ ರೂಪದಲ್ಲಿ ಉಪಯೋಗಿಸುವಂತಿಲ್ಲ .
2. ಧೂಮಪಾನ ಖಂಡಿತವಾಗಿಯೂ ಕ್ಯಾನ್ಸರ್ ರೋಗಕ್ಕೆ ಪೂರಕ. ಧೂಮಪಾನ ಮಾಡುವ ಶೇಕಡಾ 70 ಮಂದಿ ಶ್ವಾಸಕೋಶದ ಕ್ಯಾನ್ಸರಿಗೆ ತುತ್ತಾಗುತ್ತಾರೆ.
3. ಮಧ್ಯಪಾನ ವರ್ಜಿಸಬೇಕು. ಧೂಮಪಾನ, ಮಧ್ಯಪಾನ ಮತ್ತು ತಂಬಾಕು ಮೂರು ಕೂಡ ಮನುಕುಲದ ಬಹುದೊಡ್ಡ ವೈರಿ. ಇವು ಮೂರು ಚಟಗಳು ಒಟ್ಟು ಸೇರಿದಲ್ಲಿ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ.
4. ಕೆಲವೊಂದು ಕ್ಯಾನ್ಸರ್ (ವೃಷಣದ ಕ್ಯಾನ್ಸರ್, ಸ್ತನ ಕ್ಯಾನ್ಸರ್) ಅನುವಂಶೀಯವಾಗಿ ಬರುತ್ತದೆ. ಈ ರೀತಿಯ ಚರಿತ್ರೆಯುಳ್ಳವರು ಕಾಲಕಾಲಕ್ಕೆ ವ್ಶೆದ್ಯರಿಂದ ಪರೀಕ್ಷಿಸಿಕೊಳ್ಳಬೇಕು.
5. ಅತಿಯಾದ ರಸದೂತಗಳ ಬಳಕೆ ಮತ್ತು ಅತಿಯಾದ ಗರ್ಭನಿರೋಧಕಗಳ ಬಳಕೆಯಿಂದ ಕ್ಯಾನ್ಸರ್ ಬರಲೂ ಬಹುದು. ಅದೇ ರೀತಿ ಅನಾರೋಗ್ಯಕರ ಲೈಂಗಿಕ ಪ್ರಕ್ರಿಯೆಗಳು ಮತ್ತು ಸಂಬಂಧಗಳಿಗೆ ಕಡಿವಾಣ ಹಾಕಲೇಬೇಕು. ಇಲ್ಲವಾದಲ್ಲಿ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ.
6. ಆರೋಗ್ಯಕರವಾದ ಜೀವನ ಕ್ರಮ, ಪರಿಪೂರ್ಣವಾದ ಸಮತೋಲಿನ ಆಹಾರ, ಶಿಸ್ತು ಬದ್ಧವಾದ ನಿರಂತರವಾದ ದೈಹಿಕ ವ್ಯಾಯಾಮಗಳಿಂದ ಕೂಡಿದ ಜೀವನಶೈಲಿ ಮತ್ತು ಒತ್ತಡ ರಹಿತ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು. ಕಲುಷಿತ ವಾತಾವರಣ, ಕಲುಷಿತ ಆಹಾರ ನೀರು ಇತ್ಯಾದಿಗಳಿಂದಲೂ ಕ್ಯಾನ್ಸರ್ ಬರಬಹುದು. ವಿಕಿರಣ ಸೂಸುವ ವಾತಾವರಣ ಮತ್ತು ವೃತ್ತಿ ಸಂಬಂಧಿ ಕ್ಯಾನ್ಸರ್‍ಕಾರಕ (ಸೀಸದ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ) ವಾತಾವರಣವಿದ್ದಲ್ಲಿ ವೃತ್ತಿಯನ್ನು ಬದಲಿಸಿ, ಕ್ಯಾನ್ಸರ್ ಬರದಂತೆ ಎಚ್ಚರ ವಹಿಸಬೇಕು.
7. ಕಾಲಕಾಲಕ್ಕೆ ವೈದ್ಯರ ಬಳಿ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಂಡಲ್ಲಿ ಬಾಯಿ ಕ್ಯಾನ್ಸರ್, ಸ್ತನ್ ಕ್ಯಾನ್ಸರ್, ಸರ್ವಿಕ್ಸ್ ಕ್ಯಾನ್ಸರ್ ಮತ್ತು ಇನ್ನಾವುದೇ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಬಹುದು. ಕ್ಯಾನ್ಸರ್ ರೋಗದ ವಿಚಾರದಲ್ಲಿ ರೋಗದ ಚಿಕಿತ್ಸೆಗಿಂತ ರೋಗವನ್ನು ತಡೆಗಟ್ಟುವಂತೆ ಮುನ್ನೆಚ್ಚರಿಕೆ ವಹಿಸುವುದರಲ್ಲಿಯೇ ಜಾಣತನ ಅಡಗಿದೆ.

ಚಿಕಿತ್ಸೆ ಹೇಗೆ?

ಕ್ಯಾನ್ಸರ್ ರೋಗಕ್ಕೆ ಮೂಲಭೂತ ಚಿಕಿತ್ಸೆ ಎಂದರೆ ಕ್ಯಾನ್ಸರ್ ಪೀಡಿತ ಗಡ್ಡೆಯನ್ನು ಸರ್ಜರಿ ಮುಖಾಂತರ ತೆಗೆಯುವುದು. ಪ್ರಾರಂಭಿಕ ಹಂತದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ. ಮುಂದುವರಿದ ಹಂತದಲ್ಲಿ ಸರ್ಜರಿ ಜೊತೆಗೆ ವಿಕಿರಣ ಚಿಕಿತ್ಸೆ ಹಾಗೂ ಕಿಮೋಥೆರಫಿಯ ಅವಶ್ಯಕತೆ ಇರುತ್ತದೆ. ಕೆಲವೊಂದು ಕ್ಯಾನ್ಸರ್‍ಗಳನ್ನು ಕಿಮೋಥೆರಫಿಯಿಂದಲೇ ಗುಣಪಡಿಸಲಾಗುತ್ತದೆ. (ಉದಾಹರಣೆ ಲಿಂಫೋಮ ಎನ್ನುವ ಕ್ಯಾನ್ಸರ್) ಮುಂದುವರಿದ ಹಂತದಲ್ಲಿ ಎಲ್ಲಾ ಮೂರು ರೀತಿಯ ಚಿಕಿತ್ಸೆಯೂ ಬೇಕಾಗಬಹುದು ಮತ್ತು ಚಿಕಿತ್ಸೆಗೆ ಸರಿಯಾದ ರೀತಿಯಲ್ಲಿ ಸ್ಪಂಧಿಸದೇ ಇರಬಹುದು. ಚಿಕಿತ್ಸೆಯ ವಿಧಾನ, ಪ್ರಮಾಣ ಮತ್ತು ಚಿಕಿತ್ಸೆಯ ಸಮಯ ಎಲ್ಲವನ್ನು ವೈದ್ಯರೇ ನಿರ್ಧರಿಸುತ್ತಾರೆ. ವೈದ್ಯರ ಸೂಕ್ತ ಮಾರ್ಗದರ್ಶದಂತೆ ಚಿಕಿತ್ಸೆ ಪಡೆದಲ್ಲಿ ಕ್ಯಾನ್ಸರ್ ರೋಗವನ್ನು ಖಂಡಿತವಾಗಿಯೂ ಪರಿಣಾಮಕಾರಿಯಾಗಿ ಗುಣಪಡಿಸಬಹುದು ಮತ್ತು ಇತರರಂತೆ ನೆಮ್ಮದಿಯ ಜೀವನ ನಡೆಸಬಹುದು ಮತ್ತು ನಡೆಸಿದ ನಿದರ್ಶನಗಳು ನಮ್ಮ ಮುಂದೆಯೇ ಹಲವಾರು ಇದೆ.

ಬಾಯಿ ಅರ್ಬುದ ರೋಗದ ಚಿಹ್ನೆಗಳು

mouth-cancer

1. ಪ್ರಾರಂಭಿಕ ಹಂತದಲ್ಲಿ ಖಾರ ಆಹಾರ ಪದಾರ್ಥಗಳನ್ನು ತಿನ್ನುವಾಗ ಬಾಯಿ ಉರಿಯುತ್ತದೆ.
2. ಬಾಯಿಯಲ್ಲಿ  ಹುಣ್ಣು ಅಥವಾ ಗಾಯ ಆಗುತ್ತದೆ ಮತ್ತು ಹುಣ್ಣು  ಒಣಗುವುದೇ ಇಲ್ಲ.
3. ಬಾಯಿಯಲ್ಲಿ ಗಡ್ಡೆ ಬೆಳೆಯುತ್ತದೆ  ಮತ್ತು ಮುಟ್ಟಿದಾಗ ರಕ್ತ ಬರುತ್ತದೆ.
4. ವಿಪರೀತ ನೋವು ಇರುತ್ತದೆ. ಮಾತ್ರೆ ತಿಂದರೂ ನೋವು ನಿವಾರಣೆಯಾಗುವುದಿಲ್ಲ.
5. ಬಾಯಿ ತೆರೆಯಲು ಕಷ್ಟವಾಗಬಹುದು. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿ 50 ಮಿ.ಮಿ. ಬಾಯಿ ತೆರೆಯಬಹುದು. ಅರ್ಬುದ ರೋಗದಲ್ಲಿ 20 ಮಿ.ಮಿ. ಗಿಂತ ಜಾಸ್ತಿ ಬಾಯಿ ತೆರೆಯಲು ಕಷ್ಟವಾಗಬಹುದು.
6. ಮಾತಾನಾಡುವಾಗ ಮತ್ತು ಆಹಾರ ಪದಾರ್ಥ ಸೇವಿಸುವಾಗ ತೊಂದರೆ ಮತ್ತು ನೋವು ಆಗಬಹುದು.
7. ಬಾಯಿಯಲ್ಲಿ ಬಿಳಿ ಮತ್ತು ಕೆಂಪು ಕಲೆಗಳು ಕಾಣಿಸಿಕೊಳ್ಳಬಹುದು.
8. ನಾಲಗೆಯ ಮೇಲೆ ಗುಳ್ಳೆ ಅಥವಾ ಹುಣ್ಣು ಅಥವಾ ಗಡ್ಡೆ ಬೆಳೆದು ನಾಲಗೆಯ ಚಲನೆಯಲ್ಲಿ ಕಷ್ಟವಾಗಬಹುದು.
9. ಅತಿಯಾದ ಎಂಜಲು (ಜೊಲ್ಲುರಸ) ಬಂದಂತೆ ಅನಿಸುವುದು.
10. ಕುತ್ತಿಗೆಯ ಸುತ್ತ ಗಡ್ಡೆ ಅಥವಾ ಗುಳ್ಳೆ ಬೆಳೆದಂತೆ ಅನಿಸಬಹುದು. ಗಡ್ಡೆ ಸುಮಾರು 2ರಿಂದ 10ರ ವರೆಗೆ ಇದ್ದು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ಆದರೆ ನೋವಿರುವುದಿಲ್ಲ.

ಸ್ತನದ ಕ್ಯಾನ್ಸರ್ ಚಿಹ್ನೆಗಳು

ಸ್ತನದಲ್ಲಿ ಗಡ್ಡೆಗಳು ಅಥವಾ ಸ್ತನಗಳ ಚರ್ಮ ದಪ್ಪಗಾದಂತೆ ಅಥವಾ ಬೆಳೆದಂತೆ ಭಾಸವಾಗುವುದು. ಮೊಲೆ ತೊಟ್ಟು ಮೊಲೆಯೊಳಗೆ ಹುದುಗಿಕೊಳ್ಳುವುದು. ಸ್ತನಗಳ ಗಾತ್ರದಲ್ಲಿ ವ್ಯತ್ಯಾಸವಾಗುವುದು. ಸ್ತನಗಳ ಚರ್ಮದಲ್ಲಿ ಡಿಂಪಲ್ ಅಥವಾ ಗುಳ್ಳೆ ಬೀಳುವುದು ಕಂಕುಳಗಳ ಕೆಳಗೆ ಗುಳ್ಳೆಗಳು ಅಥವಾ ಸಣ್ಣ ಗಡ್ಡೆ ಬೆಳೆದಂತೆ ಭಾಸವಾಗುವುದು. ಮೊಲೆತೊಟ್ಟುಗಳಲ್ಲಿ ತುರಿಕೆ ಅಥವಾ ಒಡೆಯುವುದು ಹಾಗೂ ಕೀವು ಸೋರುವುದು ರಕ್ತ ಸೂಸುವುದು ಇತ್ಯಾದಿ. ಎರಡು ಸ್ತನಗಳು ಒಂದೇ ರೀತಿ ಆಗಿರದೇ ಗಾತ್ರ, ರಚನೆ ಮತ್ತು ಆಕಾರದಲ್ಲಿ ವ್ಯತ್ಯಾಸವಾಗುವುದು. ಇದರ ಜೊತೆಗೆ ನಿರಂತರವಾಗಿ ಸ್ತನಗಳಲ್ಲಿ ನೋವು ಇರಬಹುದು. ಕೆಲವೊಮ್ಮೆ ಬರೀ ಗೆಡ್ಡೆ ಬೆಳೆದು, ನೋವಿಲ್ಲದೇ ಇರಲೂ ಬಹುದು.

breast-cancer-

ಮೇಲೆ ತಿಳಿಸಿದ ಯಾವುದೇ ಲಕ್ಷಣಗಳಿದ್ದಲ್ಲಿ ಕೂಡಲೇ ವೈದ್ಯರನ್ನು ಸಂದರ್ಶಿಸಿ ಸೂಕ್ತ ಸಲಹೆ ತೆಗೆದು ಕೊಳ್ಳಬೇಕು. ನೆನಪಿರಲಿ ಪ್ರಾರಂಭಿಕ ಹಂತದಲ್ಲಿಯೇ ಸ್ತನದ ಕ್ಯಾನ್ಸರ್ ನ್ನು ಗುರುತಿಸಿದ್ದಲ್ಲಿ ಗುಣಮುಖವಾಗಬಹುದು. ಕಡೇ ಹಂತದಲ್ಲಿ ಗುರುತಿಸಿದ್ದಲ್ಲಿ ಜೀವಕ್ಕೆ ಸಂಚಕಾರ ಬರಬಹುದು. ಆರೋಗ್ಯದ ವಿಚಾರದಲ್ಲಿ ಯಾವುದೇ ಮುಜುಗರ, ಸಂಕೋಚವಿಲ್ಲದೇ ವೈದ್ಯರ ಬಳಿ ನಿಮ್ಮ ಮನಸ್ಸಿನ ನೋವು, ಸಂಕಟ ಮತ್ತು ತೊಂದರೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. 40ವರುಷ ದಾಟಿದ ಎಲ್ಲಾ ಮಹಿಳೆಯರಿಗೂ ಪ್ರತೀ 6ತಿಂಗಳಿಗೊಮ್ಮೆ  ಸ್ತನದ ಕ್ಯಾನ್ಸರ್ ಬಗ್ಗೆ ವೈದ್ಯರ ಬಳಿ ತೋರಿಸಿ ಮಾರ್ಗದರ್ಶನ ತೆಗೆದುಕೊಳ್ಳಬಹುದು.

ಶ್ವಾಸಕೋಶದ ಕ್ಯಾನ್ಸರ್‍ನ ಚಿಹ್ನೆಗಳು

ಧೂಮಪಾನ ಶ್ವಾಸಕೋಶಗಳ ಬಹುದೊಡ್ಡ ವೈರಿ. ಸಾಮಾನ್ಯವಾಗಿ 60-70ರ ಹರೆಯದಲ್ಲಿ ಕಾಣುವ ಈ ರೋಗ, ಬದಲಾದ ಜೀವನ ಶೈಲಿ ಮತ್ತು ಧೂಮಪಾನದಿಂದಾಗಿ ಈಗೀಗ 30-40ರ ಹರೆಯದಲ್ಲಿ ಕಾಣಸಿಗುತ್ತದೆ. ಶೇಕಡಾ 90ರಷ್ಟು ಮಂದಿ ಧೂಮಪಾನದಿಂದಾಗಿಯೇ ಎದೆಗೂಡಿನ ಕ್ಯಾನ್ಸರ್‍ಗೆ ತುತ್ತಾಗುತ್ತಾರೆ. ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣದೇ ಇರಬಹುದು. ಆದರೆ ಮುಂದುವರಿದ ಕ್ಯಾನ್ಸರ್‍ನಲ್ಲಿ ಈ ಕೆಳಗಿನ ಲಕ್ಷಣಗಳು ಹೆಚ್ಚಾಗಿ ಕಾಣಸಿಗುತ್ತದೆ.

shwasakoshada-cancer ಕ್ಯಾನ್ಸರ್ ಜಾಗೃತಿ ದಿನ - ನವಂಬರ್- 7 : ಕ್ಯಾನ್ಸರ್ ಗುಣಪಡಿಸಲಾಗದ ಖಾಯಿಲೆಯಲ್ಲ.

1. ವಿಪರೀತ ಮತ್ತು ನಿರಂತರ ಕೆಮ್ಮು ಇದ್ದು ಯಾವುದೇ ರೀತಿಯ ಔಷಧಗಳಿಗೆ ಕಡಿಮೆಯಾಗದೆ, ನಿರಂತರ 4, 5 ವಾರ ಕೆಮ್ಮಿದ್ದಲ್ಲಿ ವೈದ್ಯರ ಸಲಹೆ ಅತೀ ಅಗತ್ಯ.
2. ಕೆಮ್ಮುವಾಗ ರಕ್ತ ವಸರುವುದು, ಕಫದ ಜೊತೆ ರಕ್ತ ಸೂಸುವುದು.
3. ಆಹಾರ ಸೇರದಿರುವುದು ಮತ್ತು ಹಸಿವಿಲ್ಲದಿರುವುದು. ಇದರಿಂದಾಗಿ ದೇಹದ ತೂಕ ಕಡಿಮೆಯಾಗಬಹುದು.
4. ಉಸಿರಾಡಲು ಕಷ್ಟವಾಗಬಹುದು. ಉಸಿರಾಡುವಾಗ ಜೋರಾಗಿ ಶಬ್ಧ ಬರಬಹುದು. ಉಸಿರಾಡುವಾಗ ಎದೆಭಾಗದಲ್ಲಿ ನೋವಾಗಬಹುದು. ದೀರ್ಘವಾದ ಶ್ವಾಸ ತೆಗೆಯಲು ಸಾಧ್ಯವಾಗದೇ ಇರಬಹುದು
5. ಪದೇ ಪದೇ ಆಯಾಸಗೊಳ್ಳುವುದು, ಜೀವನದಲ್ಲಿ ನಿರಾಸಕ್ತಿ ಶ್ವಾಸಕೋಶದಲ್ಲಿ ಆಮ್ಲಜನಕದ ಪೂರೈಕೆ ಮತ್ತು ವಿನಿಮಯವಾಗದಿದ್ದಲ್ಲಿ ಜೀವನದ ಉತ್ಸಹ ಬತ್ತಿಹೋಗಬಹುದು.
6. ಧ್ವನಿಯಲ್ಲಿ ಬದಲಾವಣೆ, ಮುಖದಲ್ಲಿ ಊದಿಕೊಳ್ಳುವುದು ಮತ್ತು ಕರ್ಕಶವಾದ ಧ್ವನಿ ಇತ್ಯಾದಿ ಉಂಟಾಗಬಹುದು.
7. ಪದೇ ಪದೇ ಶ್ವಾಸನಾಳದ ಸೋಂಕಿಗೆ ತುತ್ತಾಗಿ ಜ್ವರ ಕಫ, ಕೆಮ್ಮು ಮತ್ತುಧಮ್ಮು ಕಟ್ಟುವುದು ಕೆಚ್ಚಾಗಿ ಕಾಡಬಹುದು.
8. ಎದೆಗೂಡಿನ ಭಾಗದಲ್ಲಿ ನೋವು ಬರಬಹುದು. ಈ ನೋವು ತೋಳು, ಬೆನ್ನು ಮುಂತಾದ ಕಡೆಗೂ ಹರಡಬಹುದು. ಕೆಮ್ಮು ಇಲ್ಲದಿದ್ದರೂ ನಿರಂತರ ನೋವು ಇರಬಹುದು.

ಕ್ಯಾನ್ಸರ್ ರೋಗ ಅಂತಿಮ ಹಂತಕ್ಕೆ ತಲುಪಿದಾಗ, ದೇಹದ ಬೇರೆ ಭಾಗಗಳಿಗೂ ಹರಡಿ ಮೂಳೆಗಳಲ್ಲಿ ನೋವು ಮತ್ತು ಮೂಳೆ ಮುರಿತ ಉಂಟಾಗಬಹುದು. ಅದೇ ರೀತಿ ಮೆದುಳಿಗೂ ಹರಡಿದಲ್ಲಿ ತಲೆನೋವು ಅಪಸ್ಮಾರ, ಕೈಕಾಲುಗಳು ಸಂವೇಧನೆ ಮತ್ತು ನಿಯಂತ್ರಣ ಕಳೆದು ಕೊಳ್ಳುವುದು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಇಲ್ಲಿ ಕೂಡಾ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಆದರೆ ಹೆಚ್ಚಿನ ಶ್ವಾಸಕೋಸ ಕ್ಯಾನ್ಸರ್ ಕಡೆ ಹಂತದಲ್ಲಿ ಗುರುತಿಸಲ್ಪಟ್ಟು ವೈದ್ಯರ ಬಳಿ ಬರುವಾಗಲೇ ಕಾಲ ಮಿಂಚಿ ಹೋಗಿರುತ್ತದೆ.

ಜನನಾಂಗದ ಕ್ಯಾನ್ಸರ್ (ಸರ್ವಿಕ್ಸ್ ಅರ್ಬುದ ರೋಗ)

ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ನ ನಂತರದ ಸ್ಥಾನ ಜನನಾಂಗದ ಕ್ಯಾನ್ಸರ್‍ಗೆ ಸಲ್ಲುತ್ತದೆ. “ ಪಾಪ್ ಸ್ಮಿಯರ್” ಎಂಬ ಪರೀಕ್ಷೆಯ ಮುಖಾಂತರ ಆರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಪ್ರತೀ ಮಹಿಳೆ 40 ವರ್ಷ ದಾಟಿದ ಬಳಿಕ ಪ್ರತೀ ವರ್ಷಕೊಮ್ಮೆ ಸ್ತ್ರೀ ರೋಗದ ತಜ್ಞರ ಬಳಿ ತಪಾಸಣೆ ನಡೆಸಿದ್ದಲ್ಲಿ ಈ ರೋಗವನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಹ್ಯೂಮನ್ ಪ್ಯಾಪಿಲೋಮ ವೈರಸ್, ಅಪೌಷ್ಟಿಕತೆ, ಬೊಜ್ಜು, ಧೂಮಪಾನ, ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಫಂಗಲ್ ಸೋಂಕು, ಹಣ್ಣು ಸೊಪ್ಪು ತರಕಾರಿ ರಹಿತ ಆಹಾರ, ರಸದೂತಗಳು ಮತ್ತು ಕೃತಕ ಗರ್ಭನಿರೋಧಕ ಮಾತ್ರೆಗಳ ಅತಿಯಾದ ಸೇವನೆ, ಜಾಸ್ತಿ ಮಕ್ಕಳನ್ನು ಹೆರುವುದು ಇತ್ಯಾದಿ ಹಲವಾರು ಕಾರಣಗಳಿಂದ ಜನನಾಂಗದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

cervical-cancer ಕ್ಯಾನ್ಸರ್ ಜಾಗೃತಿ ದಿನ - ನವಂಬರ್- 7 : ಕ್ಯಾನ್ಸರ್ ಗುಣಪಡಿಸಲಾಗದ ಖಾಯಿಲೆಯಲ್ಲ.

ಪ್ರಾರಂಭಿಕ ಹಂತದಲ್ಲಿ ಯಾವುದೇ ಸೂಚನೆ ಇರದಿರಬಹುದು. ತನ್ನಿಂತಾನೇ ರಕ್ತ ಜನನಾಂಗದಲ್ಲಿ ಒಸರುವುದು, ಲೈಗಿಂಕ ಕ್ರಿಯಾ ಸಮಯದಲ್ಲಿ ರಕ್ತ ಸೋರುವುದು, ಲೈಗಿಂಕ ಕ್ರಿಯಾ ಸಮಯದಲ್ಲಿ ವಿಪರೀತ ನೋವು, ಋತುಚಕ್ರದ ನಡುವೆ ಕೂಡ ನೋವು ಮತ್ತು ರಕ್ತಸ್ರಾವ ಮತ್ತು ಸ್ವಾಭಾವಿಕ ಋತುಚಕ್ರದಲ್ಲಿ ಹೆಚ್ಚಿನ ರಕ್ತಸ್ರಾವ ಉಂಟಾಗಬಹುದು. ಅದೇ ರೀತಿ ಜನನಾಂಗದಿಂದ ವಾಸನೆಯುಕ್ತ ಸೋರಿಕೆ ಉಂಟಾಗಬಹುದು. ಈ ರಕ್ತದ ಸೋರಿಕೆ ಋತುಚಕ್ರ ನಿಂತ ನಂತರವೂ ಉಂಟಾಗಬಹುದು ಮತ್ತು ಜನನಾಂಗದ ಒಳಗೆ ಗಡ್ಡೆ ಬೆಳೆದಂತೆ ಭಾಸವಾಗಬಹುದು. ಆರಂಭಿಕ ಹಂತದಲ್ಲಿ ಗುರುತಿಸಿ ಸೂಕ್ತ ಸ್ರ್ತೀ ರೋಗ ತಜ್ಞ ವೈದ್ಯರಲ್ಲಿ ಸಕಾಲದಲ್ಲಿ ತೋರಿಸಿ ಚಿಕಿತ್ಸೆ ಪಡೆದಲ್ಲಿ ಮುಂದೆ ಬರುವ ತೊಂದರೆಗಳನ್ನು ತಡೆಗಟ್ಟಬಹುದು.

ಕ್ಯಾನ್ಸರ್ ಮತ್ತು ಹತ್ತು ಪ್ರಶ್ನೆಗಳು

ಕ್ಯಾನ್ಸರ್  ಬಗ್ಗೆ ಜನರಲ್ಲಿ ಭಯದ ಜೊತೆಗೆ ಹತ್ತು ಹಲವು ಸಂದೇಹಗಳು ಮತ್ತು ಕುತೂಹಲ ಇದ್ದೆ ಇದೆ. ಎಲ್ಲಾ ಕ್ಯಾನ್ಸರನ್ನು ಗುಣಪಡಿಸುವ ಔಷದಿ ಇಲ್ಲದ ಕಾರಣ ಜನರು ತಲೆಗೊಂದರಂತೆ ಮಾತನಾಡುತ್ತಾರೆ.ಕ್ಯಾನ್ಸರ್ ಗಳಲ್ಲಿ ನೂರು ವಿಧದ ಕ್ಯಾನ್ಸರ್ ಗಳು ಇದೆ. ಕೆಲವೊಂದು ಕ್ಯಾನ್ಸರ್ ಗಳಿಗೆ ಬರೀ ಸರ್ಜರಿಯ ಅವಶ್ಯಕತೆ ಇದ್ದಲ್ಲಿ, ಕೆಲವೊಂದು ಕ್ಯಾನ್ಸರ್ ಗಳಿಗೆ  ಬರೀ ಕಿಮೋಥೆರಪಿಯಿಂದಲೇ ಗುಣಮುಖವಾಗುವ ಸಾಧ್ಯತೆಯೂ ಇದೆ. ಉದಾಹರಣೆಗೆ ಲಿಂಪೋಮಾ ಎಂಬ ಕ್ಯಾನ್ಸರಿಗೆ ಸರ್ಜರಿಯ ಅವಶ್ಯಕತೆ ಇಲ್ಲ. ಬರೀ ಕಿಮೋಥೆರಪಿ ನೀಡಿ ರೋಗವನ್ನು ಗುಣಪಡಿಸಲಾಗುತ್ತದೆ. ಅದೇ ರೀತಿ ಬರ್ಕಿಟ್ಸ್  ಲಿಂಫೋಮ ಎಂಬ ರೋಗಕ್ಕೂ ಬರೀ ಕಿಮೋಥೆರಪಿ ಮಾತ್ರ ನೀಡಲಾಗುತ್ತದೆ. ಕ್ಯಾನ್ಸರ್ ಬರಲು ನಿರ್ದಿಷ್ಟವಾದ ಒಂದು ಕಾರಣ ಇಲ್ಲ. ಹತ್ತು ಹಲವು ಕಾರಣಗಳು ಸೇರಿ ಕ್ಯಾನ್ಸರ್ ಬರುವುದರಿಂದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಲು ವೈದ್ಯರಿಗೂ ಬಹಳ ಕಷ್ಟವಾಗುತ್ತದೆ.

1. ನನ್ನ ಅಜ್ಜ ಕಳೆದ 40ವರ್ಷಗಳಿಂದ ಎಲೆ ಅಡಿಕೆ ಹೊಗೆ ಸೊಪ್ಪು ತಿನ್ನುತ್ತಿದ್ದಾರೆ. ಆದರೂ ಅವರಿಗೆ ಕ್ಯಾನ್ಸರ್ ಬಂದಿಲ್ಲ ಯಾಕೆ?
ಇದೊಂದು ಉತ್ತರ ನೀಡಲು ಬಹಳ ಕಷ್ಟಕರವಾದ ಪ್ರಶ್ನೆ. ಸಾಮಾನ್ಯವಾಗಿ ಎಲೆ ಅಡಿಕೆ ತಂಬಾಕು ಸೇವಿಸುವವರಲ್ಲಿ 90 ಶೇಕಡಾ ಮಂದಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹಾಗೆಂದ ಮಾತ್ರಕ್ಕೆ ತಂಬಾಕು ಸೇವಿಸಿದ ಎಲ್ಲರಿಗೂ ಬಾಯಿ ಕ್ಯಾನ್ಸರ್ ಬರಲೇಬೇಕೆಂದಿಲ್ಲ.

2. ನನ್ನ ತಂದೆಗೆ ಬೀಡಿ, ಸಿಗರೇಟು, ನಶ್ಯ, ತಂಬಾಕು ಅಥವಾ ಮಧ್ಯಪಾನ ಮುಂತಾದ ಯಾವುದೇ ಚಟಗಳಿಲ್ಲ. ಬರೀ ಶಾಖಹಾರಿ ಮತ್ತು ನಿರಂತರ ಯೋಗ, ಧ್ಯಾನ ಪ್ರಾಣಯಾಮ ಮಾಡುತ್ತಾರೆ. ಆದರೂ ಅವರಿಗೆ ಬಾಯಿ ಕ್ಯಾನ್ಸರ್ ಬಂದಿದೆ. ಯಾಕೆ?
ಈ ಪ್ರಶ್ನೆಗೂ ವೈದ್ಯರ ಬಳಿ ಉತ್ತರ ಸಿಗಲಿಕ್ಕಿಲ್ಲ. ಕ್ಯಾನ್ಸರ್ ಬಂದಿರುವ ಎಲ್ಲಾ ರೋಗಿಗಳಿಗೂ ಚಟಗಳು ಇರಲೇ ಬೇಕೆಂದಿಲ್ಲ. ಕೆಲವೊಮ್ಮೆ ವಿರಳ ಸಂದರ್ಭಗಳಲ್ಲಿ ಯಾವುದೇ ದುರಾಭ್ಯಾಸವಿಲ್ಲದಿದ್ದರೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯಾತೆ ಇದೆ. ಆದರೆ ಕೆಲವೊಂದು ವಂಶಪಾರಂಪರ್ಯವಾಗಿ ಬರಬಹುದು . ಆದರೆ ಬಾಯಿ ಕ್ಯಾನ್ಸರ್ ಖಂಡಿತವಾಗಿಯೂ ವಂಶಪಾರಂಪರ್ಯವಾಗಿ ಬರುವುದಿಲ್ಲ.

3. ವಿಕಿರಣದ ಕಾರಣದಿಂದ ಕ್ಯಾನ್ಸರ್ ಬರುತ್ತದೆ ಎಂದು ನಿವೇ ವೈದ್ಯರು ತಿಳಿಸುತ್ತೀರಿ. ಮತ್ತೆ ಪುನಃ ವಿಕಿರಣ ಚಿಕಿತ್ಸೆಯನ್ನೇ ಕ್ಯಾನ್ಸರಿಗೆ ನೀಡುತ್ತೀರಿ ಯಾಕೆ?
ಸಣ್ಣ ಪ್ರಮಾಣದದ ವಿಕಿರಣಕ್ಕೆ ದೇಹವನ್ನು ಪದೇ ಪದೇ ಒಡ್ಡುವುದರಿಂದ ದೇಹದಲ್ಲಿನ ಜಿವಕೋಶಗಳ ಒಳಗಿನ ವರ್ಣತಂತುವಿನ ರಚನೆಯಲ್ಲಿ ವ್ಯತ್ಯಾಸವಾಗಿ ಜೀವಕೋಶಗಳ ರೂಪಾಂತರ ಹೊಂದಿ, ತನ್ನ ವಿಭಜನೆಯ ಮೇಲಿನ ನಿಯಂತ್ರಣ ತಪ್ಪಿ ಹೋಗಿ ಕ್ಯಾನ್ಸರ್ ಜೀವಕೋಶಗಳಾಗಿ ಪರಿವರ್ತನೆ ಹೊಂದುತ್ತದೆ. ಆದರೆ ವಿಕಿರಣ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಹೊಂದಿರುವ ಜೀವಕೋಶಗಳ ಮೇಲೆ ನಿರಂತರವಾಗಿ ವಿಕಿರಣ ನೀಡಿ, ಜೀವಕೋಶಗಳನ್ನು ನಾಶಪಡಿಸಲಾಗುತ್ತದೆ. ಇಲ್ಲಿ ಹೆಚ್ಚಿನ ವಿಕಿರಣವನ್ನು ತುಂಬ ಕಡಿಮೆ ಸಮಯದ ಅವಧಿಗೆ ಜಿವಕೋಶಗಳಿಗೆ ತಾಗುವಂತೆ ಮಾಡಿ ಕ್ಯಾನ್ಸರ್ ಜೀವಕೋಶಗಳನ್ನು ಸಾಯಿಸಲಾಗುತ್ತದೆ.

4. ನಾನು ಬರಿ ಎಲೆ ಅಡಿಕೆ ಮಾತ್ರ ತಿನ್ನುತ್ತೇನೆ. ಆದರೆ ತಂಬಾಕು (ಹೊಗೆಸೊಪ್ಪು) ಬಳಸುವುದಿಲ್ಲ. ಹಾಗಾಗಿ ನನಗೆ ಕ್ಯಾನ್ಸರ್ ಬರಲಿಕ್ಕಿಲ್ಲ.
ಇದೊಂದು ಯಕ್ಷ ಪ್ರಶ್ನೆ ಎಂದರೂ ತಪ್ಪಲ್ಲ. ಯಾಕೆಂದರೆ ಎಲೆ, ಅಡಿಕೆ ಕೂಡಾ ಹೊಗೆ ಸೊಪ್ಪಿನಷ್ಟೆ ಅಪಾಯಕಾರಿ, ನಿರಂತರವಾಗಿ ಬಾಯಿಯೊಳಗಿನ ನುಣುಪಾದ ವಸಡು, ನಾಲಿಗೆ ಮತ್ತು ಬಾಯಿ ಮೆಲ್ಪದರಕ್ಕೆ ಅತ್ಯಾಚಾರ ಆದಾಗ, ಜೀವಕೋಶಗಳು ಮಾರ್ಪಾಡು ಹೊಂದಿ ಕ್ಯಾನ್ಸರ್ ಆಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ನಾನು ಬರೀ ಹೊಗೆಸೊಪ್ಪು ಇಲ್ಲದ ಎಲೆ ಅಡಿಕೆ ತಿನ್ನುತ್ತೇನೆ. ನನಗೆ ಕ್ಯಾನ್ಸರ್ ಬರುವುದಿಲ್ಲ ಎನ್ನುವುದು ಮೂರ್ಖತನದ ಪರಮಾವದಿ. ಅತಿಯಾದರೆ ಅಮೃತವೂ ವಿಷ ಎಂಬಂತೆ ಎಲ್ಲವನ್ನು ಹಿತಮಿತವಾಗಿ ಉಪಯೋಗಿಸಬೇಕು ಎಂಬ ಸತ್ಯವನ್ನು ಎಲ್ಲಾ ಮನುಷ್ಯರು ಮನಗಾಣಲೇಬೇಕು.

5. ಆಹಾರ ಪದ್ದತಿಗೂ ಬಾಯಿ ಕ್ಯಾನ್ಸರ್‍ಗೂ ನೇರವಾದ ಸಂಬಂಧ ವಿದೆಯೇ?
ನಮ್ಮ ಆಹಾರ ಪದ್ದತಿಗೂ, ನಮ್ಮ ಜೀವನ ಶೈಲಿಗೂ ಮತ್ತು ಬಾಯಿ ಕ್ಯಾನ್ಸರ್‍ಗೂ ನೇರವಾದ ಸಂಬಂಧವಿದೆ. ನಾವು ತಿನ್ನುವ ಆಹಾರದಲ್ಲಿ ವಿಟಮಿನ್ ಎ, ಬಿ, ಸಿ, ಇ ಮತ್ತು ಡಿ ಇದ್ದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಹಸಿ ತರಕಾರಿ, ಸೊಪ್ಪು, ಕಾಯಿಪಲ್ಲೆಗಳು, ಕ್ಯಾರೆಟ್, ಮೂಲಂಗಿ ಮುಂತಾದ ತರಕಾರಿಗಳಲ್ಲಿ ಕ್ಯಾನ್ಸರ್ ನಿರೊಧಕ ಶಕ್ತಿ ಇರುವ ‘ಆಂಟಿ ಓಕ್ಸಿಡೆಂಟ್’ ಎಂಬ ರಾಸಾಯನಿಕ ಇರುತ್ತದೆ. ಈ ಕಾರಣದಿಂದಲೇ ಹಸಿ ತರಕಾರಿ, ಹಣ್ಣು ಸೊಪ್ಪು ಕಾಯಿ ಪಲ್ಯೆಗಳನ್ನು ಹೆಚ್ಚು ಸೇವಿಸಬೇಕು. ಆಹಾರ ಕೆಡದಂತೆ ಬಳಸುವ ರಾಸಾಯನಿಕಗಳು ಮತ್ತು ಬಣ್ಣ ಮಿಶ್ರಿತ ಸಿದ್ದ ಆಹಾರಗಳು ಬಹುಷಃ ಜೀವಕೋಶಗಳ ಮೇಲೆ ದುಷ್ಪರಿಣಾಮ ಬೀರಿ, ಜೀವಕೋಶಗಳು ರೂಪಾಂತರ ಹೊಂದುವಂತೆ ಪ್ರಚೋದಿಸುತ್ತದೆ.

6. ಬಾಯಿಯ ಸ್ವಚ್ಚತೆಗೂ, ಬಾಯಿಯ ಕ್ಯಾನ್ಸರ್‍ಗೂ ಸಂಬಂಧ ಇದೆಯೇ?
ಖಂಡಿತವಾಗಿಯೂ ಇದೆ. ಬಾಯಿಯನು ್ನ ಯಾವಾಗಲೂ ಸ್ವಚ್ಚವಾಗಿ ಇಡತಕ್ಕದ್ದು. ಬಾಯಿ ಸ್ವಚ್ಚವಾಗಿರದಿದ್ದಲ್ಲಿ ಬಾಯಿಯಲ್ಲಿ ವೈರಾಣುಗಳು ವಿಜ್ರಂಬಿಸಿ, ಕ್ಯಾನ್ಸರ್ ಬೆಳೆಯಲು ಪೂರಕವಾದ ವಾತಾವರಣ ಕಲ್ಪಿಸಿ ಕೊಡಬಹುದು. ಹ್ಯೂಮನ್ ಪಾಪಿಲೋಮ ಎಂಬ ವೈರಾಣು ಕ್ಯಾನ್ಸರ್‍ಕಾರಕ ಎಂದು ಸಂಶೋದನೆಗಳಿಂದ ಸಾಬೀತಾಗಿದೆ.

7. ಬಾಯಿ ಕ್ಯಾನ್ಸರ್ ಜಾಸ್ತಿ ಪುರುಷರಲ್ಲಿ ಬರುತ್ತದೆ ಮಹಿಳೆಯರಿಗೆ ಕಡಿಮೆ ಬರುತ್ತದೆ.ಯಾಕೆ?
ನಮ್ಮ ಭಾರತ ದೇಶದಲ್ಲಿ ಪುರುಷರು ಜಾಸ್ತಿ ತಂಬಾಕು ಮತ್ತು ದೂಮಪಾನ ಮಾಡುವ ಕಾರಣದಿಂದ ಪುರುಷರಿಗೆ ಹೆಚ್ಚು ಬಾಯಿ ಕ್ಯಾನ್ಸರ್ ಬರುತ್ತದೆ.ಆದರೆ ಪ್ರಾಶ್ಯಾತ್ಯ ದೇಶಗಳಲ್ಲಿ ಹೆಂಗಸರೂ ಗಂಡಸರಷ್ಟೆ ಧೂಮಪಾನ, ತಂಬಾಕು ಬಳಕೆ ಮಾಡುವುದರಿಂದ ಇಬ್ಬರಿಗೂ ಬಾಯಿ ಕ್ಯಾನ್ಸರ್ ಬರುವ ಸಮಾನ ಸಾಧ್ಯತೆ ಇದೆ.

8. ಗೊಮೂತ್ರ ಕುಡಿಯುವುದರಿಂದ ಬಾಯಿ ಕ್ಯಾನ್ಸರ್ ಸಂಪೂರ್ಣವಾಗಿ ಗುಣವಾಗುತ್ತದೆ. ಸರ್ಜರಿ ಅಗತ್ಯವಿಲ್ಲ.
ಗೋಮೂತ್ರ ಕ್ಯಾನ್ಸರ್  ಗುಣಣಪಡಿಸುತ್ತದೆ ಎಂಬುದರ ಬಗ್ಗೆ ಯಾವುದೇ ಪುರಾವೆ ಇಲ್ಲ ಮತ್ತು ದೀರ್ಘಕಾಲಿಕ ಸಂಶೋದನೆ ನಡೆದಿಲ್ಲ. ಸರ್ಜರಿ ಬಾಯಿ ಕ್ಯಾನ್ಸರಿಗೆ ಸರಿಯಾದ ಚಿಕಿತ್ಸೆ ಎಂದು ಅಂಕಿ ಅಂಶಗಳಿಂದ  ಸಾಬೀತಾಗಿದೆ.

9. ಮೊಬೈಲ್ ಜಾಸ್ತಿ ಬಳುಸುವುದರಿಂದ ಕ್ಯಾನ್ಸರ್ ಬರಲು ಸಾಧ್ಯತೆ ಇದೆಯಾ?
ಈ ವಿಚಾರದ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿದೆ. ದಿನವೊಂದರಲ್ಲಿ 6ರಿಂದ 10 ಗಂಟೆಗಳ ಕಾಲ ಮೊಬೈಲ್ ಬಳಸಿದಲ್ಲಿ, ಬಹಳಷ್ಟು ವಿಕಿರಣ ದೇಹಕ್ಕೆ ಮತ್ತು ಮೆದುಳಿಗೆ ಸೇರಿ ಜೀವಕೋಶಗಳಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟಚಿತ್ರಣ ದೊರೆಯಬಹುದು.

10. ನಿರಂತವಾಗಿ ‘ಆಯಿಲ್ ಪುಲ್ಲಿಂಗ್’ ಮಾಡುವುದರಿಂದ ಬಾಯಿ ಕ್ಯಾನ್ಸರ್ ಬರುವುದಿಲ್ಲ. ಇದು ನಿಜವೇ?
ಆಯಿಲ್ ಪುಲ್ಲಿಂಗ್ ಮತ್ತು ಬಾಯಿ ಕ್ಯಾನ್ಸರ್ ಬರದಿರುವುದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವುದೇ ಒಂದು ವಿಚಾರದ ಬಗ್ಗೆ ಸ್ಪಷ್ಟತೆ ಮತ್ತು ಸತ್ಯ ವಿಚಾರ ತಿಳಿಯಬೇಕಾದಲ್ಲಿ, ನಿರಂತರ ಸಂಶೋಧನೆ ನಡೆದು, ಪರಿಪೂರ್ಣ ಮಾಹಿತಿ ದೊರಕಿದ ಬಳಿಕವೇ ಸತ್ಯ ಹೊರ ಬರುತ್ತದೆ. ಆಯಿಲ್ ಪುಲ್ಲಿಂಗ್ ಮಾಡಿದರೆ ಬಾಯಿ ಕ್ಯಾನ್ಸರ್ ಬರುವುದಿಲ್ಲ ಎಂಬ ವಿಚಾರಕ್ಕೆ ಯಾವುದೇ ಪುರಾವೆ ಇರುವುದಿಲ್ಲ.

ಕೊನೆಮಾತು

ಅರ್ಬುದ ರೋಗ ಮಾರಣಾಂತಿಕ ರೋಗವಾಗಿದ್ದರೂ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಖಂಡಿತವಾಗಿಯೂ ಗುಣಪಡಿಸಬಹುದು. ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ  ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಜಯಿಸಬಹುದು. ಕ್ಯಾನ್ಸರ್ ರೋಗ ಬಂದಿದೆ ಎಂದಾದ ಕೂಡಲೇ ಮನಸಿಕವಾಗಿ ಕುಗ್ಗಿ ಹೋಗಿ ತನ್ನ ದಿನ ಮುಗಿಯಿತು ಎನ್ನುವ ಮನೋಭಾವ ಖಂಡಿತಾ ಸಲ್ಲದು. ಬಡತನ, ಅನಕ್ಷರತೆ, ಅಜ್ಞಾನ, ಮೂಡ ನಂಬಿಕೆಗಳಿಂದ ತುಂಬಿರುವ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್ ರೋಗ ಎರಡನೇ ಅತಿ ದೊಡ್ಡ ರೋಗವಾಗಿ ಹೊರಹೊಮ್ಮಿರುವುದಂತೂ ಸತ್ಯ. (ಹೃದಯಾಘಾತ ಮಾರಣಾಂತಿಕ ಖಾಯಿಲೆಗಳಲ್ಲಿ ಜಾಗತಿಕವಾಗಿ ಮೊದಲನೇ ಸ್ಥಾನದಲ್ಲಿದೆ)

ಕ್ಯಾನ್ಸರ್ ಸಾಂಕ್ರಮಿಕ ರೋಗವಲ್ಲದಿದ್ದರೂ, ಅನಾರೋಗ್ಯಕರ ಜೀವನ ಶೈಲಿ, ಒತ್ತಡದ ಬದುಕು, ವಿಪರೀತ ಪೈಪೋಟಿಯ ಜೀವನ ಪದ್ಧತಿ, ಬಿಡುವಿಲ್ಲದ ಅನಿಯಂತ್ರಿತ ಯಾಂತ್ರಿಕ ಬದುಕು, ತಂಬಾಕು ಉತ್ಪನ್ನಗಳ ದುರ್ಬಳಕೆಯಿಂದಾಗಿ ಅರ್ಬುಧ ರೋಗ ಮುನುಕುಲದ ಮೇಲೆ ಮರಣ ಮೃದಂಗ ಬಾರಿಸುತ್ತಿರುವುದಂತೂ ಸತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವೈದ್ಯ ಮತ್ತು ಪ್ರಜೆಯೂ ತನ್ನ ಹೊಣೆಗಾರಿಕೆ ಅರಿತು ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅರಿವು ಮೂಡಿಸಿ ಕ್ಯಾನ್ಸರ್ ಪೀಡಿತರಿಗೆ ಸಕಾಲದಲ್ಲಿ ಸಾಂತ್ವನ ನೀಡಿ ಚಿಕಿತ್ಸೆ ದೊರಕಿಸಿ ನೀಡಿ ಮತ್ತು ಮಾನಸಿಕ ಧೈರ್ಯ ತುಂಬಿದಲ್ಲಿ ಅರ್ಬುದ ರೋಗವನ್ನು ಜಯಿಸಬಹುದು. ಅದರಲ್ಲಿಯೇ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದ ಒಳಿತು ಮತ್ತು ಭವಿಷ್ಯ ಅಡಗಿದೆ.

Watch our video :

Cancer awareness day- ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ – ನವೆಂಬರ್ 7

Dr.-Murali-Mohana-Chuntaru.

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ: 9845135787
www.surakshadental.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!