ಅಂಗಾಂಗ ದಾನ : ಸತ್ತಮೇಲಾದರೂ ಸಮಾಜ ಸೇವೆಗೆ ಸಜ್ಜಾಗಿ

ಅಂಗಾಂಗ ದಾನ ಮಾಡಿ, ಸತ್ತಮೇಲಾದರೂ ಸಮಾಜ ಸೇವೆಗೆ ಸಜ್ಜಾಗಿ. ಭಾರತದಲ್ಲಿ ಸುಮಾರು ಎರಡು ಲಕ್ಷ ಮಂದಿಗೆ ಕಿಡ್ನಿ, ಎಂಭತ್ತು ಸಾವಿರ ಮಂದಿಗೆ ಯಕೃತ್ ಹಾಗೂ ಅರವತ್ತು ಸಾವಿರ ಹೃದಯದ ಬದಲಿ ಜೋಡಣೆಗೆ ಬೇಡಿಕೆ ಇದೆ.

ಅವನು ಜೀವಂತವಾಗಿದ್ದಾನೆ. ಆದರೆ, ನೀರಲ್ಲಿ ಮುಳುಗಿ ಸತ್ತ ಹೆಣದಂತೆ ಬಾತಿದ್ದಾನೆ. ಕಣ್ಣು ಹೂತುಕೊಂಡಿವೆ. ಮೂತ್ರ ಕಡಿಮೆ. ಉಸಿರಾಟಕ್ಕೆ ಏದುಸಿರು ಬಿಡುತ್ತಿದ್ದಾನೆ. ಹಸಿವೆಯಿಲ್ಲ. ವೈದ್ಯರು ವ್ಯಕ್ತಿಯ ತಪಾಸಣೆ ಮಾಡಿ, ಪರೀಕ್ಷೆಯ ವರದಿಗಳನ್ನು ಒರೆಗಚ್ಚಿ ನೋಡಿ ಹೇಳಿದ್ದು ‘ ಕಿಡ್ನಿ ಫೆಲ್ಯೂರ್ ‘ಆಗಿವೆ ….. ಎಂದು. ವಾರಕ್ಕೊಮ್ಮೆ ಡಯಾಲೆಸಿಸ್ ಮಾಡಿಸಿಕೊಂಡರೂ ಈ ಸ್ಥಿತಿ…….

Aṅgāṅga dāna
ನಾವು ಸೇವಿಸಿದ ಆಹಾರ ಪದಾರ್ಥಗಳನ್ನು ಜೀರ್ಣಿಸಿ, ದೇಹ ನಿರ್ಮಾಣಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪಾಚನಿಕ ನಾಳವು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪ್ರತಿಯೊಂದು ಜೀವಕೋಶಗಳು ಉಪಯೋಗಿಸಿಕೊಳ್ಳುತ್ತವೆ. ಬದುಕಲು ಅಗತ್ಯವಾದ ಎಲ್ಲಾ ಜೀವಾಧಾರಕ ಕೆಲಸಗಳನ್ನು ಮಾಡುತ್ತವೆ. ಈ ಕೆಲಸಗಳು ನಡೆಯುವಾಗ ಅನೇಕ ವಿಷವಸ್ತುಗಳು ಹುಟ್ಟುತ್ತವೆ. ಇವು ಅಪಾಯಕಾರಿ ವಸ್ತುಗಳು. ಜೀವ ತೆಗೆಯಬಲ್ಲವು. ಹಾಗಾಗಿ ಉತ್ಪಾದನೆಯಾಗುತ್ತಿರುವಂತೆಯೇ, ಇವುಗಳ ನಿವಾರಣೆಯೂ ಆಗಬೇಕು. ಈ ಕೆಲಸವನ್ನು ಮೂತ್ರ ಪಿಂಡಗಳು ಮಾಡುತ್ತವೆ. ಇಂಥ ಅಮೂಲ್ಯ ಅಂಗಗಳು ಹಲವಾರು ಕಾರಣಗಳಿಂದ ದೈನಂದಿನ ಕೆಲಸ ನಿರ್ವಹಿಸಲು ವಿಫಲವಾಗುವವು. ಈ ಸ್ಥಿತಿಯೇ ‘ ಕಿಡ್ನಿ ಫೆಲ್ಯೂರ್ ‘. ಈ ರೋಗಿಗಳಿಗೆ ಇರುವ ದಾರಿಗಳೆಂದರೆ –

1. ನಿಯಮಿತವಾಗಿ ಡಯಾಲೆಸಿಸ್ ಗೆ ಒಳಗಾಗುವುದು.
2. ಸಾವನ್ನು ಸ್ವಾಗತಿಸುವುದು.
3. ಬದಲಿ ಮೂತ್ರಪಿಂಡವನ್ನು ಜೋಡಿಸಿಕೊಳ್ಳುವುದು.

ಜೀವಾಧಾರಕ ಮೂತ್ರಪಿಂಡಗಳಿಗೆ ಬೆಲೆ ಕಟ್ಟಲಾಗದು. ಹೀಗಾಗಿ ಆಗಾಗ ‘ ಕಿಡ್ನಿ ಸ್ಕ್ಯಾಂಡಲ್ ‘ನಡೆಯುತ್ತಲೇ ಇರುತ್ತದೆ. ಬಡಬಗ್ಗರಿಗೆ ಆಸೆ, ಆಮಿಷ ತೋರಿಸಿ, ಅವರ ಕಿಡ್ನಿಗಳನ್ನು ಕದಿಯುವರು. ಅವಶ್ಯಕತೆಯಿದ್ದವರಿಗೆ ಲಕ್ಷಾಂತರ ರೂಪಾಯಿಗಳಿಗೆ ಮಾರಿ ಅವರನ್ನು ಬದುಕಿಸುವರು. ಇಲ್ಲಿ ಮಾನವೀಯತೆಯ ಮಾರಣ ಹೋಮವಾಗಿದೆ. ವ್ಯಾಪಾರೀಕರಣ ಕಾಲಿಟ್ಟಿದೆ. ಹಣಗಳಿಸುವ ದಂಧೆಯಾಗಿದೆ. ಮಧ್ಯವರ್ತಿಗಳಿಗೆ, ದಳ್ಳಾಳಿಗಳಿಗೆ ಚಿನ್ನದ ಗಣಿಯಾಗಿದೆ. ಇದೊಂದು ದೊಡ್ಡ ದುರಂತ!

ವಿಶ್ವದ ಪ್ರಥಮ ಅಂಗ ಜೋಡನೆ :

ವಿಶ್ವದ ಪ್ರಥಮ ಬದಲಿ ಅಂಗ ಜೋಡಣೆಯ ಉದಾಹರಣೆ ಗಜಾನನ ಜನ್ಮ ವೃತ್ತಾಂತ ! ಸಮಸ್ತ ಭಾರತೀಯರಿಗೆಲ್ಲಾ ಚಿರಪರಿಚಿತವಾದದ್ದು. ನಿಜಕ್ಕೂ ಇದೊಂದು ಅದ್ಭುತ ಕಥೆ. ಇದರ ಅಡಿಯಲ್ಲಿ ಅಂಗಗಳ ಬದಲಿ ಜೋಡಣೆಯ ಶಾಸ್ತ್ರ ಇಂದು ಅದ್ಭುತವಾಗಿ ಬೆಳೆದಿದೆ. ಹಾಗೆಂದು ಸಿಕ್ಕ ಸಿಕ್ಕವರ ಅಂಗಗಳನ್ನು ತೆಗೆದು ಅವಶ್ಯವಿದ್ದವರಿಗೆ ಜೋಡಿಸಲು ಬರುವುದಿಲ್ಲ. ಬದಲಿ ಅಂಗ ಜೋಡಣೆಯ ಶಸ್ತ್ರಚಿಕಿತ್ಸೆ ಮಾಡುವ ಪೂರ್ವದಲ್ಲಿ ಅಂಗಗ್ರಾಹಿ, ಅಂಗದಾನಿಯ ಅಂಗಗಳನ್ನು ಸ್ವೀಕರಿಸುವನೋ ಅಥವಾ ತಿರಸ್ಕರಿಸಿಸುವನೋ ಎಂಬುದನ್ನು ಖಚಿತಪಡಿಸಲು ಹಲವಾರು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಎಲ್ಲವೂ ಸರಿಯಾಗಿದೆ ಎಂಬುದು ಖಾತ್ರಿಯಾದಮೇಲೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಆಗ ಮಾತ್ರ ಅದು ಯಶಸ್ವಿಯಾಗುವುದು.

ಮಾನವರ ದೇಹದಲ್ಲಿ ಪ್ರಮುಖ ಅಂಗಗಳೆಲ್ಲಾ (Vital Organs) ಒಂದೊಂದೇ ಇವೆ. ಮೂತ್ರಪಿಂಡಗಳು ಮಾತ್ರ ಎರಡು ಇವೆ. ಒಂದು ಮೂತ್ರಪಿಂಡ ದಾನ ಮಾಡಿದಲ್ಲಿ ಮತ್ತೊಬ್ಬರ ಬಾಳಿಗೆ ಬೆಳಕು ನೀಡಿದಂತಾಗುವುದು. ಪ್ರತಿ ವರ್ಷ ಆಗಸ್ಟ್ 13 ರಂದು ‘ ವಿಶ್ವ ಅಂಗಾಂಗ ದಾನ ದಿನ ‘ವನ್ನು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹಾಗೂ ಅಂಗಾಂಗದಾನದ ಪ್ರಾಮುಖ್ಯತೆ ತಿಳಿಸುವ ಸಲುವಾಗಿ ಆಚರಿಸಲಾಗುತ್ತದೆ. ರೋನಾಲ್ಡ್ ಲೀ ಹೆರಿಕ್ ಅಂಗದಾನ ಮಾಡಿದ ಪ್ರಪಂಚದ ಪ್ರಥಮ ವ್ಯಕ್ತಿ. ಅವನು ತನ್ನ ಸಹೋದರನ ಸಲುವಾಗಿ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ.  ವೈದ್ಯ ವಿಜ್ಞಾನಿ ಡಾ.ಜೋಶೆಪ್ ಮುರ್ರೆ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದರು. 1990 ರಲ್ಲಿ ಅವರು ನೋಬೆಲ್ ಪ್ರಶಸ್ತಿಗೆ ಭಾಜನರಾದರು. ಅಂಗಾಂಗ ದಾನಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 0.01% ಜನರು ಮಾತ್ರ, ಸತ್ತ ಮೇಲೆ ಅಂಗಾಂಗದಾನ ಮಾಡುವರು.

ಸಮಸ್ಯೆಯ ಆಳ ಮತ್ತು ಅಗಲ :

ಭಾರತದಲ್ಲಿ ಸುಮಾರು ಎರಡು ಲಕ್ಷ ಮಂದಿಗೆ ಕಿಡ್ನಿ, ಎಂಭತ್ತು ಸಾವಿರ ಮಂದಿಗೆ ಯಕೃತ್ ಹಾಗೂ ಅರವತ್ತು ಸಾವಿರ ಹೃದಯದ ಬದಲಿ ಜೋಡಣೆಗೆ ಬೇಡಿಕೆ ಇದೆ. ಆದರೆ, ಇದರ ಪೈಕಿ ಕೇವಲ ಶೇ.5 ರಷ್ಟು ರೋಗಿಗಳಿಗೆ ಬದಲಿ ಅಂಗಾಂಗ ಜೋಡಿಸುವುದು ಸಾಧ್ಯವಾಗಿದೆ. ಅಂಗಾಂಗ ದಾನದ ಅವಶ್ಯವಿರುವ ರೋಗಿ ಮತ್ತು ಅಂದಾಗಗಳ ಲಭ್ಯತೆ ನಡುವೆ ದೊಡ್ಡ ಅಂತರವಿದೆ. ಶೇ.95 ರೋಗಿಗಳು ಅಂಗ ಅಲಭ್ಯತೆಯಿಂದಾಗಿ ಜೀವ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಎಡ್ವಾಲ್ಡೋ ಲೀಲ್ ಅವರ ಸಂಶೋಧನೆ ಹಾಗೂ ಕೆಲವು ಸಮೀಕ್ಷೆ ಪ್ರಕಾರ ಮೂಢನಂಬಿಕೆ, ಅರಿವಿನ ಕೊರತೆ, ಮಿದುಳು ಸಾವಿನ ಬಗೆಗಿನ ತಪ್ಪು ತಿಳುವಳಿಕಗಳು ಅಂಗದಾನದ ಹಿಂಜರಿಕೆಗೆ ಕಾರಣವಾಗಿವೆ.

ಸತ್ತ ಮೇಲೆ ಸಮಾಜ ಸೇವೆ:

ಆತ್ಮಕ್ಕೆ ಸಾವಿಲ್ಲ ಎನ್ನುತ್ತಾರೆ. ನಿಜವೋ ಹೇಗೆ ಗೊತ್ತಿಲ್ಲ. ಮರಣದ ನಂತರ ನನ್ನ ದೇಹವು ದಾನವಾಗಿ ಒಂದು ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗಲಿ ಎಂದು ಘೋಷಿಸುವುದು ಮರಣೋತ್ತರ ದೇಹದಾನ ಅಥವಾ ಶವ ದಾನ ಎಂದು ಕರೆಯಲ್ಪಡುವುದು. ಮರಣ ಪತ್ರದ ಮೂಲಕ ಈ ಇಚ್ಚೆಯನ್ನು ಪ್ರಕಟಗೊಳಿಸುವುದಾಗಿದೆ. ಇಂಥವರ ಅಮೂಲ್ಯ ಅಂಗಗಳನ್ನು ಸತ್ತ 4 – 6 ತಾಸುಗಳಲ್ಲಿ ಸಂಗ್ರಹಿಸಿ, ಅವಶ್ಯವಿದ್ದವರಿಗೆ ನಿಗದಿತ ವೇಳೆಯೊಳಗೆ ಮರು ಜೋಡಣೆ ಮಾಡಿದಲ್ಲಿ ಸಾವಿನ ಅಂಚಿನಲ್ಲಿದ್ದವರು ಸತ್ತವರ ಅಂಗ ಪಡೆದು ಬದುಕಬಲ್ಲರು.

ಸತ್ತವರ ಅಂಗಗಳನ್ನು ಮಣ್ಣಲ್ಲಿ ಹೂಳಬೇಡಿ. ಸುಟ್ಟು ಹಾಕಿ ಹಾಳು ಮಾಡಬೇಡಿ. ಅವರ ಅಂಗ ದಾನಮಾಡಿ. ಬೇರೆಯವರು ಬದುಕಲು ದಾರಿ ಮಾಡಿ. ಇದನ್ನೇ ” ಸತ್ತ ಮೇಲೆ ಸಮಾಜ ಸೇವೆ ” ಎಂದು ಕರೆಯಲಾಗಿದೆ. ಹಿಂದೂಗಳಲ್ಲಿ ದೇಹದಾನ ಪುರಾಣಕಾಲದಲ್ಲಿ ಇತ್ತೆಂಬುದು ಕೇಳಿಬರುತ್ತದೆ. ಮಹಾಋಷಿಗಳಾದ ದಧೀಚಿ ತನ್ನ ದೇಹವನ್ನು ಹಿಂದೂ ಮಹಾ ಕಾರ್ಯಕ್ಕೆ ದಾನ ಮಾಡಿದರು ಎಂಬ ಕಥೆ ಬರುತ್ತದೆ. ಇದರ ಮೇಲಿಂದ ಇಂಥ ಆಚರಣೆ ಧರ್ಮಕ್ಕೆ ವಿರುದ್ಧ ಅಲ್ಲ ಎಂಬುದು ಸ್ಪಟಿಕದಷ್ಟೇ ಸ್ಪಷ್ಟ.

ಮೂತ್ರಪಿಂಡ, ಯಕೃತ್ ನ್ನು ದಾನ ಮಾಡಿ ಉಳಿದವರು ಬದುಕುವಂತೆ ಮಾಡಬಹುದು. ಪ್ಲೀಹ (Spleen) ಇಲ್ಲದೆ ಮನುಷ್ಯ ಬದುಕುವನಾದ್ದರಿಂದ ಅದರ ಅಂಗ ಜೋಡಣೆಗೆ ಅಷ್ಟು ಮಹತ್ವ ಕೊಟ್ಟಿಲ್ಲ. ದೇಹದಲ್ಲಿಯ ರಕ್ತವನ್ನು ಸತ್ತ ತಕ್ಷಣ ಹೀರಿ ತೆಗೆದರೆ ಸಾಕಷ್ಟು ರಕ್ತ ದೊರೆತು ರಕ್ತದ ಅಭಾವವೇ ಇಲ್ಲದಂತಾಗುವುದು. ಅಸ್ಥಿಮಜ್ಜೆಯನ್ನು ಹೀರಿ ತೆಗೆದು ಬೇಕಾದ ವ್ಯಕ್ತಿಗಳಿಗೆ ಪೂರಣೆ ಮಾಡಬಹುದು. ಇದರಿಂದ ರಕ್ತದ ಕ್ಯಾನ್ಸರ್ ಆಗಿ ಮರಣ ಶಯ್ಯೆಯಲ್ಲಿರುವ ರೋಗಿಗಳಿಗೆ ಜೀವದಾನ ಮಾಡಿದಂತಾಗುವುದು.

ಇನ್ನೂ ಮುಂದೆ ಹೋಗಿ ಶವಗಳ ದೇಹದಲ್ಲಿಯ ಎಲಬುಗಳನ್ನು ತೆಗೆದು ರೋಗಿಗಳಿಗೆ ಕೃತ್ರಿಮ ಅಂಗಾಂಗಗಳ ಬದಲಾಗಿ ದೈವದತ್ತ ಎಲಬುಗಳನ್ನು ಜೋಡಿಸಬಹುದು. ಇಂದಿನ ಅಪಘಾತ ಯುಗದಲ್ಲಿ ಎಲುಬು ಕಸಿ ಮಾಡುವಿಕೆ ಬಹಳೇ ಮಹತ್ವ ಪಡೆಯುತ್ತಿದೆ. ಇನ್ನೂ ಒಂದು ಮಹತ್ವದ ಹೆಜ್ಜೆಯನ್ನು ಇಂದು ಇಡಬೇಕಾಗಿದೆ. ಅದೆಂದರೆ ಮೇಲಿನ ತ್ವಚೆಯು ಇಂದು ಹಾಳಾಗುತ್ತಿದೆ. ಈ ತ್ವಚೆಯನ್ನು ಉಪಯೋಗಿಸಲು ಪ್ರಯತ್ನಗಳು ನಡೆದಿವೆ. ಒಂದು ವೇಳೆ ಇದು ಸಾಧ್ಯವೆಂದಾದರೆ ಸುಟ್ಟಗಾಯಗಳಿಂದ ಬಳಲುತ್ತಿರುವ ರೋಗಿಗಳಿಗೆ ದೊಡ್ಡ ಪರಿಹಾರ ದೊರೆತಂತಾಗುವುದು.

ಸುಟ್ಟು ಹೋದ ಚರ್ಮವನ್ನು ತೆಗೆದು ಹೊಸ ಆರೋಗ್ಯವಂತ ಚರ್ಮವನ್ನು ಅಲ್ಲಿ ಕಸಿ ಮಾಡಿದರೆ ಮರುದಿನವೇ ರೋಗಿ ಗುಣವಾಗುತ್ತಾನೆ. ಸುಟ್ಟ ಅಂಗಿಯನ್ನು ಕಳೆದು ಒಗೆದು ಹೊಸ ಅಂಗಿಯನ್ನು ತೊಟ್ಟಂತೆ ಆಗುವುದು. ಇಂಥ ಇನ್ನೂ ಹತ್ತಾರು ಉಪಯೋಗಗಳಿಂದ ಅದ್ಭುತ ಸಾಧನೆಗಳು ಆಗಬಹುದು! ವೈದ್ಯರು, ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಅಂಗಾಂಗದಾನದ ಪ್ರಚಾರ ಆಂದೋಲನದಲ್ಲಿ ಭಾಗಿಯಾಗಿ ಮತ್ತು ಅಂಗದಾನ ಮಾಡಿ ಇತರರಿಗೆ ಮಾದರಿಯಾಗಬೇಕು.

ಅಂಗ ಕಸಿಗೆ ಆಯ್ಕೆ ಹೇಗೆ ?

* ಅಂಗ ಕಸಿಯ ಸಾಮಾನ್ಯ ಯಶಸ್ಸು ರೌಗಿಯ ಮನೋದೈಹಿಕ ಆರೋಗ್ಯವನ್ನು ಅವಲಂಬಿಸಿರುತ್ತದೆ. ಹೀಗಾಗಿ ಬದಲಿ ಜೋಡಣೆಗೆ ಸೂಕ್ತ ರೋಗಿಗಳನ್ನು ವೈದ್ಯರು ಆರಿಸಿಕೊಳ್ಳುತ್ತಾರೆ.
* ಯಾವದೇ ಕಾರಣದಿಂದ ಶಸ್ತ್ರಚಿಕಿತ್ಸೆಯ ಒತ್ತಡವನ್ನು ಭರಿಸಲಾಗದು. ಶಸ್ತ್ರಚಿಕಿತ್ಸೆಯ ಕಾರಣ ಜೀವಕ್ಕೆ ಅಪಾಯ ಬರಬಹುದಾದಂತಹ ರೋಗಿಗಳನ್ನು ವೈದ್ಯರು ಅಂಗಕಸಿ ಚಿಕಿತ್ಸಗೆ ನಿರಾಕರಿಸಬಹುದು.
* ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವವರನ್ನು ಸಹ ವೈದ್ಯರು ಈ ಚಿಕಿತ್ಸೆಗೆ ನಿರಾಕರಿಸಬಹುದು.
* ವೈದ್ಯರು ದಾನಿಯ ಅಥವಾ ಗ್ರಾಹಿಯ ಊಐಂ ವ್ಯೂಹವನ್ನು ತಿಳಿದುಕೊಳ್ಳುತ್ತಾರೆ. ಏಕೆಂದರೆ ಮಾನವನ ದೇಹದ ಮಿಲಿಟರಿ ಪಡೆ ಕಸಿ ವೈಫಲ್ಯಕ್ಕೆ ಕಾರಣವಾಗಬಹುದು. ಈ ಮಿಲಿಟರಿ ಪಡೆಯನ್ನು ನಿಗ್ರಹಿಸಿ ಕಸಿ ಊರ್ಜಿತಗೊಳಿಸಲು ದುಬಾರಿ ಔಷಧಗಳನ್ನು ಬಳಸುವುದು ಅನಿವಾರ್ಯವಾಗಬಹುದು. ಈ ಔಷಧಗಳ ಪರಿಣಾಮ ತಡೆದುಕೊಳ್ಳುವ ಶಕ್ತಿ ರೋಗಿಗೆ ಇರಬೇಕು.
* ನೀರಿನಲ್ಲಿ ಮುಳುಗಿ ಸತ್ತವರಿಂದ, ವೈರಸ್ ರೋಗಗಳಿಂದ ಸತ್ತವರಿಂದ ( ಮಿದುಳು ಜ್ವರ, ಹುಚ್ಚು ನಾಯಿ ಕಡಿತ, ರಕ್ತ ನಂಜು, ಹಾಡ್ಜ್ ಕಿನ್ ರೋಗ, ಯಕೃತ್ ಉರಿಯೂತ, ಲಿಂಪೋಸಾರ್ಕೋಮ, ಹೆಪಟೈಟಿಸ್- ಬಿ, ಏಡ್ಸ್ ಇತ್ಯಾದಿ) ಅಂಗಾಂಗಗಳನ್ನು ಸ್ವೀಕರಿಸುವುದಿಲ್ಲ.

ಮರಣದ ನಂತರ ಮುಕ್ತಿ ಸಿಗುತ್ತದೆಂಬುದನ್ನೇ ತಾತ್ವಿಕವಾಗಿ ಒಪ್ಪದ ಬೌದ್ಧ ಧರ್ಮ ಇಹಲೋಕದಲ್ಲಿರುವಷ್ಟು ಕಾಲ ನರ ಜೀವಿಗೆ ಕಾಯಾ – ವಾಚಾ – ಮನಸಾ ಲೇಸನೇ ಬಯಸುವ ಮನೋವೈಶಾಲ್ಯಕ್ಕೆ ಪರಮ ಸಾಕ್ಷಿ. ಮರಣದ ನಂತರವೂ ಕೂಡಾ ಈ ದೇಹದಿಂದ ಯಾರ ಬದುಕಲ್ಲಾದರೂ ಬೆಳಕು ಮೂಡುತ್ತದೆ ಎಂದಾದರೆ ಅತ್ತ ಧಾವಿಸುವ ಮನೋವೃತ್ತಿ ಈ ಬೌದ್ಧ ಧರ್ಮದ್ದು, ಮರಣಾನಂತರ ನೀಡುವ ಅಂಗಗಳಿಂದ ಕತ್ತಲ ಜಗತ್ತಿನಲ್ಲಿ ತಡವರಿಸುತ್ತಿರುವ ಜೀವಕ್ಕೆ ಬದುಕು ದೊರೆಯುತ್ತದೆಂದಾದರೆ ನಾವು ಇಂದೇ ಇಂಥ ಮಾನವೀಯ ನಿರ್ಧಾರ ಮಾಡಬಾರದೇಕೆ ?

Karaveeraprabhu-Kyalakonda

ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು
ಕ್ಯಾಲಕೊಂಡ ಆಸ್ಪತ್ರೆ
ಬಾದಾಮಿ. 587201
ಜಿಲ್ಲಾ: ಬಾಗಲಕೋಟೆ
ಮೊ: 94480 36207

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!