ವೈದ್ಯನ ಜೀವ ಮುಖ್ಯ-ಸುರಕ್ಷತೆಗೆ ಆದ್ಯತೆ ನೀಡಿ. ಯೋಚಿಸಿ ನೋಡಿ ನಾವು ನಿರ್ವಹಿಸುವ ಕರ್ತವ್ಯ ನಮ್ಮನ್ನು ಐಸಿಯುಗೆ ಎಳೆಯಬಹುದು ಅಂದರೆ ಹೇಗಿರಬೇಡ. ವೈದ್ಯರಿಗೂ ಸಾವೆಂದರೆ ಭಯ ಎಲ್ಲರಂತೆ, ನಾವೂ ಮನುಷ್ಯರೆ ಅಲ್ಲವೆ …? ನಮಗೂ ಕುಟುಂಬಗಳಿವೆ.
ನಮಗೆ ಗೊತ್ತಿರುವ ಕೆಲ ವೈದ್ಯರು ಹಾಗೂ ವೈದ್ಯ ಸಿಬ್ಬಂದಿ ಕೋವಿಡ್ 19 ಸೋಂಕಿತರಾಗಿ ಐಸಿಯುನಲ್ಲಿ ಕೃತಕ ಉಸಿರಾಟದಲ್ಲಿದ್ದಾರೆ. ಸದ್ಯಕ್ಕೆ ಏನೂ ಹೇಳಲಾಗದ ಪರಿಸ್ಥಿತಿ. ವೈದ್ಯ ಸಮುದಾಯ, ವೈದ್ಯರ ಕುಟುಂಬಗಳಲ್ಲಿ ಸೂತಕದ ಛಾಯೆ. ಇವರೆಲ್ಲರೂ ಹತ್ತು ಹದಿನೈದು ವರ್ಷಕ್ಕೆ ಮೇಲ್ಪಟ್ಟು ವೈದ್ಯ ಸೇವೆ ಸಲ್ಲಿಸಿದವರು.
ವೈದ್ಯರ ಗುಂಪಿನಲ್ಲಿ ಬರುವ ವಿವರಗಳು, ಕಥೆಗಳು ತುಂಬಾ ಸತ್ಯತೆಯಿಂದ ಕೂಡಿರುತ್ತವೆ ಊಹಾಪೋಹಗಳಿಗೆ ಇಲ್ಲಿ ಜಾಗವಿಲ್ಲ. ಸೋಂಕಿತರ ವಿವರ, ಚಿಕಿತ್ಸೆ ನಡೆಯುತ್ತಿರುವ ಆಸ್ಪತ್ರೆ, ಕಾಯಿಲೆಯ ತೀವ್ರತೆ ಎಲ್ಲವೂ ನಿಖರ ವಿವರಗಳೊಂದಿಗೆ ಹಂಚಿಕೆಯಾಗುತ್ತವೆ. ರೋಗಿಯ ರಕ್ತದೊತ್ತಡ, ಶ್ವಾಸಕೋಶಗಳ ಪರಿಸ್ಥಿತಿ, ಉಂಟಾದ ಹಾನಿ, ಕ್ಷಕಿರಣದ ವಿವರದ ಸಮೇತ ವಿವರಗಳು ಕರಾರುವಕ್ಕಾಗಿರುತ್ತವೆ. ನಮ್ಮ ಸಹೋದ್ಯೋಗಿಗಳ ಪರಿಸ್ಥಿತಿ ನೋಡಿ ದುಃಖದ ಜೊತೆ, ಆತಂಕ, ಭಯವೂ ಆಗುತ್ತದೆ. ಯೋಚಿಸಿ ನೋಡಿ ನಾವು ನಿರ್ವಹಿಸುವ ಕರ್ತವ್ಯ ನಮ್ಮನ್ನು ಐಸಿಯುಗೆ ಎಳೆಯಬಹುದು ಅಂದರೆ ಹೇಗಿರಬೇಡ. ವೈದ್ಯರಿಗೂ ಸಾವೆಂದರೆ ಭಯ ಎಲ್ಲರಂತೆ, ನಾವೂ ಮನುಷ್ಯರೆ ಅಲ್ಲವೆ …? ನಮಗೂ ಕುಟುಂಬಗಳಿವೆ.
ವೈದ್ಯನ ಜೀವ ಮುಖ್ಯ-ಸುರಕ್ಷತೆಗೆ ಆದ್ಯತೆ ನೀಡಿ :
ರಾತ್ರೋ ರಾತ್ರಿ ಬ್ರಿಡ್ಜ್ ಕಟ್ಟಿಬಿಡಬಹುದು, ಯುಧ್ದ ಗೆಲ್ಲಬಹುದು, ವಾರ ಹತ್ತುದಿನಗಳಲ್ಲಿ ಬಹುಮಹಡಿ ಆಸ್ಪತ್ರೆ ಕಟ್ಟಬಹುದು. ಆದರೆ ನುರಿತ ವೈದ್ಯನಾಗಲು ಸುಮಾರು ಹತ್ತು ವರ್ಷದ ಓದು ಬೇಕು, ಅಹೋರಾತ್ರಿ, ವಾರ, ತಿಂಗಳುಗಳಲ್ಲಿ ಒಬ್ಬ ವೈದ್ಯ ತಯಾರಾಗುವುದು ಅಸಾಧ್ಯ. ಇಂತಹ ಸಮಯದಲ್ಲಿ ವೈದ್ಯನ ಚಾಣಾಕ್ಷತೆ, ಏಕಾಗ್ರತೆ ಸಾವಿರಾರು ಜನರನ್ನು ಸಾವಿನ ದವಡೆಯಿಂದ ಹೊರಗೆಳೆಯಬಹುದು. ಹಾಗಾಗಿ ಸದ್ಯಕ್ಕೆ ವೈದ್ಯನ ಜೀವದಷ್ಟು ಮುಖ್ಯ ಇನ್ನಾವುದೂ ಅಲ್ಲ.
ಸದ್ಯದ ವಿದ್ಯಮಾನಗಳ ನೋಡಿದಾಗ ತುಂಬ ದುಃಖ ಹಾಗೂ ಭಯವಾಗುತ್ತದೆ . ಸುಮಾರು ಜನ ಪ್ರವಾಸ ಹಾಗೂ ಸೋಂಕಿತರ ಒಡನಾಟದ ಇತಿಹಾಸವನ್ನು ಮರೆಮಾಚುತಿದ್ದಾರೆ. ತೀವ್ರ ತೊಂದರೆಯಾದಾಗ ಮಾತ್ರ ಸತ್ಯವನ್ನು ಬಹಿರಂಗಗೊಳಿಸುತ್ತಾರೆ. ಇಂದು ನಮ್ಮ ಸಹುದ್ಯೋಗಿಯೊಬ್ಬರು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡವನಿಗೆ ಚಿಕಿತ್ಸೆ ನೀಡಿ, ಆತನ ಗಾಯ, ರಕ್ತಗಳನ್ನೆಲ್ಲ ತೊಳೆದು ಮುಗಿಸಿದ ಮೇಲೆ ಸಂಬಂಧಿಯೊಬ್ಬರು ರೋಗಿಯು ಪ್ರತ್ಯೇಕತೆಯಿಂದ ತಪ್ಪಿಸಿಕೊಂಡು ಹೊರಗೋಡಿ ಖಾಲಿ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಸಾಹಸ ಮಾಡಲಿ ಹೋಗಿ ಬಿದ್ದು ತಲೆಒಡೆದುಕೊಂಡ ಕತೆ ಹೇಳುತ್ತಾರೆ…..!! ಇವೆಲ್ಲ ನಿಜಕ್ಕೂ ಅಮಾನವೀಯ ಘಟನೆಗಳು. ವೈದ್ಯರ ಸಂಖ್ಯೆ ಕಡಿಮೆಯಾದಷ್ಟು ತೊಂದರೆ ಹೆಚ್ಚು. ಎಲ್ಲರೂ ದಯವಿಟ್ಟು ವೈದ್ಯ, ದಾದಿ ಇತರೆ ವೈದ್ಯ ಸಿಬ್ಬಂದಿಗಳ ಸುರಕ್ಷತೆಗೆ ಆದ್ಯತೆ ನೀಡಿ.
ಸದ್ಯಕ್ಕೆ ವೈದ್ಯ ಬಿಟ್ಟರೆ ಬೇರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ವೈದ್ಯ ದಾದಿಯರಿಲ್ಲದೆ ಹೇಗಿರಬಹುದು…? ಎಂದು ಒಂದು ಸಲ ಯೋಚೀಸಿ ನೋಡಿ.
ಕೈಗವಸು, ಮಾಸ್ಕು, ಪಿಪಿಈ, ವೈಯುಕ್ತಿಕ ಸುರಕ್ಷತಾ ದಿರಿಸುಗಳ ತೀವ್ರ ಕೊರತೆ ಇದೆ. ಪ್ರವಾಸ, ಸೋಂಕಿತರ ಒಡನಾಟದ ಇತಿಹಾಸಗಳನ್ನು ನಿರ್ಭಿಡೆಯಿಂದ ಹೇಳಿ. ನಿಮ್ಮ ಪ್ರಾಣಗಳ ಜೊತೆ ವೈದ್ಯರ ಪ್ರಾಣಗಳನ್ನು ಉಳಿಸಿ. ಪ್ರತಿಷ್ಠೆಗಾಗಿ ವೈದ್ಯರ ಪ್ರಾಣ ಪಣಕ್ಕಿಡುವುದು ಬೇಡ . ಇರುವ ವೈದ್ಯರೆಲ್ಲ ಸೋಂಕಿತರಾಗಿ ಐಸಿಯು ಸೇರಿದರೆ ದೇವರೆ ಗತಿ. ಯೋಚಿಸಿ…. ವೈದ್ಯರ ಸುರಕ್ಷತೆ ಎಲ್ಲರ ಜವಾಬ್ದಾರಿ.
ಇಂತಹ ಸಮಯದಲ್ಲಿ ಮಾಡಬೇಕಾದುದನ್ನಷ್ಟೆ ಮಾಡಿದರೆ ಅತಿದೋಡ್ಡ ಕೊಡುಗೆ, ಅತಿಯಾಗಿ ಮಾಡಬೇಕಾಗಿಲ್ಲ. ಪ್ರತಿಯೊಬ್ಬರು ಸುರಕ್ಷತಾ ಕ್ರಮಗಳನ್ನು ಪಾಲಿಸಿ, ಸತ್ಯ ಹೇಳಿ ಊಹಾಪೋಹ, ಸುಳ್ಳು ಸುದ್ದಿಗಳನ್ನು ಹಬ್ಬಿಸದಿದ್ದರೆ ಅವರು ಮನುಕುಲಕ್ಕೆ ಮಡುವ ಮಹದುಪಕಾರ. ಒಬ್ಬ ವೈದ್ಯ ತಯಾರಾಗಲು ಹತ್ತು ವರ್ಷಬೇಕು, ಅದೇ ವೈದ್ಯ ಐಸಿಯು ಸೇರಲು ಒಂದು ಬೇಜವಾಬ್ದಾರಿಯ ಸುಳ್ಳು ಸಾಕು. ಇದು ವೈದ್ಯನೊಬ್ಬನ ಅರಿಕೆ.
ಡಾ. ಸಲೀಮ್ ನದಾಫ್
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415