Vydyaloka

ಕರಿ ಮೆಣಸು-ವೈದ್ಯ ಜಗತ್ತಿನ ದಿವ್ಯೌಷಧ

ಕರಿ ಮೆಣಸು-ವೈದ್ಯ ಜಗತ್ತಿನ ದಿವ್ಯೌಷಧ. ಸಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸನ್ನು ವಿವಿಧ ಅಡುಗೆ ಪದಾರ್ಥಗಳಲ್ಲಿ ರುಚಿ ಮತ್ತು ವಾಸನೆಗಾಗಿ ಬಳಸುತ್ತಾರೆ. 

ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಗಳಿಗಾಗಿ ಉಪಯೋಗಿಸುವ ಮೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ ಹಲವಾರು, ರೋಗಗಳಿಗೆ ಉತ್ತಮ ಔಷಧಿಯೂ ಹೌದು. ಸಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸು, ವಾಣಿಜ್ಯ ಪ್ರಪಂಚದಲ್ಲಿ ಕಪ್ಪು ಬಂಗಾರ; ವೈದ್ಯ ಜಗತ್ತಿನಲ್ಲಿ ದಿವ್ಯೌಷಧವೆಂದೂ, ಕಾಳು ಮೆಣಸು, ಕರಿ ಮೆಣಸು ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಇದರ ತವರು ಭಾರತ. ಇಂಡೋನೇಷ್ಯಾ, ಶ್ರೀಲಂಕಾ, ಬ್ರೆಜಿಲ್ ದೇಶಗಳಲ್ಲಿಯೂ ಇದರ ಉತ್ಪನ್ನ ಸಾಕಷ್ಟಿದೆ.

1. ದಕ್ಷಿಣ ರಾಜ್ಯಗಳಲ್ಲಿ, ಅದರಲ್ಲೂ ಕೇರಳದಲ್ಲಿ ವಿಶೇಷವಾಗಿ ಬೆಳೆಯುವ ಇದು ನಮ್ಮ ಭಾರತದ ಒಂದು ಮುಖ್ಯ ವಾಣಿಜ್ಯ ಬೆಳೆ. ಮೆಣಸನ್ನು ವಿವಿಧ ಅಡುಗೆ ಪದಾರ್ಥಗಳಲ್ಲಿ ರುಚಿ ಮತ್ತು ವಾಸನೆಗಾಗಿ ಬಳಸುತ್ತಾರೆ. ಸಾರು, ಸಾಂಬಾರುಗಳ ತಯಾರಿಕೆಯಲ್ಲಿ ಅದರಲ್ಲೂ ಮಾಂಸಹಾರಗಳ ತಯಾರಿಕೆಯಲ್ಲಿ, ಬೇಕರಿ ಪದಾರ್ಥಗಳು ಮತ್ತು ಅನೇಕ ತಂಪು ಪಾನೀಯಗಳ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುತ್ತಾರೆ.

2. ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಗಳಿಗಾಗಿ ಉಪಯೋಗಿಸುವ ಮೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ ಹಲವಾರು, ರೋಗಗಳಿಗೆ ಉತ್ತಮ ಔಷಧಿಯೂ ಹೌದು.

3. ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಮೆಣಸನ್ನು ಮರಿಚ, ಶ್ಯಾಮ, ವಲ್ಲಿಜ, ಕೋಲ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಕಟು (ಖಾರ) ತಿಕ್ತ (ಕಹಿ) ರಸಗಳುಳ್ಳ ಇದು ಉಷ್ಣ ವೀರ್ಯವುಳ್ಳದ್ದಾಗಿದ್ದು ಕಫ ಮತ್ತು ವಾತ ದೋಷಗಳನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ತೀಕ್ಷ್ಣ ಮತ್ತು ರೂಕ್ಷ ಗುಣಗಳುಳ್ಳ ಇದು, ಸ್ವಲ್ಪ ಪ್ರಮಾಣದಲ್ಲಿ ಪಿತ್ತವನ್ನು ಹೆಚ್ಚು ಮಾಡುತ್ತದೆ.

4. ಅಗ್ನಿ ಮಾಂದ್ಯ, ಅಜೀರ್ಣ, ಶ್ವಾಸಕಾಸ ಮುಂತಾದ ಅನೇಕ ರೋಗಗಳಲ್ಲಿ ಉಪಯೋಗಕ್ಕೆ ಬರುವ ಮೆಣಸು ಒಂದು ಉತ್ತಮ ಶೂಲ (ನೋವು) ನಿವಾರಕ ಹಾಗೂ ಜಂತು ನಾಶಕವಾಗಿದೆ.

5. ಮೆಣಸು, ಶುಂಠಿ, ಹಿಪ್ಪಲಿ ಇವು ಮೂರನ್ನು ಒಟ್ಟಿಗೆ ಕೂಡಿಸಿ, ತ್ರಿಕಟು ಎಂದು ಕರೆಯುತ್ತಾರೆ. ಒಳ್ಳೆಯ ದೀಪನ, ಪಾಚನ ಹಾಗೂ ಜೀರ್ಣಕಾರಕವಾಗಿರುವ ತ್ರಿಕಟು ಚೂರ್ಣವನ್ನು ಅನೇಕ ಔಷಧಿಗಳ ತಯಾರಿಕೆಯಲಿ ಬಳಸುತ್ತಾರೆ.

ಔಷಧಿಯಾಗಿ ಮೆಣಸು :
 
1. ಕೆಮ್ಮು ಮತ್ತು ಕಫ: ರೋಗಗಳಲ್ಲಿ 100ರಿಂದ 250 ಮಿಗ್ರಾಂ. ಕಾಳು ಮೆಣಸಿನ ಚೂರ್ಣವನ್ನು ಅರ್ಧ ಚಮಚ ತುಪ್ಪ ಒಂದು ಚಮಚ ಜೇನುತುಪ್ಪ ಸೇರಿಸಿ ತಿಂದ ಮೇಲೆ, ಒಂದು ಲೋಟ ಬಿಸಿಯಾದ ಹಾಲಿಗೆ ಸ್ವಲ್ಪ ಅರಿಶಿನದ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ತೆಗೆದುಕೊಂಡರೆ ಕಟ್ಟಿರುವ ಕಫವು ಕರಗಿ, ಕೆಮ್ಮು ಕಡಿಮೆಯಾಗುತ್ತದೆ. ಶೀತ ನೆಗಡಿಗಳು ದೂರವಾಗುತ್ತವೆ.
2. ನಿಶಾಂಧತೆ: ಕೆಲವರಿಗೆ ಹಗಲು ಹೊತ್ತಿನಲ್ಲಿ ಕಣ್ಣಿನ ದೃಷ್ಟಿ ಚೆನ್ನಾಗಿ ಇದ್ದು, ರಾತ್ರಿಯಾದ ಕೂಡಲೇ ಕಣ್ಣು ಕಾಣಿಸದಂತಾಗುತದೆ. ಇದಕ್ಕೆ ನಿಶಾಂಧತೆ ಅಥವಾ ರಾತ್ರಿ ಕುರುಡು ಎನ್ನುತ್ತಾರೆ. ಮೆಣಸಿನ ಕಾಳನ್ನು ಮೊಸರಿನ ತಿಳಿಯಲ್ಲಾಗಲಿ ಅಥವಾ ಎದೆಯ ಹಾಲಿನಲ್ಲಾಗಲಿ ತೇದು ಅಂಜನದಲ್ಲಿ ಕಣ್ಣಿಗೆ ಹಚ್ಚಿದರೆ ನಿಶಾಂಧತೆ ದೂರವಾಗುತ್ತದೆ. ಮೆಣಸು ಬಹಳ ತೀಕ್ಷ್ಣಗುಣ ಉಳ್ಳದ್ದಾಗಿರುವುದರಿಂದ, ಕಣ್ಣಿಗೆ ಹಚ್ಚಿದಾಗ, ಕಣ್ಣಿನಲ್ಲಿ ಅತಿಯಾದ ಉರಿಯುಂಟಾಗುತ್ತದೆ. ಆದುದರಿಂದ  ಇದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಅತಿ ಎಚ್ಚರಿಕೆಯಿಂದ ಹಚ್ಚಬೇಕು. ವೈದ್ಯರ ಸಲಹೆಯನ್ನು ಪಡೆದು ಈ ಚಿಕಿತ್ಸೆಯನ್ನು ಮಾಡುವುದು ಒಳ್ಳೆಯದು.
3. ಪೀನಸ ರೋಗದಲ್ಲಿ: ನೆಗಡಿ ಮತ್ತ ಶೀತ ಬಹಳ ದಿನಗಳವರೆಗೆ ವಾಸಿಯಾಗದಿದ್ದರೆ ಹಾಗೂ ಮೂಗಿನಿಂದ ಗಟ್ಟಿಯಾದ ಸಿಂಬಳ  ಸೋರುವುದು, ಮೂಗು ಕಟ್ಟಿ ಉಸಿರಾಟಕ್ಕೆ ತೊಂದರೆ ಮತ್ತು ಕಣ್ಣಿನ ಉಬ್ಬಿನ ಜಾಗ್ರದಲ್ಲಿ ನೋವು, ಭಾರ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇದನ್ನು ದುಷ್ಟಪೀನಸ ಎಂದು ಕರೆಯುತ್ತಾರೆ. ಈ ರೋಗ ಹಳೆಯದಾದಾಗ ಮೂಗಿಗೆ ವಾಸನೆ ಸಹ ಗೊತ್ತಾಗುವುದಿಲ್ಲ. ಇಂತಹ ಸಮಯದಲ್ಲಿ ಕಾಳು ಮೆಣಸಿನ ಚೂರ್ಣವನ್ನು ಬೆಲ್ಲ ಮತ್ತು ಹಸುವಿನ ಮೊಸರಿನಲ್ಲಿ ಸೇವಿಸುವುದು ಉತ್ತಮ.
4. ಕಫ ಮತ್ತು ಶೀತಜ್ವರದಲ್ಲಿ: ಅನೇಕರಿಗೆ ಮಳೆಯಲ್ಲಿ ನೆನೆಯುವುದರಿಂದ ಶೀತ, ನೆಗಡಿ, ಕೆಮ್ಮು, ತಲೆನೋವು, ಜ್ವರ ಉಂಟಾಗುತ್ತದೆ. ಆಗ ಮೆಣಸು, ಶುಂಠಿ, ಜೀರಿಗೆಗಳನ್ನು1:2:3ರ ಪ್ರಮಾಣದಲ್ಲಿ ಸೇರಿಸಿ ಕಷಾಯವನ್ನು ತಯಾರಿಸಿ ಅದಕ್ಕೆ ಬೆಲ್ಲ ಸೇರಿಸಿ ಸೇವಿಸಿದರೆ ಕಫ ಮತ್ತು ಶೀತದಿಂದ ಉಂಟಾದ ಜ್ವರ ಕಡಿಮೆಯಾಗುತ್ತದೆ. ಕೆಲವು ವೇಳೆ ಅಲರ್ಜಿಯಿಂದ ಗಂಟಲು ಕೆರತ, ಕೆಮ್ಮುಗಳು ಉಂಟಾಗುತ್ತದೆ. ಶೀತದಿಂದ ಹೆಚ್ಚಾಗುವ ಈ ಕೆಮ್ಮು ರಾತ್ರಿಯಲ್ಲಿ ಉಲ್ಬಣಗೊಂಡು ನಿದ್ದೆಗೆ ತೊಂದರೆಯನ್ನು ಉಂಟುಮಾಡುತ್ತದೆ. ಆಗ ಎರಡು ಮೆಣಸಿನಕಾಳನ್ನು ಒಂದೆರಡು ಹರಳು ಉಪ್ಪನ್ನು ಸೇರಿಸಿ ದವಡೆಯಲ್ಲಿ ಇಟ್ಟುಕೊಂಡು ರಸವನ್ನು ನುಂಗುತ್ತಿದ್ದರೆ ಗಂಟಲು ಕೆರೆತ ಮತ್ತು ನೋವು ಕಡಿಮೆಯಾಗಿ ಕೆಮ್ಮು ನಿಲ್ಲುತ್ತದೆ. ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.
5. ಮೆಣಸಿನ ಶುದ್ಧಿ: ಔಷಧಿಗಳಲ್ಲಿ ಉಪಯೋಗ ಮಾಡುವ ಮೊದಲು ಇದನ್ನು ಶುದ್ಧಿ ಮಾಡಿಕೊಳ್ಳುವುದು ಒಳ್ಳೆಯದು. ಕಾಳು ಮೆಣಸನ್ನು ಹುಳಿ ಮಜ್ಜಿಗೆಯಲ್ಲಿ ಮೂರು ದಿನ ನೆನಸಿ ಇಟ್ಟು ಅನಂತರ ತೆಗೆದು ಉಪಯೋಗಿಸಿದರೆ ಉತ್ತಮ ಗುಣ ದೊರಕುತ್ತದೆ, ಆಯುರ್ವೇದ ವೈದ್ಯರು ಹಲವಾರು ಚೂರ್ಣ, ಲೇಹ ಕಷಾಯ, ಅಸವ, ಅರಿಷ್ಠ, ಘೃತ, ತೈಲ ಮುಂತಾದ ವಿವಿಧ ಬಗೆಯ ಅಮೂಲ್ಯ ಔಷಧಿಗಳನ್ನು ತಯಾರಿಸಲು ಉಪಯೋಗಿಸುವರು.
ಡಾ|| ಮಂಜುಶ್ರೀ
ಪೂರ್ಣಾಯು ಕ್ಲಿನಿಕ್, ಎನ್‌ಹೆಚ್ 66,
ಶಾನ್‌ಬಾನ್ ಟ್ರೇಡರ‍್ಸ ಎದುರು, ತಡಂಬೈಲು
ಸುರತ್ಕಲ್-575014 ದೂ:9482249762
Share this: