Vydyaloka

ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ ಸಂಧಿಗಳಲ್ಲಿ ನೋವು

ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ.ಈ ರೀತಿ ಪದೇ ಪದೇ ಆಗುತ್ತಿದ್ದರೆ ಮುಂದೆ ಇದು ಸಂಧಿ ಪೂರ್ತಿಯಾಗಿ ಹಾಳಾಗಲು ಅಥವಾ ಸಂಧಿ ವಕ್ರವಾಗಲು ಕಾರಣವಾಗಬಹುದು.

ನಮಗೆ ಸಂಧಿಗಳಲ್ಲಿ ನೋವು ಇರುವಾಗ ಬಹಳಷ್ಟು ಬಾರಿ ವೈದ್ಯರು ಯೂರಿಕ್ ಆಸಿಡ್ ಎಂಬ ರಕ್ತ ಪರೀಕ್ಷೆಯನ್ನು ಮಾಡಿಸಲು ಹೇಳುತ್ತಾರೆ. ಏಕೆಂದರೆ ರಕ್ತದಲ್ಲಿ ಯೂರಿಕ್ ಆಸಿಡ್ ನ ಪ್ರಮಾಣ ಹೆಚ್ಚಾಗುವುದರಿಂದ ದೇಹದ ಹಲವು ಸಂಧಿಗಳಲ್ಲಿ ಅಥವಾ ಕೆಲವು ಮಾಂಸ ಖಂಡಗಳು ಅಥವಾ ಸಂಧಿಯ ಅಕ್ಕಪಕ್ಕದಲ್ಲಿರುವ ಖಾಲಿ ಜಾಗಗಳಲ್ಲಿ ಉರಿಯೂತ ಮತ್ತು ನೋವು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ಯೂರಿಕ್ ಆಸಿಡ್ ಹೆಚ್ಚಾಗಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಯೂರಿಕ್ ಆಸಿಡ್ ಏಕೆ ಹೆಚ್ಚಾಗುತ್ತದೆ?

ಯೂರಿಕ್ ಆಸಿಡ್ ಏಕೆ ಹೆಚ್ಚಾಗುತ್ತದೆ? ಅದನ್ನು ಕಡಿಮೆ ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳೇನು ಮತ್ತು ಪಾಲಿಸಬೇಕಾದ ಪಥ್ಯವೇನು ಎಂಬುದನ್ನು ತಿಳಿದುಕೊಳ್ಳೋಣ. ನಮ್ಮ ರಕ್ತದಲ್ಲಿ ಯೂರಿಕ್ ಆಸಿಡ್ ಪ್ರಮಾಣವು ಪ್ಯೂರಿನ್ ತಯಾರಾಗುವಿಕೆ ಮತ್ತು ಯೂರಿಕ್ ಆಸಿಡ್ ನಮ್ಮ ದೇಹದಿಂದ ಕಿಡ್ನಿ ಮತ್ತು ಕರಳುಗಳ ಮೂಲಕ ಹೊರ ಹೋಗುವ ಪ್ರಮಾಣದ ಮೇಲೆ ಅವಲಂಬಿತವಾಗಿದೆ. ಯೂರಿಕ್ ಆಸಿಡ್ ಹೆಚ್ಚಿರುವ ನೂರರಲ್ಲಿ 75 ಜನರಿಗೆ ಅನುವಂಶೀಯ ಕಾರಣಗಳಿಂದಾಗಿ ದೇಹವು ಯೂರಿಕ್ ಆಸಿಡ್ ಅನ್ನು ಹೊರಹಾಕುವುದನ್ನು ಕಡಿಮೆ ಮಾಡುತ್ತದೆ. ಇನ್ನು 25% ಜನರಲ್ಲಿ ಯೂರಿಕ್ ಆಸಿಡ್ ನ ತಯಾರಿಕೆ ಹೆಚ್ಚಾಗಿ ರಕ್ತದಲ್ಲಿ ಅದರ ಪ್ರಮಾಣವು ಅಧಿಕವಾಗುತ್ತದೆ.

ಯೂರಿಕ್ ಆಸಿಡ್ ನಿಂದಾಗಿ ಗೌಟಿ ಆರ್ಥ್ರೈಟಿಸ್

ಹೆಚ್ಚಾದ ಯೂರಿಕ್ ಆಸಿಡ್ ನಿಂದಾಗಿ ಗೌಟಿ ಆರ್ಥ್ರೈಟಿಸ್ (Gouty Arthritis) ಉಂಟಾಗುತ್ತದೆ. ಮುಕ್ಕಾಲು ಭಾಗ ಜನರಿಗೆ ಕಾಲಿನ ಹೆಬ್ಬೆರಳಿನಲ್ಲಿಯೇ ಮೊದಲು ನೋವು ಕಾಣಿಸಿಕೊಳ್ಳುತ್ತದೆ. ಉಳಿದವರಿಗೆ ಮೊಣಕಾಲು, ಹಸ್ತ ಅಥವಾ ಪಾದದ ಚಿಕ್ಕ ಸಂಧಿಗಳಲ್ಲಿ ಮೊದಲು ನೋವು, ಊತ, ಬಿಸಿ ಮತ್ತು ಕೆಂಪಗಾಗುತ್ತದೆ. ಕೆಲವೊಮ್ಮೆ ಯಾವುದೇ ಮುನ್ಸೂಚನೆ ಇಲ್ಲದೇ ಕೆಲವೇ ಕ್ಷಣಗಳಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಈ ರೀತಿ ಪದೇ ಪದೇ ಆಗುತ್ತಿದ್ದರೆ ಮುಂದೆ ಇದು ಸಂಧಿ ಪೂರ್ತಿಯಾಗಿ ಹಾಳಾಗಲು ಅಥವಾ ಸಂಧಿ ವಕ್ರವಾಗಲು ಕಾರಣವಾಗಬಹುದು. ಹಾಗಾಗಿ ಇದನ್ನು ಬೇಗ ಗುಣಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲೇಬೇಕು.

1. ಈ ಸಮಸ್ಯೆಗೆ ಅಮೃತಬಳ್ಳಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಅಮೃತಬಳ್ಳಿಯ ಕಷಾಯವನ್ನು ಕುಡಿಯುವುದರಿಂದ ತೀವ್ರತರವಾದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ವಾರಕ್ಕೆ ಒಂದೆರಡು ದಿನ ಅಮೃತಬಳ್ಳಿಯ ಕಷಾಯವನ್ನು ಕುಡಿಯುತ್ತಿದ್ದರೆ ಪದೇಪದೇ ತೊಂದರೆಯಾಗುವುದನ್ನು ತಪ್ಪಿಸಬಹುದು.

2. ಉರಿಯೂತವನ್ನು ಕಡಿಮೆ ಮಾಡುವ ಮತ್ತು ಸಂಧಿಗಳ ತೊಂದರೆಗಳನ್ನು ನಿವಾರಿಸುವ ಶುಂಠಿಯನ್ನು ಕಷಾಯ ಮಾಡುವಾಗ ಸೇರಿಸಿದರೆ ಅದರ ಗುಣ ಇನ್ನೂ ಚೆನ್ನಾಗಿ ವೃದ್ಧಿಯಾಗುತ್ತದೆ. ಹಾಗಾಗಿ ಆಗಾಗ ಅಮೃತಬಳ್ಳಿ ಮತ್ತು ಶುಂಠಿಯ ಕಷಾಯವನ್ನು ಸೇವಿಸುತ್ತಿರಬೇಕು.

3. ಪಂಚಕರ್ಮ ಚಿಕಿತ್ಸೆಗಳಾದ ವಿರೇಚನ ಮತ್ತು ಬಸ್ತಿ ಚಿಕಿತ್ಸೆಗಳು ತೀವ್ರತರವಾದ ಮತ್ತು ದೀರ್ಘಕಾಲದಿಂದ ಇರುವ ಸಮಸ್ಯೆಗಳನ್ನು ನಿವಾರಿಸುತ್ತವೆ.

4. ಅಣಲೇ ಕಾಯಿಯ ಅರ್ಧ ಚಮಚ ಪುಡಿಯನ್ನು ಮಲಗುವ ಮೊದಲು ಬಿಸಿನೀರಿಗೆ ಹಾಕಿ ಸೇವಿಸಿದರೆ ಅದು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಒಂದೆರಡು ಬಾರಿ ಭೇದಿಯೂ ಆಗಬಹುದು.

5. ನಾವು ನಿಸರ್ಗ ಮನೆಯಲ್ಲಿ ಯೂರಿಕ್ ಆಸಿಡ್ ಕಷಾಯ ಎಂಬ ವಿಶೇಷ ಆಯುರ್ವೇದ ಔಷಧವನ್ನು ಕೊಟ್ಟು ಇದರ ಸಮಸ್ಯೆಯನ್ನು ಕಡಿಮೆ ಮಾಡುತ್ತೇವೆ.

ಪಥ್ಯ ತುಂಬಾ ಮಹತ್ವದ್ದು

ಈ ಸಮಸ್ಯೆಯಲ್ಲಿ ಪಥ್ಯ ಕೂಡ ತುಂಬಾ ಮಹತ್ವದ್ದು. ಪ್ಯೂರಿನ್ ಹೆಚ್ಚಿರುವ ಆಹಾರ ಪದಾರ್ಥಗಳನ್ನು ತ್ಯಜಿಸಲೇಬೇಕು. ಎಲ್ಲ ರೀತಿಯ ಮಧ್ಯಪಾನ, ಎಲ್ಲಾ ರೀತಿಯ ಮಾಂಸಹಾರ, ಹೂಕೋಸು, ಮಶ್ರೂಮ್, ಶೇಂಗಾ ಮುಂತಾದವುಗಳನ್ನು ಮೂರು ತಿಂಗಳ ಕಾಲ ತ್ಯಜಿಸಬೇಕು. ಮೊಟ್ಟೆಗಳನ್ನು ಸೇವಿಸಬಹುದು. ಬಾದಾಮಿ, ಅಂಜೂರ ಅಥವಾ ಗೋಡಂಬಿಯಂತಹ ನಟ್ ಗಳಲ್ಲಿ ಪ್ಯೂರಿನ್ ಇರುವುದಿಲ್ಲ. ಬಹುತೇಕ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಸೇವಿಸಬಹುದು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪ್ರೋಟೀನ್ ಎಂಬ ಕಾರಣಕ್ಕೆ ತುಂಬಾ ಜನ ಯೂರಿಕ್ ಆಸಿಡ್ ಸಮಸ್ಯೆಯಲ್ಲಿ ತ್ಯಜಿಸುತ್ತಾರೆ. ಆದರೆ ಇವುಗಳಲ್ಲಿ ಪ್ಯೂರಿನ್ ಇಲ್ಲದ ಕಾರಣ ಇವುಗಳನ್ನು ಸೇವಿಸಬಹುದು.

Also read: ಜಲ ಚಿಕಿತ್ಸೆ

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this: