Vydyaloka

ಮಹಾಶಿವರಾತ್ರಿ ಹಬ್ಬ – ವೈದ್ಯಕೀಯ ಪ್ರಯೋಜನಗಳು

ಮಹಾಶಿವರಾತ್ರಿ ಹಬ್ಬ  ಆಚರಣೆಗಳು ನಮ್ಮ ದೇಹವನ್ನು ಚಳಿಗಾಲದಿಂದ ಬೇಸಿಗೆಯ ಕಾಲಕ್ಕೆ ಹೊಂದಿಕೊಂಡು
ಆರೋಗ್ಯವಾಗಿ ಜೀವಿಸಲು ಇರುವ ಕ್ರಮಗಳು. ಶಿವರಾತ್ರಿಯು ರಾತ್ರಿಯಲ್ಲಿ ಆಚರಿಸುವ ಹಬ್ಬ. ಸಂಪೂರ್ಣ ಶುದ್ಧಭಾವ, ಧಾರ್ಮಿಕ ಕಟ್ಟುಪಾಡು, ಪ್ರಾಮಾಣಿಕತೆ ಮತ್ತು ಮನೋನಿಗ್ರಹದಿಂದ ರಾತ್ರಿಯಲ್ಲಿ ಶಿವನನ್ನು ಕುರಿತು ಪೂಜಿಸುವ ಹಬ್ಬ.

ಹಿಂದುಗಳು ವರುಷದಲ್ಲಿ ಒಂದು ಸಲ ಆಚರಿಸುವ, ಶಿವನನ್ನು ಆರಾಧಿಸುವ ಹಬ್ಬ ಮಹಾಶಿವರಾತ್ರಿ. ಚಂದ್ರನ ಗತಿಯನ್ನು ಆಧಾರವಾಗಿಟ್ಟುಕೊಂಡು, ಪ್ರತಿ ತಿಂಗಳು ಕೃಷ್ಣಪಕ್ಷದ 13ನೇ ತ್ರಯೋದಶಿ ಮತ್ತು 14ನೇ ದಿವಸದ ಚರ್ತುದಶಿಯ ನಡುವೆ ಬರುವ ರಾತ್ರಿಯನ್ನು ಶಿವರಾತ್ರಿ ಎಂದು ಕರೆಯುತ್ತೇವೆ. ಪ್ರತಿ ವರುಷ 12 ಶಿವರಾತ್ರಿಗಳು ಬರುತ್ತವೆ. ಪ್ರತಿ ವರ್ಷ ಚಳಿಗಾಲವು ಮುಗಿದು ಬೇಸಿಗೆಯ ಕಾಲದ ಆರಂಭದಲ್ಲಿ ಆಚರಿಸುವ ಶಿವರಾತ್ರಿಯನ್ನು ಮಹಾಶಿವರಾತ್ರಿ ಎಂದು ಆಚರಿಸುತ್ತೇವೆ. ಈ ವರುಷ ಮಾರ್ಚ್ 04, ಸೋಮವಾರ ಮಹಾಶಿವರಾತ್ರಿಯನ್ನು ಭಾರತೀಯರು ಆಚರಿಸುತ್ತೇವೆ. ಹಿಂದುಗಳು ಹಬ್ಬವನ್ನು ಹಗಲು ಆಚರಿಸುತ್ತಾರೆ. ಶಿವರಾತ್ರಿಯು ರಾತ್ರಿಯಲ್ಲಿ ಆಚರಿಸುವ ಹಬ್ಬ. ಸಂಪೂರ್ಣ ಶುದ್ಧಭಾವ, ಧಾರ್ಮಿಕ ಕಟ್ಟುಪಾಡು, ಪ್ರಾಮಾಣಿಕತೆ ಮತ್ತು ಮನೋನಿಗ್ರಹದಿಂದ ರಾತ್ರಿಯಲ್ಲಿ ಶಿವನನ್ನು ಕುರಿತು ಪೂಜಿಸುವ ಹಬ್ಬ.

ಶಿವರಾತ್ರಿಯ ಆಚರಣೆಗಳು:

ಸಮುದ್ರ ಮಂಥನ:

ದೇವತೆಗಳು ಮತ್ತು ರಾಕ್ಷಸರು ಕ್ಷೀರಸಾಗರವನ್ನು ಕಡೆದು ಸಾಗರದ ಗರ್ಭದಲ್ಲಿರುವ ಶ್ರೇಷ್ಟ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ವಿಚಾರ ಮಾಡುತ್ತಾರೆ. ದೇವತೆಗಳು ಮತ್ತು ರಾಕ್ಷಸರು ವಿಷ್ಣುವಿನ ಸಲಹೆ ಕೇಳಲು ವಿಷ್ಣುವು “ಮಂದಾರ ಪರ್ವತವನ್ನು ಕಡಗೋಲು ಮಾಡಿ ವಾಸುಕಿ ಸರ್ಪವನ್ನು ಹಗ್ಗದಂತೆ ಸುತ್ತಿರಿ. ನಾನು ಕೂರ್ಮ ಅವತಾರ ತಾಳಿ ಮಂದಾರ ಪರ್ವತವನ್ನು ಎತ್ತಿ ಹಿಡಯುತ್ತೇನೆ. ಸಮುದ್ರ ಮಂಥನದಲ್ಲಿ ನಿಮಗೆ ಬೇಕಾದ ಶ್ರೇಷ್ಟ ವಸ್ತುಗಳು ದೊರಕುತ್ತವೆ” ಎಂದು ತಿಳಿಸಿದನು. ಸಮುದ್ರ ಮಂಥನ ಆರಂಭಿಸಿದರು. ಮೊದಲು ಉತ್ಪನ್ನವಾದದ್ದು ಹಾಲಾ ಹಲ ಎಂಬ ಭಯಂಕರ ವಿಷ. ವಿಷದ ಹೊಗೆಯಿಂದ ಜಗತ್ತು, ದೇವತೆಗಳು ಮತ್ತು ರಾಕ್ಷಸರು ಭಯದಿಂದ ತತ್ತರಿಸಿ ಶಿವನಲ್ಲಿ ತಮ್ಮನ್ನು ರಕ್ಷಿಸಲು ಮೊರೆಯಿಡುತ್ತಾರೆ.

ಶಿವನು ಹಾಲಾಹಲ ವಿಷವನ್ನು ಕುಡಿದು ಬಿಡಲು ಪಾರ್ವತಿಯು ಶಿವನ ಕಂಠವನ್ನು ಒತ್ತಿ ಹಿಡಿಯಲು ವಿಷವು ಕಂಠದಲ್ಲಿಯೇ ಉಳಿದು ಬಿಟ್ಟಿತು. ಪರಿಣಾಮದಿಂದ ಶಿವನ ಕಂಠವು ನೀಲಿಯಾಯಿತು. ಅಂದಿನಿಂದ ಶಿವನನ್ನು ನೀಲಕಂಠ ಮತ್ತು ವಿಷಕಂಠ ಎಂದು ಕರೆಯುತ್ತಾರೆ. ಶಿವನು ಜಗತ್ತನ್ನು ರಕ್ಷಿಸಲು ಸಂಪೂರ್ಣ ವಿಷವನ್ನು ಕುಡಿದ ಕಾರಣ ವಿಷದ ಪ್ರಭಾವದಿಂದ ಶಿವನಿಗೆ ಏನು ಆಗುತ್ತದೆ ಎಂದು ಗಾಬರಿಯಿಂದ ಕಳೆದ ರಾತ್ರಿಯೇ ಮಹಾಶಿವರಾತ್ರಿ. ಶಿವನು ವಿಷವನ್ನು ತನ್ನ ಕಂಠದಲ್ಲಿಟ್ಟುಕೊಂಡು ಜಗತ್ತನ್ನು ರಕ್ಷಿಸಿದ ಕಾರಣ, ಜನರು ಮಹಾಶಿವರಾತ್ರಿ – ದಿವಸ ಶಿವನನ್ನು ಪೂಜಿಸುತ್ತಾರೆ. ರಾತ್ರಿಯ ವೇಳೆಯಲ್ಲಿ ಶಿವ ಪ್ರಾರ್ಥನೆ ಮಾಡುತ್ತಾರೆ.

ಪುರಾಣದಲ್ಲಿ ಬರುವ ಮತ್ತೊಂದು ಪ್ರಸಂಗ :

ಬ್ರಹ್ಮ ಮತ್ತು ವಿಷ್ಣುವಿನಲ್ಲಿ ನಾನು ದೊಡ್ಡವನು ಎಂಬ ಭಾವನೆ ಬೆಳೆದು ಇಬ್ಬರು ಭೀಷಣ ಯುದ್ಧ ಮಾಡಲು, ಆ ಯುದ್ಧದ ಪ್ರಭಾವದಿಂದ ಜಗತ್ತಿನ ಜೀವರಾಶಿಗಳ ಮೇಲೆ ದುಪ್ಷರಿಣಾಮ ಬೀರಲು ದೇವತೆಗಳು ಶಿವನಲ್ಲಿ ಪ್ರಾರ್ಥನೆ ಮಾಡಿ ಯುದ್ಧವನ್ನು ನಿಲ್ಲಿಸಲು ವಿನಂತಿಸಿಕೊಂಡರು. ಶಿವನು ವಿಶಾಲವಾದ ಅಗ್ನಿ ಸ್ತಂಭರೂಪ ತಾಳಿ ಬ್ರಹ್ಮ ಮತ್ತು ವಿಷ್ಣುವಿನ ಮಧ್ಯೆ ನಿಂತರು. ವಿಷ್ಣು ಮತ್ತು ಬ್ರಹ್ಮ ಯಾರು ಶ್ರೇಷ್ಟರು ಅವರು ಈ ಅಗ್ನಿ ಸ್ತಂಭದ ತಳ ಮತ್ತು ತುದಿಯನ್ನು ಮುಟ್ಟಿ ಬರಬೇಕು ಎಂದು ತೀರ್ಮಾನಿಸಿದರು. ವಿಷ್ಣುವು ವರಹ ರೂಪ ತಾಳಿ ಸ್ತಂಭದ ಬುಡಕ್ಕೆ ನೂರಾರು ಕಿಲೋಮೀಟರ್ ಕೆಳಗೆ ಹೋದರೂ ವಿಷ್ಣುವಿಗೆ ತಳ ಸಿಗಲಿಲ್ಲ. ವಿಷ್ಣುವು ತನ್ನ ಸೋಲು ಒಪ್ಪಿಕೊಂಡರು.

ಬ್ರಹ್ಮ ದೇವರು ಹಂಸದ ರೂಪ ತಾಳಿ ಅಗ್ನಿ ಸ್ತಂಭದ ತುದಿಯನ್ನು ಮುಟ್ಟಲು ನೂರಾರು ಕಿಲೋ ಮೀಟರ್ ಹಾರಿದರೂ ತುದಿಯು ಸಿಗಲಿಲ್ಲ. ಆ ಸಮಯದಲ್ಲಿ ಕೇದಗೆಯ ಹೂ ಕೆಳಗೆ ಬೀಳುತ್ತಿತ್ತು. ಕೇದಗೆಯನ್ನೇ ಬ್ರಹ್ಮನು ಮಾತನಾಡಿಸಲು, ನನ್ನನ್ನು ಈ ಅಗ್ನಿ ಸ್ತಂಭದ ಮೇಲೆ ಅರ್ಪಿಸಿದ್ದರು. ಅಗ್ನಿಯ ಬಿಸಿಯನ್ನು ತಾಳಲಾರದೆ ನಾನು ಕೆಳಗೆ ಬರುತ್ತಿದ್ದೇನೆ ಎಂದು ಕೇದಗೆ ಹೂ ಹೇಳಿತು. ಬ್ರಹ್ಮ ದೇವರು ನಾನು ನಿನ್ನನ್ನು ಸಾಕ್ಷಿ ಎಂದು ಎಲ್ಲರಿಗೂ ತೋರಿಸಿ ನಾನು ತುದಿಯನ್ನು ಮುಟ್ಟಿ ಬಂದಿದ್ದೇನೆ ಎಂದು ಸುಳ್ಳು ಹೇಳುತ್ತೇನೆ ನೀನು ಒಪ್ಪಬೇಕು ಎಂದು ಒಪ್ಪಿಸಿದರು. ಅದೇ ರೀತಿ ಎಲ್ಲರಿಗೂ ತಿಳಿಸಿದರು. ಶಿವನು ತನ್ನ ಮೂಲ ರೂಪವನ್ನು ತೋರಿಸಿ ಬ್ರಹ್ಮನಿಗೆ ಮತ್ತು ಕೇದಗೆಯ ಹೂವಿಗೆ ಭೂಲೋಕದಲ್ಲಿ ನಿಮ್ಮ ಪೂಜೆ ಇಲ್ಲ ಎಂದು ಶಾಪಕೊಟ್ಟರು. ವಿಷ್ಣುವು ತನ್ನ ಸೋಲು ಒಪ್ಪಿಕೊಂಡಿದ್ದರಿಂದ ಶಿವನು ವಿಷ್ಣುವಿಗೆ ಭೂಲೋಕದಲ್ಲಿ ನನ್ನ ಹಾಗೆ ನೀನು ಕೂಡ ಪೂಜಿಸಲ್ಪಡುವೆ ಎಂದು ಹಾರೈಸಿದ ದಿವಸವೇ ಶಿವರಾತ್ರಿ.

ಲುಬ್ದಕನ ವೃತ್ತಾಂತ :

ಲುಬ್ದಕನು ಒಬ್ಬ ಬಡವ, ಬುಡಕಟ್ಟಿನ ಮನುಷ್ಯ. ಒಣ ಕಟ್ಟಿಗೆಗಳನ್ನು ಸಂಗ್ರಹಿಸಲು ಕಾಡಿಗೆ ಹೋದನು. ಕಾಡಿನಲ್ಲಿ ದಾರಿ ತಪ್ಪಿಸಿಕೊಂಡು ರಾತ್ರಿ ಕಾಡಿನಲ್ಲಿಯೇ ಉಳಿಯಬೇಕಾಯಿತು. ಕಾಡಿನಲ್ಲಿ ಕಾಡು ಪ್ರಾಣಿಗಳ ಘರ್ಜನೆಯನ್ನು ಕೇಳಿ ಭಯಗೊಂಡು ಸಮೀಪದಲ್ಲಿ ಇದ್ದ ಮರವನ್ನು ಹತ್ತಿ ಕುಳಿತನು. ರಾತ್ರಿ ಸಮಯದಲ್ಲಿ ತನಗೆ ನಿದ್ರೆ ಬಂದು ಕೆಳಗೆ ಬಿದ್ದರೆ ಎಂದು ಅಂಜಿಕೊಂಡು ಶಿವನ ಧ್ಯಾನ “ಓಂ ನಮಃ ಶಿವಾಯ’’ ಎಂದು ಹೇಳುತ್ತ ಆ ಮರದಲ್ಲಿ ಇದ್ದ ಒಂದೊಂದೇ ಎಲೆಯನ್ನು ಕಿತ್ತು ಕೆಳಗೆ ಹಾಕುತ್ತಿದ್ದನು. ಬೆಳಗಿನ ವೇಳೆ ಗಿಡದಿಂದ ಕೆಳಗೆ ಇಳಿದಾಗ ತಾನು ಗಿಡದ ಎಲೆಗಳನ್ನು ಕಿತ್ತು ಕೆಳಗೆ ಹಾಕುತಿದ್ದದ್ದು ಶಿವಲಿಂಗದ ಮೇಲೆ ಎಂದು ತಿಳಿದು ಭಕ್ತಿಯಿಂದ ಶಿವಲಿಂಗಕ್ಕೆ ನಮಸ್ಕರಿಸಿದನು. ಶಿವನು ಸಂತೃಪ್ತನಾಗಿ ದೈವಿಕ ಆಶೀರ್ವಾದ ಮಾಡಿ ತನ್ನ ಸಾನ್ನಿಧ್ಯದಲ್ಲಿ ಸ್ಥಾನಕೊಟ್ಟನು. ಆ ದಿವಸ ಮಹಾಶಿವರಾತ್ರಿಯ ದಿವಸವಾಗಿತ್ತು. ಅಂದಿನಿಂದ ಇವತ್ತಿನವರೆಗೂ ಜನರು ಮಹಾಶಿವರಾತ್ರಿಯ ದಿನ ಶಿವನ ಧ್ಯಾನ ಬಿಲ್ವಪತ್ರೆಯ ಸಮರ್ಪಣ ಮತ್ತು ಜಾಗರಣೆ ಮಾಡುತ್ತಾರೆ.

ಪ್ರಳಯ ಕಾಲ:

ಪ್ರಳಯ ಕಾಲದಲ್ಲಿ ಪಾರ್ವತಿಯು ಜಗತ್ತು ನಾಶವಾಗುವುದನ್ನು ನೋಡಿ ಶಿವನಲ್ಲಿ ಈ ಜಗತ್ತನ್ನು ಉಳಿಸಲು ವಿನಂತಿಸಿಕೊಳ್ಳುತ್ತಾಳೆ. ಶಿವನು ಜನರನ್ನು ರಕ್ಷಿಸುತ್ತಾನೆ. ಪಾರ್ವತಿಯು ಈ ದಿನವನ್ನು ಮಹಶಿವರಾತ್ರಿ ಎಂದು ಕರೆದು ಜನರಿಗೆ ಈ ಪವಿತ್ರ ದಿವಸ ಶಿವನನ್ನು ಪೂಜಿಸಲು ಹೇಳುತ್ತಾಳೆ. ಅಂದಿನಿಂದ ಇವತ್ತಿನೊಂದಿಗೆ ಜನರು ಶಿವನನ್ನು ಪೂಜಿಸುತ್ತಾರೆ.

ಮಹಾರಾಜ ಚಿತ್ರಭಾನುವಿನ ವೃತ್ತಾಂತ:

ಮಹಾರಾ ಚಿತ್ರಭಾನು (ಶ್ರೀ ರಾಮಚಂದ್ರನ ಪೂರ್ವಜರು) ಮತ್ತು ಸಮಸ್ತ ರಾಜಧಾನಿಯ ಜನರೆಲ್ಲರು ಶಿವನ ಪೂಜೆ ಮತ್ತು ಉಪವಾಸವನ್ನು ಆಚರಿಸುವ ವೇಳೆಯಲ್ಲಿ ಮಹಾಮುನಿ ಅಷ್ಟವಕ್ರ ತನ್ನ ಶಿಷ್ಯರ ಜೊತೆ ಚಿತ್ರಭಾನು ಮಹಾರಾಜರನ್ನು ಕಾಣಲು ಬರುತ್ತಾರೆ. ರಾಜ್ಯದಲ್ಲಿಯ ಪ್ರತಿಯೊಬ್ಬರು ಉಪವಾಸ ಮತ್ತು ಶಿವ ಪೂಜೆ ಮಾಡುವುದನ್ನು ನೋಡಿ ಮುನಿಶ್ರೇಷ್ಠ, ಅಷ್ಠವಕ್ರ ಚಿತ್ರಭಾನು ಮಹಾರಾಜರನ್ನು ಕಾರಣ ಕೇಳಲು ಚಿತ್ರಭಾನು ತನ್ನ ವೃತ್ತಾಂತವನ್ನು ತಿಳಿಸುತ್ತಾನೆ.

ನಾನು ಹಿಂದಿನ ಜನ್ಮದಲ್ಲಿ ಬೇಟೆಗಾರನಾಗಿದ್ದೆ. ಪಶು, ಪಕ್ಷಿಗಳನ್ನು ಕಾಡಿನಲ್ಲಿ ಹಿಡಿದು ನಾಡಿನಲ್ಲಿ ಮಾರಿ ಜೀವನ ಸಾಗಿಸುತ್ತಿದ್ದೆ. ಒಂದು ದಿವಸ ಪಕ್ಷಿಗಳನ್ನು ಹಿಡಿಯುತ್ತಾ ರಾತ್ರಿಯಾದದ್ದು ನನಗೆ ತಿಳಿಯಲಿಲ್ಲ. ಹುಲಿ, ಸಿಂಹಗಳ ಗರ್ಜನೆ ಕೇಳಿ ಅಂಜಿಕೊಂಡು ಹತ್ತಿರದಲ್ಲಿರುವ ಒಂದು ಮರವನ್ನು ಹತ್ತಿ ಕುಳಿತು ಮರದಲ್ಲಿರುವ ಎಲೆಗಳನ್ನು ಹರಿದು ಕೆಳಗೆ ಇರುವ ಶಿವ ಲಿಂಗದ ಮೇಲೆ ಹಾಕುತ್ತಿದ್ದೆ. ಬೆಳಗಿನ ವೇಳೆ ಮರದಿಂದ ಕೆಳಗೆ ಇಳಿದು ಊಟ ಮಾಡಲು ಕುಳಿತೆ. ಒಬ್ಬ ವೃದ್ಧನು ಬಂದು ಹಸಿವೆಯಾಗಿದೆ, ಊಟ ಕೊಡು ಎಂದು ಕೇಳಲು ನಾನು ನನ್ನ ಸಲುವಾಗಿ ಇಟ್ಟುಕೊಂಡ ಎಲ್ಲಾ ಊಟವನ್ನು ವೃದ್ಧನಿಗೆ ಕೊಟ್ಟುಬಿಟ್ಟೆ.

ಆ ವೃದ್ಧನು ಸಂತೋಷದಿಂದ ತನ್ನ ನಿಜ ರೂಪ ಶಿವರೂಪವನ್ನು ತೋರಿಸಿ ನೀನು ನಿನ್ನ ಮುಂದಿನ ಜನ್ಮದಲ್ಲಿ ಈ ರಾಜ್ಯದ ಮಹಾರಾಜನಾಗಿ ಜನಿಸುವೆ ಮತ್ತು ನಿನಗೆ ನಿನ್ನ ಪೂರ್ವಜನ್ಮದ ನೆನಪು ಇರುತ್ತದೆ ಎಂದು ಆಶೀರ್ವದಿಸಿದರು. ಇವತ್ತು ನನಗೆ ಸಿಕ್ಕ ಈ ಎಲ್ಲಾ ಸುಖವು ಪ್ರತಿಯೊಬ್ಬರಿಗೂ ಕೂಡ ಸಿಗಲಿ ಎಂದು ನಾನು ನನ್ನ ರಾಜ್ಯದ ಎಲ್ಲಾ ಪ್ರಜೆಗಳ ಜೊತೆ ಈ ಪವಿತ್ರ ದಿವಸವಾದ ಮಹಾಶಿವರಾತ್ರಿಯ ದಿವಸ, ಶಿವನ ಸ್ಮರಣೆ, ಶಿವನ ಪೂಜೆ ಮತ್ತು ಉಪವಾಸ ಆಚರಿಸುತ್ತಿದ್ದೇನೆ ಎಂದು ತಿಳಿಸಿದರು. ಶಿವ ಮತ್ತು ಪಾರ್ವತಿಯರು ಮಹಾಶಿವರಾತ್ರಿಯ ದಿನ ಮದುವೆಯಾಗಿದ್ದರಿಂದ ಮಹಾಶಿವರಾತ್ರಿಯನ್ನು ಮದುವೆಯ ವರ್ಷೋತ್ಸವ ಎಂದು ಆಚರಿಸಲಾಗುತ್ತದೆ.

ಮಹಾಶಿವರಾತ್ರಿಯ ಆಚರಣೆಗಳಿಂದ ಆಗುವ ವೈದ್ಯಕೀಯ ಲಾಭಗಳು:

ಶಿವನಾಮ ‘‘ಓಂ ನಮಃ ಶಿವಾಯ’’ ಜಪಿಸುವುದರಿಂದ ಆಗುವ ಲಾಭಗಳು:

1. ಏಕಾಗ್ರತೆಯನ್ನು ಹೆಚ್ಚಿಸುವುದು, ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಓದಿದ್ದನ್ನು ನೆನಪು ಮಾಡಿಕೊಂಡು ಉತ್ತರ ಬರೆದು ಉತ್ತೀರ್ಣರಾಗಲು ಸಹಾಯ ಮಾಡುತ್ತದೆ.

2. ಮಾನಸಿಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

3. ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗುತ್ತವೆ.

4. ನಿದ್ರೆ ಚೆನ್ನಾಗಿ ಬರುತ್ತದೆ.

5. ಹೃದಯ, ಪುಪ್ಪಸ ಮತ್ತು ಪಚನಾಂಗಗಳನ್ನು ಸದೃಢಗೊಳಿಸುತ್ತದೆ.

6. ಸಂತಾನೋತ್ಪತ್ತಿ ಕ್ರಿಯೆ ಸರಿಯಾಗಿರುತ್ತದೆ ಮತ್ತು ಆರೋಗ್ಯವಂತ ಮಕ್ಕಳು ಹುಟ್ಟುತ್ತಾರೆ.

7. ಮುಪ್ಪನ್ನು ಮುಂದೆ ಹಾಕಿ ಯೌವನವನ್ನು ಕೊಡುತ್ತದೆ ಮತ್ತು ಮನಸ್ಸನ್ನು ಸಮಾಧಾನ ಮಾಡುತ್ತದೆ.

8. ಬೆನ್ನು ಹುರಿಗೆ ಶಕ್ತಿಕೊಡುತ್ತದೆ.

9. ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

10. ವಿವೇಚನಾ ಶಕ್ತಿಯು ಹೆಚ್ಚು ಆಗುತ್ತದೆ.

ಶಿವರಾತ್ರಿಯ ಉಪವಾಸ:

ಶಿವರಾತ್ರಿಯ ಉಪವಾಸವು 24 ತಾಸುಗಳ ಉಪವಾಸ. ಮೊದಲಿನಿಂದಲೂ ಶಿವರಾತ್ರಿ ಉಪವಾಸ ಮಾಡುವವರು, ಉಪವಾಸವನ್ನು ಮುಂದುವರೆಸಬೇಕು. ಈಗ ಆರಂಭಿಸುವವರು ತಮ್ಮ ಮನೆಯ ವೈದ್ಯರ ಸಲಹೆ ಪಡೆದು ಉಪವಾಸ ಆರಂಭಿಸಬೇಕು. ಸಾಕಷ್ಟು ನೀರನ್ನು ಕುಡಿದು, ದೇಹದಲ್ಲಿ ನೀರಿನಾಂಶ ಕಡಿಮೆಯಾದಂತೆ ನೋಡಿಕೊಳ್ಳಬೇಕು. ಉಪವಾಸಮಾಡುವಾಗ ದೇಹದ ತೊಂದರೆ ಕಾಣಿಸಿಕೊಂಡರೆ ಊಟ ಮಾಡಬೇಕು. ಉಪವಾಸ ಮಾಡುವುದರಿಂದ

1. ದೇಹದಲ್ಲಿಯ ಸಕ್ಕರೆ ಅಂಶ ಮತ್ತು ಕೊಬ್ಬಿನ ಅಂಶವು ನಿಯಂತ್ರಣದಲ್ಲಿ ಬರುತ್ತದೆ.

2. ಉರಿಯೂತವು ಕಡಿಮೆಯಾಗುತ್ತದೆ.

3. ಬಹಳದಿನಗಳಿಂದ ಪೀಡಿಸುವ ಮಂಡಿನೋವು, ತಲೆನೋವು ಮತ್ತು ಬೇರೆ ನೋವುಗಳು ಕಡಿಮೆಯಾಗುತ್ತವೆ.

4. ಸ್ಥೂಲಕಾಯದವರ ಬೊಜ್ಜು ತಕ್ಕ ಮಟ್ಟಿಗೆ ಕಡಿಮೆಯಾಗುತ್ತದೆ.

5. ಅನ್ನಾಶಯದ ಪದರುಗಳಲ್ಲಿ ತಯಾರಾಗುವ ಗ್ರೆಲಿನ್ (Ghrelin)ಪುಷ್ಟಿಕಾರಕ ಸತ್ವವು ನಮ್ಮ ಹಸಿವನ್ನು ಮತ್ತು ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.

ಶಿವರಾತ್ರಿಯ ರಾತ್ರಿ ಎಚ್ಚರವಾಗಿರುವುದು:

ಶಿವರಾತ್ರಿಯ ರಾತ್ರಿ ಚಳಿಗಾಲ ಮುಗಿದು ಬೇಸಿಗೆಯ ಕಾಲ ಆರಂಭವಾಗುವ ಸಮಯದಲ್ಲಿ ರಾತ್ರಿ ಎಚ್ಚರವಾಗಿದ್ದು, ಶಿವ ಮಂತ್ರ ಓಂ ನಮಃ ಶಿವಾಯ ಜಪಿಸುವುದರಿಂದ ದೇಹಕ್ಕೆ ಹೆಚ್ಚು ಶಕ್ತಿ ಬಂದು ವಾತಾವರಣದಲ್ಲಿ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತದೆ ಮತ್ತು ಅತಿಕೆಂಪು ಬಣ್ಣದ ಕಿರಣಗಳಿಂದ (Infra red rays) ಶಕ್ತಿಯುವಾಗುತ್ತದೆ.

ಬಿಲ್ವಪತ್ರೆಗಳು:

ಶಿವನಿಗೆ ಅರ್ಪಿಸುವ ಬಿಲ್ವಪತ್ರೆಗಳಲ್ಲಿ ಫ್ಯುರೋಕುಮೆರಿನ್ಸ್ (Furocoumarins) ಮತ್ತು ಫ್ಲೇವೋನೋಯಿಡ್ಸ್ (Flavonoids) ಇರುವುದರಿಂದ, ಶಿವನಿಗೆ ಬಿಲ್ವಪತ್ರೆಗಳನ್ನು ಅರ್ಪಿಸಿ, ಜಲಾಭಿಷೇಕ ಮಾಡುವುದರಿಂದ ಈ ರಾಸಾಯನಿಕಗಳು ಆವಿಯಾಗಿ ನಮ್ಮ ಮೂಗಿನ ಮೂಲಕ ಪುಪ್ಪಸಗಳನ್ನು ತಲುಪಿ ಪುಪ್ಪಸಗಳಲ್ಲಿರುವ ರೋಗಾಣುಗಳನ್ನು ನಾಶಮಾಡುತ್ತವೆ. ಪುಪ್ಪಸಗಳನ್ನು ಸೋಂಕಿನಿಂದ ರಕ್ಷಿಸುತ್ತವೆ. (Aroma Therapy) (Antibiotic Therapy).

Also read: ಮಹಾಶಿವರಾತ್ರಿ ಹಬ್ಬದ ಆಚರಣೆ – ಆರೋಗ್ಯದ ದೃಷ್ಠಿಯಿಂದ ಪ್ರಾಮುಖ್ಯತೆ ಏನು?

ಡಾ. ಕೆ. ಹನುಮಂತಯ್ಯ

Share this: