Vydyaloka

ತೆಂಗಿನ ಕಾಯಿಯ ಹಿರಿಮೆ ದೊಡ್ಡದು.

ತೆಂಗಿನ ಕಾಯಿಯ ಹಿರಿಮೆ ದೊಡ್ಡದು. ಅಡುಗೆ, ಆರೋಗ್ಯ ಮತ್ತು ವಾಣಿಜ್ಯ ಪ್ರಯೋಜನ ಮಾತ್ರವಲ್ಲದೆ ಹೆಚ್ಚಿನ ಧಾರ್ಮಿಕ ಆಚರಣೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ತೆಂಗಿನೆಣ್ಣೆಯು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುವುದರೊಂದಿಗೆ ಕೆಲವು ಸೋಂಕುಗಳನ್ನೂ ನಿವಾರಿಸುವ ಸಾಮಥ್ರ್ಯ ಹೊಂದಿದೆ.

ಏಷ್ಯನ್ ಮತ್ತು ಪೆಸಿಫಿಕ್ ತೆಂಗಿನಕಾಯಿ ಸಮುದಾಯ (ಎಪಿಸಿಸಿ) ಮತ್ತು ಅದರ ಸದಸ್ಯ ರಾಷ್ಟ್ರಗಳು ಪ್ರತಿವರ್ಷ ಸೆಪ್ಟೆಂಬರ್ 2, 2020 ಅನ್ನು ವಿಶ್ವ ತೆಂಗಿನ ದಿನವೆಂದು 2009 ರಿಂದ ಆಚರಿಸಿಕೊಂಡು ಬರುತ್ತಿವೆ. ಭಾರತ ಸೇರಿದಂತೆ ತೆಂಗಿನಕಾಯಿ ಬೆಳೆಯುವ ಹಲವಾರು ಪ್ರಮುಖ ದೇಶಗಳು ಎಪಿಸಿಸಿ ಸದಸ್ಯರಾಗಿದ್ದಾರೆ. ಬಡತನ ನಿವಾರಣೆಯಲ್ಲಿ ತೆಂಗಿನಕಾಯಿಯ ಪಾತ್ರ ಪ್ರಮುಖವಾದುದು ಎಂದು ತಿಳಿಸುವುದು ಈ ಆಚರಣೆಯ ಉದ್ದೇಶಗಳಲ್ಲಿ ಒಂದು. ತೆಂಗಿನಕಾಯಿಗಳ ಪ್ರಾಮುಖ್ಯತೆ ಮತ್ತು ಉಪಯೋಗಗಳನ್ನು ಎತ್ತಿ ಹಿಡಿಯಲು ವಿಶ್ವತೆಂಗಿನ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ತೆಂಗಿನಕಾಯಿಯ ಆರೋಗ್ಯ ಮತ್ತು ವಾಣಿಜ್ಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಕೇರಳದ ಪ್ರಮುಖ ಆಹಾರ ಹಾಗೂ ವಾಣಿಜ್ಯ ಬೆಳೆ ತೆಂಗು:

ನೆರೆಯ ರಾಜ್ಯ ಕೇರಳದ ಪ್ರಮುಖ ಆಹಾರ ಹಾಗೂ ವಾಣಿಜ್ಯ ಬೆಳೆ ತೆಂಗು. ಮಲಯಾಳಂ ಭಾಷೆಯಲ್ಲಿ “ಕೇರ’ ಎಂದರೆ ತೆಂಗಿನ ಮರ ಹಾಗೂ “ಅಲಂ’ ಎಂದರೆ ನಾಡು. ಈ ರಾಜ್ಯವು ತನ್ನ ಭೂಮಿಯಲ್ಲಿ ಬಹಳಷ್ಟು ತೆಂಗಿನ ಮರಗಳನ್ನು ಹೊಂದಿರುವುದ, ಕೇರಳ’ ಎಂಬ ಹೆಸರು ಪಡೆಯಿತು. ತೆಂಗಿನ ಮರದಕಾಂಡ, ಗರಿ, ಕಾಯಿ, ನಾರು, ಕರಟಗಳನ್ನು ಬಳಸಿ ತಯಾರಿಸುವ ಆಕರ್ಷಕ ಕರಕುಶಲ ಉತ್ಪನ್ನಗಳು ಕೇರಳದಲ್ಲಿ ಪ್ರಸಿದ್ಧ. ಉದಾಹರಣೆಗೆ, ಪೆನ್ ಸ್ಟ್ಯಾಂಡ್, ಗೃಹಾಲಂಕಾರ ವಸ್ತುಗಳು, ವಿವಿಧ ಕಲಾಕೃತಿಗಳು, ಹುರಿಹಗ್ಗ, ಕಾಲೊರೆಸುವ ಚಾಪೆಗಳು, ಚೀಲಗಳು, ಕರಟದ ಚಿಪ್ಪಿನ ಆಭರಣಗಳು, ಕ್ಲಿಪ್ ಗಳು ಇತ್ಯಾದಿ.

ತೆಂಗಿನಕಾಯಿಯು ತಾಳೆ ಮರದ ಕುಟುಂಬವಾದ ಅರೆಕೇಶಿಯಕ್ಕೆ ಸೇರಿದೆ. ಕೊಕೊಸ್‍ ಕುಲದ ಏಕೈಕ ಜೀವಂತ ಜಾತಿ ತೆಂಗಿನಕಾಯಿ. ಇದು ಕೊಕೊಸ್ ನ್ಯೂಸಿಫೆರಾ ಪಾಮ್‍ನ ಪ್ರಬುದ್ಧ ಹಣ್ಣು. ಕೊಕೊ ಪಾಮ್‍ ಉಷ್ಣವಲಯದ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಏಕೆಂದg ಇದಕ್ಕೆ ತೇವಾಂಶವುಳ್ಳ ಮರಳು ಹಾಗೂ ಬರಿದಾದ ಮಣ್ಣಿನ ಅಗತ್ಯವಿರುತ್ತದೆ. ಆದ್ದರಿಂದಲೇ ಇದು ಲವಣಯುಕ್ತ ಕರಾವಳಿ ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ.

ತೆಂಗಿನೆಣ್ಣೆ – ಸೋಂಕುಗಳನ್ನೂ ನಿವಾರಿಸುವ ಸಾಮಥ್ರ್ಯ ಹೊಂದಿದೆ:

1. ತೆಂಗಿನೆಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಅಂಶ ಜಾಸ್ತಿ ಇದೆಯೆಂದೂ, ಅದು ಹೃದಯಾಘಾತವನ್ನು ಹೆಚ್ಚಿಸುತ್ತದೆಯೆಂದೂ ಇತರ ಖಾದ್ಯತೈಲ ಉತ್ಪಾದಕ ಸಂಸ್ಥೆಗಳು ಪ್ರಚಾರಮಾಡುತ್ತಿವೆ. ಇದರಲ್ಲಿ ಸತ್ಯಾಂಶಕ್ಕಿಂತಲೂ ವ್ಯಾವಹಾರಿಕ ದೃಷ್ಟಿಕೋನವೇ ಹೆಚ್ಚು ಎಂಬುದು ಇತ್ತೀಚೆಗೆ ವೇದ್ಯವಾಗುತ್ತಿದೆ.

2. ತೆಂಗಿನೆಣ್ಣೆಯು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡುವುದರೊಂದಿಗೆ ಕೆಲವು ಸೋಂಕುಗಳನ್ನೂ ನಿವಾರಿಸುವ ಸಾಮಥ್ರ್ಯ ಹೊಂದಿದೆ. ಕೇರಳದ ಹೆಚ್ಚಿನ ಮಂದಿ ಅಡುಗೆಗೂ, ತಲೆ-ಮೈಗೆ ಹಚ್ಚಿಕೊಳ್ಳಲೂ ತೆಂಗಿನ ಎಣ್ಣೆಯನ್ನೇ ಬಳಸಿ ಆರೋಗ್ಯದಿಂದಿರುವುದು ಇದಕ್ಕೆ ಸಾಕ್ಷಿ.

3. ತೆಂಗಿನಕಾಯಿಯಲ್ಲಿರುವ ಸ್ಯಾಚುರೇಟೆಡ್‍ ಕೊಬ್ಬಿನಾಮ್ಲವಾದ ಲಾರಿಕ್‍ ಆಮ್ಲವು ರಕ್ತದಲ್ಲಿ ಉತ್ತಮ-ಸಾಂದ್ರತೆಯ  ಎಚ್‍ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.  ಪರಿಧಮನಿಯ ಅಪಧಮನಿಗಳಿಗೂ ಇದು ಒಳ್ಳೆಯದು. ತೆಂಗಿನ ನೀರಿನಲ್ಲಿ ಸಕ್ಕರೆ, ಖನಿಜಗಳು ಮತ್ತು ಸೈಟೊಕಿನಿನ್‍ನಂತಹ ಜೈವಿಕ ಸಕ್ರಿಯ ಸಂಯುಕ್ತಗಳು ಮತ್ತು ಪಾಲಿಮರೇಸಸ್, ಆಸಿಡ್ ಫಾಸ್ಫಟೇಸ್, ಕ್ಯಾಟಲೇಸ್, ಡಿಹೈಡ್ರೋಜಿನೇಸ್, ಪೆರಾಕ್ಸಿಡೇಸ್ ಮುಂತಾದ ಕಿಣ್ವಗಳಿವೆ. ಕಿಣ್ವಗಳು ಚಯಾಪಚಯ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ.

ಅಡುಗೆ ಮನೆಗಳಲ್ಲಿ ತೆಂಗಿನಕಾಯಿಯ ಹಿರಿಮೆ ದೊಡ್ಡದು:

ತೆಂಗಿನ ಎಣ್ಣೆಯನ್ನು ಸಾಮಾನ್ಯವಾಗಿ ಕೊಪ್ರಾ ಅಥವಾ ಡ್ರೈಕರ್ನಲ್‍ನಿಂದ ಹೊರ ತೆಗೆಯಲಾಗುತ್ತದೆ. ತೆಂಗಿನಿಂದ ತಯಾರಿಸಿದ ತೈಲವು ಅತ್ಯುತ್ತಮ ಎಮೋಲಿಯಂಟ್‍ ಏಜೆಂಟ್. ಇದನ್ನುಅಡುಗೆಯಲ್ಲಿ ಬಳಸಬಹುದು, ನೆತ್ತಿಯ ಮೇಲೆ ಬಳಸಬಹುದು. ತೆಂಗಿನ ಎಣ್ಣೆಯು  ಔಷಧಿಯಾಗಿಯೂ ಬಳಸುತ್ತಾರೆ ತೆಂಗಿನಕಾಯಿಯು ತಾಮ್ರ, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಖನಿಜಗಳ ಅತ್ಯುತ್ತಮ ಮೂಲವಾಗಿದೆ. ಅಲ್ಲದೆ ತೆಂಗಿನಕಾಯಿ ಬಿ-ಕಾಂಪ್ಲೆಕ್ಸ್ ವಿಟಮಿನ್‍ಗಳಮೂಲವಾಗಿದೆ.

ದಕ್ಷಿಣ ಭಾರತದ ಹೆಚ್ಚಿನ ಅಡುಗೆ ಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ದೊಡ್ಡದು. ಅಡಿಗೆಯಲ್ಲಿ ತೆಂಗಿನಕಾಯಿ ಇದ್ದರೆ ಅದರ ರುಚಿ ಅದ್ಬುತ ಎನ್ನುವ ಅರ್ಥದಲ್ಲಿ ‘ಇಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ’ ಎಂಬ ಗಾದೆಯೇ ಇದೆ. ತೆಂಗಿನಕಾಯಿಯ ಎಳನೀರು ಬಹಳಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಸುಲಭವಾಗಿ ಜೀರ್ಣವಾಗುವುದರಿಂದ ಎಳೆಯ ಮಕ್ಕಳಿಗೂ, ಅಶಕ್ತರಿಗೂ ಉತ್ತಮ ಆಹಾರ. ಬೆಳೆದ ಕಾಯಿಯು ಅಡುಗೆಗೆ ಮಾತ್ರವಲ್ಲದೆ ಹೆಚ್ಚಿನ ಧಾರ್ಮಿಕ ಆಚರಣೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.

 

Share this: