Vydyaloka

ಸೋರಿಯಾಸಿಸ್ ಗೆ ಕಾರಣವೇನು?

ಸೋರಿಯಾಸಿಸ್ ಗೆ ಕಾರಣವೇನು? – ಸೋರಿಯಾಸಿಸ್ ಬರುತ್ತದೆ ಎಂಬುದು ಗೊತ್ತಾಗಿದ್ದರೂ ಹಾಗಾಗಲು ಕಾರಣವೇನು ಎಂಬುದರ ಸ್ಪಷ್ಟ ಚಿತ್ರಣ ಇಲ್ಲ.

ಯಾವುದೇ ಚರ್ಮರೋಗವಿರುವವರೂ ಮೊದಲು ಕೇಳುವ ಪ್ರಶ್ನೆ “ಇದು ಸೋರಿಯಾಸಿಸ್ ಥರದ ಸಮಸ್ಯೆಯಲ್ಲ ಅಲ್ಲವೇ?” ಎಂದು. ಸೋರಿಯಾಸಿಸ್ ಬಗೆಗಿನ ಭಯ ಜನರಲ್ಲಿ ಅಷ್ಟು ಗಾಢವಾಗಿದೆ. ಸೋರಿಯಾಸಿಸ್ ಇರುವ ಎಷ್ಟೋ ಜನರು ಖಿನ್ನತೆಗೊಳಗಾಗುತ್ತಾರೆ. ಆತ್ಮಹತ್ಯೆಗೊಳಗಾಗುವವರೂ ಇದ್ದಾರೆ. ಆದರೆ ಸೋರಿಯಾಸಿಸ್ ಅನ್ನು ಅರ್ಥ ಮಾಡಿಕೊಂಡರೆ ಅಷ್ಟೊಂದು ಗಾಬರಿ ಪಡಬೇಕಾದ ಅವಶ್ಯಕತೆಯಿಲ್ಲ. ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಂಡರೆ ಸೋರಿಯಾಸಿಸ್ ಕೂಡಾ ಗುಣವಾಗುವ ಖಾಯಿಲೆಯೇ. ನಮ್ಮ ರೋಗ ನಿರೋಧಕ ಶಕ್ತಿಯಲ್ಲಿನ ವ್ಯತಿರಿಕ್ತತೆಯಿಂದಾಗಿ ಸೋರಿಯಾಸಿಸ್ ಬರುತ್ತದೆ ಎಂಬುದು ಗೊತ್ತಾಗಿದ್ದರೂ ಹಾಗಾಗಲು ಕಾರಣವೇನು ಎಂಬುದರ ಸ್ಪಷ್ಟ ಚಿತ್ರಣ ಇಲ್ಲ.

ಆನುವಂಶೀಯವಾಗಿ ಅಥವಾ ಒತ್ತಡದ ಕಾರಣದಿಂದಾಗಿ ಸೋರಿಯಾಸಿಸ್ ಬರುತ್ತದೆ ಎಂದು ಅಭಿಪ್ರಾಯ ಪಡಲಾಗುತ್ತಿದೆ. ವಿರುದ್ಧ ಆಹಾರಗಳ ಸೇವನೆ, ತಪ್ಪಾದ ಜೀವನಶೈಲಿ, ಸರಿಯಾದ ರೀತಿಯಲ್ಲಿ ದಿನಚರ್ಯವನ್ನು ಪಾಲಿಸದೇ ಇರುವುದು, ಅತಿಯಾಗಿ ಉಪ್ಪು, ಹುಳಿ, ಖಾರಗಳ ಸೇವನೆ, ವಿಷಯುಕ್ತ ಆಹಾರಗಳ ಸೇವನೆ, ನೈಸರ್ಗಿಕ ಕರೆಗಳನ್ನು ತಡೆಯುವುದು ಇಂತಹ ಕಾರಣಗಳಿಂದ ಸೋರಿಯಾಸಿಸ್ ಸಮಸ್ಯೆ ಬರುತ್ತದೆ ಎಂದು ಆಯುರ್ವೇದ ಹೇಳುತ್ತದೆ.

ಸೋರಿಯಾಸಿಸ್ ನಲ್ಲಿ ಹಲವಾರು ವಿಧಗಳಿವೆ. ಇಡೀ ಮೈಗೆ ಹರಡಿಕೊಳ್ಳುವುದು, ಪಾದ-ಹಸ್ತಗಳಿಗೆ ಮಾತ್ರ ಆಗುವುದು, ತಲೆಯ ಮೇಲೆ ಮಾತ್ರ ಆಗುವುದು, ತುರಿಕೆ ಇರುವುದು, ತುರಿಕೆ ರಹಿತವಾಗಿರುವುದು ಹೀಗೆ ಹಲವು ರೀತಿಗಳಲ್ಲಿ ಸೋರಿಯಾಸಿಸ್ ತನ್ನ ಲಕ್ಷಣಗಳನ್ನು ತೋರಿಸುತ್ತದೆ. ಕೆಲವೊಮ್ಮೆ ಅದು ಸಂಧಿಗಳನ್ನು ವಿಕೃತಗೊಳಿಸಿ, ವಿಶೇಷವಾಗಿ ಕೈ ಮತ್ತು ಕಾಲಿನ ಸಂಧಿಗಳಲ್ಲಿ ಬಾವು, ನೋವು, ಬಿಗಿತ ಮತ್ತು ನಿಧಾನವಾಗಿ ಅವು ವಕ್ರವಾಗಲು ಕಾರಣವಾಗಬಹುದು. ಇದಕ್ಕೆ ಸೋರಿಯಾಟಿಕ್ ಆರ್ಥ್ರೈಟಿಸ್ ಎನ್ನುತ್ತಾರೆ.

ಆದರೂ ಬೇರೆ ಖಾಯಿಲೆಗಳಿಗೆ ಹೋಲಿಸಿದರೆ ಸೋರಿಯಾಸಿಸ್ ನಿರುಪದ್ರವಿಯೇ. ಇದು ಹೊರಗೆ ಎದ್ದು ಕಾಣುವುದರಿಂದ ನಮಗೆ ದೊಡ್ಡ ಸಮಸ್ಯೆಯಾಗಿ ತೋರುತ್ತದೆ. ಸಾಮಾಜಿಕ ಮುಜುಗರಗಳಿಗೆ ಕಾರಣವಾಗುತ್ತದೆ. ಸಹಜವಾಗಿ ಖಿನ್ನತೆಯನ್ನು ತರುತ್ತದೆ. ಆ ಒತ್ತಡ ಮತ್ತು ಮಾನಸಿಕ ಹಿಂಸೆ ಸೋರಿಯಾಸಿಸ್ ಇನ್ನೂ ಉಲ್ಬಣಗೊಳ್ಳುವಂತೆ ಮಾಡುತ್ತದೆ. ಹೀಗೆ ಇದೊಂದು ವಿಷಚಕ್ರವಾಗಿಬಿಡುತ್ತದೆ. ಹಾಗಾಗಿ ಇದಕ್ಕೆ ಸರಿಯಾಗಿ ಚಿಕಿತ್ಸೆ ಮಾಡಿಕೊಂಡು ಗುಣಪಡಿಸಿಕೊಳ್ಳಬೇಕೇ ಹೊರತು ತಾತ್ಕಾಲಿಕವಾಗಿ ಚರ್ಮ ಸರಿಯಾಗಿ ಕಾಣುವಂತೆ ಮಾಡಿಕೊಳ್ಳುವುದಲ್ಲ.

ಬೇವು, ಅಮೃತಬಳ್ಳಿ, ಮಂಜಿಷ್ಟ, ಸೊಗದೇ ಬೇರು, ಅರಿಶಿನಗಳನ್ನು (ಎಲ್ಲವೂ ಗ್ರಂಧಿಗೆ ಅಂಗಡಿಗಳಲ್ಲಿ ಸಿಗುತ್ತವೆ) ಎರಡೆರಡು ಗ್ರಾಂನಷ್ಟು ತೆಗೆದುಕೊಂಡು ಎರಡು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟ ನೀರಿಗೆ ಬತ್ತಿಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಸಹಾಯವಾಗುತ್ತದೆ. ಈ ರೀತಿ ಕಹಿ ದ್ರವ್ಯಗಳ ಸೇವನೆ ಸೋರಿಯಾಸಿಸ್ ಗೆ ಹಿತಕಾರಿ. ಆದರೆ ಇದರಿಂದ ದೇಹ ಒಣಗುವುದು ಮತ್ತು ವಾತ ಹೆಚ್ಚಾಗುವ ಭಯವಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ಕೊಬ್ಬನ್ನು (ಶುದ್ಧ ತುಪ್ಪ, ಕೊಬ್ಬರಿ ಎಣ್ಣೆ, ಶುದ್ಧ ಎಳ್ಳೆಣ್ಣೆ ಇತ್ಯಾದಿ) ಸೇವಿಸಬೇಕು. ಒಮೆಗಾ 3 ಫ್ಯಾಟೀ ಆಸಿಡ್ ಗಳನ್ನು ಸೇವಿಸಿವುದೂ ಅನುಕೂಲಕರ. ಉರಿ ಮತ್ತು ತುರಿಕೆ ಇದ್ದರೆ ಶುದ್ಧ ಚಂದನದ ಕೊರಡನ್ನು ತೇಯ್ದು ಅರ್ಧ ಚಮಚದಷ್ಟು ಹೊಟ್ಟೆಗೆ ಸೇವಿಸಬೇಕು ಮತ್ತು ಉರಿಯಿರುವ ಕಡೆ ಇದನ್ನು ಹಚ್ಚಿಕೊಳ್ಳಬಹುದು.

ಹಸ್ತ ಪಾದಗಳಲ್ಲಿ ಸೋರಿಯಾಸಿಸ್ (ಪಾಮೋ ಪ್ಲಾಂಟಾರ್ ಸೋರಿಯಾಸಿಸ್) ಆದಾಗ ಅತಿಯಾಗಿ ಒಣಗುವುದು ಮತ್ತು ಬಿರುಕು ಬಿಟ್ಟು ರಕ್ತ ಸೋರುವುದನ್ನು ತಡೆಯಲು ಹಾಗೂ ಚರ್ಮದ ಮೃದುತ್ವವನ್ನು ಕಾಪಾಡಲು ರಾತ್ರಿ ಹಸ್ತ ಮತ್ತು ಪಾದಗಳನ್ನು ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಗಳ ಮಿಶ್ರಣದಲ್ಲಿ ಅರ್ಧ ಗಂಟೆಯಷ್ಟು ಹೊತ್ತು ಅದ್ದಿಟ್ಟುಕೊಂಡು ನಂತರ ಅದನ್ನು ತೊಳೆಯದೇ ಕೇವಲ ಒರೆಸಿಕೊಂಡು ಒಂದು ಹತ್ತಿ ಬಟ್ಟೆ ಸುತ್ತಿಕೊಂಡು ಮಲಗಿದರೆ ತುಂಬಾ ಅನುಕೂಲವಾಗುತ್ತದೆ. ಆದರೆ ಸೋರಿಯಾಸಿಸ್ ಅನ್ನು ಮನೆಮದ್ದುಗಳ ಮೂಲಕ ಗುಣ ಮಾಡಿಕೊಳ್ಳಲು ಸಾಧ್ಯವಿಲ್ಲ. ಸರಿಯಾದ ರೀತಿಯಲ್ಲಿ ಪ್ರಕೃತಿ ಚಿಕಿತ್ಸೆ ಅಥವಾ ಪಂಚಕರ್ಮ ಚಿಕಿತ್ಸೆಗಳನ್ನು ಮಾಡಿಕೊಂಡರೆ ಮಾತ್ರ ಅದನ್ನು ಗುಣಪಡಿಸಬಹುದು.

ಜೊತೆಗೆ ಆಳ ವಿಶ್ರಾಂತಿ ಕ್ರಿಯೆ, ಪ್ರಾಣಾಯಾಮ, ಯೋಗಾಸನಗಳ ಮೂಲಕ ಮನಸ್ಸನ್ನು ಶಾಂತವಾಗಿಟ್ಟುಕೊಂಡರೆ ತುಂಬಾ ಸಹಾಯವಾಗುತ್ತದೆ. ಹೆಬ್ಬೆರಳು ಮತ್ತು ಕಿರುಬೆರಳುಗಳ ತುದಿಗಳನ್ನು ಸೇರಿಸಿ ಮಾಡುವ “ವರುಣ ಮುದ್ರೆ”ಯನ್ನು ದಿನಕ್ಕೆ ಇಪ್ಪತ್ತು ನಿಮಿಷಗಳಷ್ಟು ಕಾಲ ಮಾಡಿದರೆ ಸೋರಿಯಾಸಸ್ ನಲ್ಲಿ ಅತ್ಯಂತ ಅನುಕೂಲವಾಗುತ್ತದೆ. ಮನಸ್ಸನ್ನು ಆನಂದದಿಂದಿಡುವ ಚಿನ್ಮುದ್ರೆಯನ್ನು ಅಭ್ಯಸಿಸುವುದು ಕೂಡಾ ತುಂಬಾ ಒಳ್ಳೆಯದು. ಒಟ್ಟಿನಲ್ಲಿ ಸೋರಿಯಾಸಿಸ್ ಬಗ್ಗೆ ಹೆದರದೇ, ಖಿನ್ನತೆಗೊಳಗಾಗದೇ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ, ಜೀವನಶೈಲಿಯನ್ನು ಸುಧಾರಿಸಿಕೊಂಡರೆ ಎಷ್ಟೇ ವಿಕಾರವಾಗಿ ಕಂಡರೂ ಅದೊಂದು ದೊಡ್ಡ ಸಮಸ್ಯೆಯಲ್ಲ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this: