Vydyaloka

ಗರ್ಭಿಣಿಯರು ಎಚ್ಚರ! `ಸಕ್ಕರೆ ಕಾಯಿಲೆ’ ಕಾಡೀತು?

ಇತ್ತೀಚೆಗೆ `ಡಯಾಬಿಟಿಸ್’ ಒಂದು ಮಾರಕ ರೋಗವಾಗಿ ಪರಿಗಣಿಸಲ್ಪಡುತ್ತಿದೆ. ಸಕ್ಕರೆ ಕಾಯಿಲೆ, ಮಧುಮೇಹ, ಡಯಾಬಿಟಿಸ್ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಕಾಯಿಲೆಯಿಂದ ಉಂಟಾಗುವ ತೊಂದರೆಗಳೆಲ್ಲ ಒಂದೇ.

ಇಂದಿನ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ `ಡಯಾಬಿಟಿಸ್’ ಅಬಾಲ ವೃದ್ಧರಿಂದ ಹಿಡಿದು ಎಲ್ಲರಲ್ಲೂ ಸಾಮಾನ್ಯವಾಗಿ ಕಾಡುವಂತಾಗಿ ಬಿಟ್ಟಿದೆ. ಅದರಲ್ಲೂ ಗರ್ಭಿಣಿಯಾಗಿದ್ದಾಗ ಕೆಲವರಲ್ಲಿ ಸಕ್ಕರೆ ಕಾಯಿಲೆ ಬರುತ್ತದೆ. ಹಾಗೆಂದು ಎಲ್ಲ ಗರ್ಭಿಣಿಯರಿಗೂ  ಕಾಡಬೇಕೆಂದಿಲ್ಲ. ಇದು ಚಿಕಿತ್ಸೆಯ ನಂತರ ಹೆಚ್ಚಿನ ಮಂದಿಯಲ್ಲಿ ವಾಸಿಯಾಗುವುದು.  ಈ ಬಗ್ಗೆ ಮುಂಜಾಗ್ರತೆ ವಹಿಸುವುದು ಅವಶ್ಯಕ.ಅಂಡಾಯಶಯದಲ್ಲಿ ಗಂಟು, ಬೊಜ್ಜು ಮತ್ತು ಕುಟುಂಬದಲ್ಲಿ ಸಕ್ಕರೆ ಕಾಯಿಲೆ ಇರುವವರಲ್ಲಿ ಗರ್ಭಧಾರಣೆ ಅವಧಿಯ `ಸಕ್ಕರೆ ಕಾಯಿಲೆ’ ಆಗುವ ಸಂಭವ ಹೆಚ್ಚು.ಇಲ್ಲದಿದ್ದರೆ ಗರ್ಭಿಣಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು.

ಪತ್ತೆ ಹೇಗೆ?

ಎಲ್ಲ ವೈದ್ಯರು ಹೆಚ್ಚಿನ ಸಮಯ ರಕ್ತ ಪರೀಕ್ಷೆ ಮಾಡಿಸುವುದು ಗರ್ಭ ಧರಿಸಿದ 24-28 ವಾರಗಳ ನಡುವೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ತಿಳಿಯಲು ಗ್ಲುಕೋಸ್ ಟಾಲೆರನ್ಸ್ ಟೆಸ್ಟ್ ಮಾಡಿದಾಗ ಈ ಸಂಖ್ಯೆಯಿಂದ ಸಕ್ಕರೆ ಕಾಯಿಲೆ ಆಗಿದೆಯೇ ಇಲ್ಲವೇ ಎಂದು ತಿಳಿಯುತ್ತಾರೆ.

ಇದನ್ನು `ಗೆಸ್ಟೇಷನಲ್’ ಡಯಾಬಿಟಿಸ್ ಅಥವಾ ಗರ್ಭಧಾರಣಾ ಅವಧಿಯ ಸಕ್ಕರೆ ಕಾಯಿಲೆ ಎಂದೂ ಕರೆಯುತ್ತಾರೆ. ಕೆಲವರಲ್ಲಿ ಮೊದಲೇ ಡಯಾಬಿಟಿಸ್ ಇದ್ದಾಗ, ಗರ್ಭಿಣಿಯಾದಾಗ ಮಗುವಿಗಾಗುವ ಅಪಾಯ ಹೆಚ್ಚು. ಇದು ನೂರು ಮಂದಿಯಲ್ಲಿ ಕೇವಲ ನಾಲ್ಕರಷ್ಟು ಮಂದಿಗೆ ಕಾಡುವಂಥ ತೊಂದರೆಯಾಗಿದೆ.

ಏಕೆಂದರೆ ಹೆಚ್ಚಾದ ಗ್ಲುಕೋಸ್ ಅತ್ಯಂತ ಸುಲಭವಾಗಿ ಮಗುವಿನ ಪ್ಲಾಸೆಂಟಾದ ಮೂಲಕ ತೂರುವ ಅವಕಾಶ ಹೆಚ್ಚು. (ಪ್ಲಾಸೆಂಟಾ-ಹೆರಿಗೆಯ ನಂತರ ಬರುವ ಗರ್ಭವೇಷ್ಟನ). ಗ್ಲುಕೋಸ್ ಸಿಕ್ಕಾಗ ಮಗುವಿಗೆ ಇನ್ನಷ್ಟು ಶಕ್ತಿ ಸಿಕ್ಕಿ ಕೊಬ್ಬಿನ ಅಂಶವಾಗಿ ಪರಿವರ್ತಿತವಾಗುತ್ತದೆ.

ಕೂಸಿಗೂ ತೊಂದರೆ!

ಮಗು `ಅತಿಯಾದ ತೂಕದಿಂದ ಹುಟ್ಟಲು ಇದು ಮುಖ್ಯ ಕಾರಣವಾಗುತ್ತದೆ. ಈ ರೀತಿ ಅತಿಯಾದ ತೂಕ ಹೊಂದಿದಲ್ಲಿ ಅನೇಕ ತೊಂದರೆಗಳು ಕಾಡುತ್ತವೆ. ಅತಿಯಾದ ತೂಕದ ಮಗು ಹುಟ್ಟಿದರೆ ನಾನಾ ತೊಂದರೆಗಳನ್ನು ಅನುಭವಿಸಬೇಕಾದೀತು. ಜನ್ಮದಾರದಿಂದ ಹೊರಬರುವಾಗ ಕೆಲ ಸಮಸ್ಯೆಗಳನ್ನು ಕಾಣಬಹುದು. ಭುಜಕ್ಕೆ ಗಾಯವಾಗಬಹುದು. ಉಸಿರಾಟದ ತೊಂದರೆಯೂ ಕಾಡಬಹುದು. ಬೆಳೆದ ಮೇಲೆ ಬೊಜ್ಜು ಅಥವಾ ಡಯಾಬಿಟಿಸ್‍ಗೆ ಕಾರಣವಾಗಬಹುದು.

ವ್ಯಾಯಾಮ ಬೇಕೆಬೇಕು

ಯಾವಾಗ ವೈದ್ಯರು ಗೆಸ್ಟೇಷನಲ್ ಡಯಾಬಿಟಿಸ್ ಇದೆ ಎಂದು ಹೇಳುತ್ತಾರೋ ಕೂಡಲೇ ಚಿಕಿತ್ಸೆ ಆರಂಭಿಸಬೇಕು. ಜೊತೆಗೆ ವ್ಯಾಯಾಮದ ಮೊರೆ ಹೋಗಬೆಕು. ಇದಕ್ಕೆ ವಿಶೇಷವಾದ ಆಹಾರಭ್ಯಾಸದ ಯೋಜನೆ, ವ್ಯಾಯಾಮ ಮತ್ತು ಎಂದಿನಂತೆ ದೈಹಿಕ ಚಟುವಟಿಕೆ ಅಗತ್ಯ. ಅತಿಯಾದ ದೊಡ್ಡ ಮಗು ಎಂದು ಗೊತ್ತಾದಲ್ಲಿ ಸಿಜೇರಿಯನ್ ಮಾಡಿಸಬೇಕಾಗುತ್ತದೆ.
ಸಕ್ಕರೆ ಕಾಯಿಲೆ ಹೆರಿಗೆಯಾದ ಕೆಲದಿನಗಳಲ್ಲೇ ಮಯಾವಾಗುತ್ತದೆ. ಆದರೆ ಮೊದಲ ಹೆರಿಗೆಯಲ್ಲಿ ಕಾಣಿಸಿಕೊಂಡರೆ ಮುಂದಿನ ಹರಿಗೆಯಲ್ಲಿಯೂ ಕಾಣಿಸುವುದು ಸಾಮಾನ್ಯ. ತೂಕ ಕಡಮೆ ಮಾಡಿ, ನಿಯಮಿತ ವ್ಯಾಯಾಮ, ಆರೋಗ್ಯಕರ-ಪೌಷ್ಠಿಕ ಆಹಾರ ಸೇವನೆ ಅಗತ್ಯ.

ಯಾವುದೇ ತೊಂದರೆಯಾಗದು

ರೋಗ ಪತ್ತೆಯಾದ ಕೂಡಲೇ ಪಥ್ಯ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಯಾವುದೇ ಅಪಾಯ ಇರುವುದಿಲ್ಲ. ಗರ್ಭಿಣಿ ಹೆಣ್ಣು ಮಗಳು ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯ ಎರಡನ್ನೂ ರಕ್ಷಿಸಬಹುದು. ಕೆಲವರಿಗೆ ಪಥ್ಯದ ಜೊತೆಗೆ ಇನ್ಸುಲಿನ್ ಕೂಡ ಬೇಕಾಗಬಹುದು. ಸೂಕ್ತ ಸಮಯದಲ್ಲೇ ವೈದ್ಯರ ಸಲಹೆ ಅತ್ಯಗತ್ಯ.

 

 

 

 

 

 

 

 

 

ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು-560098. Ph:o80-28606789/9663311128
ಶಾಖೆ: ರಾಜಾಜಿನಗರ:080-2315873/ 9900031842
E-mail : endoram2006@yahoo.co.in   /altiushospital@yahoo.com

Share this: