Vydyaloka

ನಿದ್ರಾಹೀನತೆ ಸಮಸ್ಯೆಗೆ ಯೋಗದಿಂದ ಪರಿಹಾರ

ನಿದ್ರಾಹೀನತೆ ಎಂಬ ಸಮಸ್ಯೆ ಇಂದು ಬಹಳವಾಗಿ ಕಾಡುತ್ತಿದೆ. ನಿದ್ದೆಯ ಕೊರತೆಯಿಂದ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಕಾಯಿಲೆಗಳೂ ಎದುರಾಗುತ್ತದೆ. ಮನಸ್ಸನ್ನು ಆದಷ್ಟು ಉಲ್ಲಾಸಿತವಾಗಿರಿಸಿಕೊಂಡು, ಯಾವುದೇ ಯೋಚನೆ ಮಾಡದೆ, ಮಲಗುವ ಮುನ್ನ ಎಲ್ಲಾ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ಮಲಗಿದರೆ ಸರಿಯಾಗಿ ನಿದ್ದೆ ಬರುವುದರ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬುದೊಂದು ಗಾದೆಯಿದೆ. ಆದರೆ ಈ ಪುಣ್ಯವಿರುವ ವ್ಯಕ್ತಿಗಳು ಈ ಜಗತ್ತಿನಲ್ಲಿ ನಗಣ್ಯ. ಹೆಚ್ಚಿನವರಿಗೆ ತಮ್ಮ ತಮ್ಮ ಕೆಲಸದ ಅಥವಾ ಕರ್ತವ್ಯಗಳ ಕುರಿತಾದ ಚಿಂತೆಯೇ ಸಹಜ ನಿದ್ದೆಗೆ ಅಡ್ಡಗಾಲು ಹಾಕುತ್ತಿರುತ್ತದೆ. ಇಂದು ಜಗತ್ತಿನಲ್ಲಿ ನಿದ್ರಾಹೀನತೆ (Insomnia) ಎಂಬ ಸಮಸ್ಯೆ ಬಹಳವಾಗಿ ಕಾಡುತ್ತಿದೆ. ಕೆಲವರಿಗೆ ನಿದ್ದೆಯಂತೂ ಸುಲಭವಾಗಿ ಬರುವುದಿಲ್ಲ. ಹಾಗೆ ಬಂದರೂ ಚಿಕ್ಕ ಸದ್ದಿಗೆ ಎಚ್ಚರವಾಗುತ್ತದೆ. ಇವರು ದಿನದ ಅವಧಿಯಲ್ಲಿ ಚೇತನಾರಹಿತರಾಗಿದ್ದು, ಮಂಕುಕವಿದಂತಿರುತ್ತಾರೆ.

ಪ್ರತಿಯೊಬ್ಬರಿಗೂ ಸಾಕಷ್ಟು ಅವಧಿಯ ಗಾಢ ನಿದ್ದೆ ಅವಶ್ಯವಾಗಿದ್ದು, ನಿದ್ದೆಯ ಕೊರತೆಯಿಂದ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಕಾಯಿಲೆಗಳೂ ಎದುರಾಗುತ್ತದೆ. ನಿದ್ದೆಯಿಲ್ಲದಾಗ ಸುಸ್ತು, ಗಮನಹರಿಸಲು ಸಾಧ್ಯವಾಗದೇ ಹೋಗುವುದು, ಭಾವನೆಗಳಲ್ಲಿ ಏರುಪೇರು, ಕೆಲಸದಲ್ಲಿ ಕ್ಷಮತೆ ಸಾಧ್ಯವಾಗದಿರುವುದು ಮೊದಲಾದವುಗಳು ಎದುರಾಗುತ್ತದೆ. ಏಕೆ ನಿದ್ದೆ ಬರುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿ ವ್ಯಕ್ತಯ ಉತ್ತರವೂ ಬೇರೆಯೇ ಆಗಿರುತ್ತದೆ. ಅತಿ ಸಾಮಾನ್ಯವಾದ ಉತ್ತರಗಳಲ್ಲಿ ಮಾನಸಿಕ ಒತ್ತಡ, ಅಸಮಾಧಾನಕರ ಸಂದರ್ಭ, ನಿದ್ದೆಯ ಅವಧಿ ಬದಲಾಗುವುದು ಮೊದಲಾದವು ಅತಿ ಗಂಭೀರವಲ್ಲದ ಸ್ಥಿತಿಯಾಗಿದೆ.

ನಿದ್ರಾಹೀನತೆ ತೊಂದರೆ ಎದುರಾಗಿದ್ದರೆ ಇವುಗಳನ್ನು ಪ್ರಯತ್ನಿಸಿ

ಆದರೆ ಕೆಲವರಿಗೆ ನಿದ್ರಾಹೀನತೆ ದಿನಗಟ್ಟಲೆ ಮುಂದುವರೆದದ್ದು, ಅವರಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಮನಸ್ಸನ್ನು ಆದಷ್ಟು ಉಲ್ಲಾಸಿತವಾಗಿರಿಸಿಕೊಂಡು, ಯಾವುದೇ ಯೋಚನೆ ಮಾಡದೆ, ಮಲಗುವ ಮುನ್ನ ಎಲ್ಲಾ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ಮಲಗಿದರೆ ಸರಿಯಾಗಿ ನಿದ್ದೆ ಬರುವುದರ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒಂದು ವೇಳೆ ನಿಮಗೂ ಆಗಾಗ ನಿದ್ರಾಹೀನತೆ ತೊಂದರೆ ಎದುರಾಗಿದ್ದರೆ ಅಥವಾ ಮಲಗಿದಾಕ್ಷಣ ನಿದ್ದೆ ಬರುತ್ತಿಲ್ಲವಾದರೆ ಕೆಳಗೆ ವಿವರಿಸಿರುವ ಕೆಲವು ಸುಲಭ ವಿಧಾನಗಳಲ್ಲಿ ನಿಮಗೆ ಸೂಕ್ತವಾದುದನ್ನು ಅನುಸರಿಸಬಹುದು.

1. ಮಲಗುವ ಮೊದಲು ಕೆಲವು ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಮಾಡುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದು. ಅನುಲೋಮ ವಿಲೋಮ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ ಮಾಡಿ ಮಲಗಿದರೆ ಖಂಡಿತ ಮಲಗಿದ ಕೂಡಲೇ ನಿದ್ದೆಯು ಆವರಿಸುತ್ತದೆ.

2.ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಸ್ನಾಯುಗಳು ನಿರಾಳಗೊಳ್ಳುತ್ತವೆ ಹಾಗೂ ರಕ್ತಪರಿಚಲನೆ ಸುಲಭವಾಗುವ ಮೂಲಕ ನಿದ್ದೆಯೂ ಸುಲಭವಾಗಿ ಆವರಿಸುತ್ತದೆ. ಸ್ನಾನ ಮಾಡಿದ ತಕ್ಷಣ ಮಲಗಬಾರದು. ಅತ್ಯುತ್ತಮವೆಂದರೆ ಈ ಅವಧಿಯಲ್ಲಿ ಕೊಂಚ ದೂರ ಅಡ್ಡಾಡಿ ಬರುವುದು ಅಥವಾ ಮನೆಯಲ್ಲಿಯೇ ಸ್ವಲ್ಪ ಹೊತ್ತು ನಡೆದಾಡುವುದು (walking) ಮಾಡಿದರೆ ನಿದ್ದೆಯು ಚೆನ್ನಾಗಿ ಬರುತ್ತದೆ.

3. ಒಂದು ವೇಳೆ ಬಿಸಿನೀರಿನ ಸ್ನಾನ ಮಾಡಲು ಅವಕಾಶವಿಲ್ಲದಿದ್ದರೆ ಕೊಂಚ ಹೊತ್ತು ಕೇವಲ ಪಾದಗಳನ್ನಾದರೂ ಬಿನಿನೀರಿನ ಬಕೆಟ್ಟೊಂದರಲ್ಲಿ ಮುಳುಗಿಸಿಟ್ಟು ಬಳಿಕ ಕೊಂಚವೇ ಮಸಾಜ್ ಮಾಡಿಕೊಂಡು ಮಲಗಿದರೂ ಆದಷ್ಟು ಬೇಗನೆ ನಿದ್ದೆ ಬರುತ್ತದೆ ಎಂದು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾಗಿದೆ.

4. ಸಾಮಾನ್ಯವಾಗಿ ಹಾಸಿಗೆಯ ಮೇಲೆ ಮಲಗಿಯೇ ನಾವು ಕೆಲವಾರು ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಟಿವಿ ವೀಕ್ಷಣೆ ಮೊದಲಾದವು. ಸಾಧ್ಯವಾದಷ್ಟು ಹಾಸಿಗೆಯ ಮೇಲೆ, ಮಲಗುವ ಉದ್ದೇಶದಿಂದಲೇ ಪವಡಿಸಿ. ಇದು ಸಾಧ್ಯವಾಗದೇ ಇದ್ದಾಗ ಆದಷ್ಟೂ ಟಿವಿ, ಲ್ಯಾಪ್‍ಟಾಪ್ ವೀಕ್ಷಣೆಯನ್ನು ಇಲ್ಲವಾಗಿಸಿ ಮನಸ್ಸಿಗೆ ಮುದನೀಡುವ ಧ್ಯಾನ ಅಥವಾ ಒಳ್ಳೆಯ (positive thoughts)  ಪುಸ್ತಕಗಳನ್ನು ಓದುವುದು ಮೊದಲಾದವುಗಳ ಮೂಲಕ ನಿದ್ದೆಗೆ ಜಾರಲು ಯತ್ನಿಸಿ.

5. ನಿದ್ರಾಹೀನತೆಗೆ ಕೇಸರಿ ಬೆರೆಸಿದ ಹಾಲು ಅಥವಾ ಅರಿಶಿನ ಬೆರೆಸಿದ ಹಾಲು ಒಂದು ಉತ್ತಮ ಪರಿಹಾರವಾಗಿದೆ. ಕೇಸರಿಯಲ್ಲಿರುವ ಲಘುವಾದ ನಿದ್ರಾಜನಕ ಗುಣ ತಕ್ಷಣವೇ ನಿದ್ದೆ ಆವರಿಸಲು ನೆರವಾಗುತ್ತದೆ. ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಯಕೃತ್(Liver) ನಲ್ಲಿರುವ ಕಲ್ಮಶಗಳು ನಿವಾರಣೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯ ಸುಲಭಗೊಳ್ಳುತ್ತದೆ. ಇವೆಲ್ಲವೂ ಶೀಘ್ರವಾಗಿ ನಿದ್ದೆ ಬರಲು ನೆರವಾಗುತ್ತದೆ.

6. ನಿದ್ರಾಹೀನತೆಗೆ ಮಲಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ ಸಣ್ಣ ಚಮಚ ಜೇನು ಬೆರೆಸಿ ಕುಡಿದು ಮಲಗಿದರೆ ಕೂಡಲೇ ನಿದ್ದೆ ಬರುವುದು.

ಬಿ.ವಿ. ಶ್ರೀಮತಿ ರಮೇಶ್
ಶ್ರೀ ಯೋಗ ಮತ್ತು ಸಾಂಸ್ಕøತಿಕ ಅಕಾಡೆಮಿ(ರಿ)
ಸಂಸ್ಥಾಪಕಿ, ಕಾರ್ಯದರ್ಶಿ ಮತ್ತು ಯೋಗ ಶಿಕ್ಷಕಿ
Mobile – 98803 86687
Email : sri.ycaofficial@gmail.com

Share this: