Vydyaloka

ನೆಲನೆಲ್ಲಿ : ಗಿಡ ಚಿಕ್ಕದಾದರೂ ಗುಣ ದೊಡ್ಡದು

ನೆಲನೆಲ್ಲಿ ಗಿಡ ಚಿಕ್ಕದಾದರೂ ಗುಣ ದೊಡ್ಡದು. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಲದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಕಾಮಾಲೆಗೆ ನೆಲನೆಲ್ಲಿ ಅತ್ಯುತ್ತಮ ಔಷಧಿ. ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ವೈರಸ್ ಬಗ್ಗೆ ನಾವೆಲ್ಲಾ ಚಿಂತಿಸುತ್ತಿರುವ ಈ ಕಾಲದಲ್ಲಿ ಇಂದು ಒಂದು ಬಹುವೈರಸ್ ನಿರೋಧಕ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ. ಅದೇ ನೆಲನೆಲ್ಲಿ. ಸರ್ಪಸುತ್ತು, ಚಿಕೂನ್ ಗುನ್ಯಾ, ಹೆಪಟೈಟಿಸ್, ಏಡ್ಸ್, ನ್ಯೂಮೋನಿಯಾ ಹೀಗೆ ಹಲವು ಖಾಯಿಲೆಗಳಿಗೆ ಕಾರಣವಾಗುವ ವಿವಿಧ ವೈರಸ್ ಗಳನ್ನು ನಾಶಪಡಿಸುವ ಶಕ್ತಿ ಇದಕ್ಕಿದೆ ಎಂಬುದು ಸಾಬೀತಾಗಿದೆ. ಕೆಲದಿನಗಳ ಕಾಲ ನಿತ್ಯ ಬಳಕೆ ಮಾಡಿದರೆ ನಮ್ಮ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ತಂಪುಗುಣ ಹೊಂದಿರುವ ಕಾರಣ ಬೇಸಿಗೆಯಲ್ಲೂ ಉಷ್ಣವಾಗುವ ಭಯವಿಲ್ಲದೇ ಬಳಸಬಹುದು.

1. ದೇಹದಲ್ಲಿ ಉರಿ, ಮೂತ್ರದ ಸಮಸ್ಯೆಗಳು, ಪದೇ ಪದೇ ಬರುವ ಜ್ವರ, ನೆಗಡಿಗಳನ್ನು ಕಡಿಮೆ ಮಾಡುತ್ತದೆ.

2. ರಕ್ತವನ್ನು ಶುದ್ಧಿಗೊಳಿಸಿ ಗಾಯಗಳನ್ನು ಬೇಗ ಗುಣಗೊಳಿಸುತ್ತದೆ. ಚರ್ಮರೋಗಗಳೂ ಬೇಗ ಗುಣವಾಗುವಂತೆ ಮಾಡುತ್ತದೆ.

3. ಮಲೇರಿಯಾದಲ್ಲೂ ಇದನ್ನು ಬಳಸುತ್ತಾರೆ.

4. ಮೂತ್ರಮಾರ್ಗದ ವಿಕಾರಗಳನ್ನು ಗುಣಪಡಿಸಿ ಸರಾಗ ಮೂತ್ರವಾಗುವಂತೆ ಮಾಡುತ್ತದೆ.

5. ಮೂಳೆ ಮುರಿತದಲ್ಲೂ ಇದನ್ನು ಬಳಸಬಹುದು.

ಲಿವರ್ ಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳಲ್ಲಿ  ಅತ್ಯಂತ ಸಹಕಾರಿ:

ಲಿವರ್ ಗೆ ಶತ್ರುಗಳು ಬೇಕಾದಷ್ಟಿವೆ. ನಮ್ಮ ನಾಲಿಗೆಯ ಚಪಲಕ್ಕೆ ಆ ಶತ್ರುಗಳು ಹೊಟ್ಟೆ ಸೇರಿ ಲಿವರ್ ಅನ್ನು ಬಹುವಿಧದಲ್ಲಿ ಕಾಡುತ್ತವೆ. ಅಂಥ ಸಂದರ್ಭದಲ್ಲಿ ಲಿವರ್ ನ ಆಪ್ತರಕ್ಷಕನಾಗಿ ಕೆಲಸ ಮಾಡಬಲ್ಲ ಶಕ್ತಿ ಈ ನೆಲನೆಲ್ಲಿಗಿದೆ. ಮದ್ಯಪ್ರಿಯರಂತೂ ಇದನ್ನು ಜೊತೆಗಿಟ್ಟುಕೊಳ್ಳಲೇಬೇಕು. ಮದ್ಯಪಾನ ಬಿಟ್ಟ ನಂತರ ಇದನ್ನು ನಿಯಮಿತವಾಗಿ ಸೇವಿಸಿದರೆ ಲಿವರ್ ಮತ್ತೆ ಸುಸ್ಥಿತಿಗೆ ಬರಲು ಸಹಕಾರಿಯಾಗುತ್ತದೆ. ಆದರೆ ಮದ್ಯಪಾನ ಬಿಡದಿದ್ದರೆ ಅಷ್ಟು ಪ್ರಯೋಜನವಾಗಲಿಕ್ಕಿಲ್ಲ.ಲಿವರ್ ಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳಲ್ಲಿ- ಕಾಮಾಲೆಯಿಂದ ಹಿಡಿದು ಲಿವರ್ ನ ಕ್ಯಾನ್ಸರ್ ವರೆಗೆ ಇದು ಅತ್ಯಂತ ಸಹಕಾರಿ.

Also Read: ಯಕೃತ್ತು ಎಂಬ ವಿಸ್ಮಯ ಜಗತ್ತು- ವಿಶ್ವ ಲಿವರ್ ದಿನಾಚರಣೆ- ಏಪ್ರಿಲ್ 19 

1. ಜಾಂಡೀಸ್, ಲಿವರ್ ಅಥವಾ ಸ್ಪ್ಲೀನ್ ನ ಬಾವು ಮುಂತಾದ ಸಮಸ್ಯೆಗಳಲ್ಲಿ ಇಡೀ ಗಿಡವನ್ನು ತಂದು ಅತ್ಯಲ್ಪ ನೀರು ಬಳಸಿ 15ರಿಂದ 20 ಮಿಲೀ ರಸ ತೆಗೆದು ಅದನ್ನು ಕೆಲದಿನಗಳ ಕಾಲ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

2. ತಾಜಾ ಗಿಡ ಸಿಗದೇ ಹೋದರೆ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುವ ಒಣಗಿದ ಗಿಡದ ತುಂಡುಗಳನ್ನು ತಂದು 10 ಗ್ರಾಂನಷ್ಟು ಪುಡಿಯನ್ನು 150 ಮಿಲೀ ನೀರಿಗೆ ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಸಿ 40 ಮಿಲೀಗೆ ಇಳಿಸಿ ಸೋಸಿ ಕುಡಿಯಬೇಕು. ಅದರ ನುಣ್ಣನೆಯ ಪುಡಿಯನ್ನು ಬಳಸುವುದಾದರೆ ದಿನಕ್ಕೆ 3ರಿಂದ 6 ಗ್ರಾಂ ಪುಡಿಯನ್ನು ಬಿಸಿನೀರಿಗೆ ಹಾಕಿ ಕುಡಿಯಬಹುದು. ಇದಕ್ಕಿಂತಲೂ ತಾಜಾ ರಸ ಅಥವಾ ಕಷಾಯ ಬಳಸುವುದು ಸೂಕ್ತ. ಇದರಿಂದ ಲಿವರ್ ನ ಕಾರ್ಯಕ್ಷಮತೆ ಹೆಚ್ಚಿ ಹಸಿವು ಚೆನ್ನಾಗಿ ಆಗುತ್ತದೆ.

3. ಚಿಕ್ಕ ಮಕ್ಕಳಿಗೂ ಕಡಿಮೆ ಪ್ರಮಾಣದಲ್ಲಿ ಕೊಡಬಹುದು. ಇದರಿಂದ ಮಕ್ಕಳಿಗೆ ಪದೇ ಪದೇ ಕಾಡುವ ನೆಗಡಿ, ಜ್ವರ, ಕೆಮ್ಮುಗಳು ಹತೋಟಿಗೆ ಬರುತ್ತವೆ. ಜೊತೆಗೆ ಬಾಯಿ ರುಚಿ ಹೆಚ್ಚಿ ಮಕ್ಕಳ ಆಹಾರ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ.

4. ನಿತ್ಯ ಕುಡಿಯುವ ಹರ್ಬಲ್ ಟೀಗಳಲ್ಲೂ ಇದನ್ನು ಬಳಸಬಹುದು. ಹೀಗೆ ಬಳಸುವುದರಿಂದ ಮೇಲೆ ಹೇಳಿದ ಸಮಸ್ಯೆಗಳು ಕಡಿಮೆಯಾಗುವುದೊಂದೇ ಅಲ್ಲ ಅವು ಇಲ್ಲದಿದ್ದರೆ ಬರದಂತೆಯೂ ತಡೆಯುತ್ತದೆ. ಮನೆಮುಂದೆ ಅಥವಾ ಟೆರೇಸ್ ನಲ್ಲಿ ಸ್ವಲ್ಪ ಜಾಗದಲ್ಲಿ ಬೆಳೆಸಿಕೊಂಡರೆ ವರ್ಷಪೂರ್ತಿ ಬಳಸಬಹುದು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ, ಶಿರಸಿ, ಉ.ಕ.
ದೂ: 94487 29434/97314 60353
Email: drvhegde@yahoo.com; nisargamane6@gmail.com
http://nisargamane.com
Share this: