ನಾಗರ ಪಂಚಮಿ ಆಚರಣೆಯ ಹಿಂದೆಯೂ ಆರೋಗ್ಯ ಲಾಭಗಳಿವೆ. ಶ್ರಾವಣ ಮಾಸದಲ್ಲಿ ಜೋಕಾಲಿ ಆಡುವುದು ಆನಂದವನ್ನಷ್ಟೇ ಕೊಡುವುದಿಲ್ಲ, ಆರೋಗ್ಯವರ್ಧನೆಗೂ ಸಹಕಾರಿ.
ಇವೆಲ್ಲವುಗಳ ಹಿಂದಿನ ಒಂದು ಆರೋಗ್ಯ ಲಾಭದ ಕಾರಣವೆಂದರೆ ಈ ದಿನವು ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ. ಈ ಸಮಯದ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಇಂದಿನ ದಿನ ಪರಿಸರದೊಂದಿಗೆ ನಾವು ಕಳೆಯುವ ಸಮಯವು ನಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರಿ ಆಹ್ಲಾದತೆಯನ್ನು ಹೆಚ್ಚಿಸುತ್ತದೆ.
ನಾಗರ ಪಂಚಮಿಯು ಅಚ್ಚ ಕನ್ನಡ ಅಣ್ಣ-ತಂಗಿಯರ ಹಬ್ಬವೂ ಕೂಡಾ ಹೌದು. ಪುರಾಣ ಕಥೆಗಳ ಪ್ರಕಾರ ಅಣ್ಣಂದಿರ ಜೀವವನ್ನು ಮರಳಿ ಪಡೆದುಕೊಳ್ಳುವಲ್ಲಿ ಆ ಕನ್ನಿಕೆಯೊಬ್ಬಳು ಯಶಸ್ವಿಯಾದ ದಿನವೇ ನಾಗರಪಂಚಮಿ. ನಾಗರಪಂಚಮಿಯ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ ಎಂಬುದು ನಂಬಿಕೆ. ಸಂಬಂಧಗಳೇ ಇಲ್ಲದಂತೆ ಬದುಕುತ್ತಿರುವ ಈ ಯಾಂತ್ರಿಕ ಯುಗದಲ್ಲಿ ಸಹೋದರ ಸಹೋದರಿಯರ ನಡುವಿನ ಭಾವ ಬಂಧನವನ್ನು ಈ ಮೂಲಕ ಹೆಚ್ಚಿಸಲು ಕೆಲವು ಶಾಸ್ತ್ರಗಳು ಆಚರಣೆಗೆ ಬಂದವು.
ಶ್ರಾವಣಮಾಸದಲ್ಲಿ ಜೋಕಾಲಿ ಆಡುವುದು ಆರೋಗ್ಯಕ್ಕೆ ಹಿತಕರ
ಮಳೆಗಾಲದಲ್ಲಿ ಕುಡಿಯುವ ನೀರಿನಲ್ಲಿ ಅಮ್ಲದೋಷದ ಕಾರಣದಿಂದ ನಮ್ಮಜೀರ್ಣಶಕ್ತಿ ದುರ್ಬಲವಾಗುತ್ತದೆ. ಇಂತಹ ಸಮಯದಲ್ಲಿ ಜೀಕು-ಜೋಕಾಲಿ ಆರೊಗ್ಯಕ್ಕೆ ಹಿತಕರವಾಗಿರುತ್ತದೆ. ಜೋಕಾಲಿ ಆಡುವುದರಿಂದ ನಮ್ಮ ಮೈಮನಕ್ಕೆ ಉತ್ಸಾಹ ಲಭಿಸುತ್ತದೆ. ಈ ಕಾರಣದಿಂದ ತಲೆ ಹಾಗೂ ಕತ್ತಿನ ಭಾಗದ ನರಗಳಲ್ಲಿ ಉಂಟಾಗುವ ಒತ್ತಡ ಕಡಿಮೆಯಾಗುತ್ತದೆ. ಇದರ ಸಕರಾತ್ಮಕ ಪ್ರಭಾವ ನಮ್ಮ ಸ್ಮರಣಶಕ್ತಿ ಮತ್ತು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಉಂಟುಮಾಡುತ್ತದೆ. ಜೋಕಾಲಿ ಆಡುವಾಗ ಶ್ವಾಸ ತೆಗೆದುಕೊಳ್ಳುವುದು ವೇಗಪಡೆದುಕೊಳ್ಳುತ್ತದೆ. ಇದರ ಪರಿಣಾಮವಾಗಿ ನಮ್ಮ ಶ್ವಾಸಕೋಶಗಳ ಕ್ರಿಯಾಶೀಲತೆ ಹೆಚ್ಚಳವಾಗುತ್ತದೆ. ಅವು ಬಲಗೊಳ್ಳುತ್ತವೆ. ಶ್ವಾಸಕೋಶಗಳಿಗೆ ಜೋಕಾಲಿ ಒಂದು ಉತ್ತಮ ವ್ಯಾಯಾಮ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.
ಜೋಕಾಲಿ ಆಡುವುದರಿಂದ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಆಮ್ಲಜನಕ ದೊರೆಯುತ್ತದೆ. ಶ್ವಾಸದ ಮುಖಾಂತರ ಶರೀರಕ್ಕೆ ಅಧಿಕ ಶಕ್ತಿ ಲಭಿಸುತ್ತದೆ. ಇನ್ನೊಂದೆಡೆ ರಕ್ತದ ಶುದ್ಧಿಕರಣ ಪ್ರಕ್ರಿಯೆಯೂ ಸಾಗುತ್ತದೆ. ಮಳೆಗಾಲದಲ್ಲಿ ಇತರ ಋತುವಿಗೆ ಹೋಲಿಸಿದರೆ ವಾತಾವರಣ ಹೆಚ್ಚು ಶುದ್ಧವಾಗಿರುತ್ತದೆ. ಏಕೆಂದರೆ ಮಳೆಯಾಗುವುದರಿಂದ ಗಾಳಿಯಲ್ಲಿ ತೇಲಾಡುವ ಧೂಳಿನಕಣಗಳು, ಕಾರ್ಬನ್ನ ಸೂಕ್ಷ್ಮಕಣಗಳು ಮತ್ತು ನೀರಿನಲ್ಲಿ ಕರಗುವ ಹಾನಿಕಾರಕ ಗ್ಯಾಸ್ಗಳು, ಮಳೆನೀರಿನ ಜೊತೆಗೆ ಭೂಮಿಗೆ ಬರುತ್ತದೆ. ಜೋಕಾಲಿ ಆಡುವುದರಿಂದ ಶುದ್ಧಗಾಳಿಯ ಸೇವನೆ ಅಧಿಕವಾಗುತ್ತದೆ. ಅದು ಆರೋಗ್ಯಕ್ಕೆ ಅನುಕೂಲವಾಗಿದೆ.
ಇದಲ್ಲದೆ ಈ ಹಬ್ಬಕ್ಕಾಗಿ ಮನೆಯಲ್ಲಿ ಮಾಡುವ ಎಳ್ಳುಉಂಡೆ, ಶೇಂಗಾ ಉಂಡೆ, ಕಡಲೆ ಉಂಡೆ, ಅರಿಶಿನದ ಎಲೆ ಮೇಲೆ ಮಾಡುವ ಪಾತೋಳಿ ಸೇರಿದಂತೆ ಹಲವಾರು ತಿನಿಸುಗಳನ್ನು ಮಾಡುವ ಸಂಪ್ರದಾಯವೂ ಇದೆ. ಈ ಸಮಯದಲ್ಲಿ ಇಂತಹ ತಿನಿಸುಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರಕುತ್ತವೆ. ಹೀಗೆ ನಾಗರ ಪಂಚಮಿ ಆಚರಣೆಯ ಹಿಂದೆಯೂ ಆರೋಗ್ಯ ಲಾಭಗಳಿವೆ. ಅರಿತು ಆಚರಿಸಿದರೆ ಹಬ್ಬ ಮತ್ತಷ್ಟು ಉತ್ಸಾಹ ಹೆಚ್ಚಿಸುತ್ತದೆ.
(ಮೂಲಗಳಿಂದ)
ಸಚಿನ್ ಶರ್ಮಾ ಬೆಂಗಳೂರು
ಆರೋಗ್ಯ ಚಿಂತಕರು
ಮೊ: 9036723369