Vydyaloka

ಮನೆ ಆಹಾರದಿಂದ ಆರೋಗ್ಯ ರಕ್ಷಣೆ

ಮನೆ ಆಹಾರದಿಂದ ಆರೋಗ್ಯ ರಕ್ಷಣೆ ಬಹುತೇಕ ಖಚಿತ. ಈ ಕೋವಿಡ್ ಕಾಯಿಲೆಯ ಸಮಯದಲ್ಲಿ ಮನೆಯ ಆಹಾರವನ್ನು ಮಾತ್ರ ತಿನ್ನುವುದು ರೋಗನಿರೋಧಕ ಶಕ್ತಿಗೂ ಒಳ್ಳೆಯದು. ನಾವೆಲ್ಲ ಕೃತ್ರಿಮ ಆಹಾರ, ಪ್ಯಾಕ್ ಮಾಡಿದ, ಶೀತ ಪೆಟ್ಟಿಗೆಯಲ್ಲಿಟ್ಟ, ಸುಡದ ಹಾಗೂ ಅಂಟಿಕೊಳ್ಳದ ಕೃತ್ರಿಮ ತವ್ವಾ ಬಳಕೆಯ, ಬೇಕರಿ ಆಹಾರಗಳನ್ನು ರಸ್ತೆ ಬದಿಯ ಜಂಕ್ ಆಹಾರವನ್ನು ತಿನ್ನಬಾರದು.

ಆತ್ಮೀಯ ಓದುಗರೇ, ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಯೂ ಟ್ಯೂಬ್‍ನಲ್ಲಿ, ಆಹಾರದಿಂದ ಆರೋಗ್ಯ ಎಂಬ ಗುರಿಯಿಂದ ಬೆಂಗಳೂರಿನ ಸಹಕಾರ ನಗರದ ನಿವಾಸಿ, ವೀಣಾ ಶ್ರೀಧರ್ ಅವರು ಸುಮಾರು 88 ವಿಡೀಯೋಗಳನ್ನು ಪ್ರದರ್ಶಿಸಿದ್ದಾರೆ. ಚಿಕ್ಕಂದಿನಿಂದ ಅವರ ಅಜ್ಜಿಯ ಗಿಡಮೂಲಿಕೆಗಳ ಜ್ಞಾನ ಹಾಗೂ ಅಮ್ಮನ ಅಡಿಗೆಯಲ್ಲಿ ಬಳಸುತ್ತಿದ್ದ ಗಿಡಮೂಲಿಕೆಗಳು ಇವುಗಳ ಹಿನ್ನೆಲೆಯಲ್ಲಿ, ಬಾಲಕಿಯಾಗಿದ್ದ ವೀಣಾ ಗೋಡೆ ಸಂದಿಯಲ್ಲಿ, ಕೆರೆಯ ತುದಿಯ ಕಲ್ಲು ಬಂಡೆಯ ಕೆಳಗೆ, ಮೈದಾನದ ಮೂಲೆಯಲ್ಲಿ, ಕಾಂಪೌಂಡಿನ ಗೋಡೆಗುಂಟ ಬೆಳೆದ ಸಸಿಗಳನ್ನು ಕಿತ್ತು ತರುವ ಪ್ರವೃತ್ತಿ ಬೆಳೆಸಿಕೊಂಡಿದ್ದಳು. ಅನೇಕ ವರ್ಷ ಗ್ಯಾಸ್ಟ್ರಿಕ್, ಥೈರಾಯಿಡ್ ಆರೋಗ್ಯ ಸಮಸ್ಯೆಗಳನ್ನು ಎದುರಿಸಿ ಔಷದೋಪಚಾರ ಪಡೆದರು.

ಬೇಕರಿ, ರಸ್ತೆ ಬದಿಯ ಜಂಕ್ ಆಹಾರ ತಿನ್ನಬಾರದು:

ಮುಂದೆ ಜೀವನಶೈಲಿಯಲ್ಲೇ ಬೆಳಗಿನ ಕಾಫಿಯಿಂದ ಆರಂಭಿಸಿ, ತಿಂಡಿ- ಮಧ್ಯಾಹ್ನದ ಊಟ- ಸಂಜೆಯ ತಿಂಡಿ ಹಾಗೂ ರಾತ್ರಿಯ ಊಟಗಳಲ್ಲಿ ವಿವಿಧ ಧಾನ್ಯಗಳು, ಗಿಡಮೂಲಿಕೆಗಳು, ಮನೆ ಔಷಧಿಯ ಮೂಲಪದಾರ್ಥಗಳು ಇವುಗಳನ್ನೆಲ್ಲ ಯೋಗ್ಯ ಪ್ರಮಾಣದಲ್ಲಿ ಆಹಾರದಂತೆ ಬಳಸಿ, ತಮ್ಮ- ತಮ್ಮ ಪತಿಯ ಹಾಗೂ ಒಬ್ಬಳೇ ಮಗಳ ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿ, ಆರೋಗ್ಯ ಹಾಗೂ ಆನಂದ ಅನುಭವಿಸುತ್ತಿದ್ದಾರೆ. ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸಲು, ಜೀರ್ಣಶಕ್ತಿ ವೃದ್ಧಿಸಲು, ಜೀರ್ಣಾಂಗ ವ್ಯವಸ್ಥೆಯಲ್ಲಿ ಕರುಳು ಸ್ವಚ್ಛವಾಗಿಸುವಿಕೆಯಲ್ಲಿ, ಆಮ್ಲತೆ ಕಡಿಮೆ ಮಾಡುವುದು, ತೆಳ್ಳಗಾಗುವುದು, ಆಯಸ್ಸು ಹೆಚ್ಚಿಸಲು,ಇವರಲ್ಲಿ ಸ್ವಾನುಭವದಿಂದ ತಯಾರಿಸಿರುವ ವಿವಿಧ ಪುಡಿಗಳು, ಚೂರ್ಣಗಳು ಲಭ್ಯವಿವೆ.

ಅನಾದಿ ಕಾಲದಲ್ಲಿ ಖುಷಿಮುನಿಗಳು ಕಾಡಿನಲ್ಲಿ ವಾಸಿಸುತ್ತ ದೀರ್ಘಕಾಲ ಪ್ರಕೃತಿಯ ಮಧ್ಯದಲ್ಲಿ ತಪಸ್ಸು ಮಾಡುತ್ತಿರುವಾಗ, ಅವರು ಬಳಸುತ್ತಿದ್ದ ಪ್ರಕೃತಿಯಲ್ಲಿಯ ತಾಜಾ ಹಣ್ಣು-ಗಡ್ಡೆ ಗೆಣಸುಗಳು, ಅವರಿಗೆ ಒಂದು ರೀತಿಯ ಕಾಂತಿಯನ್ನು ಕೊಟ್ಟು, ಸಂಪೂರ್ಣ ಆರೋಗ್ಯ ಹಾಗೂ ದೀರ್ಘಾಯಸ್ಸು ಕೊಡುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾವೆಲ್ಲ ಕೃತ್ರಿಮ ಆಹಾರ, ಪ್ಯಾಕ್ ಮಾಡಿದ, ಶೀತ ಪೆಟ್ಟಿಗೆಯಲ್ಲಿಟ್ಟ, ಸುಡದ ಹಾಗೂ ಅಂಟಿಕೊಳ್ಳದ ಕೃತ್ರಿಮ ತವ್ವಾ ಬಳಕೆಯ, ಬೇಕರಿ ಆಹಾರಗಳನ್ನು ರಸ್ತೆ ಬದಿಯ ಜಂಕ್ ಆಹಾರವನ್ನು ತಿನ್ನಬಾರದು.

ವೀಣಾ ಶ್ರೀಧರ್ ಹೆಲ್ತಿ ಕಿಚನ್ ಸಲಹೆ:

ನಮ್ಮ, ನಿಮ್ಮ, ನಿಮ್ಮ ಮಕ್ಕಳ ಆರೋಗ್ಯ ರಕ್ಷಿಸಲು ಈ ಲೇಖನದಲ್ಲಿ ಹೇಳಿದ ಕ್ರಮಗಳಲ್ಲಿ ಆಹಾರ-ಮನೆ ಔಷಧಿ ಮನೆಯಲ್ಲೇ ತಯಾರಿಸಿ ಬಳಸಿ. ನೀವೇ ಮಾಡಿ ಬಳಸಿ ಇದರ ಲಾಭ ಏನೆಂದು ನೀವೇ ಖುದ್ದಾಗಿ ಪರಿಶೀಲಿಸಿ ಒಪ್ಪಿಕೊಳ್ಳಿ.

1.ಬೇವಿನ ಹೂಗಳನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಇದನ್ನು ಮಜ್ಜಿಗೆ ಅನ್ನಕ್ಕೆ ನಂಚಿಕೊಳ್ಳಬಹುದು.

2.ಬೆಟ್ಟದ ನೆಲ್ಲಿಕಾಯಿ ತುರಿ ಮಾಡಿಟ್ಟುಕೊಳ್ಳಿ. ಇದನ್ನು ಹಾಗೇ ತಿನ್ನಬಹುದು. ಅಥವಾ ಚಟ್ನಿಗೆ ಬಳಸಬಹುದು. ಪ್ರಕೃತಿ ಚಿಕಿತ್ಸೆ ಹಾಗೂ ಆರ್ಯುವೇದದ ಪ್ರಕಾರ ನೆಲ್ಲಿಕಾಯಿಯಲ್ಲಿರುವ ಸಿ ಜೀವಸತ್ವ ಮನುಷ್ಯನ ಅನೇಕ ಕಾಯಿಲೆಗಳನ್ನು ಅವನಿಂದ ದೂರವಿಡುತ್ತದೆ.

3. ನೀಮ್ಮ ಆಹಾರದಲ್ಲಿ ಸಿ ಜೀವಸತ್ವ ಇದ್ದರೆ ಮಾತ್ರ, ತರಕಾರಿಗಳು ಹಾಗೂ ಧಾನ್ಯಗಳಲ್ಲಿಯ ಕಬ್ಬಿಣಾಂಶವನ್ನು ಇದು ಹೀರಿಕೊಳ್ಳುತ್ತದೆ. ಅದರಿಂದ ದೇಹಕ್ಕೆ ಅನುಕೂಲವಾಗುತ್ತದೆ. ಆದ್ದರಿಂದಲೇ ನಮ್ಮ ಹಿಂದಿನವರು ಊಟದ ಪದಾರ್ಥಗಳಿಗೆ, ತೊವ್ವೆಗೆ ಲಿಂಬೆಹಣ್ಣು ಹಿಂಡಿಕೊಳ್ಳುತ್ತಿದ್ದರು.

4.ಮೆಣಸು, ಜೀರಿಗೆ, ಕೊತ್ತಂಬರಿ, ಬೀಜ ಅರೆದು ಮಾಡುವ ಹೆಸರುಬೇಳೆ ಸಾರಿಗೆ ಲಿಂಬೆಹಣ್ಣು ಹಿಂಡಿದರೆ ಒಂದು ವಿಶೇಷ ರುಚಿ ಬರುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಮ ಆಹಾರದಲ್ಲಿ ಸಿ ಜೀವಸತ್ವದ ಪದಾರ್ಥಗಳು ಇಲ್ಲದಿದ್ದರೆ, ದೇಹದ ಒಳಗೆ ಬಂದ ಕಬ್ಬಿಣಾಂಶ ಹೀರಿಕೊಳ್ಳಲ್ಪಡದೇ, ಅದು ಮಲದಲ್ಲಿ ಹೊರಗೆ ಹೋಗಿಬಿಡುತ್ತದೆ.

5.ತ್ರಿಫಲ ಚೂರ್ಣ ಅಥವ ಪುಡಿಯಿಂದ ನಿಮ್ಮ ವೃದ್ಧಾಪ್ಯವನ್ನು ಮುಂದೆ ಹಾಕಿ, ಇದು ನಿಮ್ಮ ಆಯುಷ್ಯ ಹೆಚ್ಚಿಸುತ್ತದೆ. ಇದನ್ನು ಪ್ರತಿದಿನ ನಿಯಮಿತ ವೇಳೆಯಲ್ಲಿ ನಿಯಮಿತ ಪ್ರಮಾಣದಲ್ಲಿ ಸ್ವೀಕರಿಸಬೇಕು.

ತೆಳ್ಳಗಾಗಲು ವೀಣಾ ಶ್ರೀಧರ್ ತಯಾರಿಸಿರುವ ಪುಡಿ:

ಬೇಕಾದ ಪದಾರ್ಥಗಳು -ತ್ರಿಫಲಚೂರ್ಣ (ನೆಲ್ಲಿಕಾಯಿ ಸೇರಿಸಿ), ಒಣ ಶುಂಠಿ ಪುಡಿ, ಒಂದು ಕಪ್ ನೆಲ್ಲಿಕಾಯಿ ಪುಡಿ. ಈ ಮೂರನ್ನೂ ಹುರಿಯೋ ಹಾಗಿಲ್ಲ. ಯಾವುದೇ ರೂಪದಲ್ಲಿ ಇವುಗಳನ್ನು ಬಳಸಿದರೂ ಇವುಗಳ ಔಷಧೀಯ ಗುಣ ಹಾಳಾಗುವುದಿಲ್ಲ. ಒಂದು ಕಪ್ ಜೀರಿಗೆಯನ್ನು ಒಣಗಿಸಿ ಹುರಿಯಿರಿ. ಇದರ ಪುಡಿಯನ್ನು ಹುರಿಯಬಾರದು. ಒಂದು ಕಪ್ ಅಜವಾನ, ಒಂದು ಕಪ್ ಸೊಂಪು, ಒಂದು ಟೀ ಚಮಚ ಪೂರ್ತಿ ವಾಯುವಿಳಂಗ. ಇವುಗಳ ಅರ್ಧಭಾಗ ಮೆಂತ್ಯ, 8 ಲವಂಗ, 4 ಏಲಕ್ಕಿ, ಅರ್ಧ ಟೀ ಚಮಚ ಮೆಣಸು (ಇದರಿಂದ ಸ್ಥೂಲಕಾಯತೆ ಕಡಿಮೆಯಾಗುತ್ತದೆ) ಇವುಗಳನ್ನು ಒಣ ಬಾಣಲೆಯಲ್ಲಿ, ಎಣ್ಣೆ ಹಾಕದೇ ಬೇರೆ ಬೇರೆಯಾಗಿ ಒಂದೊಂದಾಗಿ ಹುರಿದುಕೊಳ್ಳಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ಈ ಪುಡಿ ತಿಂದು, ಒಂದು ಲೋಟ ಬೆಚ್ಚನೆಯ ನೀರು ಕುಡಿಯಬೇಕು.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this: