Vydyaloka

ಮಕ್ಕಳನ್ನು ಕಾಡುವ ಡಯಾಬಿಟಿಸ್

ಮಕ್ಕಳನ್ನು ಕಾಡುವ ಡಯಾಬಿಟಿಸ್ ಈಗ ಆತಂಕ ಸೃಷ್ಟಿಸಿದೆ. ಮಾನಸಿಕ ಒತ್ತಡವೇ ಇದಕ್ಕೆ ಮೂಲ ಕಾರಣ ಎನ್ನಬಹುದು.ಜೀವನಶೈಲಿಯ ಬದಲಾವಣೆಯು ಮಧುಮೇಹ ಹೊಂದಿರುವ ಮಕ್ಕಳಿಗೆ ಬಹಳ ಮುಖ್ಯ.

ಡಯಾಬಿಟಿಸ್ ಅಥವಾ ಮಧುಮೇಹ ಈಗ ಮಕ್ಕಳನ್ನೂ ಕಾಡಲಾರಂಭಿಸಿದೆ. ಸಕ್ಕರೆ ಕಾಯಿಲೆ ಈಗ 12 ರಿಂದ 14 ವಯಸ್ಸಿನ ಮಕ್ಕಳಲ್ಲೂ ಕಂಡುಬರುತ್ತಿರುವುದು ಆತಂಕ ಸೃಷ್ಟಿಸಿದೆ. ಚಾಕೋಲೆಟ್, ಐಸ್‍ಕ್ರೀಮ್‍ನಂಥ ಸಿಡಿ ತಿಂಡಿಗಳನ್ನು ಇಷ್ಟಪಡುವ ಮಕ್ಕಳಲ್ಲಿ ಈ ವಯಸ್ಸಿಗೆ ಡಯಾಬಿಟಿಸ್ ಕಾಡುತ್ತಿರುವುದು ದುರಂತದ ವಿಷಯ. ಇಲ್ಲಿಯವರೆಗೆ 40ರ ಗಡಿದಾಟಿದವರ ಮೇಲೆ ಆರೋಗ್ಯದ ಗಮನ ಇರುತ್ತಿತ್ತು. ಆದರೆ ಇತ್ತೀಚಿನ ವರದಿ-ಅಂಕಿಅಂಶಗಳ ಪ್ರಕಾರ ಚಿಣ್ಣರು ಸಕ್ಕರೆ ಕಾಯಿಲೆಯಿಂದ ಹೆಚ್ಚಾಗಿ ನರಳುತ್ತಿದ್ದಾರೆ. ತಂದೆ-ತಾಯಿಗಳಿಬ್ಬರಿಗೂ ಸಕ್ಕರೆ ಕಾಯಿಲೆ ಇದ್ದರೆ, ಇಂಥ ಪಾಲಕ ಪೋಷಕರ ಮಕ್ಕಳಲ್ಲಿ ಮಧುಮೇಹ ಕಂಡುಬರುವ ಸಂಭವ ಶೇಕಡ 50ರಷ್ಟು ಇರುತ್ತದೆ. ಇಬ್ಬರಲ್ಲಿ ಒಬ್ಬರಿಗೆ ಇದ್ದರೆ ಶೇಕಡ 36ರಷ್ಟು ಡಯಾಬಿಟಿಸ್ ತಗಲುವ ಸಾಧ್ಯತೆ ಉಂಟು. ಪಾಲಕರಿಬ್ಬರಲ್ಲೂ ಮಧುಮೇಹ ಇರದಿದ್ದರೆ ಶೇಕಡ 20ರಷ್ಟು ಮಕ್ಕಳಲ್ಲಿ ಈ ಕಾಯಿಲೆ ಬರುವ ಸಂಭವಿದೆ.

ಮಾನಸಿಕ ಒತ್ತಡವೇ ಮೂಲ ಕಾರಣ:

ಮಕ್ಕಳಲ್ಲಿ ಚಿಕ್ಕವಯಸ್ಸಿನ ಮೇಲೆ ಉಂಟಾಗುವ ಮಾನಸಿಕ ಒತ್ತಡವೇ ಇದಕ್ಕೆ ಮೂಲ ಕಾರಣ ಎನ್ನಬಹುದು. ಓದುವ ಒತ್ತಡ, ಶಿಕ್ಷಕರ ಭಯ, ಪರೀಕ್ಷೆಯ ಭೀತಿ, ಸ್ಪರ್ಧಾ ಪ್ರಪಂಚದ ಆತಂಕವಿರಬಹುದು ಅಥವಾ ಇತರ ಕಾರಣಗಳಿಂದಾಗಿ ಇಂದಿನ ಮಕ್ಕಳು ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಮಕ್ಕಳಲ್ಲಿ ಮಧುಮೇಹ ಕಾಣಿಸಿಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಈ ಮೇಲಿನ ಕಾರಣಗಳನ್ನು ಹೊರತುಪಡಿಸಿದೆ, ಕುರುಕಲು ತಿಂಡಿ, ಜಂಕ್ ಫುಡ್, ಫಾಸ್ಟ್ ಫುಡ್, ಜೀವನ ಶೈಲಿಯ ಕ್ರಮ ಬದಲಾವಣೆ, ಟೆಲಿವಿಷನ್ ವೀಕ್ಷಣೆ, ದೈಹಿಕ ಚಟುವಟಿಕೆ ಕಡಿಮೆಯಾಗುವಿಕೆ, ಆಹಾರ ಪದ್ಧತಿಯಲ್ಲಿ ಪರಿವರ್ತನೆ, ಅತಿ ಹೆಚ್ಚು ದೇಹಭಾರ, ಸ್ಥೂಲಕಾಯ ಸಹ ಇದಕ್ಕೆ ಕಾರಣವಿರಬಹುದು. ನವಜಾತ ಶಿಶುವಿನ ತೂಕವು 4 ಕೆ.ಜಿ.ಗಿಂತ ಹೆಚ್ಚಾಗಿದ್ದರೆ ಅಂತಹ ಮಕ್ಕಳಲ್ಲಿಯೂ ಮಧುಮೇಹ ಸಂಭವ ಇರುತ್ತದೆ.

ಈಗ ಭಾರತವು  ಮಧುಮೇಹ ರೋಗಿಗಳ ರಾಜಧಾನಿ:

ಮಧುಮೇಹ ರೋಗಿಗಳ ರಾಜಧಾನಿ ಎಂದು ಈಗ ಭಾರತವು ವಿಶ್ವದಲ್ಲಿ ಗುರುತಿಸಿಕೊಂಡಿದೆ. ಪ್ರಸ್ತುತ ದೇಶದಲ್ಲಿ 350 ಲಕ್ಷ ಯುವಕರು ಡಯಾಬಿಟಿಸ್‍ದಿಂದ ನರಳುತ್ತಿದ್ದಾರೆ. 2025ರ ವೇಳೆ ಈ ಸಂಖ್ಯೆ 575 ಲಕ್ಷಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿರುವ ಒಟ್ಟು ಸಕ್ಕರೆ ಕಾಯಿಲೆ ರೋಗಿಗಳ ಪೈಕಿ ದೆಹಲಿಯಲ್ಲಿ ಶೇಕಡ 14ರಷ್ಟು ಜನರಿದ್ದಾರೆ. ಇದಕ್ಕಿಂತಲೂ ಅಧಿಕ ಅಂದರೆ ಶೇಕಡ 18ರಷ್ಟು ಜನರು ಬೆಂಗಳೂರಿನಲ್ಲಿದ್ದಾರೆ. 2025ರ ವೇಳೆಗೆ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶೇಕಡ 75ರಷ್ಟು ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. 1995ರಲ್ಲಿ ಈ ಪ್ರಮಾಣ ಶೇಕಡ 62ರಷ್ಟಿತ್ತು ಎಂದು ವರದಿಯೊಂದು ಹೇಳಿದೆ. ಭಾರತವು ಮಧುಮೇಹದಿಂದ ಬಳಲುತ್ತಿರುವ 69.2 ದಶಲಕ್ಷ ಜನರಿಗೆ ನೆಲೆಯಾಗಿದೆ ಮತ್ತು 2040 ರ ವೇಳೆಗೆ 123.4 ದಶಲಕ್ಷದಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.ಮಾಹಿತಿಯ ಪ್ರಕಾರ, ಭಾರತದಲ್ಲಿ ಅಂದಾಜು 97,700 ಮಕ್ಕಳು ಟೈಪ್ 1 ಡಯಾಬಿಟಿಸ್‌ನಿಂದ ಬಳಲುತ್ತಿದ್ದಾರೆ. 

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯಕರ ಜೀವನವನ್ನು ನಡೆಸುವ ಮಾರ್ಗಗಳಿವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವುದು, ಇನ್ಸುಲಿನ್ ಹೊಂದಿಸುವುದು, ಸರಿಯಾದ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಮಾಡುವುದು ಕಡ್ಡಾಯವಾಗಿದೆ. ಟೈಪ್ 1 ಡಯಾಬಿಟಿಸ್ ಚಿಕಿತ್ಸೆಯಲ್ಲಿ ವ್ಯಾಯಾಮ ಪ್ರಮುಖ ಪಾತ್ರ ವಹಿಸುತ್ತದೆ. ಇನ್ಸುಲಿನ್ ಪ್ರಮಾಣವನ್ನು ಸಮತೋಲನಗೊಳಿಸುವುದು ಮತ್ತು ಮನೆಯ ಸುತ್ತಲಿನ ದೈನಂದಿನ ಕಾರ್ಯಗಳು ಸೇರಿದಂತೆ ಸರಳ ದೈಹಿಕ ಚಟುವಟಿಕೆಗಳೊಂದಿಗೆ ಆಹಾರವನ್ನು ಸೇವಿಸುವುದು ಸಹ ಮುಖ್ಯವಾಗಿದೆ. ಅಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟವು ತುಂಬಾ ಕಡಿಮೆಯಾಗುತ್ತಿದೆಯೇ ಎಂದು ಪರೀಕ್ಷಿಸಬೇಕು ಮತ್ತು ಅದನ್ನು ತಪ್ಪಿಸಬೇಕು.

ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ :  +91-80-4906 9000 Extn:1147/1366  ಮೊ.: 97422 74849
 www.vims.ac.in

Share this: