Vydyaloka

ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ

ಕರುಳಿನ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಲೇಬೇಕಾಗಿದೆ. ಖಿನ್ನತೆ, ಉದ್ವೇಗ ಮುಂತಾದ ಹಲವು ರೀತಿಯ ಮಾನಸಿಕ ಸಮಸ್ಯೆಗಳು ಮತ್ತು ವಿವಿಧ ರೀತಿಯ ಮಾನಸಿಕ ಖಾಯಿಲೆಗಳಿಗೆ ಕೂಡ ಕರುಳಿನ ವಾತಾವರಣದಲ್ಲಿ ಉಂಟಾಗುವ ಏರುಪೇರು ಕಾರಣವಾಗುತ್ತದೆ.

ತುಂಬಾ ದುಃಖಕರ ಘಟನೆ ಆದಾಗ “ಕರುಳು ಕಿರುಚುವಂತಹ ಘಟನೆ” ಎಂದು ಹೇಳುತ್ತಾರೆ. ನಿಜವಾಗಿ ಆ ಘಟನೆಯನ್ನು ಗ್ರಹಿಸುವುದು ಮೆದುಳಾಗಿರುತ್ತದೆ. ಆದರೆ ‘ಕರಳು ಕಿವುಚುವಂತಹ’ ಎಂದು ಹೇಳಲು ಕಾರಣ ಮೆದುಳಿನಲ್ಲಾದ ಪ್ರತಿ ಬದಲಾವಣೆಯೂ ಕರುಳಿನ ಮೇಲೆ ಪ್ರಭಾವವನ್ನು ಉಂಟುಮಾಡುತ್ತದೆ. ಹಾಗಾಗಿ ನಮಗೆ ಅಂತಹ ಘಟನೆಗಳನ್ನು ನೋಡಿದಾಗ ಕರುಳು ಕಿವಿಚಿದ ಅನುಭವ ಹೊಟ್ಟೆಯಲ್ಲಿ ಆಗುತ್ತದೆ. ಇದೇ ರೀತಿ ಕರುಳು ಕೂಡ ಮೆದುಳಿನ ಮೇಲೆ ತುಂಬಾ ದೊಡ್ಡ ಪ್ರಭಾವವನ್ನು ಬೀರುತ್ತದೆ. ಈ ಸಂಬಂಧವನ್ನು ವಿವರಿಸಲು ಗಟ್ ಬ್ರೈನ್ ಆಕ್ಸಿಸ್ (Gut brain axis) ಎಂದು ಹೇಳುತ್ತಾರೆ.

ಇತ್ತೀಚಿನ ಸಂಶೋಧನೆಗಳ ಪ್ರಕಾರ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಈ ಸಂಬಂಧವನ್ನು ನಿರ್ಧರಿಸುತ್ತವೆ ಮತ್ತು ಮೆದುಳಿನ ಮೇಲೆ ಉಂಟಾಗುವ ಹಲವು ಪರಿಣಾಮಗಳನ್ನು ನಿಯಂತ್ರಿಸುತ್ತವೆ. ಹಾಗಾಗಿ ನಮ್ಮ ಕರುಳು ಚೆನ್ನಾಗಿದ್ದರೆ ಮಾತ್ರ ಮೆದುಳು ಚೆನ್ನಾಗಿರಲು ಸಾಧ್ಯ. ನೆನಪಿನ ಶಕ್ತಿ, ಮಾನಸಿಕ ಶಕ್ತಿ, ಸದಾ ಸಂತೋಷದಿಂದ ಇರುವ ಗುಣಗಳೆಲ್ಲ ಕರುಳಿನಲ್ಲಿರುವ ಈ ಬ್ಯಾಕ್ಟೀರಿಯಾಗಳಿಂದ ನಿರ್ಧರಿಸಲ್ಪಡುತ್ತವೆ ಎಂದು ಬಹಳಷ್ಟು ಸಂಶೋಧನೆಗಳು ಹೇಳುತ್ತವೆ.

ಅಷ್ಟೇ ಅಲ್ಲದೇ ಖಿನ್ನತೆ, ಉದ್ವೇಗ ಮುಂತಾದ ಹಲವು ರೀತಿಯ ಮಾನಸಿಕ ಸಮಸ್ಯೆಗಳು ಮತ್ತು ವಿವಿಧ ರೀತಿಯ ಮಾನಸಿಕ ಖಾಯಿಲೆಗಳಿಗೆ ಕೂಡ ಕರುಳಿನ ವಾತಾವರಣದಲ್ಲಿ ಉಂಟಾಗುವ ಏರುಪೇರು ಕಾರಣವಾಗುತ್ತದೆ ಎಂಬುದು ಸಾಬೀತಾಗಿದೆ. ನಿಜ ಹೇಳಬೇಕೆಂದರೆ ಕೇವಲ ಮೆದುಳೊಂದೇ ಅಲ್ಲದೇ ದೇಹದ ಬಹುತೇಕ ಎಲ್ಲಾ ಅಂಗಗಳ ಮೇಲೆ ಕೂಡ ಇದರ ಪರಿಣಾಮ ಉಂಟಾಗುತ್ತದೆ. ಈ ಕಾರಣದಿಂದ ನಾವು ಕರುಳಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲೇಬೇಕಾಗಿದೆ.

ಹಾಗಾಗಿ ಇಂದು ನಾವು ಕರುಳಿನ ಆರೋಗ್ಯವನ್ನು ಅದರಲ್ಲಿಯೂ ವಿಶೇಷವಾಗಿ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಆರೋಗ್ಯವನ್ನು ಹೆಚ್ಚು ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ಮೊದಲನೆಯದಾಗಿ ಪ್ರೀ ಬಯೋಟಿಕ್ ಗಳು (Prebiotics) ಅಂದರೆ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳಿಗೆ ಆಹಾರವಾಗುವಂತಹ ಪದಾರ್ಥಗಳು. ಇಂತಹ ಪದಾರ್ಥಗಳನ್ನು ನಾವು ಹೆಚ್ಚಾಗಿ ಸೇವಿಸುವುದರಿಂದ ಕರುಳಿನ ಆರೋಗ್ಯ ಚೆನ್ನಾಗಿರಲು ಸಾಧ್ಯವಾಗುತ್ತದೆ. ಉದಾಹರಣೆಗೆ ಅಗಸೆ ಬೀಜ, ಆಳ್ವಿ ಬೀಜ, ಬೆಳ್ಳುಳ್ಳಿ, ಈರುಳ್ಳಿ, ಕುಂಬಳಕಾಯಿ, ಹಸಿರು ಸೊಪ್ಪುಗಳು, ಹಣ್ಣುಗಳು, ಇಡೀ ಧಾನ್ಯಗಳು ಇತ್ಯಾದಿ.

ಪ್ರೊಬಯೋಟಿಕ್ ಗಳು (Probiotics) ಅಂದರೆ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಹೊಂದಿರುವ ಆಹಾರ ಪದಾರ್ಥಗಳು ಅಥವಾ ಮಾತ್ರೆಗಳು ಉದಾಹರಣೆಗೆ ಮೊಸರು, ಮಜ್ಜಿಗೆ, ಆಪಲ್ ಸಿಡರ್ ವಿನಿಗರ್, ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಹುಳಿ ಬರಿಸುವಂತಹ ಆಹಾರ ಪದಾರ್ಥಗಳು ಅಂದರೆ ಮೊದಲ ದಿನವೇ ರುಬ್ಬಿ ಇಟ್ಟ ದೋಸೆ ಹಿಟ್ಟು ಇತ್ಯಾದಿ. ನಮ್ಮ ನಿಸರ್ಗ ಮನೆ ಕೇಂದ್ರದಲ್ಲಿ ನಾವು ಇದರ ಅವಶ್ಯಕತೆ ಇರುವ ರೋಗಿಗಳಿಗೆಂದೇ ವಿಶೇಷ ಪ್ರೊಬಯೋಟಿಕ್ ಆಹಾರ ಪದಾರ್ಥಗಳನ್ನು ತಯಾರಿಸಿಕೊಡುತ್ತೇವೆ.

ಕೇವಲ ಈ ಆಹಾರದಿಂದಲೇ ಅದ್ಭುತ ಪರಿಣಾಮ ಉಂಟಾಗುವುದನ್ನು ನೋಡುತ್ತೇವೆ. ಹಾಗಾಗಿ ಕರುಳು ಸ್ನೇಹಿ ಆಹಾರವನ್ನು ಸೇವಿಸುವುದು ಅತ್ಯಂತ ಮುಖ್ಯವಾದುದು. ನಾವು ಸಂಸ್ಕರಿಸಿದ ಆಹಾರಗಳನ್ನು, ರಾಸಾಯನಿಕ ಭರಿತ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿದಷ್ಟೂ ನಮ್ಮ ಕರುಳು ಹಾಳಾಗುತ್ತ ಹೋಗುತ್ತದೆ. ಇನ್ನು ಕರುಳಿಗೂ ಮೆದುಳಿಗೂ ಇರುವ ಅವಿನಾಭಾವ ಸಂಬಂಧದ ಕಾರಣದಿಂದ ಮಾನಸಿಕ ಒತ್ತಡ ಹೆಚ್ಚಾದಷ್ಟು ಕರುಳಿನ ಆರೋಗ್ಯ ಹಾಳಾಗುತ್ತಾ ಹೋಗುತ್ತದೆ. ಹಾಗಾಗಿ ಆಸನ, ಪ್ರಾಣಾಯಾಮ, ಧ್ಯಾನ, ಮುದ್ರೆಗಳ ಮೂಲಕ ನಮ್ಮ ಮನಸ್ಸು ಶಾಂತತಿಯಲ್ಲಿರುವಂತೆ ನೋಡಿಕೊಳ್ಳಬೇಕು.

ಹಲವು ರೀತಿಯ ಚರ್ಮದ ಖಾಯಿಲೆಗಳು, ಐಬಿಎಸ್, ಮಾನಸಿಕ ಸಮಸ್ಯೆಗಳು, ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಹಳಷ್ಟು ಬಾರಿ ಹಾಳಾದ ಕರುಳಿನಿಂದಾಗಿಯೇ ಉಂಟಾಗುವ ಕಾರಣದಿಂದ ನಾವು ಎಷ್ಟೋ ರೋಗಿಗಳಿಗೆ ಲ್ಯಾಕ್ಸಿಬಯೋಮ್ (LaxiBiome) ಎಂಬ ವಿಶೇಷ ಆಹಾರೌಷಧವನ್ನು ನೀಡಿ ಕರುಳನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ. ಹಾಗೆ ಮಾಡಿದಾಗ ಅದ್ಭುತ ಪರಿಣಾಮ ಉಂಟಾಗುವುದನ್ನೂ ಗಮನಿಸಿದ್ದೇವೆ. ಇದರಿಂದ ನಮ್ಮ ಕರುಳಿನ ಆರೊಗ್ಯ ಎಷ್ಟು ಮಹತ್ವದ್ದು ಎಂಬುದು ನಮಗೆ ಅರ್ಥವಾಗುತ್ತದೆ. ನಾವು ಕರುಳನ್ನು ಚೆನ್ನಾಗಿ ಇಟ್ಟಿಕೊಳ್ಳಲು ನಿತ್ಯವೂ ಪ್ರಯತ್ನಿಸಬೇಕು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: