Vydyaloka

ಕರಿಬೇವು- ಔಷಧೀಯ ಗುಣಗಳ ಆಗರ.

ಕರಿಬೇವು  ದಿನ ನಿತ್ಯದ ಅಡುಗೆಗೆ ಬೇಕಾದ ಅತೀ ಮುಖ್ಯ ಸಾಂಬಾರ ಪದಾರ್ಥ. ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ.

ಕರಿಬೇವು ಭಾರತೀಯ ಕುಟುಂಬಗಳಲ್ಲಿ ದಿನ ನಿತ್ಯದ ಅಡುಗೆಗೆ ಬೇಕಾದ ಅತೀ ಮುಖ್ಯ ಸಾಂಬಾರ ಪದಾರ್ಥ. ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಗಳಲ್ಲಿ ಕರಿಬೇವು ಇರಲೇಬೇಕು. ಆದರೂ ಇದ್ದೂ ಇಲ್ಲದಂತಿರುವುದು ಇದಕ್ಕೆ ಒದಗಿರುವ ಶೋಚನೀಯ ಸ್ಥಿತಿ. ಏಕೆಂದರೆ ನಮ್ಮಲ್ಲಿ ಬಹು ಮಂದಿ ಆಹಾರದಲ್ಲಿನ ಕರಿಬೇವಿನ ಎಲೆಯನ್ನು ಪಕ್ಕಕ್ಕೆ ಸರಿಸುವುದುಂಟು. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ. ಕರಿಬೇವಿನ ಎಲೆಗಳಲ್ಲಿ ವಿಟಾಮಿನ್-ಎ ಹೇರಳವಾಗಿದೆ. ಅಲ್ಲದೇ ವಿಟಾಮಿನ್-ಸಿ, ಪ್ರೊಟೀನ್, ಕಾರ್ಬೊಹೈಡ್ರೇಟ್ಸ್ ಸಹ ಅಧಿಕ ಪ್ರಮಾಣದಲ್ಲಿವೆ.

ಔಷಧೀಯ ಗುಣಗಳ ಆಗರ:

ಕಣ್ಣು ಹಾಗೂ ಮೆದುಳಿನ ಆರೋಗ್ಯಕ್ಕೆ ಇದರ ಸೇವನೆ ಸಹಕಾರಿ. ಕರಿ ಬೇವಿನ ಮತ್ತೊಂದು ವೈಶಿಷ್ಟ್ಯವೆಂದರೆ ಎಲೆಗಳನ್ನು ತಾಜಾ ಹಾಗೂ ಒಣಗಿದಾಗಲೂ ಬಳಸಬಹುದು ಮತ್ತು ಒಣಗಿದಾಗಲೂ ಸಹ ಅದು ತನ್ನ ಸುವಾಸನೆಯನ್ನು ಕಳೆದುಕೊಳ್ಳುವುದಿಲ್ಲ. ಕೊಬ್ಬರಿ ಎಣ್ಣೆಯೊಂದಿಗೆ ಕರಿಬೇವಿನ ಎಲೆಗಳನ್ನು ಕುದಿಸಿ ತಯಾರಿಸಿದ ಎಣ್ಣೆಯು ಕೂದಲ ಬಣ್ಣ ಹಾಗೂ ಬೆಳವಣಿಗೆಗೆ ಸಹಕಾರಿ. ಕರಿಬೇವನ್ನು ನಾಟಿ ವೈದ್ಯಕೀಯ ಪದ್ಧತಿಯಲ್ಲಿ ಜ್ವರ ನಿವಾರಕವಾಗಿ, ಉರಿ ಶಾಮಕವಾಗಿ ಹಾಗೂ ರಕ್ತ ಶದ್ಧಿಕಾರಕವಾಗಿಯೂ ಬಳಸಲಾಗುತ್ತದೆ, ಕರಿಬೇವಿನ ಎಲೆ ಹಾಗೂ ತೊಟ್ಟಿನ ಕಶಾಯವನ್ನು ಕೀಲು ನೋವು, ತೊನ್ನು, ಮೂರ್ಛೆ ರೋಗ, ಮೂಲವ್ಯಾಧಿ, ಆಮಶಂಕೆ, ಜ್ವರ ಹಾಗೂ ಜಂತುಹುಳುಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ.

Also Read: ಕೂದಲು ಉದುರವುದನ್ನು ತಡೆಯಲು ನೈಸರ್ಗಿಕ ದಾರಿಗಳು

ಎಲೆಯ ಕಶಾಯವನ್ನು ಮುಂಜಾನೆ ಸೇವಿಸುವುದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ವಾಂತಿ ಮೊದಲಾದ ಉದರ ಸಂಬಂಧಿ ವ್ಯಾಧಿಗಳನ್ನು ತಡೆಗಟ್ಟಬಹುದು. ಕ್ಯಾಲ್ಸಿಯಂ ಅಂಶ ಹೇರಳವಾಗಿರುವ ಕಾರಣ ಮಹಿಳೆಯರಿಗೆ ಇದರ ಸೇವನೆ ಅತ್ಯುಪಯುಕ್ತ. ಎಲೆಗಳಿಂದ ತೆಗೆದ ಸುಗಂಧದೆಣ್ಣೆಯು ಘಾಟು ಸುವಾಸನೆಯಿಂದ ಕೂಡಿದ್ದು ಆಹಾರೋತ್ಪನ್ನಗಳು, ಔಷಧಿ, ಸೋಪು ಹಾಗೂ ಹಲವು ಸೌಂದರ್ಯವರ್ಧಕಗಳ ತಯಾರಿಕಾ ಘಟಕಗಳಲ್ಲಿ ಬಳಸಲ್ಪಡುತ್ತದೆ.   

ಮೂಲ ಮತ್ತು ಹರವು:

ಕರಿಬೇವಿನ ಸಸ್ಯಶಾಸ್ತ್ರೀಯ ನಾಮ ಮುರ್ರಯ ಕೋನೆಗಿ. ರೂಬಿಯೇಸಿ ಸಸ್ಯ ಕುಟುಂಕ್ಕೆ ಸೇರಿದ ಇದು ಮೂಲತ: ಭಾರತ ಉಪಖಂಡದ (ಭಾರತ ಹಾಗೂ ಶ್ರೀಲಂಕಾದ ಭಾಗಗಳು) ಬೆಳೆ. ಭಾರತದದಾದ್ಯಂತ ಬೆಳೆಯಲ್ಪಡುತ್ತದೆಯಾದರೂ ತಮಿಳುನಾಡು ಕರಿಬೇವಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಪ.ಬಂಗಾಳ, ಅಸ್ಸಾಂ, ಸಿಕ್ಕಿಂ ಇತರೆ ಪ್ರಮುಖ ಉತ್ಪಾದಕ ರಾಜ್ಯಗಳು. ಭಾರತದಲ್ಲಿ ಬೆಳೆದ ಕರಿಬೇವಿನ ಎಲೆ ಹಾಗೂ ಸುಗಂಧ ತೈಲಗಳು ಹೊರ ದೇಶಗಳಿಗೂ ರಫ್ತುಮಾಡಲ್ಪಡುತ್ತವೆ.

 ಬೆಳೆಸುವಿಕೆ:

ಇದೊಂದು ಬಲಿಷ್ಠ ಸಸ್ಯವಾಗಿದ್ದು, ಹಲವು ಬಗೆಯ ಮಣ್ಣು ಹಾಗೂ ಹವಾಗುಣಗಳಲ್ಲಿ ಬೆಳೆಯಲ್ಪಡುತ್ತದೆ. ಅಧಿಕ ಉಷ್ಣಾಂಶವನ್ನು ಸಹಿಸಿಕೊಂಡು ಬೆಳೆಯಬಲ್ಲ ಸಸ್ಯ ಇದಾಗಿದ್ದು, 26 ರಿಂದ 370 ಸೆಲ್ಸಿಯಸ್ ಉಷ್ಣಾಂಶ ಬೆಳೆಗೆ ಉತ್ತಮ. ನೀರು ಬಸಿದು ಹೋಗುವ ಕೆಂಪು ಗೋಡು ಮಣ್ಣು ಸೂಕ್ತ. ಜುಲೈ-ಆಗಸ್ಟ್ ತಿಂಗಳಿನಲ್ಲಿ ಪೂರ್ತಿ ಮಾಗಿದ ಹಣ್ಣುಗಳನ್ನು ಆಯ್ದು, ಸಿಪ್ಪೆ ಹಾಗೂ ತಿರುಳು ಬೇರ್ಪಡಿಸಿ ಬೀಜಗಳನ್ನು ಸಸಿಮಡಿ ಅಥವಾ ಪಾಲಿಬ್ಯಾಗ್‍ಗಳಲ್ಲಿ ನೆಟ್ಟು ಒಂದು ವರ್ಷದ ನಂತರ ಜಮೀನಿನಲ್ಲಿ ನೆಡಬಹುದು.

ಬೇರಿಂದ ಬೆಳೆಯುವ ಸಸಿ (ರೂಟ್ ಸಕ್ಕರ್ಸ್)ಗಳನ್ನು ಸಹ ಕಿತ್ತು ನೆಡಬಹುದು. 4 ರಿಂದ 5 ಅಡಿ ಅಂತರದಲ್ಲಿ ನೆಡುವುದು ಸೂಕ್ತ. ವಾರಕ್ಕೊಮ್ಮೆಯಂತೆ ನೀರು ಹಾಯಿಸಬೇಕು. ಗಿಡವು ಒಂದು ಮೀಟರ್ ಎತ್ತರಕ್ಕೆ ಬೆಳೆದಾಗ ತುದಿ ಚಿವುಟುವುದರಿಂದ ಹೆಚ್ಚು ಕೊಂಬೆಗಳು ಮೂಡುತ್ತವೆ.  ನೆಟ್ಟ ಒಂದು ವರ್ಷದ ಬಳಿಕ ಮೊದಲ ಕೊಯ್ಲು ಸಾಧ್ಯ. ನಂತರ ಪ್ರತಿ ವರ್ಷವೂ ಇಳುವರಿಯಲ್ಲಿ ಹೆಚ್ಚಳ ಕಂಡುಬರುತ್ತದೆ. ಐದು ವರ್ಷದ ನಂತರ ಎಕರೆಗೆ ಪ್ರತಿ ಮೂರು ತಿಂಗಳಿಗೊಮ್ಮೆ 5 ಟನ್ ಇಳುವರಿ ನಿರೀಕ್ಷಿಸಬಹುದು.

Watch our video: ಕರಿಬೇವಿನ ಕುರಿತ ಸಂಪೂರ್ಣ ಮಾಹಿತಿ | Complete details about Curry Leaves by Dr. Raghavendra Prasad

ಕರಿಬೇವಿನ ಎಲೆಯಲ್ಲಿರುವ ಪ್ರಮುಖ ಪೋಷಕಾಂಶಗಳು:

ವಿವರ      ಪ್ರತಿ 100 ಗ್ರಾಂ ಹಸಿ ಎಲೆಯಲ್ಲಿ ಪ್ರತಿ 100 ಗ್ರಾಂ ಒಣ ಎಲೆಯಲ್ಲಿ
ಪ್ರೊಟೀನ್ 6.00 ಗ್ರಾಂ 12.00 ಗ್ರಾಂ
ಕಾರ್ಬೊಹೈಡ್ರೇಟ್/ ಪಿಷ್ಠ 1.00 ಗ್ರಾಂ 5.40 ಗ್ರಾಂ
ಕೊಬ್ಬು 18.70 ಗ್ರಾಂ 64.31 ಗ್ರಾಂ
ಕ್ಯಾಲ್ಸಿಯಂ 830 ಮಿ. ಗ್ರಾಂ 2040 ಮಿ. ಗ್ರಾಂ
ಕಬ್ಬಿಣ 0.93 ಮಿ. ಗ್ರಾಂ 12.00 ಮಿ. ಗ್ರಾಂ
ಬೀಟಾ ಕ್ಯಾರೊಟೀನ್ 7560 ಮೈಕ್ರೊ ಗ್ರಾಂ

5292 ಮೈಕ್ರೊ ಗ್ರಾಂ

ಡಾ. ಭೂಮಿಕ ಹೆಚ್.ಆರ್.
ಅಸಿಸ್ಟೆಂಟ್ ಪ್ರೊಫೆಸರ್
ತೋಟಗಾರಿಕೆ ಕಾಲೇಜು, ಮೂಡಿಗೆರೆ, ಚಿಕ್ಕಮಗಳೂರು
ಮೊಬೈಲ್: 9741009131
Share this: