Vydyaloka

ಕಾಳುಪಲ್ಯ ಸೇವನೆಯಿಂದ ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣ

ಕಾಳುಪಲ್ಯ ಸೇವನೆಯನ್ನು ಇಂದಿನ ದಿನಗಳಲ್ಲಿ ನಾವು ಕಡಿಮೆ ಮಾಡುತ್ತಿದ್ದು, ಅಗಾಧ ಪೋಷಕಾಂಶಗಳನ್ನು ಹೊಂದಿರುವ ಇದರ ಸೇವನೆ ನಮಗೆ ವರದಾನವಾಗಲಿದೆ.ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುವುದಿಲ್ಲ. ಹಾಗಾಗಿ ಇದನ್ನು ಮಧುಮೇಹಿಗಳೂ ಸೇವಿಸಬಹುದು. 

ಹಿಂದಿನ ಕಾಲದಲ್ಲಿ ಸೇವಿಸುತ್ತಿದ್ದ ನೈಸರ್ಗಿಕ ಅಥವಾ ಪ್ರಕೃತಿದತ್ತ ಆಹಾರದಿಂದಾಗಿ ನಮ್ಮ ಪೂರ್ವಿಕರು ಹೆಚ್ಚು ಆರೊಗ್ಯವಂತರಾಗಿ ಜೀವಿಸುತ್ತಿದ್ದರು. ಆದರೆ ನಾವು ಇಂದು ಸೇವಿಸುತ್ತಿರುವ ಆಧುನಿಕ ಆಹಾರದ ಪ್ರಭಾವದಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ಬೊಜ್ಜು, ಮುಟ್ಟಿನ ಸಮಸ್ಯೆ, ಪಿಸಿಒಡಿ, ರಕ್ತಹೀನತೆ, ಅಜೀರ್ಣ, ಗ್ಯಾಸ್ಟ್ರಿಕ್, ಮಲಬದ್ಧತೆ ಇಂತಹ ಸಮಸ್ಯೆಗಳನ್ನು ಅನುಭವಿಸುತಿದ್ದೇವೆ. ಹಾಗಾಗಿ ನಾವು ಪ್ರಕೃತಿದತ್ತವಾದ ಆಹಾರವನ್ನು ಹೆಚ್ಚು ಸೇವಿಸಿದಾಗ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂದಿನ ದಿನಗಳಲ್ಲಿ ನಾವು ಕಾಳುಪಲ್ಯದ ಸೇವನೆಯನ್ನು ಕಡಿಮೆ ಮಾಡುತ್ತಿದ್ದು, ಅಗಾಧ ಪೋಷಕಾಂಶಗಳನ್ನು ಹೊಂದಿರುವ ಇದರ ಸೇವನೆ ನಮಗೆ ವರದಾನವಾಗಲಿದೆ.

ಎಲ್ಲಾ ರೀತಿಯ ಕಾಳುಪಲ್ಯಗಳು ಹೆಚ್ಚು ನಾರಿನಾಂಶದಿಂದ ಕೂಡಿದವಾಗಿರುತ್ತದೆ. ಹಾಗಾಗಿ ಇದು ಕೆಟ್ಟ ಕೊಬ್ಬನ್ನು ಕರಗಿಸಲು ಸಹಾಯಕಾರಿ. ಅದೇ ರೀತಿ ಕಾಳುಪಲ್ಯದ ಇನ್ನೊಂದು ವಿಶೇಷತೆಯೆಂದರೆ, ಇದರಲ್ಲಿನ ಸಕ್ಕರೆ ಅಂಶವು ಜಠಿಲ (ಕಾಂಪ್ಲೆಕ್ಸ್) ರೂಪದಲ್ಲಿದ್ದು ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುವುದಿಲ್ಲ. ಹಾಗಾಗಿ ಇದನ್ನು ಮಧುಮೇಹಿಗಳೂ ಸೇವಿಸಬಹುದು. ದೈಹಿಕ ಶಕ್ತಿಯನ್ನು ಸಹ ಇದು ಹೆಚ್ಚಿಸುತ್ತದೆ.

ಅನ್ನದಲ್ಲಿ ಶೇ.80 ರಷ್ಟು ಸಕ್ಕರೆ ಅಂಶ ಇದೆ. ಅಂತೆಯೇ ಕಾಳುಪಲ್ಯದಲ್ಲಿ ಶೇ.65 ರಷ್ಟು ಸಕ್ಕರೆ ಅಂಶ ಇದೆ. ಕೇವಲ 20 ಪ್ರತಿಶತ ವ್ಯತ್ಯಾಸ ಮಾತ್ರ. ಆದರೆ ನಾವು ತಿಂದಂತಹ ಅನ್ನದಲ್ಲಿ ಸಕ್ಕರೆ ಅಂಶವು ಕೇವಲ ಅರ್ದ ತಾಸಿನಲ್ಲಿ ನಮ್ಮ ದೇಹದಲ್ಲಿ ಹೀರಲ್ಪಡುತ್ತದೆ. ಕಾಳುಪಲ್ಯದಲ್ಲಿರುವ ಸಕ್ಕರೆಯು ಜಠಿಲ ರೂಪದಲ್ಲಿರುವುದರಿಂದ ಇದರಲ್ಲಿನ ಸಕ್ಕರೆ ಅಂಶವು ನಮ್ಮ ದೇಹದಲ್ಲಿ ಪರಿಪೂರ್ಣವಾಗಿ ಕರಗಲು ಹತ್ತು ತಾಸು ಬೇಕು. ಇದರಿಂದಾಗಿ ದೇಹದಲ್ಲಿ ಸಕ್ಕರೆ ಅಂಶವು ಒಂದೇ ಸಲ ಹೆಚ್ಚಾಗುವುದಿಲ್ಲ. ಮಧುಮೇಹವು ನಿಯಂತ್ರಣದಲ್ಲಿರುತ್ತದೆ. ಇದಕ್ಕೆ ಈ ಕಾಳುಪಲ್ಯದಲ್ಲಿರುವ ನಾರಿನಾಂಶವು ಸಹ ಸಹಾಯವಾಗುತ್ತದೆ.

1. ಕಾಳುಪಲ್ಯದ ಸೇವನೆಯಿಂದ ನಾವು ಹೆಚ್ಚು ಕಾಲ ಹೊಟ್ಟೆಯನ್ನು ತೃಪ್ತಿ ಪಡಿಸಿಕೊಂಡಿರಬಹುದಾಗಿದೆ. ಆದರೆ ನಾವು ಹೆಚ್ಚು ಸೇವಿಸುವ ಅನ್ನವು ಬೇಗನೆ ನಮ್ಮ ದೇಹದಲ್ಲಿ ಕರಗಿ ನಮಗೆ ಬೇಗನೆ ಪುನಃ ಹಸಿವೆ ಆಗಲು ಕಾರಣವಾಗುತ್ತದೆ.

2. ಅಲ್ಲದೆ ಕಡಿಮೆ ಆಹಾರದಿಂದ ಆರೋಗ್ಯವನ್ನು ಸಂಪಾದಿಸುವ ವಿಧಾನದಲ್ಲಿ ಈ ಕಾಳುಪಲ್ಯದ ಸೇವನೆಯೂ ಒಂದು. ಇದರಿಂದಾಗಿ ದೇಹದಲ್ಲಿನ ಬೊಜ್ಜು ಸಹ ನಿಯಂತ್ರಿಸಲ್ಪಡುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ಕಾಯುತ್ತದೆ.

 

ಹಾಗಾಗಿ ಪೋಷಕಾಂಶಗಳ ಆಗರ, ಈ ಕಾಳುಪಲ್ಯವನ್ನು ಪ್ರತಿನಿತ್ಯ ಒಂದು ಪ್ರಮಾಣದಲ್ಲಿ ನಿಯಮಿತವಾಗಿ ತಜ್ಞರ ಸಲಹೆಯ ಮೇರೆಗೆ ಸೇವಿಸುತ್ತಾ ಬಂದಾಗ ಖಂಡಿತವಾಗಿಯೂ ನಾವು ಸ್ವಸ್ಥ ಆರೋಗ್ಯವನ್ನು ಹೊಂದಲು ಸಾಧ್ಯ. ವಿಶೇಷ ಜ್ಞಾನವನ್ನು ಪಡೆದು ಬಳಕೆ ಮಾಡುವುದು ಸೂಕ್ತ. ತೊಗರಿಬೇಳೆ, ಹೆಸರುಬೇಳೆ, ಕಡಲೆಬೇಳೆ ಮುಂತಾದವುಗಳ ಜೊತೆಯಲ್ಲಿ ನೆನೆಸಿ ಸೇವಿಸುವ ಹೆಸರುಕಾಳು, ಅಲಸಂದಿಕಾಳು, ಮೆಂತ್ಯೆ ಎಲ್ಲವೂ ಸಹ ಅತ್ಯಂತ  ಉಪಯೋಗಕಾರಿ.   ಕಾಳುಗಳನ್ನು ಮೊಳಕೆ ತರಿಸಿ ಮೊಳಕೆ ಕಾಳುಗಳನ್ನು ಸ್ವಲ್ಪ ಬೇಯಿಸಿ, ಕಾಳುಗಳನ್ನು ಹೆಚ್ಚು ಹಾಕಿ ಸಾಂಬಾರ ಮುಂತಾದವುಗಳನ್ನು ಮಾಡುವುದರ ಮೂಲಕ ಹೆಚ್ಚೆಚ್ಚು ಉಪಯೋಗಿಸಲು ಪ್ರಾರಂಭಿಸಬಹುದು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: