Vydyaloka

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ವಿಟಮಿನ್ ಸಿ ಅಗತ್ಯ. ನಿತ್ಯವೂ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ನೆಲ್ಲಿಕಾಯಿ, ಶುಂಠಿ, ಅರಿಶಿಣ ಮುಂತಾದ ಸಾಂಬಾರ ಪದಾರ್ಥಗಳನ್ನು ಬಳಕೆ ಮಾಡುವುದು, ಕಾಲಕಾಲಕ್ಕೆ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದು ಬಹಳ ಪರಿಣಾಮಕಾರಿ. 

ಯಾವುದೇ ಮನುಷ್ಯನು ಸುಲಭವಾಗಿ ರೋಗಗಳಿಗೆ ತುತ್ತಾಗದಂತೆ ಇರಲು ಭಾರತೀಯ ಚಿಕಿತ್ಸಾ ಪದ್ಧತಿಯು ಅನೇಕ ಮಾರ್ಗಗಳನ್ನು ತಿಳಿಸುತ್ತ ಹೋಗುತ್ತದೆ. ಕಾಲಕಾಲಕ್ಕೆ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದು ಬಹಳ ಪರಿಣಾಮಕಾರಿ. ನಮ್ಮ ದೇಹದಲ್ಲಿ ನೈಸರ್ಗಿಕ ವೇಗಗಳನ್ನು(ಹಸಿವೆ, ನಿದ್ರೆ, ಬಾಯಾರಿಕೆ, ಮಲ, ಮೂತ್ರ ಇತ್ಯಾದಿ) ತಡೆ ಹಿಡಿಯುವುದರಿಂದ ನಮ್ಮ ದೇಹ ದುರ್ಬಲವಾಗುತ್ತ ಹೋಗುತ್ತದೆ.

ನಾವು ಯಾವ ರೀತಿ ಆಹಾರ ಸೇವಿಸುತ್ತೇವೆ, ಯಾವ ರೀತಿ ಬದುಕುತ್ತೇವೆ, ಎಷ್ಟು ನಿದ್ದೆ ಮಾಡುತ್ತೇವೆ, ಯಾವ ಮನಸ್ಥಿತಿಯಲ್ಲಿರುತ್ತೇವೆ ಎಂಬುದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ನಿರ್ಧರಿಸುತ್ತ ಹೋಗುತ್ತದೆ. ನಮ್ಮ ಜೀವನಶೈಲಿ ಸರಿಯಿಲ್ಲ ಎಂದಾದರೆ ಅದು ನಮ್ಮಲ್ಲಿ ಅನೇಕ ರೋಗಗಳು ಕಂಡು ಬರಲು ಕಾರಣವಾಗುತ್ತ ಹೋಗುತ್ತದೆ. ವೈರಸ್, ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳಿಗೆ ಆಶ್ರಯವಾಗಿ ಸಮಸ್ಯೆಗಳು ಪ್ರಾರಂಭವಾಗಲೂಬಹುದು.

ಎಷ್ಟೇ ಫಲವತ್ತಾಗಿರುವ ಬೀಜವೂ ಸಹ ಕಲ್ಲು ಬಂಡೆಗಳ ಮೇಲೆ ತನ್ನ ಫಲವತ್ತತೆಯನ್ನು ಪ್ರದರ್ಶಿಸಲಾಗುವುದಿಲ್ಲ. ಆದರೆ ಹಸಿಯಾದ ಮಣ್ಣಿನ ಮೇಲೆ ಬಿದ್ದರೆ ಅದು ಅದಕ್ಕೆ ಬೇಕಾದಂತಹ ಪೂರಕ ವಾತಾವರಣವನ್ನು ಕಲ್ಪಿಸಿಕೊಂಡು ಸಸಿಯಾಗಿ, ಮರವಾಗಿ ಬೆಳೆಯುತ್ತದೆ. ನಮ್ಮ ದೇಹವನ್ನೂ ಸಹ ಈ ವ್ಯವಸ್ಥೆಗೆ ಹೋಲಿಸಲಾಗುತ್ತದೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ಫಲವತ್ತಾಗಿದ್ದರೆ, ದೇಹ ಕಲ್ಲು ಬಂಡೆಯಂತೆ ವರ್ತಿಸುತ್ತದೆ. ಅದು ಎಂತಹುದೇ ವೈರಸ್ ಆಗಿದ್ದರೂ ಸಹ ದೇಹ ಅದನ್ನು ನಿಷ್ಪಲವಾಗಿಸುತ್ತದೆ. ಆದರೆ ನಮ್ಮ ದೇಹ ಹಸಿ ಮಣ್ಣಿನಂತೆ ದುರ್ಬಲವಾಗಿದ್ದರೆ ಇನ್ನೂ ದುರ್ಬಲ ಮಾಡಿ ನಮ್ಮ ದೇಹದಲ್ಲಿಯೇ ಆ ಸೂಕ್ಷ್ಮಾಣು ಆಶ್ರಯ ಪಡೆಯುತ್ತದೆ. ಆದ್ದರಿಂದ ಒಟ್ಟಾರೆಯಾಗಿ ನಮ್ಮ ದೇಹವನ್ನು ಕಾಯ್ದುಕೊಳ್ಳಲು ನಮಗಿರುವಂತಹ ಮೂಲಭೂತ ವ್ಯವಸ್ಥೆ ಎಂದರೆ ಅದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು.

ಇತ್ತೀಚೆಗೆ ನಾವು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತ ಹೋಗುತ್ತಿದ್ದೇವೆ. ಇದರಿಂದಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯೂ ಸಹ ಕಡಿಮೆಯಾಗುತ್ತ ಹೋಗುತ್ತದೆ. ಉದಾಹರಣೆಗೆ ಬೇಸಿಗೆಯಲ್ಲಿ ಹೆಚ್ಚು ಸೆಖೆಯಾಗುತ್ತದೆ ಎಂಬುದಾಗಿ ಹೆಚ್ಚಿನ ಪ್ರಮಾಣದಲ್ಲಿ ಎಸಿಯನ್ನು ಬಳಸುವುದು, ಪ್ರಿಡ್ಜ್‍ನಲ್ಲಿಟ್ಟ ಆಹಾರವನ್ನು ಹೆಚ್ಚು ಸೇವಿಸುವುದು, ಅತೀ ಹೆಚ್ಚು ಸೆಖೆ ಇರುವಾಗ ಅತ್ಯಂತ ತಣ್ಣಗಾಗಿಸಿದ ನೀರನ್ನು ಕುಡಿಯುವುದು, ಮಧ್ಯರಾತ್ರಿ ತನಕವೂ ಎಚ್ಚರವಾಗಿದ್ದು ಬೆಳಿಗ್ಗೆ ತಡವಾಗಿ ಎಳುವುದು ಇಂತಹ ಕೆಲಸಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತ ಹೋಗುತ್ತದೆ.

ನಮ್ಮ ದೇಹದಲ್ಲಿನ ಕಶ್ಮಲಗಳನ್ನು ಹೊರಹಾಕಲು ನಮ್ಮ ಪೂರ್ವಜರು ಅನೇಕ ಮಾರ್ಗಗಳನ್ನು ಅನುಸರಿಸುತ್ತಿದ್ದರು. ಅಪರೂಪಕ್ಕೊಮ್ಮೆ ಔಡಲ ಎಣ್ಣೆಯನ್ನು ಕುಡಿದು ಭೇಧಿ ಮಾಡುವುದು, ಅಪರೂಪಕ್ಕೊಮ್ಮೆ ಕಹಿ ಕುಡಿಯುವುದು, ತುಳಸಿಯನ್ನು ಸೇವಿಸುವುದು ಈ ರೀತಿಯ ಕ್ರಮಗಳನ್ನು ಅನುಸರಿಸುತ್ತಿದ್ದರು. ಇದು ಈಗ ಅಳಿಸಿಹೋಗಿರುವುದೂ ಸಹ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಆಗಿರುವುದಕ್ಕೆ ಕಾರಣ.

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

1. ನಿತ್ಯವೂ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ನೆಲ್ಲಿಕಾಯಿ, ಶುಂಠಿ, ಅರಿಶಿಣ ಮುಂತಾದ ಸಾಂಬಾರ ಪದಾರ್ಥಗಳನ್ನು ಬಳಕೆ ಮಾಡುವುದು. ವೈರಸ್‍ಗಳ ವಿರುದ್ಧ ಹೋರಾಡಲು ಅಥವಾ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ವಿಟಮಿನ್ ಸಿ ಅಗತ್ಯ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಇಂದಿನ ವೈದ್ಯ ವಿಜ್ಞಾನವೂ ಸಹ ನೆಲ್ಲಿಕಾಯಿಯು ದಿನನಿತ್ಯ ಸೇವನೆಗೆ ಉತ್ತಮ.

2. ನಾವೀಗ ಏನು ಮಾಡಬಹುದೆಂದರೆ ತಿಂಗಳಿಗೆ ಒಮ್ಮೆ ರಜೆ ಇರುವಾಗ ಖಾಲಿ ಹೊಟ್ಟೆಯಲ್ಲಿ 20ಎಂ.ಎಲ್ ನಷ್ಟು ಔಡಲ ಎಣ್ಣೆಯನ್ನು ಕುಡಿದು ಬಿಸಿ ನೀರು ಕುಡಿಯುತ್ತಿದ್ದರೆ ಬೇಧಿಯಾಗುತ್ತದೆ (ಔಷಧ ಅಂಗಡಿಯಲ್ಲಿ ಸಿಗುವ ಶುದ್ಧವಾದ ಸೇವಿಸಲು ಯೋಗ್ಯವಾದ ಔಡಲ ಎಣ್ಣೆಯನ್ನು ತಂದುಕೊಳ್ಳಬೇಕು), ದೇಹದಲ್ಲಿನ ಕಶ್ಮಲಗಳೆಲ್ಲವೂ ಸಹ ಹೊರಹೋಗುತ್ತದೆ. ತನ್ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

3. ನೆಲ್ಲಿಕಾಯಿಯನ್ನು ಹಬೆಯಲ್ಲಿ ಬೇಯಿಸಿ ಅದನ್ನು ಜರಡಿಯಲ್ಲಿ ಹಾಕಿ ತಿಕ್ಕಬೇಕು. ಆಗ ಬೀಜ ಹಾಗೂ ನೆಲ್ಲಿಯ ತಿರುಳು ಬೇರೆ ಬೇರೆಯಾಗುತ್ತದೆ. ಬಂದಂತಹ ಪೇಸ್ಟ್‍ನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ನೆಲ್ಲಿಕಾಯಿಯನ್ನು ಬೇಯಿಸಿದ ನೀರಿಗೆ ಜೋನಿ ಬೆಲ್ಲ ಹಾಕಿ ಪಾಕ ಬರಿಸಿಕೊಳ್ಳಬೇಕು. ಪಾಕ ಬಂದಾದ ನಂತರ ಅದಕ್ಕೆ ತುಪ್ಪದಲ್ಲಿ ಹುರಿದ ಪೇಸ್ಟ್‍ನ್ನು ಹಾಕಿ ಅದಕ್ಕೆ ಹಿಪ್ಪಲಿ, ದಾಲ್ಚಿನ್ನಿ, ಏಲಕ್ಕಿ, ನಾಗ ಕೇಸರ ಎಲ್ಲವುಗಳ ಪುಡಿಯನ್ನು ಹಾಕಿ ಒಲೆಯಿಂದ ಇಳಿಸಿಟ್ಟುಕೊಳ್ಳಬೇಕು. ತಣಿದ ನಂತರ ತುಪ್ಪದ ಅರ್ಧದಷ್ಟು ಜೇನುತುಪ್ಪವನ್ನು ಹಾಕಿ ಇರಿಸಿಕೊಳ್ಳುವುದು. ಇದನ್ನು ಪ್ರತಿನಿತ್ಯ ಸೇವಿಸುವುದು. ಇದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Also Read: Amla-the super food, immunity booster 

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.comnisargamane6@gmail.com
http://nisargamane.com
Share this: