‘ಕರೊನಾ’ಗೆ ಯಶಸ್ವಿಯಾಯ್ತು ಆಯುರ್ವೇದ ಚಿಕಿತ್ಸೆ.ವಿಶ್ವವನ್ನೇ ಕಂಗೆಡಿಸಿರುವ ಕೊರೋನಾ ವೈರಸ್ಗೆ ಡಾ.ಗಿರಿಧರ್ ಕಜೆ ಕಂಡುಹಿಡಿದಿರುವ ಔಷಧ ಪ್ರಯೋಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದು, ಕೊರೋನಾ ರೋಗಿಗಳಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. ಜೂನ್ 7ರಿಂದ ಜೂನ್ 25ರ ನಡುವೆ ಈ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿತ್ತು.
ಈ ಕ್ಲಿನಿಕಲ್ ಟ್ರಯಲ್ಗೆ ಸಿಟಿಆರ್ಐನಲ್ಲಿ ನೋಂದಣಿಯಾಗಿರುವ ಭೌಮ್ಯ, ಸಾತ್ಮ್ಯ ಎಂಬ ಎರಡು ಮಾತ್ರೆಗಳನ್ನು ಮಾತ್ರ ನೀಡಲಾಗಿದ್ದು, 23ವರ್ಷದಿಂದ 65ವರ್ಷದವರೆಗಿನ ಪ್ರಾಯದವರಿಗೆ ಜೂನ್ 7 ರಿಂದ 25ರವರೆಗೆ ಪ್ರಯೋಗ ನಡೆಸಲಾಗಿತ್ತು. ಅದಾಗಲೇ ನೀಡುತ್ತಿದ್ದ ಅಲೋಪತಿ ಚಿಕಿತ್ಸೆಯ ಜೊತೆಗೇ ಆಯುರ್ವೇದ ಟ್ರಯಲ್ ನಡೆಸಲಾಗಿದ್ದು ಕೇವಲ 2 ರಿಂದ 4 ದಿನಗಳಲ್ಲಿ ಸೋಂಕಿನ ಗುಣಲಕ್ಷಣಗಳು ಮಾಯವಾಗಿದ್ದವು. ಯಾವ ಸೋಂಕಿತರೂ ಮುಂದಿನ ಹಂತಕ್ಕೆ ಹೋಗದೇ ಗುಣಮುಖರಾಗಿದ್ದು ಯಾರಿಗೂ ಅಡ್ಡಪಡಿಣಾಮಗಳು ಕಂಡುಬಂದಿಲ್ಲ. ಕರೊನ ಸೋಂಕು ತಗುಲಿದ ಶೇಕಡಾ 90 ಜನರಲ್ಲಿ ಯಾವುದೇ ಗುಣಲಕ್ಷಣಗಳು ಕಂಡುಬರುವುದಿಲ್ಲ. ಆ ಪೈಕಿ ಅನೇಕರು ಯಾವುದೇ ಔಷಧ ಅವಶ್ಯಕತೆ ಇಲ್ಲದೆ ಅಥವಾ ಸಾಮಾನ್ಯ ಕೆಮ್ಮು, ಜ್ವರದ ಔಷಧಗಳಿಂದಲೇ ಗುಣಮುಖರಾಗುತ್ತಾರೆ.
ಆಯುರ್ವೇದ ಔಷಧಿ ಪರಿಣಾಮಕಾರಿ:
ಈ ಕ್ಲಿನಿಕಲ್ ಟ್ರಯಲ್ನಲ್ಲಿ ಭಾಗಿಯಾಗಿದ್ದ ಎಲ್ಲಾ ಸೋಂಕಿತರೂ ಕಿಡ್ನಿ, ಹೃದಯ, ಶ್ವಾಸಕೋಶ, ಮಧುಮೇಹದಂತಹ ಸಮಸ್ಯೆಯನ್ನು ಹೊಂದಿದವರು ಹಾಗೂ ಕರೊನಾ ಗುಣಲಕ್ಷಣ ಇದ್ದವರೇ ಆಗಿದ್ದರು. ಈ ಯಶಸ್ವೀ ಪ್ರಯೋಗದಿಂದ ಆಯುರ್ವೇದ ಔಷಧಿ ಪರಿಣಾಮಕಾರಿ ಎಂಬುದು ಸಾಬೀತಾದಂತಾಗಿದೆ. ಇನ್ನೊಂದು ಸಂತಸದ ವಿಷಯವೇನೆಂದರೆ ಈ ಕರೊನಾಗುಣಪಡಿಸಲು ಸಾವಿರಾರು ರೂಪಾಯಿ ವ್ಯಯಿಸಬೇಕಾಗಿಲ್ಲ. ಕೇವಲ ರೂ.60 ರಿಂದ ರೂ.180ರ ಒಳಗೇ ಚಿಕಿತ್ಸೆ ಸಾಧ್ಯ ಮತ್ತು ಇದರಿಂದ ಯಾವುದೇ ಅಡ್ಡಪರಿಣಾಮಗಳೂ ಇಲ್ಲ. ಆಯುರ್ವೇದ ಪದ್ಧತಿಯಲ್ಲಿ ಈ ರೀತಿಯ ಕಾಯಿಲೆಗಳಿಗೆ ಮೊದಲೇ ಚರಕ, ಶುಶ್ರುತರಂತಹ ವೈದ್ಯಮುನಿಗಳು ತಮ್ಮ ಸಂಹಿತೆಯಲ್ಲಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ಅನೇಕ ಆಯುರ್ವೇದ ವೈದ್ಯರು ಕರೊನಾಗೆ ತಮ್ಮ ಬಳಿ ಔಷಧವಿರುವುದಾಗಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರದ ವೈದ್ಯಕೀಯ ಸಂಶೋಧನಾ ಪರಿಷತ್ ನಿಯಮಾವಳಿಗಳ ಪ್ರಕಾರ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ವಿಧಾನದಂತೆ ವೈಜ್ಞಾನಿಕವಾಗಿ ಯಾವುದೇ ಸಂಶೋಧನೆ ದೃಢಪಟ್ಟಿರಲಿಲ್ಲ. ಬೆಂಗಳೂರಿನ ಆಯುರ್ವೇದ ವೈದ್ಯರಾಗಿರುವ ಡಾ.ಗಿರಿಧರಕಜೆ ಪ್ರಯೋಗ ನಡೆಸಲು ಅನುಮತಿಕೋರಿ ಸಲ್ಲಿಸಿದ್ದ ಅರ್ಜಿಗೆ ಬೆಂಗಳೂರು ಮೆಡಿಕಲ್ ಕಾಲೇಜು ಎಥಿಕ್ಸ್ ಸಮಿತಿ ಮೇ 16ರಂದು ಅನುಮತಿ ನೀಡಿತ್ತು. ಮುಖ್ಯ ಸಂಶೋಧಕರಾದ ಡಾ. ಗಿರಿಧರಕಜೆಯವರೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯ ಡಾ. ಸಿ. ಆರ್. ಜಯಂತಿ ಸಹ ಸಂಶೋಧಕಿಯಾಗಿ ಪ್ರಯೋಗ ನಡೆಸಿದ್ದರು.