ಬೆಳಗುತಿದ್ದ ದೀಪಕ್ಕೆ ಮದಿರೆ ಏಕೆ..?ಕೊರೋನಾ ವಿರುದ್ಧದ ಹೋರಾಟ ತೀವ್ರ ಆಗಬೇಕಿತ್ತು, ಸಮಾಜವು ಶಾಂತಿ ನೆಮ್ಮದಿಯಿಂದ ಬದುಕಬೇಕಿತ್ತು ಅಂದರೆ ಈ ಮದ್ಯದಂಗಡಿಗಳ ಅನುಮತಿಯನ್ನು ಸರಕಾರವು ಹಿಂತೆಗೆದುಕೊಂಡು ಜನರನ್ನು ಇದರ ವಿರುದ್ಧದ ಅಸ್ತ್ರ ಸಿಗುವವರೆಗೆ ಕಾಪಾಡಬೇಕು.
ಜಗತ್ತೆಲ್ಲಾ ಈ ಮಹಾಮಾರಿಗೆ ತತ್ತರಿಸುವಾಗ ನಾವೆಲ್ಲಾ ಬಹುದೊಡ್ಡ ಪಾಠ ಕಲಿತು ಮನೆಯಲ್ಲಿ ಬದಲಾವಣೆಯ ದೀಪ ಹೊತ್ತಿಸಿ ಬೆಳಗುತ್ತಿದ್ದೇವು. ಲಾಕಡೌನ ಎಂದು ಮನೆಯಲ್ಲಿದ್ದು ದೇಶ ಕಾಪಾಡುತ್ತಿದ್ದೇವು. ಇನ್ನೇನು ಶ್ರಮದಿಂದ ಸುವಾಸಿತ ತೈಲ ತಂದು ಕುಟುಂಬ ಸಲಹುವ ಕಾಲ ಬಂದಿತನ್ನುವಷ್ಟರಲ್ಲಿ ಅದ್ಯಾರೊ ನಮ್ಮ ದೀಪಕ್ಕೆ ಮದಿರೆ ಸುರಿದು ಬಿಟ್ಟರು. ಬೆಳಗಾಗುವದರಲ್ಲಿ ಮದುಶಾಲಾ ಮದ್ಯಪ್ರೇಮಿಗಳಿಂದ ತುಂಬಿಕೊಂಡವು. ಅದನ್ನು ನೋಡಿದ ಜಗತ್ತು ನಕ್ಕಿತು. ರಾಮ ರಾಜ್ಯ ಮಾಡಲು ಹೋರಟಿರುವವರು ನಾವು; ಅತ್ಯಂತ ಬಲಿಷ್ಠ ವೈಚಾರಿಕ ತಳಹದಿಯಿಂದ ಬಂದ ನಮ್ಮ ದೇಶ ಇಂದು ಮದುಶಾಲಾಗಳ ಮುಂದೆ ಸಾಲು ನಿಲ್ಲುವದನ್ನು ನೋಡಿ ಕೆಟ್ಟೆನಿಸುತ್ತಿದೆ.
ಅನೇಕ ಧರ್ಮ ಪ್ರಸಾರಕರು, ಸಮಾಜ ಪ್ರವರ್ತಕರು ಮತ್ತು ವಿಚಾರವಂತರು ಮನುಷ್ಯನನ್ನು ದುರ್ನಡತೆಯಿಂದ ಹೊರತಂದು ಪ್ರಭುದ್ಧನನ್ನಾಗಿ ಮಾಡಲು ಪ್ರಯತ್ನ ಪಟ್ಟರು. ಆದರೂ ನಾವು ಪ್ರಭುದ್ಧ ನಾಗರಿಕರಾಗಿ ಬದಲಾಗಲಿಲ್ಲ. ನಿನ್ನೆಯ ಬೌದ್ಧ ಪೂರ್ಣಿಮೆಯ ದಿನ “ನಾನು ಬುದ್ಧನ ಅನುಯಾಯಿ” ಎಂದು ಬರೆದುಕೊಂಡೇವು. ಆದರೆ ಅವರು ಹೇಳಿದ, “ಮದ್ಯಪಾನ ಮಾಡುವವರು ವಿವೇಕಿಗಳಲ್ಲ..” ಮಾತಿನತ್ತ ಸುಳಿಯಲಿಲ್ಲ. ಜೊತೆಗೆ, “ಮದ್ಯಪಾನದಿಂದ ಧನಹಾನಿ, ಕಲಹಗಳು, ಕೋಪ ಎಲ್ಲಕ್ಕಿಂತ ಮಹತ್ವದ್ದು ರೋಗಗಳು ಬರುತ್ತವೆ. ಇದರಿಂದ ಬದುಕಿಗೆ ಅಪಾಯ, ನಿನ್ನ ಕುಟುಂಬಕ್ಕೆ ಕೆಟ್ಟ ಹೆಸರು ಬಂದು, ಮರ್ಯಾದೆ ಇಲ್ಲದಂತೆ ಆಗುತ್ತದೆ. ನಿನ್ನ ಜೊತೆಗೆ ನಿನ್ನ ಹೆಂಡತಿ ಮಕ್ಕಳು ಬೀದಿ ಪಾಲಾಗುತ್ತಾರೆ,,” ಎಂದು ಅವರು ಹೇಳಿದ ಮಾತು ನೆನಪಾಗಲಿಲ್ಲ.
ಮಹಾತ್ಮಾ ಗಾಂಧೀಜಿ ಕೂಡ ಹೇಳಿದರು, “ಕುಡಿತ ಬೇಡ, ಕುಡಿತದಿಂದ ದೇಶ ಹಾಳಾಗುತ್ತದೆ..” ಅಂಬೇಡ್ಕರ್ ಸಹ “ಶೀಲವಂತರಾಗಿ ಬಾಳಿ. ದೇಶದ ಪ್ರಗತಿಯು, ದೇಶದಲ್ಲಿಯ ಜನ ಶಾಲೆ ಮತ್ತು ಗ್ರಂಥಾಲಯಗಳ ಮುಂದೆ ಸಾಲುಗಟ್ಟಿದರೆ ಮಾತ್ರ ಸಾಧ್ಯ..” ಎಂದು ಹೇಳಿದರು. ಅಂದು ಅಂಬೇಡ್ಕರ್ ಕಾರ್ಯಾಲಯ ಮತ್ತು ಗ್ರಂಥಾಲಯದಲ್ಲಿ ಮಾತ್ರ ಕಾಣಿಸಿಕೊಳ್ಳುತಿದ್ದರು. ಆದರೆ ಇಂದಿನ ಜನನಾಯಕರು ಕಾಣಿಸುವ ಸ್ಥಳಗಳನ್ನು ನೋಡಿದರೆ ದೇಶದ ಭವಿಷ್ಯದ ಭಯ ಕಾಡುತ್ತದೆ. ಮೊನ್ನೆ ಒಬ್ಬ ಜನನಾಯಕ, “ಜನರನ್ನು ಕುಡಿಯಲು ಬಿಡಿ, ಕುಡಿತದಿಂದ ಕೊರೋನಾ ವೈರಾಣು ಸಾಯುತ್ತದೆ..” ಎಂದು ಹೇಳಿದನು.
ಇಂದು ಕುಟುಂಬ ನಡೆಸುವದು ತುಂಬ ಕಷ್ಟ. ಅನುಮತಿ ಕೊಟ್ಟ ಮೊದಲನೆಯ ದಿನವೆ ಒಂದು ಊರಲ್ಲಿ ಒಬ್ಬ ಮಹಿಳೆ ದುಡಿದು ಕುಟುಂಬವನ್ನು ಸಲಹುವಾಗ ಕುಡುಕ ಪತಿ ಕುಡಿತಕ್ಕೆ 100 ರೂ. ದುಡ್ಡು ಕೇಳಿದ, ಹೆಂಡತಿ ಇಲ್ಲೆಂದಾಗ ಅವಳ ಪ್ರಾಣವನ್ನೆ ತೆಗೆದು ಬಿಟ್ಟ. ಇಂತಹ ಹಲವು ಅಹಿತಕರ ಘಟನೆಗಳು ಜರಗುತ್ತಿವೆ. ಈ ಕುಡಿತದಿಂದ ಮಹಿಳೆಯರ ಮೇಲಿನ ಅತ್ಯಾಚಾರಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಈ ಕುರಿತು ಮಹಿಳೆಯರು ಲೋಕ್ಡೌನ್ದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಕೌಟುಂಬಿಕ ಕಲಹ ಮತ್ತು ಅತ್ಯಾಚಾರಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗಿತ್ತು. ಇನ್ನು ಅದರಲ್ಲಿ ಈ ಕುಡಿತದಿಂದ ಮತ್ತಷ್ಟು ಹೆಚ್ಚಾಗುತ್ತವೆ. ಇದರಿಂದ ಕೊರೋನಾ ವಿರುದ್ಧದ ನಮ್ಮ ಹೋರಾಟಕ್ಕೆ ಹಿನ್ನಡೆ ಆಗಬಹುದು. ಭಾರತದಲ್ಲಿ ಜೂನ್ ಮತ್ತು ಜುಲೈ ತಿಂಗಗಳಲ್ಲಿ ಕೊರೋನಾ ಸೊಂಕಿನ ಹಾವಳಿ ಹೆಚ್ಚಿಗೆ ಆಗಬಹುದು ಎಂದು ವೈದ್ಯಲೋಕ ಮೂನ್ಸೂಚನೆ ಕೊಡುತ್ತಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ಜನರು ತಮ್ಮ ಆರೋಗ್ಯದ ಕಾಳಜಿ ತೆಗೆದುಕೊಳ್ಳುವಂತೆ ಗಮನಿಸಿಬೇಕಿದೆ. ಕೊರೋನಾ ವಿರುದ್ಧದ ಹೋರಾಟ ತೀವ್ರ ಆಗಬೇಕಿತ್ತು, ಸಮಾಜವು ಶಾಂತಿ ನೆಮ್ಮದಿಯಿಂದ ಬದುಕಬೇಕಿತ್ತು ಅಂದರೆ ಈ ಮದ್ಯದಂಗಡಿಗಳ ಅನುಮತಿಯನ್ನು ಸರಕಾರವು ಹಿಂತೆಗೆದುಕೊಂಡು ಜನರನ್ನು ಇದರ ವಿರುದ್ಧದ ಅಸ್ತ್ರ ಸಿಗುವವರೆಗೆ ಕಾಪಾಡಬೇಕು.
ಬನ್ನಿ ದೀಪ ಬೆಳಗೋಣ,, ಶಾಂತಿ ಹರಡೋಣ.
ಮಲಿಕಜಾನ್ ಶೇಖ್
‘ಜಾನ್ ಹೌಸ್‘, ಪ್ಲಾಟ್ ಕ್ರ.709/31, ಬಾಸಲೇಗಾಂವ ರೋಡ, ಅಕ್ಕಲಕೋಟ- 413216
ಸಂಪರ್ಕ: 9423468808