Vydyaloka

ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮದಿಂದ ಆರೋಗ್ಯ

ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮದಿಂದ  ಸಿಟ್ಟು ಕಡಿಮೆಯಾಗಿ, ತಾಳ್ಮೆ ಹೆಚ್ಚಾಗುತ್ತಾ ಬರುತ್ತದೆ. ಸರಿಯಾಗಿ ನಿದ್ದೆ ಬಾರದವರು(Deep sleep) ಈ ಪ್ರಾಣಾಯಾಮವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ.

ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮವು ನಮ್ಮ ಉಸಿರಾಟವನ್ನು ಸ್ವಚ್ಛಗೊಳಿಸುತ್ತದೆ. ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಶರೀರ ಮತ್ತು ಮನಸ್ಸು ಸಮತೋಲನಕ್ಕೆ (Balance) ಬರುತ್ತದೆ. ಈ ಪ್ರಾಣಾಯಾಮದಿಂದ ತಲೆನೋವು, ಮೈಗ್ರೇನ್ ತಲೆನೋವು, ಕಡಿಮೆಯಾಗುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ. ಧೂಳಿನಿಂದ ಮೂಗು ಕಟ್ಟುವ ಸಮಸ್ಯೆ (Dust allergy) ಸರಿಯಾಗುತ್ತದೆ.

ಸಿಟ್ಟು ಕಡಿಮೆಯಾಗಿ, ತಾಳ್ಮೆ ಹೆಚ್ಚಾಗುತ್ತಾ ಬರುತ್ತದೆ:

ಈ ಪ್ರಾಣಾಯಾಮ ಮಾಡುವಾಗ ನಾವು ಆಮ್ಲಜನಕ(Oxygen)ವನ್ನು ಮೂಗಿನಿಂದ ಒಳಗೆಳೆದುಕೊಂಡು, ಇಂಗಾಲದ ಡೈ ಆಕ್ಸೈಡ್ (Carbon di oxide) ನ್ನು ಹೊರಗೆ ಬಿಡುತ್ತೇವೆ. ಇದರಿಂದ ಶ್ವಾಸಕೋಶಕ್ಕೆ ಸಾಕಷ್ಟು ಆಮ್ಲಜನಕ ದೊರೆಯುವುದರಿಂದ ಉಸಿರಾಟವು ಸ್ವಚ್ಛಗೊಳ್ಳುತ್ತದೆ. ಈ ಪ್ರಾಣಾಯಾಮವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಹೈ ಬ್ಲಡ್ ಪ್ರೆಶರ್(High BP) ಕಡಿಮೆಯಾಗುತ್ತಾ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಈ ಪ್ರಾಣಾಯಾಮದಿಂದ ಸಿಟ್ಟು ಕಡಿಮೆಯಾಗಿ, ತಾಳ್ಮೆ ಹೆಚ್ಚಾಗುತ್ತಾ ಬರುತ್ತದೆ.

ಸರಿಯಾಗಿ ನಿದ್ದೆ ಬಾರದವರು(Deep sleep) ಈ ಪ್ರಾಣಾಯಾಮವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಯಾವುದೇ ಪ್ರಾಣಾಯಾಮವನ್ನು ಮಾಡುವಾಗ ನಮ್ಮ ಉಸಿರಾಟದ ಕಡೆ ನಮ್ಮ ಮನಸ್ಸು ಕೇಂದ್ರೀಕರಿಸಬೇಕು. ಚಿನ್ಮುದ್ರೆ ಅಥವಾ ಜ್ಞಾನಮುದ್ರೆ (ಹೆಬ್ಬೆರೆಳು ಮತ್ತು ತೋರುಬೆರಳನ್ನು ಸೇರಿಸಬೇಕು)ಯಲ್ಲಿ ಕುಳಿತುಕೊಳ್ಳಬೇಕು. ನಂತರ ಸಾಮಾನ್ಯ ಉಸಿರಾಟವನ್ನು 30 ಸೆಕೆಂಡುಗಳ ಕಾಲ ಮಾಡಬೇಕು.

ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮ ಮಾಡುವ ವಿಧಾನ :

1. ಮೊದಲು ಕಣ್ಣು ಮುಚ್ಚಿ ಕುಳಿತುಕೊಳ್ಳಿ. ನಂತರ ಎಡಗೈನಲ್ಲಿ ಚಿನ್ಮುದ್ರೆ ಅಥವಾ ಜ್ಞಾನಮುದ್ರೆಯನ್ನು ಹಿಡಿದುಕೊಳ್ಳಬೇಕು. ಬಲಗೈನಲ್ಲಿ ನಾಸಿಕ ಮುದ್ರೆ ( ತೋರುಬೆರಳು ಮತ್ತು ಮಧ್ಯದ ಬೆರಳನ್ನು ಮಡಚಿ, ಉಂಗುರ ಬೆರಳು ಹಾಗೂ ಕಿರುಬೆರಳು ನೇರವಾಗಿಸಿ) ಇರಬೇಕು.

2. ಬಲಗೈನ ಹೆಬ್ಬೆರಳನ್ನು ಬಲಮೂಗಿನ ಮೇಲಿರಿಸಿ, ನಿಧಾನವಾಗಿ ಬಲಹೊಳ್ಳೆಯನ್ನು ಒತ್ತಿ, ಎಡಮೂಗಿನಿಂದ ನಿಧಾನವಾಗಿ ಉಸಿರನ್ನು ಒಳಗೆಳೆದುಕೊಂಡು, ಎಡಮೂಗಿನ ಹೊಳ್ಳೆಯ ಮೇಲೆ ಉಂಗುರಬೆರಳು ಹಾಗೂ ಕಿರುಬೆರಳನ್ನು ಇರಿಸಿ, ಸ್ವಲ್ಪ ಒತ್ತಿ ಬಲಮೂಗಿನಿಂದ ನಿಧಾನವಾಗಿ ಉಸಿರನ್ನು ಹೊರಬಿಡಬೇಕು.

3. ನಂತರ ಬಲಮೂಗಿನಿಂದ ಉಸಿರನ್ನು ಒಳಗೆಳೆದುಕೊಂಡು, ಬಲಹೊಳ್ಳೆಯನ್ನು ಬಲಗೈಯ ಹೆಬ್ಬೆರೆಳಿನಿಂದ ಸ್ವಲ್ಪ ಒತ್ತಿ, ಎಡಮೂಗಿನಿಂದ ಉಸಿರನ್ನು ಹೊರಗೆ ಬಿಡಬೇಕು. ಇದೇ ರೀತಿ 30 ಸೆಕೆಂಡಿನಿಂದ 1 ನಿಮಿಷದವರೆಗೆ ಪುನಾರಾವರ್ತಿಸಬೇಕು.

4. ಈ ಪ್ರಾಣಾಯಾಮವನ್ನು ಎಡಮೂಗಿನಿಂದ ಪ್ರಾರಂಭ ಮಾಡಿ, ಬಲಮೂಗಿನಿಂದ ಉಸಿರನ್ನು ಹೊರಬಿಡುವುದರ ಮೂಲಕ ಕೊನೆಗೊಳಿಸಬೇಕು.

ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ. ಮನಸ್ಸನ್ನು ಸಂತೋಷಗೊಳಿಸಿ. ಸಂತೋಷ ಹಾಗೂ ಸಮಾಧಾನವಾಗಿರಿ. ಆರೋಗ್ಯವೇ ಭಾಗ್ಯ.

ಬಿ.ವಿ. ಶ್ರೀಮತಿ ರಮೇಶ್
ಶ್ರೀ ಯೋಗ ಮತ್ತು ಸಾಂಸ್ಕøತಿಕ ಅಕಾಡೆಮಿ(ರಿ)
ಸಂಸ್ಥಾಪಕಿ, ಕಾರ್ಯದರ್ಶಿ ಮತ್ತು ಯೋಗ ಶಿಕ್ಷಕಿ
Mob: 98803 86687

Email : sri.ycaofficial@gmail.com

Share this: