Vydyaloka

ಅಜೀರ್ಣ ನಿವಾರಣೆಗೆ ಕೆಲವು ಮನೆಮದ್ದುಗಳು

ಅಜೀರ್ಣ ನಿವಾರಣೆಗೆ ನಮ್ಮ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ದಿನಸಿಯ ಅನೇಕ ಪದಾರ್ಥಗಳಿಂದ ಹಾಗೆಯೇ ಕಿಚನ್ ಗಾರ್ಡನ್‍ನಲ್ಲಿ ನಾವು ಬೆಳೆಯುವ ಗಿಡಗಳಿಂದ  ಈ ಕೆಳಕಂಡ ಮನೆಮದ್ದನ್ನು ಮಾಡಿಅನುಸರಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.

ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ. ಉತ್ತಮ ಆಹಾರವು ಉತ್ತಮ ಆರೋಗ್ಯ ನೀಡುತ್ತದೆ. ನಮ್ಮ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ದಿನಸಿಯ ಅನೇಕ ಪದಾರ್ಥಗಳಿಂದ ಹಾಗೆಯೇ ಕಿಚನ್ ಗಾರ್ಡನ್‍ನಲ್ಲಿ ನಾವು ಬೆಳೆಯು ಗಿಡಗಳಿಂದ ನಮಗೆ ಅನೇಕ ಪ್ರಯೋಜನ ಮತ್ತು ಅನುಕೂಲಗಳಿವೆ. ಅಜೀರ್ಣವಾದಾಗ ಅಥವಾ ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ ಈ ಕೆಳಕಂಡ ಮನೆಮದ್ದನ್ನು ಅನುಸರಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.

Also Read: ಅಜೀರ್ಣ : ಜೀರ್ಣವಿಲ್ಲದ ಜೀವನ 

1. ನಿಂಬೆ ರಸದೊಂದಿಗೆ ಸ್ವಲ್ಪ ಪ್ರಮಾಣದ ನೀರು ಬೆರೆಸಿ ಕುಡಿಯಬೇಕು ; ಇದನ್ನು ದಿನಕ್ಕೆ ಮೂರು ಬಾರಿ ಮಾಡಬೇಕು.

2. ಒಂದು ಟೀ ಚಮಚ ಜೀರಿಗೆ ಮತ್ತು ಸುಮಾರು ಒಂದು ಅಂಗುಲ ಉದ್ದದ ಒಣ ಶುಂಠಿ ತುಂಡನ್ನು ಒರಟಾಗಿ ರುಬ್ಬಿಕೊಳ್ಳಬೇಕು. ಇದನ್ನು ನಾಲ್ಕು ಕಪ್ ಕುದಿಯುವ ನೀರಿಗೆ ಹಾಕಬೇಕು. ಇನ್ನೂ ಐದು ನಿಮಿಷಗಳ ಕಾಲ ಕುದಿಸುವ ಪ್ರಕ್ರಿಕೆಯನ್ನು ಮುಂದುವರಿಸಬೇಕು. ಅದನ್ನು ಸೋಸಿ, ಬೆಚ್ಚಗಿರುವ ಕಷಾಯವನ್ನು ಕುಡಿಯಬೇಕು. ಈ ಕಷಾಯವನ್ನು ಇನ್ನಷ್ಟು ಕುದಿಯುವ ನೀರಿನ್ನು ಸೇರಿಸಿ ಮತ್ತಷ್ಟು ತೆಳು ಮಾಡಬಹುದು ಹಾಗೂ ಇದನ್ನು ಮಾಮೂಲಿ ಕುಡಿಯುವ ನೀರಿಗೆ ಪರ್ಯಾಯವಾಗಿ ಬಳಸಬಹುದು.

3. ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಬೆಂಕಿಯಲ್ಲಿ ಉರಿದು ಸೇವಿಸುವುದರಿಂದ ಪ್ರಯೋಜನವುಂಟು.

4. ಊಟ ಸೇವಿಸುವುದನ್ನೂ ಮೊದಲು ಒಂದು ಸಣ್ಣ ತಾಜಾ ಶುಂಠಿ ಚೂರನ್ನು 4-5 ಹರಳು ಉಪ್ಪಿನೊಂದಿಗೆ ಅಗಿದು ತಿನ್ನಬೇಕು.

5. 100 ಗ್ರಾಂ ಧನಿಯ ಬೀಜ ಮತ್ತು 25 ಗ್ರಾಂ ಒಳ ಶುಂಠಿಯನ್ನು ಉರಿದುಕೊಳ್ಳಬೇಕು. ಅವುಗಳನ್ನು ಬೆರೆಸಿ ರುಬ್ಬಿಕೊಳ್ಳಬೇಕು. ಪುಡಿಯನ್ನು ಜರಡಿ ಹಿಡಿದು ಅದನ್ನು ಸ್ವಚ್ಚವಾದ ಗಾಜಿನ ಶೀಷೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಬಳಸಬೇಕು. ಈ ಮೇಲಿನ ಎರಡು ಚಮಚಗಳಷ್ಟು ಪುಡಿಯನ್ನು ಒಂದು ಚಮಚ ಬೆಲ್ಲದ ಪುಡಿಯೊಂದಿಗೆ ಒಂದು ಕಪ್ ಕುದಿಯುವ ನೀರಿಗೆ ಸೇರಿಸಿ ಈ ಎಲ್ಲ ಮಿಶ್ರಣವನ್ನು ಎರಡು ನಿಮಿಷಗಳ ಕಾಲ ಕುದಿಸಬೇಕು. ಈ ಕಷಾಯವನ್ನು ಸೋಸಿ ಸ್ವಲ್ಪ ಹಾಲಿನೊಂದಿಗೆ ಸೇವಿಸಬೇಕು. ಇದು ಅಜೀರ್ಣ ಸಮಸ್ಯೆಗೆ ಉತ್ತಮ ಉಪಶಮನ ನೀಡುತ್ತದೆ.

6. ತಾಜಾ ಮೂಲಂಗಿ ಹೋಳುಗಳಿಗೆ ಮೆಣಸು ಮತ್ತು ಉಪ್ಪಿನ ಪುಡಿಯನ್ನು ಉದುರಿಸಬೇಕು ಹಾಗೂ ಸ್ವಲ್ಪ ನಿಂಬೆ ರಸ ಹಿಂಡಿ ಸೇವಿಸಬೇಕು.

7. ಸುಮಾರು ಒಂದು ಅಂಗುಲ ಉದ್ದವಿರುವ ತಾಜಾ ಶುಂಠಿಯನ್ನು ನೀರಿನೊಂದಿಗೆ ಚೆನ್ನಾಗಿ ರುಬ್ಬಿಕೊಳ್ಳಬೇಕು. ಈ ಪೇಸ್ಟ್‍ನನ್ನು ಒಂದು ಕಪ್ ನೀರಿನೊಂದಿಗೆ ಸೇರಿಸಿ ಸೋಸಿಕೊಳ್ಳಬೇಕು. ಒಂದು ಚಮಚ ಜೇನುತುಪ್ಪ ಮತ್ತು ಅಷ್ಟೇ ಪ್ರಮಾಣದ ನಿಂಬೆರಸವನ್ನು ಶುಂಠಿ ನೀರಿಗೆ ಸೇರಿಸಿ ಕುಡಿಯಬೇಕು.

8. ಊಟ ಸೇವಿಸಿ ಮಲಗುವುದಕ್ಕೆ ಮೊದಲು ಒಂದು ಏಲಕ್ಕಿಯೊಂದಿಗೆ ಬಾಳೆಹಣ್ಣನ್ನು ಸೇವಿಸಬೇಕು. ನೆನಪಿಡಿ ಏಲಕ್ಕಿಯನ್ನು ಅದರ ಹೊರಗಿನ ಸಿಪ್ಪೆ ಸಮೇತ ನುಂಗಬೇಕು.

9. ಒಂದು ಕಪ್ ಕುದಿಯುವ ನೀರಿಗೆ ಒಂದು ಟೀ ಚಮಯ ಹುರಿದ ಮೆಣಸು ಮತ್ತು ಸ್ವಲ್ಪ ತುಳಸಿ ಎಲೆಗಳನ್ನು ಸೇರಿಸಬೇಕು. ಈ ಮಿಶ್ರಣವನ್ನು ಐದು ನಿಮಿಷಗಳ ಕಾಲ ಕುದಿಸುವ ಪ್ರಕ್ರಿಯೆಯನ್ನು ಮುಂದುವರಿಸಬೇಕು. ಕಷಾಯವನ್ನು ಹೊರಚೆಲ್ಲಿ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬೇಕು.

10. ಸ್ವಲ್ಪ ಶುದ್ಧ ನೀರಿಗೆ ಒಂದು ಟೀ ಚಮಚ ನಿಂಬೆ ರಸ ಮತ್ತು ಒಂದು ಚಿಟಿಕೆ ಅಡುಗೆ ಸೋಡಾ ಸೇರಿಸಿ ಕುಡಿಯಬೇಕು.

11. ಪುದೀನ ಎಲೆಗಳನ್ನು ಬಳಸಿ ಚಹಾ ತಯಾರಿಸಬೇಕು. ದಿನಕ್ಕೆ ಮೂರು ಬಾರಿ 7-8 ಟೀ ಚಮಚ ಈ ದ್ರಾವಣವನ್ನು ಕುಡಿಯಬೇಕು. ಇದು ಜೀರ್ಣ ಕ್ರಿಯೆಗೆ ನೆರವಾಗುವ ಜೊತೆಗೆ ವಾಯಬಾಧೆ ಮತ್ತು ಹೊಟ್ಟೆ ನೋವನ್ನು ಸಹ ಕಡಿಮೆ ಮಾಡುತ್ತದೆ.

ಡಾ|| ಮಂಜುಶ್ರೀ
ಪೂರ್ಣಾಯು ಕ್ಲಿನಿಕ್, ಎನ್‌ಹೆಚ್ ೬೬,
ಶಾನ್‌ಬಾನ್ ಟ್ರೇಡರ‍್ಸ್ ಎದುರು, ತಡಂಬೈಲು
ಸುರತ್ಕಲ್-575014 ದೂ:9482249762
Share this: