Vydyaloka

ವಿಟಿಲಿಗೊ ಅಥವಾ ತೊನ್ನು ರೋಗ – ಆಯುರ್ವೇದದಲ್ಲಿ ಇದೆ ಚಿಕಿತ್ಸೆ

ವಿಟಿಲಿಗೋ ಅಥವಾ  ತೊನ್ನು ರೋಗ  ಚರ್ಮದ ವರ್ಣಕ್ಕೆ ಸಂಭಂದಿಸಿದ ಚಿರಕಾಲೀನ ಚರ್ಮರೋಗ. ಬಹಳಷ್ಟು ಮುಜುಗರ ಹಾಗೂ ಸಾಮಾಜಿಕ ನಿರ್ಲಕ್ಷದಿಂದಾಗಿ ರೋಗಿಯು ಸಮಾಜಿಕ ಜೀವನಿಂದ ವಿಮುಖನಾಗಿ ಮಾನಸಿಕ ಖಿನ್ನತೆಗೂ ಒಳಗಾಗುತ್ತಾನೆ. ಚರ್ಮದ ಸೌಂದರ್ಯಕ್ಕೆ ಹಾನಿಯಾಗುವುದು ಬಿಟ್ಟರೆ ವಿಟಿಲಿಗೊ ಉಪದ್ರವ ರಹಿತ ರೋಗ.

ವಿಟಿಲಿಗೋ ಬಿಳಿ ಚರ್ಮ,ತೊನ್ನು ರೋಗ , ಅಥವಾ ಲ್ಯೂಕೊಡೆರ್ಮ ಚರ್ಮದ ವರ್ಣಕ್ಕೆ ಸಂಭಂದಿಸಿದ ಚಿರಕಾಲೀನ ಚರ್ಮರೋಗ. ದೀರ್ಘಕಾಲ ಕಾಡುವ ಈ ರೋಗ ಚರ್ಮವನ್ನು ವಿರೋಪಗೊಳಿಸುವುದು ಮತ್ತು ರೋಗಿಯನ್ನು ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಕಾಡುವುದು. ಬಹಳಷ್ಟು ಮುಜುಗರ ಹಾಗೂ ಸಾಮಾಜಿಕ ನಿರ್ಲಕ್ಷದಿಂದಾಗಿ ರೋಗಿಯು ಸಮಾಜಿಕ ಜೀವನಿಂದ ವಿಮುಖನಾಗಿ ಮಾನಸಿಕ ಖಿನ್ನತೆಗೂ ಒಳಗಾಗುತ್ತಾನೆ.

ತೊನ್ನು ರೋಗದ ಬಗ್ಗೆ ಬಹಳಷ್ಟು ಹೆದರಿಕೆ ಹಾಗೂ ತಪ್ಪು ತಿಳುವಳಿಕೆ ಜನಸಾಮಾನ್ಯರಲ್ಲಿದೆ. ಈ ರೋಗ ಒಂದು ಶಾಪವೆಂದು ಪರಿಗಣಿಸಿ ಇದೊಂದು ಅಸಾಧ್ಯವ್ಯಾಧಿಯೆಂದು ರೋಗಿಯನ್ನು ನಿರ್ಲಕ್ಷಿಸುವುದು ಭಾರತದಲ್ಲಿ ಸಾಮಾನ್ಯ. ತೊನ್ನು ರೋಗ ಅಂಟು ರೋಗ ಅಥವಾ ಸಾಂಕ್ರಾಮಿಕ ರೋಗವಲ್ಲ.

ಚರ್ಮಕ್ಕೆ ಪ್ರಾಕೃತ ಬಣ್ಣವನ್ನು ನೀಡುವ ಮೆಲನೋಸೈಟ್ಸ್ ಎಂಬ ಕಣಗಳ ಕೊರತೆ ಅಥವಾ ನಾಶದಿಂದ ತೊನ್ನು ರೋಗ ಉತ್ಪತ್ತಿಯಾಗುತ್ತದೆ. ಜಗತ್ತಿನಾದ್ಯಂತ ಶೇಕಡ 1-2 ಪ್ರತಿಶತ ಜನರು ಈ ರೋಗದಿಂದ ಬಳಲುತಿದ್ದು, ಅನುವಂಶಿಕವಾಗಿ ಈ ರೋಗ ಬರಬಹುದು. ತಂದೆ ತಾಯಿ ಇಬ್ಬರಲ್ಲೂ ಕಂಡು ಬಂದಲ್ಲಿ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕಾರಣ

ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲವಾದರು, ವಿಟಿಲಿಗೋ ಒಂದು ಆಟೊಇಮ್ಯೂನ್ ರೋಗ ಎಂದು ಪರಿಗಣಿಸಲಾಗಿದೆ. ಆಂದರೆ ದೇಹದ ವ್ಯಾಧಿನಿರೋಧಕ ಶಕ್ತಿಯನ್ನು ನಿಯಂತ್ರಿಸುವ ಅಂಶವು ತನ್ನದೇ ದೇಹದ ಭಾಗದ ಮೇಲೆ, ದೇಹದಲ್ಲಾಗುವ ಪ್ರಾಕೃತ ಕ್ರಿಯೆಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು.

ಆಯುರ್ವೇದ ಪ್ರಕಾರ ವಿರುದ್ದಾಹಾರ ಸೇವನೆ ಆಟೊ ಇಮ್ಯೂನ್ ರೋಗಗಳಿಗೆ ಪ್ರಮುಖ ಕಾರಣ. ವಿರುದ್ದ ಗುಣಗಳುಳ್ಳ ಆಹಾರಗಳನ್ನು ಬಹಳಕಾಲ ನಿರಂತರಾಗಿ ಸೇವಿಸುವುದರಿಂದ ಟಾಕ್ಸಿನ್ಸ್ ಅಥವಾ ದೇಹಕ್ಕೆ ನಿರುಪಯುಕ್ತ ವಿಷದಂತಹ ಅಂಶವಾಗಿ ಮಾರ್ಪಾಡಾಗಿ ದೇಹದಲ್ಲಿ ಶೇಕರಣೆಯಾಗಿ ಕ್ರಮೇಣ ವ್ಯಾಧಿಕ್ಷಮತೆಯನ್ನು ತಗಿಸುತ್ತದೆ ಮತ್ತು ಮೆಲನಿನ್ ಅಂಶವನ್ನು ಉತ್ಪತ್ತಿ ಮಾಡುವ ಮೆಲನೋಸೈಟ್ ಧಾತುಗಳನ್ನು ಹಾನಿಗೊಳಿಸುತ್ತದೆ.

ವಿಟಿಲಿಗೊ ಥೈರಾಯಿಡ್, ಸೋರಿಯಾಸಿಸ್, ರಕ್ತಹೀನತೆ ಹಾಗೂ ಮತ್ತಿತೆರೆ ಆಟೊಇಮ್ಯೂನ್ ರೋಗಗಳೊಂದಿಗೆ ಕಾಣಿಸಿಕೊಳ್ಳುಬಹುದು. ಕೆಲವು ಔಷಧಿಗಳ ಪ್ರತಿಕೊಲ ಪ್ರಯೋಗದಿಂದ, ಕೀಮೊಥೆರಪಿ ಹಾಗೂ ರೇಡಿಯೇಶನ್ ಚಿಕಿತ್ಸೆಯ ಅಡ್ಡಪರಿಣಾಮಗಳಿಂದಲೂ ಬರಬಹುದು.

ರೋಗದ ಲಕ್ಷಣ

ಚರ್ಮದ ಮೇಲೆ ಬಿಳಿ ಮಚ್ಚೆಗಳು, ವಯೋಮಾನದ ಮುನ್ನ ಕೂದಲು ಬೆಳ್ಳಗಾಗುವುದು ರೋಗದ ಮುಖ್ಯ ಲಕ್ಷಣ. ಸಣ್ಣ ಬಿಳಿಯ ಮಚ್ಚೆಯಂತೆ ಪ್ರಾರಂಭವಾಗಿ ಕಾಲಕ್ರಮೇಣ ದೊಡ್ಡದಾಗುತ್ತಾ ದೇಹದ ಇತರೆ ಭಾಗಗಳಿಗೆ ಹರಡುತ್ತದೆ. ವಿವಿಧ ಆಕಾರ ಹಾಗೂ ಗಾತ್ರಗಳಲ್ಲಿ ಕಾಣುವ ಮಚ್ಚೆಗಳು ಸಾಮಾನ್ಯವಾಗಿ ಮುಖ, ಕೈಗಳು, ಬೆನ್ನು ಹಾಗೂ ಸೊಂಟದಲ್ಲಿ ಕಾಣುತ್ತದೆ. ಸತತವಾಗಿ ಗಾಯ ಹಾಗೂ ತಿಕ್ಕಾಟಕ್ಕೆ ಒಳಗಾಗುವ ಚರ್ಮದ ಭಾಗದಲ್ಲಿ ಬಿಳಿ ಮಚ್ಚಿ ಕಂಡು ಬರುತ್ತದೆ. ವಿಶೇಷವೆಂದರೆ ಚರ್ಮದಲ್ಲಿ ಯಾವುದೇ ಸ್ರಾವ, ತುರಿಕೆ, ಉರಿ, ನೋವು ಹಾಗೂ ಸ್ಪರ್ಶ ಹಾನಿ ಆಗುವುದಿಲ್ಲ. ಚರ್ಮದ ಸೌಂದರ್ಯಕ್ಕೆ ಹಾನಿಯಾಗುವುದು ಬಿಟ್ಟರೆ ವಿಟಿಲಿಗೊ ಉಪದ್ರವ ರಹಿತ ರೋಗ.

ಆಯುರ್ವೇದದಲ್ಲಿ ಈ ರೋಗದ ಉಲ್ಲೇಖವಿದ್ದು, ಶ್ವಿತ್ರ ರೋಗ ಎಂದು ವಿವರಿಸಲಾಗಿದೆ. ಜನರಲ್ಲಿ ಈ ರೋಗವು ಘೋರ ಮತ್ತು ಯಾವುದೇ ಚಿಕಿತ್ಸೆ ಇಲ್ಲದ ವ್ಯಾಧಿ ಎಂಬ ತಪ್ಪು ತಿಳುವಳಿಕೆ ಇದೆ. ಆದರೆ ಬಿಳಿ ಮಚ್ಚೆಗಳು ಸಣ್ಣದಿದ್ದಾಗ, ಮಚ್ಚೆಗಳು ಒಂದಕ್ಕೊಂದು ಜೋಡಣೆಯಾಗದಿದ್ದರೆ, ಮಚ್ಚೆಗಳ ಸಂಖ್ಯೆ ಕಡಿಮೆಯಾಗಿದ್ದರೆ, ಮಚ್ಚೆಗಳ ಉತ್ಪತ್ತಿಯಾಗಿ ಕಡಿಮೆ ಅವಧಿಯಾಗಿದ್ದರೆ ಶೀಘ್ರವಾಗಿ ಗುಣಪಡಿಸಬಹುದು.  ಸರಿಯಾದ ಸಮಯದಲ್ಲಿ ಚಿಕಿತ್ಸೆಯನ್ನು, ಪಥ್ಯಾಹಾರ ಸೇವನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಪ್ರಾಕೃತ ವರ್ಣವನ್ನು ಮತ್ತೆ ಪಡದುಕೊಳ್ಳಬಹುದು ಹಾಗೂ ಹೊಸದಾಗಿ ಮೂಡುವ ಮಚ್ಚೆಗಳನ್ನು ನಿಯಂತ್ರಿಸಿಕೊಳ್ಳಬಹುದು.

ಪ್ರತಿಯೊಬ್ಬರ ದೇಹಪ್ರಕೃತಿಯ ಅನುಸಾರವಾಹಿ ನಿಯಮಿತ ಆಹಾರ ಹಾಗೂ ಚಟುವಟಿಕೆಯನ್ನು ಪಾಲಿಸುವುದು ಬಹುಮುಖ್ಯ. ಸೇವಿಸುವ ಆಹಾರ ಹಾಗೂ ಇದರ ಕ್ರಮ ತೊನ್ನು ರೋಗದ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ವಿರುದ್ದಾಹಾರ ಸೇವನೆಯನ್ನು ತಡೆಗಟ್ಟಬೇಕು.

ವಿರುದ್ದ ಆಹಾರಗಳು

ಅತಿಯಾದ ಮಾಂಸಾಹಾರ ಸೇವನೆ, ನಂಜಿನ ಪದಾರ್ಥಗಳಾದ ಬದನೆಕಾಯಿ, ಮೂಲಂಗಿ, ಮೀನು, ಮೊಟ್ಟೆ, ಹುಳಿ, ಹುರುಳಿಕಾಳು, ಕಫ ವೃದ್ದಿಸುವ ಪದಾರ್ಥಗಳಾದ ಮೊಸರು, ಉದ್ದು, ವಿರುದ್ದ ಆಹಾರ ಉದಾ- ಮೊಸರಿನೊಟ್ಟಿಗೆ ಮೀನಿನ ಸೇವನೆ, ಅತಿಯಾದ ಜಿಡ್ಡಿನ ಪದಾರ್ಥ, ಮಾನಸಿಕ ಒತ್ತಡ ಈ ರೋಗಕ್ಕೆ ಹಿತಕರವಲ್ಲ.

ಆಹಾರ ಪದಾರ್ಥಗಳಾದ ಗೋಧಿ, ಹೆಸರುಕಾಳು, ಅರಿಶಿಣ, ಪಡವಲೆಕಾಯಿ, ಹೀರೆಕಾಯಿ, ನೆಲ್ಲಿಕಾಯಿ ಸೊರೇಕಾಯಿ, ಸೌತೆಕಾಯಿ, ಬೇವು, ಒಂದಲಗ, ಸಮಯಕ್ಕೆ ತಕ್ಕ ಹಿತಕರ ಆಹಾರ ಸೇವನೆ, ನಿತ್ಯ ಅಭ್ಯಂಜನ ಹಾಗೂ ನಿತ್ಯ ಸ್ನಾನದಿಂದ ಈ ಚರ್ಮರೋಗವನ್ನು ತಡೆಗಟ್ಟಬಹುದು.

ಜೂ. 25: ವಿಶ್ವ ವಿಟಿಲಿಗೊ (ತೊನ್ನು ರೋಗ) ದಿನಾಚರಣೆ     

ದೀರ್ಘಕಾಲಿಕವಾಗಿ ಕಾಡುವ ಈ ರೋಗಕ್ಕೆ ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದ್ದು, ರೋಗದ ಪ್ರಾರಂಭಿಕ ಅವಸ್ಥೆಯಲ್ಲೆ ಚಿಕೆತ್ಸೆ ಪಡೆಯುವುದು ಉತ್ತಮ. ಶೀಘ್ರವಾಗಿ ಚಿಕಿತ್ಸೆ ಪ್ರಾರಂಭಿಸಿ, ತಾಳ್ಮೆಯಿಂದ ಚಿಕಿತ್ಸೆಯನ್ನು ಮುಂದುವರೆಸುವುದು ಈ ರೋಗದಲ್ಲಿ ಅತ್ಯವಶ್ಯ. ವಿಶೇಷವಾಗಿ ಪ್ರಥಮವಾಗಿ ಟಾಕ್ಸಿನ್ಸ್ ಅಂಶವನ್ನು ಹೊರಹಾಕಿ ದೇಹವನ್ನು ಶುದ್ದೀಕರಿಸುವ ಪಂಚಕರ್ಮ ಚಿಕಿತ್ಸೆ, ವ್ಯಾಧಿನಿರೋಧಕ ಶಕ್ತಿಯನ್ನು ವೃದ್ದಿಸುವ ರಸಾಯನ ಚಿಕಿತ್ಸೆ ಆಗಬೇಕು. ನಂತರ ನಿರಂತರವಾಗಿ ಔಷಧಿಗಳನ್ನು ಸೇವಿಸುತ್ತಾ, ಪಥ್ಯಾಹಾರಗಳ ಸೇವನೆಯೊಂದಿಗೆ ರೋಗಿಯು ಉತ್ತಮ ಚಿಕಿತ್ಸಾ ಫಲವನ್ನು ಪಡೆಯುವುದಲ್ಲದೆ ರೋಗದ ಪುನರುತ್ಪತ್ತಿಯನ್ನು ತಡೆಗಟ್ಟಬಹುದು.

ಡಾ. ಮಹೇಶ್ ಶರ್ಮಾ ಎಂ.

ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ,
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
Ph: 080-22718025
Mob: 9964022654
email: drsharmamysr@gmail.com

Share this: