Vydyaloka

ಪ್ರಾಣಚಿಕಿತ್ಸೆ ಅಥವಾ ಪ್ರಾಣಿಕ್ ಹೀಲಿಂಗ್‍ – ಔಷಧಿ ಸೇವಿಸದೇ ರೋಗ ಗುಣಪಡಿಸಲು ಸಹಾಯಕ

ಪ್ರಾಣಚಿಕಿತ್ಸೆ ಅಥವಾ ಪ್ರಾಣಿಕ್ ಹೀಲಿಂಗ್‍ – ಔಷಧಿ ಸೇವಿಸದೇ ರೋಗಗಳನ್ನು ಗುಣಪಡಿಸುವ ಚಿಕಿತ್ಸಾ ವಿಧಾನ.ಪ್ರಾಣಮಯ ಶರೀರದಲ್ಲಿ ಉಂಟಾದ ಈ ರೀತಿಯ ತೊಡಕುಗಳನ್ನು ನಿವಾರಿಸಿ ಪ್ರಾಣತುಂಬಿಸುವುದರ ಮೂಲಕ ರೋಗಗಳನ್ನು ಗುಣಪಡಿಸುವ ವಿಧಾನವೇ ಪ್ರಾಣಚಿಕಿತ್ಸೆ.

ಪ್ರಾಣಚಿಕಿತ್ಸೆ ಎನ್ನುವುದು ಔಷಧಿಯನ್ನು ಸೇವಿಸದೇ ಪ್ರಾಣದ ಮೂಲಕ ರೋಗಗಳನ್ನು ಗುಣಪಡಿಸುವ ಚಿಕಿತ್ಸಾ ವಿಧಾನ. ಇಂಗ್ಲೀಷಿನಲ್ಲಿ ಇದನ್ನೇ ಪ್ರಾಣಿಕ್ ಹೀಲಿಂಗ್‍ ಎನ್ನುತ್ತಾರೆ. ಇದನ್ನು ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ಕಲಿಸಲಾಗುತ್ತಿದೆ. ಈ ಚಿಕಿತ್ಸೆಯು ಮೂಲತಃ ನಮ್ಮ ದೇಶದ್ದೇ ಆದರೂ ಆಗ ಈ ಬಗ್ಗೆ ಕೆಲವೇ ಜನರಿಗೆ ಮಾತ್ರ ತಿಳಿದಿತ್ತು. ಈ ಚಿಕಿತ್ಸಾ ಪದ್ದತಿಯನ್ನು ಆಳವಾಗಿ ಅಭ್ಯಸಿಸಿ, ಚಿಕಿತ್ಸಾ ವಿಧಾನವನ್ನು ಸರಳವೂ, ಪರಿಣಾಮಕಾರಿಯೂ ಆಗುವಂತೆ ರೂಪಿಸಿ ಪ್ರಚಾರ ಮಾಡಿದ ಕೀರ್ತಿ ಗ್ರ್ಯಾಂಡ್ ಮಾಸ್ಟರ್ ಚೋಆ ಕೋಕ್ ಸುಯಿ ಅವರಿಗೆ ಸೇರುತ್ತದೆ. ಅವರು ವಿಜ್ಞಾನಿಗಳೂ, ರಾಸಾಯನಿಕ ತಂತ್ರಜ್ಞಾನ ಪದವೀಧರರೂ, ಲೋಕೋಪಕಾರಿಗಳೂ ಮತ್ತು ಆಧ್ಯಾತ್ಮಿಕ ಗುರುಗಳಾಗಿದ್ದರು. ಇವರು ಬರೆದ ಪುಸ್ತಕಗಳು ಇಪ್ಪತ್ತನಾಲ್ಕಕ್ಕೂ ಹೆಚ್ಚು ಭಾಷೆಗೆ ಅನುವಾದಗೊಂಡಿದೆ.

ಔಷಧಿ ರಹಿತವಾಗಿ ರೋಗವನ್ನು ಗುಣಪಡಿಸುವ ವಿಧಾನ

ನಮ್ಮ ದೇಹ ಕೇವಲ, ಮೂಳೆ ಮಾಂಸದ ಭೌತಿಕ ಶರೀರ ಮಾತ್ರವಲ್ಲ. ಬದಲಾಗಿ ನಮ್ಮ ದೇಹದ ಸುತ್ತಲೂ ಸೂಕ್ಷ್ಮ ಶರೀರವೊಂದಿದೆ. ಇದೇ ಪ್ರಾಣಮಯ ಶರೀರ. ಈ ಪ್ರಾಣಮಯ ಶರೀರವು ನಮ್ಮ ಭೌತಿಕ ಶರೀರದ ಮೇಲೆ ಸಂಪೂರ್ಣ ಹತೋಟಿಯನ್ನು ಹೊಂದಿದ್ದು ನಮ್ಮ ಶರೀರದ ಆಗುಹೋಗುಗಳಿಗೆ ಕಾರಣವಾಗಿದೆ. ನಮ್ಮ ದಿನನಿತ್ಯದ ಏರುಪೇರುಗಳಿಗೆ, ಮಾನಸಿಕ ಒತ್ತಡಗಳಿಗೆ, ವಾತಾವರಣದಲ್ಲಿನ ಮಾಲಿನ್ಯದಿಂದಾಗಿ ರೋಗಗಳು ಹುಟ್ಟಿಕೊಳ್ಳುತ್ತವೆ. ಪ್ರಾಣಮಯ ಶರೀರದಲ್ಲಿ ಉಂಟಾದ ಈ ರೀತಿಯ ತೊಡಕುಗಳನ್ನು ನಿವಾರಿಸಿ ಪ್ರಾಣತುಂಬಿಸುವುದರ ಮೂಲಕ ರೋಗಗಳನ್ನು ಗುಣಪಡಿಸುವ ವಿಧಾನವೇ ಪ್ರಾಣಚಿಕಿತ್ಸೆ.

ಈ ಚಿಕಿತ್ಸೆಯ ಲಾಭಗಳು

ತಲೆನೋವು, ಜ್ವರ, ಕೀಲುನೋವು, ಉಬ್ಬಸ ಇತ್ಯಾದಿಗಳನ್ನು ಸುಲಭವಾಗಿ ಗುಣಪಡಿಸಬಹುದು. ನಮಗೆ ನಾವೇ ಚಿಕಿತ್ಸೆ ಮಾಡಿಕೊಳ್ಳುವುದಲ್ಲದೇ  ಬೇರೆಯವರಿಗೂ ಚಿಕಿತ್ಸೆ ಮಾಡಿ ಗುಣಪಡಿಸಬಹುದು. ಇದರಿಂದ ದೇಹದಲ್ಲಿ ಕ್ಷಮತೆ ಹೆಚ್ಚುವುದರಿಂದ ರೋಗಗಳಿಗೆ ಈಡಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

1. ಈ ಚಿಕಿತ್ಸೆಯು ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗಿದೆ.
2. ಪರಸ್ಪರ ಸಂಬಂಧಗಳನ್ನು ಸುಧಾರಿಸಲು ಈ ಪ್ರಾಣಚಿಕಿತ್ಸೆ ನೆರವಾಗುತ್ತದೆ.
3. ಆಧ್ಯಾತ್ಮಿಕ ಬೆಳವಣಿಗೆಗೂ ಸಹಾಯಕವಾಗಿದೆ.
4. ಮನಶ್ಯಾಂತಿ ಹಾಗೂ ಏಕಾಗ್ರತೆಗೆ ನೆರವಾಗುತ್ತದೆ.

ಯಾರು ಯಾರು ಈ ಚಿಕಿತ್ಸೆ ತೆಗೆದುಕೊಳ್ಳಬಹುದು?

ರೈತರಿಗೆ, ಶಿಕ್ಷಕರಿಗೆ, ಸಮಾಜಸೇವಕರಿಗೆ ಹೀಗೆ ಎಲ್ಲಾ ಸ್ಥರದವರಿಗೂ ಈ ಪ್ರಾಣಿಕ್ ಹೀಲಿಂಗ್  ಸಹಾಯಕವಾಗಬಲ್ಲುದು. ವಿದ್ಯಾರ್ಥಿಗಳಿಗೆ ದೃಢವಾದ ದೈಹಿಕ ಬೆಳವಣಿಗೆ ಹೊಂದಲು, ಏಕಾಗ್ರತೆ ಹೆಚ್ಚಿಸಿಕೊಳ್ಳಲು, ಕ್ರೀಡೆ ಮತ್ತು ಓದಿನಲ್ಲಿ ಹೆಚ್ಚಿನ ಫಲಿತಾಂಶ ಪಡೆಯಲು ನೆರವಾಗುತ್ತದೆ. ಗೃಹಿಣಿಯರಿಗೆ ಒತ್ತಡದಿಂದ ಮುಕ್ತರಾಗಲು ಹಾಗೂ ಎಲ್ಲಾ ರೀತಿಯ ತೊಂದರೆ ನಿವಾರಿಸಿಕೊಳ್ಳಲು ಉಪಯೋಗಿಯಾಗಿದೆ. ವೃತ್ತಿನಿರತರಿಗೆ ಈ ಪದ್ಧತಿಯಿಂದ ಉನ್ನತಿ ಹಾಗೂ ಅಭಿವೃದ್ಧಿ ಸಾಧ್ಯ.

Also read: ಮನಸ್ಸು ಮತ್ತು ದೇಹದ ಮೇಲೆ ಒತ್ತಡ – ಪರಿಣಾಮಗಳು ಯಾವುವು? ನಿರ್ವಹಣೆ ಹೇಗೆ? 

ಪ್ರಾಣ ಚೈತನ್ಯ ಚಿಕಿತ್ಸೆಯ ಈ ಕ್ರಮ ಪ್ರಖ್ಯಾತ ಪದ್ಧತಿಯಾಗಿದೆ. ಈಗಾಗಲೇ ಕೋಟ್ಯಾಂತರ ಜನರು ಇದರ ಪ್ರಯೋಜನ ಪಡೆದಿದ್ದಾರೆ ಹಾಗೂ ಪಡೆಯುತ್ತಿದ್ದಾರೆ. ಇದನ್ನು ಕಲಿಯಲು ಹೆಚ್ಚಿನ ವಿದ್ಯಾರ್ಹತೆ ಬೇಕಿಲ್ಲ. ಕಲಿಯಲು ಕೇವಲ 18 ರಿಂದ 20 ತಾಸು ಸಾಕು. ಪ್ರತಿದಿನ ಅಭ್ಯಾಸ ಮಾಡುವ ಅವಶ್ಯಕತೆ ಇಲ್ಲ. ಇದನ್ನು ಒಮ್ಮೆ ಕಲಿತರೆ ಜೀವನದುದ್ದಕ್ಕೂಉಪಯೋಗಿಸಬಲ್ಲ ವಿದ್ಯೆ ಇದು. ಮರೆತು ಹೋಗುವ ಭಯವಿಲ್ಲ. ಆಸಕ್ತರಿಗೆ ಕನ್ನಡದಲ್ಲಿಯೂ ಈ ಕುರಿತ ಬಹಳಷ್ಟು ಪುಸ್ತಕಗಳು ಲಭ್ಯವಿದೆ.

ಆಲೋಪತಿ, ಹೋಮಿಯೋಪತಿ, ಆಯುರ್ವೇದ ಯಾವುದೇ ರೀತಿಯ ಔಷಧಗಳನ್ನು ತೆಗೆದುಕೊಳ್ಳುವ ಸಮಯದಲ್ಲಿಯೂ ಸಹಾ ಈ ವಿಧಾನವನ್ನು ಪೂರಕವಾಗಿ ಉಪಯೋಗಿಸಬಹುದು. ಇದು ಯಾವ ವಯಸ್ಸಿನವರಾಗಿರಲಿ ಆರಾಮವಾಗಿ ಕುಳಿತು ಕಲಿಯಬಹುದಾದ ವಿದ್ಯೆಯಾಗಿದೆ. ಈ ವಿಧಾನವನ್ನು ಅನೇಕ ವೈದ್ಯರೂ ಕೂಡಾ ಕಲಿತಿದ್ದಾರೆ. ಚೆನ್ನೈನ ಅಪೊಲೋ ಆಸ್ಪತ್ರೆ, ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಈ ಪ್ರಾಣಚಿಕಿತ್ಸೆಯ ಪ್ರತ್ಯೇಕ ವಿಭಾಗವಿರುವುದು ಇದು ಗಳಿಸಿದ ಮನ್ನಣೆಗೆ ಸಾಕ್ಷಿಯಾಗಿದೆ.

Share this: