ಬೆಂಗಳೂರು: ಕೊರೋನಾದಿಂದಾಗಿ ಲಾಕ್ ಡೌನ್ ಆದ ಪರಿಣಾಮ ಕೇವಲ ಜನ ಜೀವನದ ಮೇಲಷ್ಟೇ ಅಲ್ಲ ಪ್ರಾಣಿ, ಪಕ್ಷಿಗಳ ಮೇಲೆಯೂ ಅತೀವ ಪರಿಣಾಮ ಆಗುತ್ತಿರುವ ಪ್ರಕರಣಗಳು ಈಗಾಗಲೇ ದಾಖಲಾಗುತ್ತಲೇ ಇವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯು ನಗರದ ಕೆಲ ಪ್ರಾಣಿ ದಯಾ ಸಂಘಗಳ ಜೊತೆಗೂಡಿ ಕಳೆದ ಭಾನುವಾರದಿಂದ ಹಲವು ಪೆಟ್ ಶಾಪ್ಗಳ ಮೇಲೆ ಸತತ ದಾಳಿ ನಡೆಸುತ್ತಿದೆ. ಎಲ್ಲ ಅಂಗಡಿ ಮುಗ್ಗಟ್ಟುಗಳನ್ನ ಬಂದ್ ಮಾಡಲು ಸೂಚಿಸಿರುವುದನ್ನೇ ನೆಪ ಮಾಡಿಕೊಂಡ ಹಲವು ಮಾಲೀಕರುಗಳು ಪೆಟ್ ಶಾಪ್ಗಳನ್ನು ಬಂದ್ ಮಾಡಿಕೊಂಡು ಹೋಗಿರುವ ಪರಿಣಾಮ ಅನೇಕ ಪ್ರಾಣಿ, ಪಕ್ಷಿಗಳು ಆಹಾರ, ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಸಂಗತಿಗಳು ಈ ದಾಳಿಯ ವೇಳೆ ಅಧಿಕಾರಿಗಳಿಗೆ ಕಂಡುಬರುತ್ತಿವೆ.
ಸತತ ಮೂರು ದಿನಗಳಿಂದ ದಾಳಿ ಮಾಡುತ್ತಿರುವ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಶಿವಾನಂದ್ ಡಂಬಳ್, ಬೆಂಗಳೂರು ದಕ್ಷಿಣ ಭಾಗದ ಅನೇಕ ಪೆಟ್ಶಾಪ್ಗಳ ಸ್ಥಿತಿಗತಿಗಳನ್ನ ಪರಿಶೀಲಿಸಿದರು. ದಿಢೀರ್ ಎಂದು ಭೇಟಿ ನೀಡಿದ ಪರಿಣಾಮ ಅತೀವ ಸಂಕಷ್ಟದಲ್ಲಿರುವ ಪ್ರಾಣಿ, ಪಕ್ಷಿಗಳ ವಾಸ್ತವ ಸ್ಥಿತಿ ಅಧಿಕಾರಿಗಳ ಗಮನಕ್ಕೆ ಬಂದಿತು. ಹಲವು ಶಾಪ್ಗಳು ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ರಾಜಾ ರೋಷವಾಗಿ ಪ್ರಾಣಿ ಪಕ್ಷಿಗಳನ್ನ ಹಿಡಿದು ಹಾಕಿರುವುದು, ಮಾರಾಟ ಮಾಡುತ್ತಿರುವುದು ಈ ದಾಳಿಯ ವೇಳೆ ಬಹಿರಂಗವಾಗಿದೆ. ಈ ಎಲ್ಲಾ ಅಂಗಡಿ ಮಾಲೀಕರುಗಳ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ದಾಳಿಯ ವೇಳೆ ಅಲಸೂರನಲ್ಲಿನ ಪೆಟ್ ಶಾಪ್ ಒಂದರಲ್ಲಿ ಪ್ರಾಣಿ, ಪಕ್ಷಿಗಳು ತೀರಾ ದಯನೀಯ ಸ್ಥಿತಿಯಲ್ಲಿದ್ದದ್ದು ಕಂಡು ಬಂದಿತು. ಕಳೆದ ಮೂರ್ನಾಲ್ಕು ದಿನಗಳಿಂದ ಆಹಾರ ಇಲ್ಲದೇ ಒಳಗಡೆಯೇ ಪರದಾಡುತ್ತಿದ್ದ ಕರುಣಾಜನಕ ನೋಟ ಮನಕಲಕುವಂತಿತ್ತು. ಅದಾಗಲೇ ಅಲ್ಲಿ ಎರಡು ಮೊಲಗಳು, ಪ್ರಾಣ ಬಿಟ್ಟಿದ್ದು, ದೇಹ ಕೊಳೆತು ದುರ್ನಾತ ಹರಡಿತ್ತು. ಮಾಲೀಕರು ಕಳೆದ ಕೆಲ ದಿನಗಳಿಂದ ಶಾಪ್ ತೆರೆದೆ ಇಲ್ಲ ಎಂಬುದು ಅಲ್ಲಿನ ಸ್ಥಿತಿಯಿಂದ ಸ್ಪಷ್ಟವಾಗಿ ಮನವರಿಕೆಯಾಗುತ್ತಿತ್ತು. ಈ ವೇಳೆ ಶಾಪ್ನ ಮಾಲೀಕರಿಗೆ ವಾರ್ನ್ ಮಾಡಿದ ಶಿವಾನಂದ ಡಂಬಳ್ ಪ್ರಾಣಿ, ಪಕ್ಷಿಗಳನ್ನ ಅಲ್ಲಿಂದ ಬಿಡುಗಡೆಗೊಳಿಸಿ ಕೂಡಲೇ ಪುನರ್ವಸತಿ ಕೇಂದ್ರಗಳಿಗೆ ರವಾನಿಸಿದರು.
ಈ ಮೂಲಕ ಎಲ್ಲಾ ಪೆಟ್ ಶಾಪ್ ಓನರ್ಗಸಳಿಗೂ ಕಡ್ಡಾಯವಾಗಿ ಅಂಗಡಿ ತೆರೆದಿಟ್ಟುಕೊಳ್ಳುವಂತೆ ಸೂಚಿಸಿದ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಈ ನಿಟ್ಟಿನಲ್ಲಿ ಯಾವುದೇ ನೆರವಿನ ಅಗತ್ಯವಿದ್ದರೂ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ. ಹಾಗೆಯೇ ಪ್ರಾಣಿ, ಪಕ್ಷಿಗಳನ್ನ ಮಾರಾಟ ಮಾಡಲು ಪಶುಸಂಗೋಪನಾ ಇಲಾಖೆಯಿಂದ ಅನುಮತಿ ಪಡೆಯಲೇಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.