Vydyaloka

ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು

ಇಡೀ ಪ್ರಪಂಚವೇ ಇಂದು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದೆ. ಈ ಸಮಯದಲ್ಲಿ ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಔಷಧಿಗಳನ್ನು ಮುಂದುವರಿಸುವುದು, ಸಮಯೋಚಿತ ಚಿಕಿತ್ಸೆ ಮತ್ತು ಹೃದ್ರೋಗಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.

ಭಾರತದಲ್ಲಿನ ಸಾವಿನ ಪ್ರಮಾಣದಲ್ಲಿ ಹೃದಯ ಸಮಸ್ಯೆಯ ಕಾರಣವು ಮುಂಚೂಣಿಯಲ್ಲಿದೆ. ಅನಾರೋಗ್ಯಕರವಾದ ಜೀವನಶೈಲಿಯ ಆಯ್ಕೆಗಳು, ಹೆಚ್ಚುತ್ತಿರುವ ಮಾನಸಿಕ ಒತ್ತಡಗಳು, ಜಡ ಜೀವನಶೈಲಿಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಇತ್ತ ಇಡೀ ಜಗತ್ತು ಕೋವಿಡ್ -19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವಂತಹ ಈ ಸಮಯದಲ್ಲಿ ಹೃದ್ರೋಗಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು. ಏಕೆಂದರೆ ಕೊರೊನಾ ಕಾಯಿಲೆಯು ಹೃದ್ರೋಗಿಗಳ ದೇಹದಲ್ಲಿ ಹೆಚ್ಚಿನ ತೊಡಕನ್ನುಂಟುಮಾಡುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

ನೀವು ಹೃದಯ ಕಾಯಿಲೆಗಳ ಹೆಚ್ಚಿನ ಅಪಾಯದಲ್ಲಿರುವ ಒಬ್ಬರೊಂದಿಗೆ ಜೀವಿಸುತ್ತಿದ್ದರೆ ಅವರಿಗೂ ಚಿಕಿತ್ಸೆಯ ಅನುಸರಣೆ ತಿಳಿದಿರುವಂತೆ ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ನಿಯಮಿತವಾದ ಮೇಲ್ವಿಚಾರಣೆ, ಸಮತೋಲಿತ ಆಹಾರ ಸೇವನೆ, ವೈದ್ಯರೊಂದಿಗಿನ ನಿರಂತರ ಸಂಪರ್ಕ ಹೊಂದಿರುವುದು ಬಹಳ ಮುಖ್ಯ. ಅದರಲ್ಲೂ ಕೋವಿಡ್ 19 ಉಸಿರಾಟದ ಮೇಲೆ ಪರಿಣಾಮ ಬೀರುವ ಕಾಯಿಲೆಯಾದ್ದರಿಂದ ಎಲ್ಲಾ ಅಂಗಗಳಿಗೆ ಆಮ್ಲಜನಕಯುಕ್ತ ರಕ್ತವನ್ನು ಪಂಪ್ ಮಾಡಲು ನಿಮ್ಮ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಆದ್ದರಿಂದ ಒಬ್ಬರ ಪ್ರತಿರಕ್ಷೆಯನ್ನು ನಿರ್ಮಿಸುವುದು ಹಾಗೂ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವುದು ಮುಖ್ಯ.

ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು:

ಕೊರೊನಾ ವೈರಸ್ ಹರಡುವಿಕೆಯ ಮಧ್ಯೆ ಹೃದಯ ಸಮಸ್ಯೆ ಇರುವ ಜನರು ಹೆಚ್ಚಿನ ಜಾಗರೂಕರಾಗಿರಬೇಕು. ಔಷಧಿಗಳ ವೇಳಾಪಟ್ಟಿಯನ್ನು ಆಗಾಗ ಪಾಲಿಸುತ್ತಿರಬೇಕು. ಅಧಿಕ ರಕ್ತದೊತ್ತಡ ಹಾಗೂ ಹೃದಯ ವೈಫಲ್ಯಗಳಿಗೆ ಚಿಕಿತ್ಸೆ ನೀಡಲು ಬಳಸುವ ಕೆಲವು ಸಾಮಾನ್ಯ ಔಷಧಿಗಳನ್ನು ವೈದ್ಯರೊಂದಿಗೆ ಸಮಾಲೋಚಿಸದ ಹೊರತು ನಿಲ್ಲಿಸಬಾರದು. ಮನೆಯಲ್ಲಿ ಇದ್ದಾಗಲೂ ಸಹಾ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಹಾಗೂ ಲಘು ದೈಹಿಕ ಚಟುವಟಿಕೆಗಳನ್ನೂ ನಡೆಸುತ್ತಿರಬೇಕು. ಜ್ವರದಂತಹ ಲಕ್ಷಣಗಳನ್ನು ಹೊಂದಿರುವವರಿಂದ ಅಂತರವನ್ನು ಕಾಯ್ದುಕೊಳ್ಳಿರಿ ಮತ್ತು ಮುಖವನ್ನು ಮಾಸ್ಕ್ ನಿಂದ ಮುಚ್ಚಿಕೊಂಡಿರಿ.

ಹೃದಯ ಕಾಯಿಲೆಗಳಿಗೆ ಯಾವುದೇ ವಿಳಂಬ ಮಾಡದೇ ಸಮಯೋಚಿತ ಚಿಕಿತ್ಸೆಯನ್ನು ಪಡೆಯಬೇಕು. ವಿಳಂಬ ಮಾಡುವುದು ತೊಂದರೆಗೆ ಕಾರಣವಾಗುತ್ತದೆ. ಎದೆನೋವು, ಉಸಿರಾಟ ತೊಂದರೆ, ಅತಿಯಾಗಿ ಬೆವರುವುದು ಹಾಗೂ ಪ್ರಜ್ಞೆ ಕಳೆದುಕೊಳ್ಳುವಂತಹ ರೋಗಲಕ್ಷಣಗಳ ಬಗ್ಗೆ ಎಚ್ಚರವಿರಲಿ. ಇವುಗಳಲ್ಲಿ ಯಾವುದಾದರೂ ಬಾಧಿಸಿದರೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ತೀವ್ರತರವಾದ ಹೃದಯಾಘಾತದಂತಹ ತೊಂದರೆಗಳಾದರೆ, ಹೃದಯ ಸ್ನಾಯುಗಳಿಗೆ ಆದ ಹಾನಿಯನ್ನು ತಪ್ಪಿಸಲು ಅಥವಾ ಕಡಿಮೆ ಮಾಡಲು ಆಂಜಿಯೋಪ್ಲ್ಯಾಸ್ಟಿ ರೂಪದ ತಕ್ಷಣದ ಚಿಕಿತ್ಸೆಯನ್ನು ನೀಡುವುದು ಖಡ್ಡಾಯವಾಗಿದೆ. ಆಂಜಿಯೋಪ್ಲ್ಯಾಸ್ಟಿಯು ರಕ್ತದ ಹರಿವನ್ನು ಪುನಃ ಸ್ಥಾಪಿಸಲು ಮತ್ತು ಸುಧಾರಿಸಲು ಬಳಸಲಾಗುತ್ತದೆ. ಇದರಲ್ಲಿ ಹೃದಯದ ಅಪಧಮನಿಯ ಕಿರಿದಾದ ಭಾಗಕ್ಕೆ ಉದ್ದವಾದ, ತೆಳುವಾದ ಟ್ಯೂಬ್ (ಕ್ಯಾತೆಟರ್) ಅನ್ನು ಸೇರಿಸಲಾಗುತ್ತದೆ.

ಡಿಫ್ಲೇಟೆಡ್ ಬಲೂನ್‍ನಲ್ಲಿ ಅಳವಡಿಸಲಾದ ತೆಳುವಾದ ತಂತಿ ಜಾಲರಿ (ಸ್ಟಂಟ್) ಅನ್ನು ಕ್ಯಾತಿಟರ್ ಮೂಲಕ ಕಿರಿದಾದ ಪ್ರದೇಶಕ್ಕೆ ರವಾನಿಸಲಾಗುತ್ತದೆ. ಬಲೂನ್ ಉಬ್ಬಿಕೊಂಡ ನಂತರ ಅಪಧಮನಿಯ ಗೋಡೆಗಳ ವಿರುದ್ಧದ ನಿಕ್ಷೇಪಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ಅಪಧಮನಿಯಲ್ಲಿ ಹುದುಗಿರುವ ವಿಸ್ತರಿಸಿದ ಸ್ಟಂಟ್‍ಅನ್ನು ಬಿಡುತ್ತದೆ. ಇದರ ನಂತರ ಡ್ರಗ್ ಎಲ್ಯುಟಿಂಗ್ ಸ್ಟಂಟ್‍ಗಳು ತೊಂದರೆ ನಿವಾರಿಸುವ ಔಷಧಿಗಳನ್ನು ಬಿಡುಗಡೆ ಮಾಡುತ್ತದೆ. ಕೆಲವು ಡ್ರಗ್ ಇಲ್ಯೂಟಿಂಗ್ ಸ್ಟಂಟ್ಸ್‍ಗಳು ಯುಎಸ್‍ಎಫ್‍ಡಿಎ ಅನುಮೋದನೆಗೆ ಒಳಪಟ್ಟಿವೆ ಹಾಗೂ ಅದರ ಕುರಿತಂತೆ ಉತ್ತಮವಾದ ಅಧ್ಯಯನಕ್ಕೂ ಒಳಗಾಗಿದೆ. ಇದನ್ನು ಮಧುಮೇಹ, ಅಧಿಕ ರಕ್ತಸ್ರಾವ ಹಾಗೂ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ ಒಂದು ತಿಂಗಳ ನಂತರದ ಚಿಕಿತ್ಸೆಯಲ್ಲಿ ಆದ ಅಡಚಣೆಯನ್ನು ನಿವಾರಿಸಲು ಬಳಸಲಾಗುತ್ತದೆ.

ಹೃದ್ರೋಗ ಹೊಂದಿರುವ ಜನರು ಪಾಲಿಸಬೇಕಾದ ಮುನ್ನೆಚ್ಚರಿಕೆಗಳು

1. ಸಮತೋಲಿತವಾದ ಆಹಾರವನ್ನು ಸೇವಿಸಬೇಕು. ಹೆಚ್ಚು ಪೋಷಕಾಂಶವಿರುವ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಡಿಮೆ ಕೊಬ್ಬಿನಾಂಶವನ್ನು ಹೊಂದಿರುವ ಹಾಲಿನ ಉತ್ಪನ್ನಗಳು ಹಾಗೂ ಕಡಿಮೆ ಮಾಂಸವನ್ನು ಸೇವಿಸಬೇಕು.

2. ಧೂಮಪಾನ ಹಾಗೂ ಮಧ್ಯಪಾನದಿಂದ ದೂರವಿರಬೇಕು.

3. ಪ್ರತಿದಿನವೂ ಕನಿಷ್ಟ 30 ನಿಮಿಷವಾದರೂ ಲಘು ವ್ಯಾಯಾಮಗಳನ್ನು ಮಾಡಿ ಸಕ್ರೀಯರಾಗಿರಬೇಕು.

4. ಕೊಲೆಸ್ಟ್ರಾಲ್ ಮಟ್ಟಗಳು, ರಕ್ತದೊತ್ತಡ ಹಾಗೂ ಸಕ್ಕರೆ ಪ್ರಮಾಣಗಳನ್ನು ಆಗಾಗ ಪರೀಕ್ಷಿಸುತ್ತಿರಬೇಕು.

5. ನಿಮಗೆ ಇಷ್ಟವಾಗುವ ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರಿ. ಅದು ನಿಮಗೆ ವಿಶ್ರಾಂತಿ ನೀಡಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-41410099, 9900356000
E-mail: mahanteshrc67@gmail.com      

http://tathagathearthospital.com/

Share this: