
ಪ್ರಸ್ತುತ ಜಾಗತಿಕವಾಗಿ ಕಾಡುತ್ತಿರುವ ಬಹುದೊಡ್ಡ ಕಣ್ಣಿಗೆ ಕಾಣದ ವೈರಿ ಎಂದರೆ ‘ಕೊರೋನಾ’ ಇದರ ಹುಟ್ಟಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಾವೇ ಕಾರಣ…!
ಪ್ರಕೃತಿಯೊಂದಿಗೆ ಮನುಕುಲ ನಡೆದುಕೊಂಡು ರೀತಿ ಎಂದರೆ ತಪ್ಪಾಗಲಾರದು. ಮಾನವನ ಬೇಕು ಬೇಡಗಳನ್ನು ಈಡೇರಿಸುತ್ತಲೇ ಬಂದ ಪ್ರಕೃತಿ, ಮುನಿದರೆ ಏನಾಗಬಹುದು…? ಎಂಬುದಕ್ಕೆ ಇಂದು ಇಡೀ ಜಗತ್ತು ಮೂಕಸಾಕ್ಷಿಯಾಗಿ ನಿಂತಿದೆ. ಇದು ಅಂತ್ಯವಲ್ಲ ಆರಂಭವೆಂದು ಜಗತ್ತಿನಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದು ನರ್ತಿಸುತ್ತಿದೆ. ಆದರೆ ಅತಿಯಾದ ಭಯ ಅನಗತ್ಯ, ಏಕೆಂದರೆ? ಕೊರೋನಾದ ಮರಣ ಮೃದಂಗ ನರ್ತನಕ್ಕೆ ಮದ್ದು ಅರಿಯುವ ಶಕ್ತಿ ನಮ್ಮಲ್ಲೆ ಇದೆ. ಸ್ವಯಂ ಪ್ರೇರಿತರಾಗಿ ‘ಸಾಮೂಹಿಕ ಸಂಕಲ್ಪದ‘ ದಿಟ್ಟ ಹೆಜ್ಜೆ ಇಡಬೇಕಾಗಿದೆ.
ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳುವುದೇ ಮೊದಲ ಹೆಜ್ಜೆ. ಮುಂದುವರಿದ ಭಾಗವಾಗಿ ‘ವಿಶ್ವ ಆರೋಗ್ಯ ಸಂಸ್ಥೆ’ (WHO) ಯಿಂದ ಹಿಡಿದು ಸ್ಥಳೀಯ ಸರ್ಕಾರಗಳು ಮಾರ್ಗಸೂಚಿಗಳನ್ನು ಹೊರಡಿಸಿದೆ, ನಾವು ಚಾಚೂ ತಪ್ಪದೇ ಪಾಲಿಸಬೇಕಷ್ಟೆ.
ಇನ್ನೂ ಎರಡನೇ ಹೆಜ್ಜೆ “ಸ್ವಯಂ ಗೃಹ ಬಂಧನ“. ಸರ್ಕಾರಗಳು ನಮ್ಮ ಸುರಕ್ಷತೆಗಾಗಿ ‘ಲಾಕ್ ಡೌನ್’ ಆದೇಶ ನೀಡಿದೆಯಾದರು, ಓಡುತ್ತಿರುವ ಇಂದಿನ ಮಾರ್ಡನ್ ಜಗತ್ತಿನಲ್ಲಿ ಮೃಗಾಲಯಗಳಂತೆ, ಗೃಹಾಲಯಗಳಲ್ಲಿ ಜನರನ್ನು ಕೂರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಸಮೂಹಿಕ ಸಂಕಲ್ಪದಿಂದ ಮಾತ್ರ ಇದು ಯಶಸ್ವಿಯಾಗಿ ಜಾರಿಯಾಗುವುದು.
ಇನ್ನು ಮೂರನೇ ಹೆಜ್ಜೆ ಅತ್ಯಂತ ಪ್ರಮುಖವಾದದ್ದು ಬಿಡುವಿಲ್ಲದ ಬದುಕಿನ ಓಟಕ್ಕೆ ಬ್ರೇಕ್ ಬಿದ್ದಿದೆ. 24 ಗಂಟೆಗಳನ್ನು ಮನೆಯಲ್ಲೆ ಕಳೆಯಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಇದು ಜಗತ್ತನ್ನೆ ಕಾಡುತ್ತಿರುವ ಸಮಸ್ಯೆಯೆಂದು ಅರ್ಥಮಾಡಿಕೊಂಡು ಮಾನಸಿಕವಾಗಿ ಗಟ್ಟಿಯಾಗಬೇಕಾದ ಸಮಯವಿದು.
ಡಾ|| ಜಗದೀಶ್ ಬಾಣಂಕಿ ಯವರ ಈ ಅದ್ಭುತ ಕಲಾಕೃತಿಯಲ್ಲಿ ವ್ಯಕ್ತಿ ಕುಳಿತ ಕೆಳ ಭಾಗದಲ್ಲಿ ಸಾವು ನೋವಿನ ಚಿತ್ರಣ ಮನ ಕರಗುವಂತೆ ಚಿತ್ರಿಸಲಾಗಿದೆ. ತನ್ನ ಶಿರದ ಮೇಲೆ ಭೂಮಂಡಲವನ್ನು ತೋರಿಸಿ ಅದರ ಒಳಭಾಗದಲ್ಲಿ ‘ಕೊರೋನಾ’ ವೈರಾಣುಗಳನ್ನು ಚಿತ್ರಿಸಲಾಗಿದೆ. ಹಾಗೂ ಇಡೀ ಭೂಮಂಡಲಕ್ಕೆ ಚುಚ್ಚುಮದ್ದಿನ ಮೂಲಕ ಔಷಧಿ ನೀಡುತ್ತಿರುವುದು ಮಾರ್ಮಿಕವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಚಿತ್ರವು ಪ್ರಸ್ತುತ ಜಗತ್ತಿನ ಭವಿಷ್ಯವಿರುವ ಪಂಚಾಂಗದಂತಿದೆ. ಮುಂದೆ ಹಲವಾರು ವರ್ಷಗಳ ಕಾಲ ಈ ಚಿತ್ರವು ಜನಮಾನಸದಲ್ಲಿ ‘ಅಚ್ಚ ಹಸಿರಾಗಿ’ ಉಳಿಯಲಿದೆ.
“Covid-19 fight together” “ಕೊರೋನಾ ಒಟ್ಟಾಗಿ ಹೋರಾಡೋಣ”