Vydyaloka

ಭಾರತಕ್ಕೆಎಂದು ಸಿಗಬಹುದು ಕೊರೋನಾ ಲಸಿಕೆ?

ಭಾರತಕ್ಕೆ ಎಂದು ಸಿಗಬಹುದು ಕೊರೋನಾ ಲಸಿಕೆ? ಕೊರೋನಾ ಕಾಯಿಲೆಗೆ ಲಸಿಕೆಯು 2021ರ ಆರಂಭದಲ್ಲೇ ಸಿಗಬಹುದು. ಆದರೆ ಯಾವ ಪ್ರಯೋಗವೂ ಇಲ್ಲಿಯವರೆಗೆ ಸಂಪೂರ್ಣಗೊಂಡಿಲ್ಲದಿರುವುದರಿಂದ ಕೊರೋನಾ ಲಸಿಕೆ ಲಭ್ಯತೆಯ ದಿನಾಂಕ ಇನ್ನೂ ಸ್ಪಷ್ಟಗೊಂಡಿಲ್ಲ.

ಆಸ್ಟ್ರಾಝೆನೆಕಾ ಫಾರ್ಮಾ ಇಂಡಿಯಾ ಲಿಮಿಟೆಡ್‍ ಕಂಪನಿಯ ಕೊವಿಡ್-19 ವ್ಯಾಕ್ಸಿನ್‍ ಡೆವಲಪ್ಮೆಂಟ್‍ ಅಂಡ್‍ ಕರೆಂಟ್ ಸ್ಟೇಟಸ್ ಪ್ರೆಸೆಂಟೇಶನ್ ಸೆಶನ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ಸರಕಾರದ ಆರೋಗ್ಯ ಮಂತ್ರಿ ಡಾ.ಸುಧಾಕರ್ ಕೊರೋನಾ ಕಾಯಿಲೆಗೆ ಲಸಿಕೆಯು 2021ರ ಆರಂಭದಲ್ಲೇ ಸಿಗಬಹುದು ಎಂಬ ವಿಶ್ವಾಸದ ಹೇಳಿಕೆಯನ್ನು ನೀಡಿದ್ದಾರೆ.

ಲಸಿಕೆ ಕಂಡುಹಿಡಿಯುತ್ತಿರುವ ಪ್ರಕ್ರಿಯೆಯ ಪ್ರಸ್ತುತ ವಿದ್ಯಮಾನಗಳ ಮಾಹಿತಿಯನ್ನು ಪಡೆದ ಸಚಿವರು “ಲಸಿಕೆ ಬಂದ ತಕ್ಷಣ ಮೊದಲಿಗೆ ಆರೋಗ್ಯ ಕಾರ್ಯಕರ್ತರು, ನಂತರ ವಯೋವೃದ್ಧರು ಹಾಗೂ ನಾನಾ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊಡಲಾಗುತ್ತದೆ”ಎಂದರು. ಇದೇ ವೇಳೆ ಮಾತನಾಡಿದ ಡಾ.ಸುಧಾಕರ್ “ರೋಟಾ ವೈರಾಣುವಿಗೆ ಲಸಿಕೆ ಕಂಡುಹಿಡಿಯಲು 29 ವರ್ಷ ಬೇಕಾಯ್ತು, ಎಬೋಲಾ ಕಾಯಿಲೆಗೆ ಲಸಿಕೆ ಬರಲು 20 ವರ್ಷಗಳು ತಗುಲಿತು. ಮಂಪ್ಸ್‍ಗೆ ಲಸಿಕೆ ಕಂಡು ಹಿಡಿಯಲು 4 ವರ್ಷ ಬೇಕಾಯ್ತು. ಆದರೆ ಇದೀಗ ಕೊರೋನಾಗೆ 1 ವರ್ಷದ ಒಳಗೇ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ನಾವು ಇದ್ದೀವಿ” ಎಂದು ಹೇಳಿದ್ದಾರೆ.

ಭಾರತದ ಕೊರೋನಾ ಲಸಿಕೆ ಕುರಿತಂತೆ ಅಧಿಕೃತ  ಮಾಹಿತಿ

ಭಾರತದಲ್ಲಿ ಕೊರೋನಾ ಲಸಿಕೆ ಯಾವಾಗ ಸಿಗಬಹುದು ಎನ್ನುವ ಬಗ್ಗೆ ಎಲ್ಲರೂ ಕಾತುರರಾಗಿದ್ದಾರೆ. ಲಸಿಕೆ ಲಭ್ಯತೆಯ ದಿನಗಳ ಕುರಿತಂತೆ ಕೆಲವು ಕಂಪನಿಗಳು ಒಂದು ಹೇಳಿಕೆ ಕೊಟ್ಟರೆ, ಸರಕಾರದ ಸಚಿವರುಗಳು ಇನ್ನೊಂದು ಹೇಳಿಕೆ ಕೊಡುತ್ತಿದ್ದರು. ಎಲ್ಲರೂ ಈಗ ಸಿಗಲಿದೆ, ಆಗ ಬರಲಿದೆ ಎನ್ನುವ ವಿಶ್ವಾಸದ ಮಾತನಾಡುತ್ತಿದ್ದಾರೆಯೇ ಹೊರತು ಯಾರಿಗೂ ಸ್ಪಷ್ಟತೆ ಇಲ್ಲ. ಹಾಗಾಗಿ ಈ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತದ ಐಸಿಎಂಆರ್ (ಇಂಡಿಯನ್‍ ಕೌನ್ಸಿಲ್‍ ಆಫ್ ಮೆಡಕಲ್‍ ರೀಸರ್ಚ್) ಮತ್ತು ನೀತಿ ಆಯೋಗದ ಅಧಿಕಾರಿಗಳು ಸುದ್ಧಿಗೋಷ್ಟಿ ನಡೆಸಿ ಭಾರತದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆ ಯಾವ ಹಂತದಲ್ಲಿವೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.

ಭಾರತದಲ್ಲಿ ಮೂರು ಲಸಿಕೆಗಳ ಮಾನವ ಪ್ರಯೋಗ ನಡೆಯುತ್ತಿದ್ದು, ಅದರಲ್ಲಿ ಮುಂದಿರುವುದು ಭಾರತ್ ಬಯೋಟೆಕ್  ಕಂಪನಿ ಹಾಗೂ ಐಸಿಎಂಆರ್ ಅಭಿವೃದ್ಧಿ ಪಡಿಸಿರುವ ‘ಕೋವಾಕ್ಸಿನ್’ ಲಸಿಕೆ. ಈ ಲಸಿಕೆಗೆ ಈಗ ಮೂರನೇ ಹಂತದ ಮಾನವ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ. ಉಳಿದಂತೆ ಆಕ್ಸ್‍ಫರ್ಡ್‍ ಯೂನಿವರ್ಸಿಟಿ ಮತ್ತು ಆಸ್ಟಾಝೆನೆಕಾ ಲಸಿಕೆಯು 2ನೇ ಹಂತ ಪೂರ್ಣಗೊಳಿಸಿದೆ. ಭಾರತದಲ್ಲಿ ಪುಣೆಯ ಸೀರಂ ಇನ್ಸ್ಟಿಟ್ಯೂಟ್‍ ಆಫ್‍ ಇಂಡಿಯಾ ಇದರ ಅಭಿವೃದ್ಧಿಯಲ್ಲಿದ್ದು ಭಾರತದಲ್ಲಿ ಈ ಲಸಿಕೆಗೆ ‘ಕೋವಿಶೀಲ್ಡ್’ ಎಂದು ಹೆಸರಿಡಲಾಗಿದೆ. ಇನ್ನು ಮೂರನೇಯದಾಗಿ ಝೈಡಸ್‍ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಲಸಿಕೆ ಕೂಡಾ 2ನೇ ಹಂತದಲ್ಲಿದೆ.

ಇನ್ನು ಲಸಿಕೆ ಕೊಡಲು ಯಾವೆಲ್ಲಾ ಕ್ರೈಟೀರಿಯಾಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಒಂದೊಂದು ರಾಜ್ಯವೂ ಒಂದೊಂದು ರೀತಿಯಲ್ಲಿ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಹಾಗಾಗಿ ಲಸಿಕೆ ಬಗ್ಗೆ ಸಂಪೂರ್ಣ ಮಾಹಿತಿ ಸಿಗುವುರ ಮೊದಲೇ ಯಾವುದೇ ಪ್ಲಾನ್‍ಗಳನ್ನು ಮಾಡಿಕೊಳ್ಳದಿರುವಂತೆ ರಾಜ್ಯ ಸರಕಾರಗಳಿಗೆ ಐಸಿಎಂಆರ್ ಸೂಚನೆಯನ್ನು ನೀಡಿದೆ. ಯಾವ ಪ್ರಯೋಗವೂ ಇಲ್ಲಿಯವರೆಗೆ ಸಂಪೂರ್ಣಗೊಂಡಿಲ್ಲದಿರುವುದರಿಂದ ಕೊರೋನಾ ಲಸಿಕೆ ಲಭ್ಯತೆಯ ದಿನಾಂಕ ಇನ್ನೂ ಸ್ಪಷ್ಟಗೊಂಡಿಲ್ಲ. ಹಾಗಾಗಿ ಅಧಿಕೃತ ಮಾಹಿತಿ ಹೊರಬರುವವರೆಗೂ ಬೇರೆ ಬೇರೆ ಮೂಲಕಗಳ ಮಾಹಿತಿಯನ್ನೇ ನಿಜವೆಂದು ನಂಬಿ ತಪ್ಪು ಮಾಹಿತಿಯನ್ನೇ ಹಂಚಬೇಡಿ ಎಂಬುದು ‘ವೈದ್ಯಲೋಕ’ದ ಮನವಿ.

ಕೊರೋನಾ ವಿಚಾರದಲ್ಲಿ ಅವ್ಯವಹಾರ ಬಯಲು

ಕೊರೋನಾ ಕಾಯಿಲೆಯನ್ನೇ ಹಣಮಾಡುವ ದಂಧೆಯಾಗಿಸಿಕೊಂಡಿರುವ ಕೆಲವು ಆರೋಗ್ಯ ಕಾರ್ಯಕರ್ತರ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾವಿತ್ತು. ಇದರಿಂದ ಬಹುತೇಕ ಎಲ್ಲಾ ಆರೋಗ್ಯಕಾರ್ಯಕರ್ತರನ್ನು, ವೈದ್ಯರನ್ನು, ಆಸ್ಪತ್ರೆಯನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳನ್ನೂ ಅನುಮಾನದಿಂದಲೇ ನೋಡಲಾಗುತ್ತಿತ್ತು. ಜನರ ಆರೋಪಗಳನ್ನು ಪುಷ್ಟೀಕರಿಸುವಂತೆ ಬೆಂಗಳೂರಿನಲ್ಲಿ ನೆನ್ನೆ ಒಂದು ಪ್ರಕರಣ ಬಯಲಾಗಿದೆ. ನಗರದ ಪೊಬ್ಬತ್ತಿ ಹೆರಿಗೆ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆ ಹಾಗೂ ಲ್ಯಾಬ್ ಟೆಕ್ನಿಶಿಯನ್ ಸೇರಿಕೊಂಡು ದುಡ್ಡಿಗಾಗಿ ನೆಗೆಟಿವ್‍ ರಿಪೋರ್ಟ್‍ಕೊಡುತ್ತಿದ್ದರು.ಈ ವಿಚಾರ ಮಾಧ್ಯಮಗಳಿಂದ ರಾಜ್ಯ ಸರಕಾರದ ಗಮನಕ್ಕೆ ಬಂದಿದ್ದು ಅಕ್ರಮವೆಸಗುತ್ತಿದ್ದ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಶೀಘ್ರದಲ್ಲಿಯೇ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಹೀಗೆ ಅವ್ಯವಹಾರ ಮಾಡುವ ಪ್ರತಿಯೊಬ್ಬರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಕೊರೋನಾವನ್ನೇ ಬಿಜಿನೆಸ್ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ಲೂಟಿಮಾಡಿದ ಪ್ರಭಾವಿಗಳಿಗೂ ಶಿಕ್ಷೆ ಆಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 

Share this: