Vydyaloka

ವೈದ್ಯ ಸಾಹಿತ್ಯ ಜನಮಾನಸಕ್ಕೆ ತಲುಪಬೇಕು: ಡಾ|| ಜಿತೇಶ್

ಮಂಗಳೂರು: ದಂತ ವೈದ್ಯರು ಹೆಚ್ಚು ಸಮಾಜಮುಖಿಗಳಾಗಬೇಕು. ದಂತ ವೈದ್ಯರು ಬರೀ ದಂತ ಚಿಕಿತ್ಸೆಗೆ ಸೀಮಿತವಾಗಬಾರದು. ಜನ ಸಾಮಾನ್ಯರಿಗೆ ದಂತ ರೋಗಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ವೈದ್ಯಕೀಯ ಸಾಹಿತ್ಯದಲ್ಲಿಯೂ ವೈದ್ಯರು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಬರವಣಿಗೆ ಮೂಲಕ ಜನಸಾಮಾನ್ಯರಲ್ಲಿ ಹುದುಗಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಬೇಕು. ಈ ನಿಟ್ಟಿನಲ್ಲಿ ಖ್ಯಾತ ದಂತ ವೈದ್ಯ ಮತ್ತು ದಂತ ಸಾಹಿತಿ ಡಾ|| ಮುರಲೀ ಮೋಹನ್ ಅವರ ಪ್ರಯತ್ನ ಶ್ಲಾಘನೀಯ ಎಂದು ಭಾರತೀಯ ದಂತ ವೈದ್ಯರ ಸಂಘ ದಕ್ಷಿಣ ಕನ್ನಡ ಇದರ ಅದ್ಯಕ್ಷರಾದ ಡಾ|| ಜಿತೇಶ್ ಅವರು ನುಡಿದರು.
ರಾಷ್ಟ್ರೀಯ ದಂತ ವೈದ್ಯರ ದಿನ ಅಂಗವಾಗಿ ಇತ್ತೀಚೆಗೆ ಡಾ|| ಮುರಲೀ ಮೋಹನ್ ಚೂಂತಾರು ಇವರ ಹತ್ತನೇ ಕೃತಿ “ಸುಮುಖ” ದಂತ ಆರೋಗ್ಯ ಮಾಗದರ್ಶಿ ಇದರ ಕೃತಿ ಬಿಡುಗಡೆ ಸಮಾರಂಭ ಜರುಗಿತು. ಭಾರತೀಯ ದಂತ ವೈದ್ಯರ ಸಂಘ ದಕ್ಷಿಣ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಈ ಸಮಾರಂಭ ನಡೆಯಿತು. ಭಾರತೀಯ ದಂತ ವೈದ್ಯಕೀಯ ಪರಿಷತ್ತು ನವದೆಹಲಿ ಇದರ ಸದಸ್ಯರು ಮತ್ತು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಇದರ ಸಿಂಡಿಕೇಟ್ ಸದಸ್ಯರಾದ ಡಾ|| ಶಿವಶರಣ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಡಾ||ಚೂಂತಾರು ಇವರ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.
ಡಾ: ಮುರಲೀ ಅವರು ಬಹಳಷ್ಟು ಸಾಮಾಜಿಕ ಕಳಕಳಿಯಿಂದ ವೈದ್ಯಕೀಯ ಕೃತಿಗಳನ್ನು ರಚಿಸಿರುತ್ತಾg. ಅವರೊಬ್ಬರು ಪರಿಪೂರ್ಣ ವೈದ್ಯಕೀಯ ಸಾಹಿತಿ ಎಂದು ಗುರುತಿಸಿಕೊಂಡಿದ್ದು, ಅವರಿಂದ ಇನ್ನಷ್ಟು ಕೃತಿಗಳು ಹೊರ ಹೊಮ್ಮಲಿ ಎಂದು ಡಾ|| ಶಿವಶರಣ್ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ದಂತ ವೈದ್ಯಕೀಯ ಸಂಘದ ಅದ್ಯಕ್ಷರಾದ ಡಾ|| ಜಿತೇಶ್ ವಹಿಸಿದ್ದರು. ಕೃತಿಯ ಲೇಖಕರಾದ ಡಾ|| ಮುರಲೀ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಯೊಬ್ಬ ವೈದ್ಯರಿಗೆ ಸಾಮಾಜಿಕ ಹೊಣೆಗಾರಿಕೆ ಇದ್ದು ಅದನ್ನು ಸರಿಯಾಗಿ ನಿಭಾಯಿಸಿದ್ದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದಂತ ವೈದ್ಯರ ಸಂಘದ ಗೌರವ ಕಾರ್ಯದರ್ಶಿ ಡಾ|| ಭರತ್ ಪ್ರಭು, ಖಜಾಂಜಿ ಡಾ|| ಪ್ರಸನ್ನ ರಾವ್ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ನಗರದ ಹಿರಿಯ ದಂತ ವೈದ್ಯರುಗಳಾದ ಡಾ|| ಶ್ರೀಪತಿ ರಾವ್ , ಡಾ|| ಶಾಮ್ ಭಟ್, ಡಾ|| ಗಣೇಶ್ ಶೆಣ್ಯೆ ಪಂಚಮಾಲ್, ಡಾ|| ಕಮಲಕಾಂತ್ ಶೆಣ್ಯೆ, ಡಾ|| ಬಿಜು ಥೋಮಸ್, ಡಾ|| ಶುಭನ್ ಆಳ್ವ, ಡಾ|| ದೀಪಕ್ ಪೈ, ಡಾ|| ಸಂತೋಷ್ ಶೆಣ್ಯೆ, ಡಾ|| ಸಂಜಯ್ ನಾಯಕ್, ಡಾ|| ಕೇಶವ್ ಮುಂತಾದವರು ಉಪಸ್ಥಿತರಿದ್ದರು. ಪುಸ್ತಕ ಬಿಡುಗಡೆಯ ನಂತರ ದಂತ ವೈದ್ಯರಿಗಾಗಿ ದಂತ ವೈದ್ಯರ ದಿನದ ಅಂಗವಾಗಿ “ಮ್ಯೂಸಿಕಲ್ ನೈಟ್” ಕಾರ್ಯಕ್ರಮ ಜರಗಿತು.

Share this: