Vydyaloka

ಸ್ಥೂಲಕಾಯ ರೋಗಿಗೆ ಯಶಸ್ವಿ ಬ್ಯಾರಿಯಾಟ್ರಿಕ್ ಸರ್ಜರಿ ನಡೆಸಿದ ವಿಕ್ರಂ ಆಸ್ಪತ್ರೆ ವೈದ್ಯರು

ಸ್ಥೂಲಕಾಯ ರೋಗಿಗೆ ವಿಕ್ರಂ ಆಸ್ಪತ್ರೆ ವೈದ್ಯರು ಯಶಸ್ವಿ ಬ್ಯಾರಿಯಾಟ್ರಿಕ್  ಸರ್ಜರಿ ನಡೆಸಿದ್ದಾರೆ . ಈ ಮೂಲಕ 67 ವರ್ಷದ ಕೇವಲ 4.5 ಅಡಿ ಉದ್ದವಿರುವ ವ್ಯಕ್ತಿಗೆ ಮರುಜೀವ ನೀಡಿದ ವೈದ್ಯರು ಅಧಿಕ ತೂಕದ ಜೊತೆಗೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರೋಗಿ ಬೆಂಗಳೂರಿನಲ್ಲಿ ಇಂತಹ ಶಸ್ತ್ರಚಿಕಿತ್ಸೆ ನಡೆಸಿದ ಪ್ರಕರಣ ಇದೇ ಮೊದಲು.

ಬೆಂಗಳೂರು, ಫೆಬ್ರವರಿ 14, 2021: ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ತಜ್ಞ ವೈದ್ಯರ ತಂಡವು 67 ವರ್ಷದ ಅತ್ಯಂತ ಸ್ಥೂಲಕಾಯದ ರೋಗಿಗೆ ಅತ್ಯಂತ ಸವಾಲಿನ ಮತ್ತು ಅಪಾಯಕಾರಿ ಎನಿಸುವ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ರೋಗಿಗೆ ಮರು ಜೀವ ನೀಡಿದ್ದಾರೆ. ಕೇವಲ 4 ಅಡಿ 5 ಇಂಚು ಉದ್ದವಿದ್ದ ಈ ರೋಗಿಯ ತೂಕ 77 ಕೆಜಿ ಇತ್ತು. ಶೇಖರ್ ಕೃಷ್ಣನ್ ಹೆಸರಿನ ಈ ರೋಗಿಯ ತೂಕ ಸಾಮಾನ್ಯಕ್ಕಿಂತ ಎರಡು ಪಟ್ಟು ಹೆಚ್ಚಳವಿದ್ದ ಕಾರಣ 39 ರಷ್ಟು ಬಿಎಂಐ ಇತ್ತು.

ಈ ಕಾರಣದಿಂದ ರೋಗಿಯಲ್ಲಿ ಹಲವಾರು ಹೃದಯ ಸಂಬಂಧಿ ಮತ್ತು ಪಲ್ಮನರಿ ಸಮಸ್ಯೆಗಳು ಎದುರಾಗಿದ್ದವು. ಇವುಗಳ ಜೊತೆಗೆ ಮೊಣಕಾಲು ನೋವು, ಅಬ್‍ಸ್ಟ್ರಕ್ಟಿವ್ ಸ್ಲೀಪ್ ಅಪ್ನೀಯಾ, ಎಲಿವೇಟೆಡ್ ಕ್ರಿಯೇಟಿನೈನ್ ಲೆವೆಲ್ಸ್ ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಂಡಿದ್ದವು. ಇದರಿಂದ ಅವರ ಡಯಾಫ್ರಾಮ್‍ನಲ್ಲಿ ಕೊಬ್ಬಿನ ಹೊರೆ ಹೆಚ್ಚಾಗಿತ್ತು. ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳಲು ರೋಗಿಯು ಹಲವಾರು ಪ್ರಯತ್ನಗಳನ್ನು ನಡೆಸಿದ್ದರಾದರೂ ಅವುಗಳು ವ್ಯರ್ಥವಾಗಿದ್ದವು. ದೇಹದಲ್ಲಿನ ಕೊಬ್ಬಿನ ಅಂಶಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅವರಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸುವುದು ಕಷ್ಟವಾಗಿತ್ತು.

ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಬ್ಯಾರಿಯಾಟ್ರಿಕ್ & ಅಡ್ವಾನ್ಸ್ಡ್ ಲ್ಯಾಪರೋಸ್ಕೋಪಿಕ್ ಸರ್ಜನ್ ಕನ್ಸಲ್ಟೆಂಟ್ ಆಗಿರುವ ಡಾ.ಜಿ.ಮೊಯಿದ್ದೀನ್ ಅವರು ಮಾತನಾಡಿ, “ಕಳೆದ ಐದು ವರ್ಷಗಳಿಂದ ರೋಗಿಯು ಸ್ಥೂಲಕಾಯ ಬೊಜ್ಜು ಸಮಸ್ಯೆ ಮತ್ತು ಮೆಟಾಬಾಲಿಕ್ ಸಿಂಡ್ರೋಂನಿಂದ ಬಳಲುತ್ತಿದ್ದರು. ಇದರ ಪರಿಣಾಮ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾದವು. ಅವರು ಸಮರ್ಪಕವಾಗಿ ಮಲಗಲು ಆಗುತ್ತಿರಲಿಲ್ಲ, ಕುಳಿತುಕೊಳ್ಳಲು ಅಥವಾ ನಿಲ್ಲಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಕೆಲವೇ ಹೆಜ್ಜೆಗಳನ್ನು ಇಡುತ್ತಿದ್ದಂತೆಯೇ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಇಂತಹ ಸಮಸ್ಯೆಗಳನ್ನು ದೂರ ಮಾಡಲು ಅವರಿಗೆ ಇದ್ದ ಏಕೈಕ ಮಾರ್ಗವೆಂದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು. ಆದರೆ, ಅವರ ಕಾರ್ಡಿಯೋ-ಪಲ್ಮನರಿ ಪರಿಸ್ಥಿತಿ ಗಂಭೀರವಾಗಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸುವುದು ಅಪಾಯಕಾರಿಯಾಗಿತ್ತು. ಈ ಸಮಸ್ಯೆಯಿಂದ ಪಾರಾಗಲು ಅವರು ನಗರದ ಹಲವಾರು ಆಸ್ಪತ್ರೆಗಳಿಗೆ ಹೋಗಿ ಬಂದಿದ್ದರಾದರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿರಲಿಲ್ಲ. ಇದರಿಂದಾಗಿ ಅವರಿಗೆ ಯಾವುದೇ ಸಮಯದಲ್ಲೂ ಹೃದಯಾಘಾತ ಆಗಬಹುದಿತ್ತು ಮತ್ತು ಸಾವೂ ಸಂಭವಿಸುವ ಸಾಧ್ಯತೆ ಇತ್ತು’’ ಎಂದರು.

ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಕನ್ಸಲ್ಟೆಂಟ್ ಅನಸ್ತೇಶಿಯೋಲಾಜಿಸ್ಟ್ ಡಾ.ಸತೀಶ್ ತಮ್ಮಣ್ಣ ಅವರು ಮಾತನಾಡಿ, “ಡಾ.ಜಿ.ಮೊಯಿದ್ದೀನ್ ನೇತೃತ್ವದ ತಂಡವು ರೋಗಿಗೆ ಬ್ಯಾರಿಯಾಟ್ರಿಕ್ ಸರ್ಜರಿಯನ್ನು ಅರ್ಧಗಂಟೆಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿತು. ಸರ್ಜರಿಯಾದ ಕೇವಲ ಮೂರು ಗಂಟೆಯೊಳಗೆ ರೋಗಿಯು ನಡೆದಾಡಲು ಆರಂಭಿಸಿದರು. ಒಂದು ವಾರದೊಳಗೆ ಅವರ ದೇಹದ ತೂಕ ಐದು ಕೆಜಿಯಷ್ಟು ಕಡಿಮೆಯಾಗಿದೆ. ಅವರ ನಡೆದಾಡುವ ಸಾಮಥ್ರ್ಯ ಹಿಂದಿಗಿಂತಲೂ ಸಾಕಷ್ಟು ಸುಧಾರಣೆಯನ್ನು ಕಂಡಿದೆ ಮತ್ತು ಉಸಿರಾಟದ ತೊಂದರೆಯಲ್ಲಿ ಸುಧಾರಣೆ ಕಂಡುಬಂದಿದೆ. ಮುಂದಿನ 8-10 ತಿಂಗಳಲ್ಲಿ ಅವರ ದೇಹದ ತೂಕ 30 ರಿಂದ 35 ಕೆಜಿವರೆಗೆ ಕಡಿಮೆಯಾಗುವ ನಿರೀಕ್ಷೆ ಇದೆ. ಅವರ ಬಿಎಂಐ ಅನ್ನು ಸಾಮಾನ್ಯ ಸ್ಥಿತಿಗೆ ತರಲಾಗುತ್ತಿದೆ. ನಂತರ ಅವರು ತಮ್ಮ ದೈನಂದಿನ ಜೀವನವನ್ನು ಸಾಗಿಸಬಹುದಾಗಿದೆ’’ ಎಂದು ತಿಳಿಸಿದರು.

ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ & ಸಿಇಒ ಡಾ.ಸೋಮೇಶ್ ಮಿತ್ತಲ್ ಅವರು ಮಾತನಾಡಿ, “ಶಸ್ತ್ರಚಿಕಿತ್ಸೆಯ ಯಶಸ್ವಿ ಫಲಿತಾಂಶದ ಬಗ್ಗೆ ನಾವು ಸಂತೋಷಪಟ್ಟಿದ್ದೇವೆ. ಏಕೆಂದರೆ, ಇದು ಬೆಂಗಳೂರಿನಲ್ಲಿ ನಡೆದ ಮೊದಲ ಶಸ್ತ್ರಚಿಕಿತ್ಸೆ ಪ್ರಕರಣವಾಗಿದೆ. ರೋಗಿಯ ಎತ್ತರ ಅತ್ಯಂತ ಕಡಿಮೆ ಇದ್ದಿದ್ದರಿಂದ ಅರಿವಳಿಕೆ ಕ್ಷೇತ್ರಕ್ಕೆ ಸವಾಲಾಗಿತ್ತು. ಹೀಗಾಗಿ ಅವರಲ್ಲಿ ಅಪಾಯದ ಮಟ್ಟ ಹೆಚ್ಚಾಗಿದ್ದುದರಿಂದ ಇತರೆ ಆಸ್ಪತ್ರೆಗಳು ಅವರಿಗೆ ಚಿಕಿತ್ಸೆ ನೀಡುವುದಕ್ಕೆ ಹಿಂದೇಟು ಹಾಕಿದ್ದರು. ಆದರೆ, ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ನಮ್ಮ ವೈದ್ಯರು ಶಸ್ತ್ರಚಿಕಿತ್ಸೆಯನ್ನು ನಡೆಸುವ ಮೂಲಕ ಈ ಗಮನಾರ್ಹವಾದ ಸಾಧನೆ ಮಾಡಿದ್ದಾರೆ. ಇಂತಹ ಯಾವುದೇ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸೆ ನೀಡಲು ನಮ್ಮ ಆಸ್ಪತ್ರೆಯು ಸುಸಜ್ಜಿತವಾಗಿದೆ’’ ಎಂದು ಹೇಳಿದರು.

Share this: