Vydyaloka

ಕಡಲತಡಿಯಲ್ಲಿ ಜನನಿ ಶಿಶುಸುರಕ್ಷಾ ಯೋಜನೆ ಯಶಸ್ವಿ…!!

ಮಂಗಳೂರು : ತಾಯಿಯ ಪರಿಪೂರ್ಣ ವಾತ್ಸಲ್ಯ, ಪ್ರೀತಿ, ಮಮತೆ, ಒಲಮೆ ಮಗುವಿಗೆ ಲಭಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನನಿ ಶಿಶುಸುರಕ್ಷಾ ಕಾರ್ಯಕ್ರಮ ಕಡಲತಡಿ ಮಂಗಳೂರಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ.
ಮಂಗಳೂರಿನ ಲೇಡಿಗೋಷನ್ ಜಿಲ್ಲಾಸ್ಪತ್ರೆಯಲ್ಲಿ ಜನನಿ ಶಿಶುಸುರಕ್ಷಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುತ್ತಿದೆ. ಜಿಲ್ಲೆಯ ಹೃದಯ ಭಾಗದಲ್ಲಿರುವ ಸುಮಾರು 170 ವರ್ಷಗಳ ಹಿಂದಿನ ಏಕೈಕ ಮಹಿಳಾ ಮೀಸಲು ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳನ್ನು ನೀಡಲಾಗುತ್ತಿದೆ.
ಈ ಯೋಜನೆಗಳಡಿ ಕ್ಯಾನ್ಸರ್, ಗರ್ಭಕೋಶದ ಚಿಕಿತ್ಸೆ, ಗರ್ಭಿಣಿ, ಬಾಣಂತಿಯರು ಚಿಕಿತ್ಸೆ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಿದ್ದಾರೆ. ಪ್ರತಿ ತಿಂಗಳು 9 ರಂದು ಗರ್ಭಿಣಿ, ಬಾಣಂತಿಯರಿಗೆ ವಿಶೇಷ ಚಿಕಿತ್ಸಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

“ವೈದ್ಯಲೋಕ” ದೊಂದಿಗೆ ಧರ್ಮಸ್ಥಳದ ಬೆಳ್ತಂಗಡಿಯ ಫಲಾನುಭವಿ ಅಕ್ಷತಾ, ಮಂಗಳೂರಿನ ಲೇಡಿಗೋಷನ್ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಲಭಿಸುತ್ತಿದ್ದು, ಔಷಧೋಪಚಾರ, ಹಾಸಿಗೆ ಸೌಲಭ್ಯ ಸೇರಿದಂತೆ ವೈದ್ಯರು, ನರ್ಸ್‍ಗಳು ಕಾಲಕಾಲಕ್ಕೆ ಉಪಚಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಮತ್ತೋರ್ವ ಫಲಾನುಭವಿ ಅಶ್ವಿನಿ, ಜನನಿ ಸುರಕ್ಷಾ ಯೋಜನೆಯಡಿ ತಾವು ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫಿಎಫ್‍ಎಂಎಸ್ ಯೋಜನೆಯಡಿ ತಮ್ಮ ಖಾತೆಗೆ 600 ರೂಪಾಯಿ ಜಮಾಯಾಗಿದೆ. ಅಲ್ಲದೆ, ನಗುಮಗು ಯೋಜನೆಯಡಿ ತಾಯಿ-ಮಗುವನ್ನು ಸುರಕ್ಷಿತವಾಗಿ ಅಂಬುಲೆನ್ಸ್ ಮೂಲಕ ಮನೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಸವಿತಾ, ಹುಟ್ಟಿದ ಮಗುವಿಗೆ ಪೊಲಿಯೋ. ಬಿಸಿಜಿ, ವ್ಯಾಕ್ಸಿನೇಷನ್ ಸೇರಿದಂತೆ ಅಗತ್ಯ ಚುಚ್ಚುಮದ್ದುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ಆಸ್ಪತ್ರೆಯಲ್ಲಿ ವರ್ಷಕ್ಕೆ ಅಂದಾಜು 6 ಸಾವಿರ ಹೆರಿಗೆ ಮಾಲಾಗುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಯ ಅಧೀಕ್ಷಕಿ ಡಾ. ಎಂ.ಎಂ. ಶಕುಂತಲಾ, ನೆರೆರಾಜ್ಯ ಕೇರಳ, ಅಷ್ಟೇ ಅಲ್ಲ, ಉಡುಪಿ, ಚಿಕ್ಕಮಗಳೂರು, ಕೊಡಗು ಸೇರಿದಂತೆ ನೆರೆ ಜಿಲ್ಲೆಗಳಿಂದಲೂ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಒಮ್ಮೆ ಗರ್ಭಿಣಿ ಚಿಕಿತ್ಸೆ ಪಡೆದರೆ ಹೆರಿಗೆಯಾಗುವವರೆಗೂ ಸಂಪೂರ್ಣವಾಗಿ ಕಾಳಜಿಯಿಂದ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.

ವರದಿ- ಎನ್ ಜಿ ಆರ್

Share this: