ಪ್ರಮೇಹ ಅಥವಾ ಮಧುಮೇಹ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆಗಳು ಮತ್ತು ವಾಸ್ತವ

ಪ್ರಮೇಹ ಅಥವಾ ಮಧುಮೇಹ ಬಗ್ಗೆ  ತಪ್ಪು ಕಲ್ಪನೆಗಳು ಹೆಚ್ಚು. ಆಹಾರ ಕ್ರಮದ ಬದಲಾವಣೆಗಳು, ವ್ಯಾಯಾಮ ಮತ್ತು ಜೀವನಶೈಲಿಯ ಸುಧಾರಣೆಗಳನ್ನು ಮಧುಮೇಹದ ಯಾವುದೇ ಹಂತದಲ್ಲಿ ಮತ್ತು ಅವಧಿಯಲ್ಲಿ ಕಡೆಗಣಿಸುವಂತಿಲ್ಲ. ಮಧುಮೇಹದ ವಿರುದ್ಧ ಹೋರಾಡಲು ಸರಿಯಾದ ಆಹಾರ ಸೇವಿಸಿ.

diabetes-day ಪ್ರಮೇಹ ಅಥವಾ ಮಧುಮೇಹ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆಗಳು ಮತ್ತು ವಾಸ್ತವ

ಭಾರತದಲ್ಲಿ ಮಧುಮೇಹದ ಪ್ರಕರಣಗಳು ಅಪಾಯ ಸೂಚಕ ರೀತಿಯಲ್ಲಿ ಹೆಚ್ಚುತ್ತಾ ಸಾಗಿವೆ.  ದೇಶದಲ್ಲಿನ ಹೆಚ್ಚುತ್ತಿರುವ ಜನಸಂಖ್ಯೆ, ಸಾಮಾಜಿಕ-ಆರ್ಥಿಕ ಬದಲಾವಣೆಗಳು, ವೃತ್ತಿಪರ ಮತ್ತು ಪೋಷಣೆಗೆ ಸಂಬಂಧಿಸಿದ ಅಂಶಗಳೆಲ್ಲ ಇದಕ್ಕೆ ಕಾರಣ. ಒತ್ತಡದ ಜೀವನಶೈಲಿ (ಸ್ಟ್ರೆಸ್ ಡಯಾಬೆಟಿಸ್) ಮತ್ತು ಸುಲಭ ಲಭ್ಯ ಆಹಾರಗಳ ಕಾರಣದಿಂದಾಗಿ, ಊಟದ ವ್ಯವಸ್ಥೆ ಏರುಪೇರಾಗುತ್ತಿರುವುದು ಮತ್ತು ಆಗಾಗ ಕುರುಕಲು ತಿಂಡಿಗಳನ್ನು ಮೆಲ್ಲುವುದು, ಫಾಸ್ಟ್‌ -ಫ‌ುಡ್‌ಗಳು, ರೆಡಿ-ಟು-ಈಟ್ ತಿನಿಸುಗಳು, ಮತ್ತು ಮನೆಯ ಆಹಾರಕ್ಕಿಂತಲೂ ಹೊರಗೆ ಸಿಗುವ ರೆಡಿಮೇಡ್‌ ಆಹಾರಗಳನ್ನು ಹೆಚ್ಚು ಸೇವಿಸುವುದು ಈ ಎಲ್ಲಾ ಕಾರಣಗಳಿಂದಾಗಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲಾ ಆದಾಯ ವರ್ಗದ ಜನರ ಆಹಾರ ಅಭ್ಯಾಸಗಳು ಇಡಿಯ ಧಾನ್ಯಗಳ ಗುಂಪಿನಿಂದ ಬೇರೊಂದು ಆಹಾರ ಗುಂಪಿನತ್ತ ಸರಿದಿವೆ. ನಗರ ಪ್ರದೇಶ ಮತ್ತು ಶ್ರೀಮಂತ ವರ್ಗದ ಜನರಲ್ಲಿ ಇದು ಹೆಚ್ಚು ದಟ್ಟವಾಗಿ ಗೋಚರಿಸುತ್ತಿದೆ.

ಡಯಾಬೆಟಿಸ್ ಮೆಲ್ಲಿಟಸ್‌ ಅಥವಾ ಪ್ರಮೇಹ ಎಂಬುದು ಚಯ – ಅಪಚಯ ಕ್ರಿಯೆಗೆ ಸಂಬಂಧಿಸಿದ ಅಸ್ವಸ್ಥತೆಯಾಗಿದ್ದು ಶರೀರದಲ್ಲಿ ಇನ್ಸುಲಿನ್‌ ಉತ್ಪಾದನೆ ಕಡಿಮೆಯಾದಾಗ ಅಥವಾ ಇನ್ಸುಲಿನ್‌ ಚಟುವಟಿಕೆಗೆ ತಡೆ ಉಂಟಾಗಿ ದೇಹದ ಜೀವಕೋಶಗಳು ಶರೀರದ ಒಂದು ಬಹುಮುಖ್ಯ ಶಕ್ತಿ ಮೂಲವಾದ ಗ್ಲೂಕೋಸ್ ಅನ್ನು ಉಪಯೋಗಿಸಿಕೊಳ್ಳಲು ಅಸಮರ್ಥವಾಗುವಾಗ ಈ ಅಸ್ವಸ್ಥತೆ ಬಾಧಿಸುತ್ತದೆ. ಗ್ಲೂಕೋಸ್ ಶರೀರದ ಜೀವಕೋಶಗಳನ್ನು ಪ್ರವೇಶಿಸಿ ಚಯಾಪಚಯ ಕ್ರಿಯೆಯ ಮೂಲಕ ಶಕ್ತಿಯನ್ನು ಉತ್ಪಾದಿಸಬೇಕಾದರೆ ಇನ್ಸುಲಿನ್‌ ಆವಶ್ಯಕ. ಕಣ್ಣು, ನರಗಳು, ಮೂತ್ರಪಿಂಡ ಮತ್ತು ರಕ್ತನಾಳಗಳಲ್ಲಿನ ತೊಂದರೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶರೀರದಲ್ಲಿ ಉತ್ತಮ ಗ್ಲೂಕೋಸ್ ಮಟ್ಟವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಬಹಳ ಆವಶ್ಯಕ. ಆಹಾರ ಕ್ರಮದ ಬದಲಾವಣೆಗಳು, ವ್ಯಾಯಾಮ ಮತ್ತು ಜೀವನಶೈಲಿಯ ಸುಧಾರಣೆಗಳನ್ನು ಮಧುಮೇಹದ ಯಾವುದೇ ಹಂತದಲ್ಲಿ ಮತ್ತು ಅವಧಿಯಲ್ಲಿ ಕಡೆಗಣಿಸುವಂತಿಲ್ಲ. ಇದನ್ನು ಒಟ್ಟಾಗಿ ವೈದ್ಯಕೀಯ ಪೋಷಣಾ ಚಿಕಿತ್ಸೆ ಎಂಬುದಾಗಿ ತಿಳಿಯಲಾಗುತ್ತದೆ. ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ರೋಗಿಗಳಿಗೆ ಮತ್ತು ಮಧುಮೇಹದ ಆರೈಕೆಯಲ್ಲಿ ಇದರ ಪಾತ್ರವು ಬಹಳ ಮಹತ್ವದ್ದಾಗಿರುತ್ತದೆ.

ಪ್ರಮೇಹ ಮತ್ತು ಆಹಾರ ಕ್ರಮ

ಮಧುಮೇಹವನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವುದು ಅಂದರೆ ಆಹಾರ ಸೇವಿಸದೆ ಇರುವುದು ಆಥವಾ ಕಡಿಮೆ ಆಹಾರವನ್ನು ಸೇವಿಸಿ ಬಳಲುವುದು ಎಂದಲ್ಲ. ಇದರ ಅರ್ಥ ಹೆಚ್ಚು ಆರೋಗ್ಯಶಾಲಿಯಾದ ಆಹಾರವನ್ನು ಸೂಕ್ತ ಪ್ರಮಾಣದಲ್ಲಿ  ಮತ್ತು ಸರಿಯಾದ ಸಮಯದಲ್ಲಿ ಸೇವಿಸುವುದು ಎಂದು. ಮಧುಮೇಹದ ಆಹಾರ ಕ್ರಮ ಅಂದರೆ ಆರೋಗ್ಯಶಾಲಿ ಆಹಾರ ಸೇವನಾ ಯೋಜನೆ, ಅಂದರೆ ಸ್ವಾಭಾವಿಕವಾಗಿ ಪೋಷಕಾಂಶಗಳಿಂದ ಭರಿತವಾದ ಮತ್ತು ಕಡಿಮೆ ಕೊಬ್ಬು ಇರುವ ಮತ್ತು ಸೂಕ್ತ ಪ್ರಮಾಣದ ಕ್ಯಾಲೊರಿಯನ್ನು ಒಳಗೊಂಡಿರುವ ಆಹಾರವನ್ನು ಸೇವಿಸುವುದು.

ಈ ಆಹಾರ ಕ್ರಮದಲ್ಲಿನ ಬಹುಮುಖ್ಯ ಅಂಶಗಳು ಅಂದರೆ ತರಕಾರಿಗಳು, ಕೆಲವು ಹಣ್ಣುಗಳು ಮತ್ತು ಧಾನ್ಯಗಳು. ಮಧುಮೇಹದ ಆಹಾರ ಕ್ರಮ ಅಂದರೆ, ಖಂಡಿತವಾಗಿಯೂ ಕಾಯಿಲೆ ಇರುವ ಹಾಗೂ ಇಲ್ಲದಿರುವ ಪ್ರತಿಯೊಬ್ಬರಿಗೂ ಯೋಗ್ಯವೆನಿಸುವ ಮತ್ತು ಆರೋಗ್ಯಕರ ಆಹಾರ ಯೋಜನೆ. “ಆಹಾರವೇ ನಿಮ್ಮ ಔಷಧಿಯಾಗಿರಲಿ” ಅನ್ನುವುದು ಆಯುರ್ವೇದದ ಒಂದು ಜನಪ್ರಿಯ ನಾಣ್ಣುಡಿ. ಯಾವುದೇ ಕಾಯಿಲೆಯ ನಿರ್ವಹಣೆಯಲ್ಲಿ ಆಹಾರದ ಪಾತ್ರ ಏನು ಎಂಬುದನ್ನು ಇದು ಒತ್ತಿ ಹೇಳುತ್ತದೆ. ಆಹಾರ ಕ್ರಮವು ಕೇವಲ ಮಧುಮೇಹದ ನಿರ್ವಹಣೆಯಲ್ಲಿ ಮಾತ್ರ ಅಲ್ಲ, ಇತರ ಕಾಯಿಲೆಗಳಾದ ಅತಿ ರಕ್ತದೊತ್ತಡ, ಹೈಪರ್‌ ಕೊಲೆಸ್ಟ್ರೋಲೆಮಿಯಾ ಮತ್ತು ಬೊಜ್ಜಿನ ನಿರ್ವಹಣೆಯಲ್ಲಿಯೂ ಸಹ ವಿಶೇಷ ಪಾತ್ರವನ್ನು ವಹಿಸುತ್ತದೆ.

 diabetes-dina ಪ್ರಮೇಹ ಅಥವಾ ಮಧುಮೇಹ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆಗಳು ಮತ್ತು ವಾಸ್ತವ

ಮಧುಮೇಹದ ಆಹಾರ ಕ್ರಮಗಳು

ಮಧುಮೇಹದ ಆಹಾರ ಕ್ರಮವು ಮೂರು ಮುಖ್ಯ ಆಹಾರಗಳನ್ನು ಒಳಗೊಂಡಿರುತ್ತದೆ. ಅದರಲ್ಲಿ ಒಂದು ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ, ಮುಂಜಾನೆ ನಂತರ ಮತ್ತು ಸಾಯಂಕಾಲದ ಎರಡು ಉಪಾಹಾರಗಳು, ರಾತ್ರಿ ಮಲಗುವ ಸಮಯದಲ್ಲಿ ಸೇವಿಸುವ ಹಣ್ಣು ’ಅಥವಾ’ ಒಂದು ಗ್ಲಾಸ್‌ ಹಾಲು/ ಮಜ್ಜಿಗೆಗಳು ಸೇರಿರುತ್ತವೆ. ಪ್ರತಿ ಎರಡೂವರೆಯಿಂದ ಮೂರು ಗಂಟೆಯ ನಡುವೆ ಆಗಾಗ ಮತ್ತು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವುದು ಈ ಕ್ರಮದ ಮುಖ್ಯ ಅಂಶ. ಏರಿಳಿತಗಳು ಮತ್ತು ರಕ್ತದ ಸಕ್ಕರೆ ಮಟ್ಟವು ಹಠಾತ್ತಾಗಿ ಏರಿಕೆಯಾಗುವುದು ಮತ್ತು ಕುಸಿಯುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮವನ್ನು ಅನುಸರಿಸುವುದು ಹೆಚ್ಚು ಸೂಕ್ತ.

1. ಮಧುಮೇಹ ಇರುವ ರೋಗಿಗಳು ಅಧಿಕ ನಾರಿನಂಶ ಇರುವ ಆಹಾರ ವಸ್ತುಗಳನ್ನು ಹೆಚ್ಚು ಸೇವಿಸಬೇಕು. ಇಂತಹ ಆಹಾರಗಳು ಅಂದರೆ, ಗೋಧಿ, ರಾಗಿ, ಓಟ್ಸ್‌, ಸಿರಿ ಧಾನ್ಯಗಳು ಮತ್ತು ಬೇಳೆಗಳು, ಬೀನ್ಸ್‌ನಂತಹ ತರಕಾರಿಗಳು, ಹಸುರು ಸೊಪ್ಪು ತರಕಾರಿಗಳು ಮತ್ತು ಕ್ಯಾಬೇಜ್‌. ಈ ಆಹಾರಗಳು ಕಡಿಮೆ ಕ್ಯಾಲೊರಿ ಮತ್ತು ಸಕ್ಕರೆ ಅಂಶವನ್ನು ಹೊಂದಿರುತ್ತವೆ ಮತ್ತು ಇವು ರಕ್ತದ ಸಕ್ಕರೆ ಮಟ್ಟವನ್ನು ನಿಧಾನವಾಗಿ ಮತ್ತು ಒಂದೇ ಕ್ರಮದಲ್ಲಿ ಹೆಚ್ಚಿಸುತ್ತವೆ. ಆಹಾರ ಸೇವಿಸಿದ ಬಳಿಕ ರಕ್ತದ ಗ್ಲೂಕೋಸ್ ಮಟ್ಟವು ಹಠಾತ್ತಾಗಿ ಏರಿಕೆಯಾಗುವುದನ್ನು ನಿರ್ವಹಿಸುವುದರಲ್ಲಿ ಇದು ವಿಶೇಷ ಪ್ರಯೋಜನಕಾರಿ.

2. ಸೇವಿಸಬಹುದಾದ ಹಾಲು ಮತ್ತು ಹಾಲಿನ ಉತ್ಪನ್ನಗಳು ಅಂದರೆ ಕೆನೆರಹಿತ ಹಾಲು ಮತ್ತು ಮಜ್ಜಿಗೆ. ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುವ ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ಚೀಸ್‌ ಮತ್ತು ಪನೀರ್‌ಗಳನ್ನು ಸೇವಿಸಬಾರದು.

3. ಸಸ್ಯಜನ್ಯ ಎಣ್ಣೆಗಳಾದ ಸೂರ್ಯಕಾಂತಿ, ತೆಂಗಿನೆಣ್ಣೆ, ನೆಲಗಡಲೆ ಮತ್ತು ಎಳ್ಳಿನ ಎಣ್ಣೆಗಳನ್ನು ಅಡುಗೆಗೆ ಬಳಸಬಹುದು.

4. ಡಾಲ್ಡಾ, ವನಸ್ಪತಿ ಮತ್ತು ಬೆಣ್ಣೆಗಳನ್ನು ಬಳಸಬಾರದು. ಕೊಬ್ಬಿನ ಆಮ್ಲದ ಪ್ರಮಾಣದಲ್ಲಿ ಒಂದು ಅಡುಗೆ ಎಣ್ಣೆಯಿಂದ ಇನ್ನೊಂದಕ್ಕೆ ವ್ಯತ್ಯಾಸ ಆಗುವುದರಿಂದ ಅಡುಗೆಗೆ ಬೇರೆ ಬೇರೆ ರೀತಿಯ ಎಣ್ಣೆಯನ್ನು ನಿಯಮಿತವಾಗಿ ಬದಲಿಸುತ್ತಾ ಬಳಸಬಹುದು.

5. ಮೊಟ್ಟೆಯೂ ಸಹ ವಿಶೇಷ ಪೋಷಣಾಭರಿತ ಆಹಾರವಾಗಿದ್ದು, ಇದನ್ನೂ ಸಹ ಸೇವಿಸಬಹುದು. ಮೊಟ್ಟೆಯ ಬಿಳಿಯ ಭಾಗವು ಪ್ರೋಟೀನ್‌ನಿಂದ ಮತ್ತು ಹಳದಿಯ ಭಾಗವು ಕೊಲೆಸ್ಟ್ರಾಲ್‌ನಿಂದ ಸಮೃದ್ಧವಾಗಿದೆ. ಹಾಗಾಗಿ ಮಧುಮೇಹ ರೋಗಿಗಳು ಮೊಟ್ಟೆಯ ಹಳದಿ ಭಾಗವನ್ನು ಹೆಚ್ಚು ಸೇವಿಸದೆ ಬಿಳಿಯ ಭಾಗವನ್ನು ಮಾತ್ರ ಹೆಚ್ಚು ಸೇವಿಸಬಹುದು.

6. ಮಧುಮೇಹ ರೋಗಿಗಳು ದಿನಕ್ಕೆ ಕನಿಷ್ಠ ಒಂದು ಹಣ್ಣನ್ನು ಸೇವಿಸಬಹುದು ಎಂದು ಶಿಫಾರಸು ಮಾಡಲಾಗುತ್ತದೆ. ಶಿಫಾರಸು ಮಾಡುವ ಹಣ್ಣುಗಳು ಅಂದರೆ ಸೇಬು, ಕಿತ್ತಳೆ, ಮೂಸಂಬಿ, ಪೇರಳೆ, ಪಪ್ಪಾಯ (ದಿನಕ್ಕೆ 50 ಗ್ರಾಂ ಪಪ್ಪಾಯ ಅಥವಾ ಅಷ್ಟೇ ಪ್ರಮಾಣದ ಮಧ್ಯಮ ಗಾತ್ರದ ಸೇಬು). ರಕ್ತದ ಸಕ್ಕರೆ ಮಟ್ಟವನ್ನು ಹಠಾತ್ತಾಗಿ ಹೆಚ್ಚಿ ಸುವ ಕಾರಣ ಬಾಳೆಹಣ್ಣು, ಮಾವಿನ ಹಣ್ಣು, ಚಿಕ್ಕು, ದ್ರಾಕ್ಷಿ ಹಣ್ಣುಗಳನ್ನು ಸೇವಿಸಬಾರದು. ಒಣ ಹಣ್ಣುಗಳಾದ ಬಾದಾಮಿ ಮತ್ತು ವಾಲ್ನಟ್‌ಗಳನ್ನು ಸೇವಿಸಬಹುದು. ಆದರೆ ಗೋಡಂಬಿ ಯಲ್ಲಿ ಅಧಿಕ ಕೊಬ್ಬಿನ ಅಂಶ ಮತ್ತು ಒಣ ದ್ರಾಕ್ಷಿಯಲ್ಲಿ ಅಧಿಕ ಸಕ್ಕರೆ ಅಂಶ ಇರುವ ಕಾರಣ ಇವನ್ನು ಸೇವಿಸಬಾರದು.

7. ಸಂಸ್ಕರಿಸಿದ ಆಹಾರ ಪದಾರ್ಥಗಳಾದ ಬೆಳ್ತಿಗೆ ಅಕ್ಕಿಯ ಅನ್ನ, ಮೈದಾದ ಉತ್ಪನ್ನಗಳಾದ ಬಿಸ್ಕಿಟ್‌ಗಳು ಮತ್ತು ಬೇಕರಿ ಉತ್ಪನ್ನಗಳನ್ನು ಮಧುಮೇಹ ರೋಗಿಗಳು ಸೇವಿಸಬಾರದು. ಮಧುಮೇಹ ರೋಗಿಗಳು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮೊದಲು ಹಸಿ ತರಕಾರಿಗಳನ್ನು ಸಲಾಡ್‌ ರೂಪದಲ್ಲಿ ಸೇವಿಸಬಹುದು. ಸಲಾಡ್‌ನ‌ಲ್ಲಿ ಕ್ಯಾಲೊರಿ ಬಹಳ ಕಡಿಮೆ ಇರುತ್ತದೆ ಮತ್ತು ನಾರಿನ ಅಂಶ ಹೆಚ್ಚು ಇರುತ್ತದೆ. ಇದು ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿಯಗಿ ಮಲವಿಸರ್ಜನೆ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.

8. ಆಲೂಗಡ್ಡೆ, ಸಿಹಿ ಗೆಣಸು, ಬೀಟ್ರೂಟ್ ಗಳನ್ನು ಸೇವಿಸದೆ ಇರುವುದು ಉತ್ತಮ. ನುಗ್ಗೆ ಎಲೆ, ಮೆಂತ್ಯೆ ಬೀಜ ಮತ್ತು ಹಾಗಲಕಾಯಿಗಳ ಸೇವನೆ ಉತ್ತಮ. ಈ ತರಕಾರಿಗಳು ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತವೆ.

ಪ್ರಮೇಹ / ಮಧುಮೇಹದ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆಗಳು ಮತ್ತು ವಾಸ್ತವ

Diabetics-take-precautions

ಕಲ್ಪನೆ: ಮಧುಮೇಹ ರೋಗಿಗಳು ಗೋಧಿಯನ್ನು ಮಾತ್ರ ಸೇವಿಸಬೇಕು, ಅನ್ನವನ್ನು ಸೇವಿಸಬಾರದು.

ವಾಸ್ತವ: ಗೋಧಿ ಮತ್ತು ಅನ್ನ ಇವೆರಡೂ ರಕ್ತದ ಸಕ್ಕರೆ ಮಟ್ಟವನ್ನು ಸಮಾನ ಪ್ರಮಾಣದಲ್ಲಿ ಹೆಚ್ಚಿಸುತ್ತವೆ. ಆದರೆ ಅನ್ನಕ್ಕಿಂತಲೂ ಚಪಾತಿಯನ್ನು ಲೆಕ್ಕ ಹಾಕುವುದು ಮತ್ತು ತಿನ್ನುವ ಪ್ರಮಾಣವನ್ನು ನಿಯಂತ್ರಿಸುವುದು ಸುಲಭ. ಈ ಕಾರಣಕ್ಕಾಗಿ ಅನ್ನಕ್ಕಿಂತಲೂ ಚಪಾತಿಯನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಗೋಧಿ ಹಾಗೂ ರಾಗಿಯು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಮುಂದಿನ ಆಹಾರವನ್ನು ಮತ್ತಷ್ಟು ಮುಂದೂಡಬಹುದು. ಇದರಿಂದ ಪದೇ ಪದೇ ಹಸಿವಾಗಿ ತಿನ್ನಬೇಕೆನಿಸುವುದನ್ನು ತಡೆಯಬಹುದು. ಆದ್ದರಿಂದ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ. ಅದೇ ಕೇವಲ ಅನ್ನವನ್ನು ಸೇವಿಸುತ್ತಾ ಹೋದರೆ, ಅನ್ನ ಬಹಳ ಬೇಗ ಜೀರ್ಣವಾಗುವುದರಿಂದ ನಿಗದಿತ ಸಮಯಕ್ಕಿಂತ ಬೇಗ ಹಸಿವಾಗಿ ಪದೇ ಪದೇ ತಿನ್ನುವುದರಿಂದ ಸಕ್ಕರೆ ಅಂಶ ಏರುತ್ತದೆ.

ಮಧುಮೇಹ ಇರುವ ಜನರು ಅನ್ನವನ್ನೇ ಸೇವಿಸಲು ಇಷ್ಟಪಟ್ಟರೆ ಅವರು ತಾವು ಪ್ರತಿ ಸಲ ಊಟ ಮಾಡುವಾಗ ಸೇವಿಸುವ ಅನ್ನದ ಪ್ರಮಾಣವನ್ನು ಒಂದು ಚಿಕ್ಕ ಬೌಲ್‌ಗೆ ಮಿತಗೊಳಿಸಬೇಕು. ಅನ್ನದಲ್ಲೂ ಬಿಳಿ ಅನ್ನಕ್ಕಿಂತ ಕುಚ್ಚಲಕ್ಕಿಯ ಅನ್ನವನ್ನು ಸೇವಿಸುವುದು ಹೆಚ್ಚು ಸೂಕ್ತ, ಯಾಕೆಂದರೆ ಕುಚ್ಚಲಕ್ಕಿಯ ಅನ್ನದಲ್ಲಿ ನಾರಿನಂಶ ಮತ್ತು ಪೋಷಕಾಂಶಗಳ ಪ್ರಮಾಣ ಹೆಚ್ಚು ಇರುತ್ತದೆ. ಬೆಳ್ತಿಗೆ ಅಕ್ಕಿಯ ಅನ್ನದಲ್ಲಿನ ನಾರಿನಂಶ ಮತ್ತು ಪೋಷಕಾಂಶಗಳು ಪಾಲಿಶ್‌ ಮಾಡುವಾಗ ನಷ್ಟವಾಗಿರುತ್ತವೆ.

ಕಲ್ಪನೆ: ಮಧುಮೇಹ ರೋಗಿಗಳು ಅತಿಯಾಗಿ ತಿಂದು ಮುಂದಿನ ಊಟವನ್ನು ತಪ್ಪಿಸಿಕೊಳ್ಳಬಹುದು.

ವಾಸ್ತವ: ಅತಿಯಾಗಿ ತಿನ್ನುವುದರಿಂದ ರಕ್ತದ ಸಕ್ಕರೆ ಮಟ್ಟವು ಹಠಾತ್ತಗಿ ಹೆಚ್ಚಾಗಬಹುದು ಮತ್ತು ಮುಂದಿನ ಊಟವನ್ನು ತಪ್ಪಿಸಿಕೊಳ್ಳುವುದರಿಂದ ರಕ್ತದ ಸಕ್ಕರೆ ಮಟ್ಟವು ಹಠಾತ್ತಾಗಿ ಕುಸಿಯುವ ಸಾಧ್ಯತೆ ಇದೆ. ರಕ್ತದ ಸಕ್ಕರೆ ಮಟ್ಟದಲ್ಲಿ ಆಗುವ ಈ ಎರಡೂ ಏರಿಳಿತಗಳು ಅಪಾಯಕಾರಿ ಆಗಬಹುದು. ಹಾಗಾಗಿ ಮಧುಮೇಹ ರೋಗಿಗಳು ಮುಂದಿನ ಊಟವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅತಿಯಾಗಿ ಆಹಾರ ಸೇವಿಸಬಾರದು. ಅದೇ ರೀತಿಯಲ್ಲಿ ಬಹಳ ಸಮಯ ಉಪವಾಸ ಇರುವುದನ್ನೂ ಸಹ ಶಿಫಾರಸು ಮಾಡುವುದಿಲ್ಲ, ಮಧುಮೇಹ ಕಾಯಿಲೆ ಇರುವ ರೋಗಿಗಳು ಅವರ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹಠಾತ್ತಾಗಿ ಕುಸಿಯುವುದನ್ನು (ಹೈಪರ್‌ ಗ್ಲೈಸೀಮಿಯಾ) ತಡೆಯಲು ಪ್ರತಿ ಎರಡೂವರೆಯಿಂದ ಮೂರು ಗಂಟೆಗೊಮ್ಮೆ ಆಹಾರ ಸೇವಿಸುತ್ತಾ ಇರಬೇಕು.

ಕಲ್ಪನೆ: ಮಧುಮೇಹ ಇರುವ ಜನರು ಸಕ್ಕರೆಯ ಬದಲಿಗೆ ಬೆಲ್ಲ ಮತ್ತು ಜೇನುತುಪ್ಪವನ್ನು ಸೇವಿಸಬಹುದು.

ವಾಸ್ತವ: ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪಗಳೆಲ್ಲ ನೇರ ಸಕ್ಕರೆಗಳೇ ಆಗಿದ್ದು, ಇವು  ಮಾನವ ಶರೀರದಲ್ಲಿ ಕ್ರಮೇಣ ಗ್ಲೂಕೋಸ್ ಆಗಿ ಪರಿವರ್ತನೆಗೊಳ್ಳುತ್ತವೆ. ಹಾಗಾಗಿ ಮಧುಮೇಹ ಇರುವ ಜನರು ಸಕ್ಕರೆ, ಬೆಲ್ಲ ಹಾಗೂ ಜೇನುತುಪ್ಪದಿಂದ ಮಾಡಿದ ಸಿಹಿತಿನಿಸುಗಳನ್ನು ಬಳಸದಿದ್ದರೆ ಉತ್ತಮ. ಆದರೂ, ಡೈರೆಕ್ಟ್ ಶುಗರ್ ಗಿಂತ ಉತ್ತಮವಾದ್ದರಿಂದ ಬಳಸಲೇಬೇಕಾದ ಪರಿಸ್ಥಿತಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಬಹುದು. ಕೃತಕ ಸಿಹಿಕಾರಕಗಳಾದ ಅಸ್ಪಾರ್ಟೆಮ್‌, ಸುಕ್ರಾಲೋಸ್‌, ಸ್ಯಾಕರಿನ್‌ ಇವು ಶುಗರ್‌ ಫ್ರೀ ಎಂಬ ಹೆಸರಿನಲ್ಲಿ ದೊರೆಯುತ್ತಿದ್ದು ಇವನ್ನು ಕಾಫಿ, ಚಹಾದಂತಹ ಪಾನೀಯಗಳಲ್ಲಿ ಬಳಸಬಹುದು.

ಕಲ್ಪನೆ: ಮಧುಮೇಹ ರೋಗಿಗಳು ಹಣ್ಣಿನ ಜ್ಯೂಸ್‌ಗಳು ಮತ್ತು ತಂಪು ಪಾನೀಯಗಳನ್ನು ಸೇವಿಸಬಹುದು.

ವಾಸ್ತವ: ಹಣ್ಣಿನ ಜ್ಯೂಸ್‌ ಮತ್ತು ತಂಪು ಪಾನೀಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚುವರಿ ಸಕ್ಕರೆಯನ್ನು ಸೇರಿಸಿರುತ್ತಾರೆ ಹಾಗಾಗಿ ಇಂತಹ ಪಾನೀಯಗಳನ್ನು ಮಧುಮೇಹ ರೋಗಿಗಳು ಸೇವಿಸಬಾರದು. ಈ ಕಾಯಿಲೆ ಇರುವವರು ಹಣ್ಣುಗಳನ್ನು ಜ್ಯೂಸ್‌ ಮಾಡಿ ಕುಡಿಯುವುದಕ್ಕೆ ಬದಲಾಗಿ ತಾಜಾ ಹಣ್ಣುಗಳನ್ನು ಹಾಗೆಯೇ ಇಡಿ ಯಾಗಿ ಸೇವಿಸಬಹುದು. ಹಣ್ಣುಗಳನ್ನು ಜ್ಯೂಸ್‌ ಮಾಡುವಾಗ ಅದರಲ್ಲಿನ ನಾರಿನ ಅಂಶವು ನಷ್ಟವಾಗುತ್ತದೆ.

ಕಲ್ಪನೆ: ತಾವು ತೆಗೆದುಕೊಳ್ಳುತ್ತಿರುವ ಔಷಧಿಯ ಪ್ರಮಾಣವನ್ನು ಹೆಚ್ಚಿಸಿಕೊಂಡು ಅಥವಾ ಹೆಚ್ಚುವರಿ ಮಾತ್ರೆಯನ್ನು ತೆಗೆದುಕೊಂಡು ಈ ರೋಗಿಗಳು ಸಿಹಿತಿನಿಸುಗಳನ್ನು ಸೇವಿಸಬಹುದು.

ವಾಸ್ತವ: ಹೆಚ್ಚುವರಿಯಾಗಿ ಸೇವಿಸಿದ ಸಿಹಿತಿನಿಸುಗಳ ಸಿಹಿಯನ್ನು ಸರಿತೂಗಿಸಲು ಹೆಚ್ಚುವರಿ ಮಾತ್ರೆಗಳು ಅಥವಾ ಇನ್ಸುಲಿನ್‌ ಡೋಸೇಜ್‌ ಅನ್ನು ಹೆಚ್ಚಿಸಿಕೊಳ್ಳಬಹುದು ಎಂದು ಮಧುಮೇಹ ರೋಗಿಗಳು ಯಾವತ್ತೂ ಯೋಚಿಸಬಾರದು. ಇದರಿಂದ ರಕ್ತದ ಸಕ್ಕರೆ ಮಟ್ಟವು ಹಠಾತ್ತಾಗಿ ಕುಸಿದು ತೀವ್ರ ಅಪಾಯವಾಗಬಹುದು. ರಕ್ತದ ಸಕ್ಕರೆ ಮಟ್ಟವು ವಿಪರೀತ ಕುಸಿಯುವುದರಿಂದ ಹಠಾತ್‌ ಆಯಾಸ ಕಾಣಿಸಿಕೊಳ್ಳಬಹುದು ಮತ್ತು ರೋಗಿಯು ಕೋಮಾ ಸ್ಥಿತಿಗೆ ಹೋಗಬಹುದು. ಮಧುಮೇಹ ಚಿಕಿತ್ಸೆಗಾಗಿ ಬಳಸುವ ಕೆಲವು ಔಷಧಿಗಳು 24 ಗಂಟೆಯವರೆಗೆ ಕಾರ್ಯವೆಸಗುತ್ತವೆ ಇದರಿಂದಾಗಿ ಇವು ರಕ್ತದ ಸಕ್ಕರೆ ಮಟ್ಟವನ್ನು ದೀರ್ಘ‌ಕಾಲ ಕುಸಿತದ ಸ್ಥಿತಿಯಲ್ಲಿ ಇರಿಸಬಹುದು. ಹಾಗಾಗಿ ಮಧುಮೇಹ ಕಾಯಿಲೆ ಇರುವ ರೋಗಿಗಳು  ತಮಗೆ ತಾವೇ ಸ್ವಯಂ-ಚಿಕಿತ್ಸೆ ಮಾಡಿಕೊಳ್ಳಬಾರದು. ಮಧುಮೇಹ ಔಷಧಿಗಳನ್ನು ಅಥವಾ ಇನ್ಸುಲಿನ್‌ನ ಹೆಚ್ಚಿವರಿ ಡೋಸೇಜ್‌ ಅನ್ನು ಸ್ವಯ-ಹೆಚ್ಚಿಸಿಕೊಂಡು ತೆಗೆದುಕೊಳ್ಳುವುದು ಅಪಾಯಕಾರಿ. ಮಧುಮೇಹ ಕಾಯಿಲೆ ಇರುವವರು ಸ್ವಯಂ-ಚಿಕಿತ್ಸಾ  ಕ್ರಮವನ್ನು ಅನುಸರಿಸಲೇಬಾರದು.

ಡಾ|| ನಿತಿನ್ ವೀರನಾಗಪ್ಪ, ಎಂ.ಡಿ (ಪಂಚಕರ್ಮ)
ಸಹಾಯಕ ಪ್ರಾಧ್ಯಾಪಕರು ಹಾಗೂ ಪಂಚಕರ್ಮ ವಿಶೇಷ ತಜ್ಞರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ
ಅಂಚೆಪಾಳ್ಯ, ಕೆಂಗೇರಿ, ಬೆಂಗಳೂರು – ಮೈಸೂರು ಹೆದ್ದಾರಿ, ಬೆಂಗಳೂರು – 560074
Contact : +91-99018-65656 / 080-22718025

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!