ಆಟಿಸಂ ರೋಗ – ಚಿಕಿತ್ಸೆ ಇಲ್ಲದ ಸಾಮಾಜಿಕ ಸಮಸ್ಯೆ

ಆಟಿಸಂ ರೋಗ ಚಿಕ್ಕ ಮಕ್ಕಳಲ್ಲಿ ಕಂಡು ಬರುವಂತಹ ಅಸ್ವಸ್ಥತೆ. ತಮ್ಮ ಮಕ್ಕಳಿಗೆ ಆಟಿಸಂ ಇದೆ ಎಂದು ತಿಳಿದಾಗ ಹೆತ್ತವರು ಅಂತಹ ಮಕ್ಕಳಿಗೆ ವಿಶೇಷ ಪ್ರೀತಿ ವಾತ್ಸಲ್ಯ ಮತ್ತು ಕಾಳಜಿ ವಹಿಸಬೇಕು. ಅಕ್ಕರೆಯಿಂದ ಪಾಲನೆ ಮಾಡಬೇಕು. ಪ್ರತಿ ವರ್ಷ ಏಪ್ರಿಲ್ ಎರಡರಂದು ವಿಶ್ವದಾದ್ಯಂತ ವಿಶ್ವ ಆಟಿಸಂ ದಿನ ಆಚರಿಸಲಾಗುತ್ತದೆ.

ಪ್ರತಿ ವರ್ಷ ಏಪ್ರಿಲ್ ಎರಡರಂದು ವಿಶ್ವದಾದ್ಯಂತ ವಿಶ್ವ ಆಟಿಸಂ ದಿನ ಆಚರಿಸಲಾಗುತ್ತದೆ. ಆಟಿಸಂ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತೊಡೆದು ಹಾಕಿ ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು 2007ರಲ್ಲಿ ಯುನೈಟೆಡ್ ಜನರಲ್ ಅಸೆಂಬ್ಲಿ ಜಾರಿಗೆ ತಂದಿತು. ಕಳೆದ 12 ವರ್ಷಗಳಲ್ಲಿ ಸಾವಿರಾರು ಇಂತಹ ಜಾಗೃತಿ ಕಾರ್ಯಕ್ರಮಗಳು ಜಗತ್ತಿನಾದ್ಯಂತ ನಡೆದು, ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರೂ ತಪ್ಪಾಗಲಾರದು.

ಚಿಕ್ಕ ಮಕ್ಕಳಲ್ಲಿ ಕಂಡು ಬರುವಂತಹ ಅಸ್ವಸ್ಥತೆ:

ಆಂಗ್ಲ ಭಾಷೆಯಲ್ಲಿ ಆಟಿಸಂ ಎಂದು ಕರೆಯಲ್ಪಡುವ ಈ ರೋಗವನ್ನು ಅಚ್ಚಕನ್ನಡದಲ್ಲಿ ಸ್ವಲೀನತೆ ಎನ್ನಲಾಗುತ್ತದೆ. ಜಾಗತಿಕವಾಗಿ ವಿಶ್ವದಾದ್ಯಂತ ಸುಮಾರು 50 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ರೋಗದಲ್ಲಿ ಬಳಲುತ್ತಾರೆ. ಭಾರತವೊಂದರಲ್ಲಿ ಸುಮಾರು 5 ಮಿಲಿಯನ್ ಮಂದಿ ವಾರ್ಷಿಕವಾಗಿ ಈ ಆಟಿಸಂ ರೋಗದಿಂದ ಬಳಲುತ್ತಾರೆ. ಈ ರೋಗವನ್ನು ಪೂರ್ಣವಾಗಿ ಗುಣಪಡಿಸಲಾಗುವುದಿಲ್ಲ. ಸಾಕಷ್ಟು ಪ್ರೋತ್ಸಾಹ ಮತ್ತು ಸಹಕಾರ ನೀಡಿದಲ್ಲಿ ಅಂತಹ ಮಕ್ಕಳಲ್ಲಿನ ಪ್ರತಿಭೆಯನ್ನು ಸೂಕ್ತವಾಗ ಬಳಸಿಕೊಂಡು ಸಮಾಜಕ್ಕೆ ಈ ರೀತಿಯ ಮಕ್ಕಳು ಹೊರೆಯಾಗದೆ ಆಸ್ತಿಯಾಗಬಲ್ಲರು ಎಂದು ಚರಿತ್ರೆಯಲ್ಲಿ ನಡೆದ ನಿದರ್ಶನಗಳಿಂದ ತಿಳಿದು ಬಂದಿದೆ.

ಸ್ವಲೀನತೆ ಎಂಬುದು ಚಿಕ್ಕ ಮಕ್ಕಳಲ್ಲಿ ಕಂಡು ಬರುವಂತಹ ಅಸ್ವಸ್ಥತೆ. ಈ ರೀತಿಯ ಮಕ್ಕಳಲ್ಲಿ ಬುದ್ಧಿ ಶಕ್ತಿಯ ಮಟ್ಟ ಅತೀ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಎಲ್ಲಾ ಮಕ್ಕಳಂತೆ ಈ ಮಕ್ಕಳು ಇತರರೊಂದಿಗೆ ಸಂವಹನ ಮಾಡಲು ಸಾಧ್ಯವಾಗುವುದಿಲ್ಲ. ಇದೊಂದು ರೀತಿಯ ಸಾಮಾಜಿಕ ಸಮಸ್ಯೆಯಾಗಿದ್ದು, ಈ ರೀತಿಯ ಮಕ್ಕಳು ತನ್ನದೇ ವಯಸ್ಸಿನ ಇತರ ಮಕ್ಕಳ ಜೊತೆಗೆ ವ್ಯವಹರಿಸಲು, ಮಾತನಾಡಲು, ಆಟೋಟ ಪಾಠಗಳಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಾರೆ. ಹುಟ್ಟುವಾಗಲೇ ಈ ರೋಗ ಗೋಚರವಾಗದಿದ್ದರೂ 6 ತಿಂಗಳ ಬಳಿಕ ರೋಗದ ಲಕ್ಷಣಗಳು ಗೋಚರಿಸುತ್ತದೆ.

ಮಗು ಬೆಳೆದು ಪ್ರೌಢಾವಸ್ಥೆಗೆ ತಲುಪಿದಾಗ ರೋಗದ ಲಕ್ಷಣಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತದೆ. ಇದೊಂದು ರೀತಿಯ ಜೀವನ ಪರ್ಯಂತ ಇರುವ ರೋಗವಾಗಿದ್ದು, ಸೂಕ್ತವಾಗಿ ಉಪಶಮನಗೊಳಿಸಲು ಯಾವುದೇ ಚಿಕಿತ್ಸೆ ಇಲ್ಲದಿರುವುದೇ ಬಹುದೊಡ್ಡ ದುರಂತ. ಆದರೆ ಸಕಾಲದಲ್ಲಿ ಗುರುತಿಸಿ ಹೆತ್ತವರು ಮತ್ತು ಶಿಕ್ಷಕರು ಇಂತಹ ಮಕ್ಕಳಿಗೆ ಮಾನಸಿಕ ಸ್ಥೈರ್ಯ ನೀಡಿ, ನೈತಿಕ ಬೆಂಬಲ ನೀಡಿ ಮಾನಸಿಕವಾಗಿ ಕುಗ್ಗಿ ಹೋಗದಂತೆ ಮಾಡಿದಲ್ಲಿ ಈ ರೀತಿಯ ಮಕ್ಕಳು ಸಮಾಜದ ಮುಖ್ಯವಾಹಿನಿಯಿಂದ ದೂರ ಹೋಗದಂತೆ ಅಸ್ವಸ್ಥತೆ ಹೆಚ್ಚಾಗದಂತೆ ಪರಿಣಾಮಕಾರಿಯಗಿ ತಡೆಯಬಹುದಾಗಿದೆ.

ಯಾಕಾಗಿ ಬರುತ್ತದೆ?

ಆಟಿಸಂ ಎನ್ನುವುದು ಕೇಂದ್ರಿಯ ನರಮಂಡಲಕ್ಕೆ ಸಂಬಂಧಿಸಿದ ರೋಗವಾಗಿರುತ್ತದೆ. ಯಾವುದೇ ಒಂದು ನಿರ್ದಿಷ್ಟ ಕಾರಣದಿಂದ ಸ್ವಲೀನತೆ ಬರುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಅನುವಂಶಿಕ ಮತ್ತು ವಾತಾವರಣದ ಪ್ರಭಾವ ಜಾಸ್ತಿ ಇದೆಯೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅನುವಂಶಿಕವಾಗಿ ಬರುವ ಈ ಆಟಿಸಂ ರೋಗಕ್ಕೆ ಜೀನ್‍ಗಳಲ್ಲಿನ ವ್ಯತ್ಯಾಸವೇ ಬಹುಮುಖ್ಯ ಕಾರಣ.ಆದರೆ ವಾತಾವರಣದಲ್ಲಿನ ಕಲುಷಿತೆಯಿಂದಾಗಿ (ಗಾಳಿ, ನೀರು ಅಥವಾ ಇನ್ನಾವುದೇ ಕಲುಷಿತ) ಜೀನ್‍ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಈ ಆಟಿಸಂ ರೋಗಕ್ಕೆ ಕಾರಣವಾಗಿರಲೂಬಹುದು ಎಂದು ಕೆಲವರು ವಾದಿಸುತ್ತಾರೆ.

ಮಗು ತಾಯಿಯ ಗರ್ಭದಲ್ಲಿದ್ದಾಗ ಉಂಟಾದ ವೈರಾಣು ಸೋಂಕು (ರುಬೆಲ್ಲಾ ಸೋಂಕು) ಅಥವಾ ಅತಿಯಾದ ಧೂಮಪಾನ, ಮದ್ಯಪಾನ ಅಥವಾ ಮಗು ತಾಯಿಯ ಗರ್ಭದಲ್ಲಿರುವಾಗ ತಾಯಿ ಅನುಭವಿಸಿದಂತಹ ಅತಿಯಾದ ಮಾನಸಿಕ ತೊಂದರೆಗಳು, ಕಷ್ಟಗಳು, ನೋವುಗಳು ಆಕೆಯ ಮಗುವಿನ ವರ್ಣ ತಂತುಗಳ (ಜೀನ್) ಮೇಲೆ ಪ್ರಭಾವ ಬೀರಿ ಈ ರೋಗಕ್ಕೆ ಕಾರಣವಾಗಿರಬಹುದು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ ಹತ್ತು ಹಲವು ಕಾರಣಗಳು ಸೇರಿ ಆಟಿಸಂ ರೋಗ ಬರುತ್ತದೆ ಎಂದು ಅಂದಾಜಿಸಲಾಗಿದೆ.

vishwa-autism-dina-april-2

ಫಝಲ್ ರಿಬ್ಬನ್

ಸ್ವಲೀನತೆ ರೋಗ ಪೀಡಿತರ ಜಾಗೃತಿಗಾಗಿ ಸಾಂಕೇತಿಕವಾಗಿ ಫಝಲ್ ರಿಬ್ಬನ್‍ನ್ನು ಬಳಸಲಾಗುತ್ತದೆ. ಜೀವನದಲ್ಲಿ ಆಟಿಸಂ ರೋಗಿಗಳು ಒಬ್ಬಂಟಿ ಅಲ್ಲ. ಆಟಿಸಂ ರೋಗಿಗಳ ಅಸ್ಪಸ್ಥತೆ ಇನ್ನೊಬ್ಬರಿಗೆ ಕಷ್ಟ ಕೊಡಲಾರದು. ಎಲ್ಲ ಬಣ್ಣಗಳು ಒಟ್ಟಿಗೆ ಇರುವಂತೆ ಆಟಿಸಂ ರೋಗಿಗಳು ಎಲ್ಲರೊಂದಿಗೆ ಬೆರೆಯುತ್ತಾರೆ. ಅವರಂತೆಯೇ ಆಟಿಸಂ ಇರುವವರು ಬದುಕಬಹುದು ಎಂಬುದೇ ಈ ರಿಬ್ಬನ್ನಿನ ಸಂಕೇತವಾಗಿ ಇರುತ್ತದೆ. ಅದಲ್ಲದೆ ವಿವಿಧ ಬಣ್ಣ ಮತ್ತು ಆಕಾರಗಳು, ಜನ ಮತ್ತು ಕುಟುಂಬಗಳ ವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಆಟಿಸಂ ಇರುವ ಮಕ್ಕಳು ಇತರ ಮಕ್ಕಳಿಗಿಂತ ವಿಭಿನ್ನರಾಗಿರುತ್ತಾರೆ.

ಸಾಮಾನ್ಯವಾಗಿ ಮಕ್ಕಳಲ್ಲಿ ಈ ರೋಗ 12ರಿಂದ 18 ತಿಂಗಳಲ್ಲಿ ಗೋಚರಿಸಲು ಆರಂಭವಾಗುತ್ತದೆ. ಇಂತಹ ಮಕ್ಕಳನ್ನು ಹೆತ್ತವರು ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಆಟಿಸಂನಿಂದ ಬಳಲುವ ಮಕ್ಕಳನ್ನು ಇತರ ಸಹಜ ಮಕ್ಕಳಂತೆ ಮಾಡಬಹುದು. ಇಂತಹ ರೋಗದಿಂದ ಬಳಲುವ ಮಕ್ಕಳನ್ನು ಸರಿಯಾಗಿ ಮಾನಸಿಕ ಧೈರ್ಯ ನೀಡದೇ ಅಥವಾ ಇನ್ಯಾವುದೇ ತರಬೇತಿ ನೀಡದೇ ಇತರ ಮಕ್ಕಳ ಜೊತೆಗೆ ಸಾಮಾನ್ಯ ಶಾಲೆಗೆ ಕಳುಹಿಸಬಾರದು. ಹಾಗೆ ಮಾಡಿದ್ದಲ್ಲಿ ಈ ಆಟಿಸಂ ಇರುವ ಮಕ್ಕಳು ಇತರ ಸಹಜ ಮಕ್ಕಳ ಜೊತೆಗೆ ಸ್ಪರ್ಧಿಸಲು, ಸಂಪರ್ಕ ಮಾಡಲು ಅಥವಾ ಬೆರೆಯಲು ಕಷ್ಟವಾಗಬಹುದು.

ಹಾಗಾದಾಗ ಈ ಆಟಿಸಂ ಇರುವ ಮಕ್ಕಳು ಮತ್ತಷ್ಟು ಕುಗ್ಗಿ ಹೋಗಿ ಮಾನಸಿಕವಾಗಿ ಅವರು ಜರ್ಜರಿತವಾಗುತ್ತಾರೆ. ಈ ಭಿನ್ನ ಚೇತನ ಮಕ್ಕಳಿಗೆ ಇತರ ಸಹಜ ಮಕ್ಕಳ ಜೊತೆಗೆ ಬೆರೆಯುವ ಗುಣವಿರುವುದಿಲ್ಲ. ಈ ಕಾರಣದಿಂದಲೇ ಇಂತಹಾ ಮಕ್ಕಳನ್ನು ಮೊದಲು ವಿಶೇಷ ಆಟಿಸಂ ತರಬೇತಿ ಕೇಂದ್ರಗಳಿಗೆ ಸೇರಿಸಬೇಕು. ನಗರ ಪ್ರದೇಶದ ಬಾಲಕರಲ್ಲಿ ಹೆಚ್ಚು ಕಂಡು ಬರುವ ಈ ಆಟಿಸಂ ರೋಗ ಸಾಮಾನ್ಯವಾಗಿ 4ರಿಂದ 6ರ ವಯಸ್ಸಿನಲ್ಲಿ ಹೆಚ್ಚು ನಿಖರವಾಗಿ ಗೋಚರಿಸುತ್ತದೆ.

ರೊಗದ  ಲಕ್ಷಣಗಳು :

ಕೇಂದ್ರಿಯ ನರಮಂಡಲ ಮತ್ತ ಮೆದುಳಿಗೆ ಸಂಬಂಧಿಸಿದ ರೋಗ ಇದಾಗಿದ್ದು ಈ ರೋಗದಿಂದ ಬಳಲುವ ಮಕ್ಕಳು ಇತರ ಮಕ್ಕಳ ಜೊತೆ ಪರಿಣಾಮಕಾರಿಯಾಗಿ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಸಂವಹನೆ ಮಾಡಲು ಸಾಧ್ಯವಾಗದೆ ಈ ಮಕ್ಕಳು ನಿಧಾನವಾಗಿ ಸಮಾಜದ ಮುಖ್ಯವಾಹಿನಿಯಿಂದ ಬೇರೆಯಾಗುತ್ತಾರೆ.ಸಂಕೀರ್ಣ ಕಾಯಿಲೆಯಾಗಿದ್ದು ಬಹಳಷ್ಟು ಜಾಗರೂಕತೆಯಿಂದ ಇಂತಹ ಮಕ್ಕಳನ್ನು ಪೋಸಿಸಬೇಕು. ಮಗು ಹುಟ್ಟಿ 9 ತಿಂಗಳು ಕಳೆದರೂ ಮಗು ನಗುತ್ತಿಲ್ಲ, ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಾದರೆ ಇದು ಆಟಿಸಂ ರೋಗದ ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ. ಈ ಲಕ್ಷಣಗಳು ಕಂಡ ಕೂಡಲೇ ವೈದ್ಯರ ಬಳಿ ಸಂದರ್ಶನ ಅತೀ ಅಗತ್ಯ.

ಹೆಚ್ಚಾಗಿ 2 ವರ್ಷದ ಬಳಿಕ ಈ ರೋಗದ ಲಕ್ಷಣಗಳು ಗೋಚರವಾಗುತ್ತದೆ. ತಕ್ಷಣವೇ ಇಂತಹ ಮಕ್ಕಳನ್ನು ಆಟಿಸಂ ತರಬೇತಿಗಳಿಗೆ ಕೇಂದ್ರಗಳಿಗೆ ಸೇರಿಸಿ ಮಕ್ಕಳಿಗೆ ಚಿಕಿತ್ಸೆ ನೀಡಬೇಕು. ಮಕ್ಕಳು ದೊಡ್ಡವರಾದ ಬಳಿಕ ಚಿಕಿತ್ಸೆ ಕಷ್ಟವಾಗಬಹುದು. ಆರಂಭಿಕ ಹಂತದಲ್ಲಿಯೇ ಗುರುತಿಸಿ, ಸರಿಯಾಗಿ ಚಿಕಿತ್ಸೆ ನೀಡಿದರೆ ಇತರ ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯಲು ಸಾಧ್ಯವಾಗಬಹುದು. ಮಗುವಿನ ವಯಸ್ಸು ಹೆಚ್ಚಾಗುತ್ತಿದ್ದಂತೆಯೇ ಅವರಲ್ಲಿ ಕಲಿಯುವ ಆಸ್ತಕಿ, ಶ್ರದ್ಧೆ ಕಡಿಮೆಯಾಗುತ್ತಾ ಹೋಗುತ್ತದೆ. ಮತ್ತು ಅಂತಹ ಮಕ್ಕಳನ್ನು ಪುನಃ ಮುಖ್ಯವಾಹಿನಿಗೆ ತರಲು ಕಷ್ಟವಾಗಬಹುದು.

1. ಮಕ್ಕಳು ಯಾವುದೇ ರೀತಿಯ ಭಾವನಾತ್ಮಕ ಪ್ರತಿಕ್ರಿಯೆ ನೀಡುವುದೇ ಇಲ್ಲ.ಸಾಮಾನ್ಯವಾಗಿ ಮಕ್ಕಳು, ತಾಯಿ ಹಾಗೂ ಇತರರ ಮುಖ ನೋಡಿ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ಈ ಸ್ವಲೀನತೆಯಿಂದ ಬಳಲುವ  ಇವರಿಗೆ ನಮ್ಮ ಮಾತು ಕೇಳಿಸಿದರೂ ಯಾವುದೇ ರೀತಿ ಪ್ರತಿಕ್ರಿಯಿಸುವುದಿಲ್ಲ. ಬೇರೆ ಮಕ್ಕಳ ಜೊತೆ ಬೆರೆಯುವುದಿಲ್ಲ. ಒಬ್ಬಂಟಿಯಾಗಿ, ಏಕಾಂಗಿಯಾಗಿ ಇರಲು ಬಯಸುವ ಈ ಮಕ್ಕಳು ಒಂದೇ ವಸ್ತುವಿನ ಮೇಲೆ ಲಕ್ಷ್ಯ ಇಟ್ಟಿರುತ್ತಾರೆ. ಇಂತಹ ಮಕ್ಕಳ ಚಿಂತನೆ ಅಭಿವೃದ್ಧಿಯಾಗದೆ ಅವರ ಯೋಚನೆಗಳು ನಿಂತ ನೀರಿನಂತಾಗಿ, ಸೃಜನಶೀಲರಾಗುವುದೇ ಇಲ್ಲ.

2. ಪದೇ ಪದೇ ಮಾಡಿದ ಕೆಲಸವನ್ನೇ ಮಾಡುತ್ತಿರುತ್ತಾರೆ. ಒಂದೇ ಹಾಡನ್ನು ನೂರಾರು ಬಾರಿ ಗುನುಗುನಿಸುತ್ತಲೇ ಇರುತ್ತಾರೆ. ಯಾವುದೇ ಕೆಲಸವನ್ನು ಏಕಾಗ್ರತೆಯಿಂದ ಮಾಡಲು ಸಾದ್ಯವಾಗದೇ ಪದೇ ಪದೇ ಅದೇ ಕೆಲಸವನ್ನು ಮಾಡುತ್ತಾರೆ. ಇದು ಅವರ ದೈನಂದಿನ ಜೀವನ ಕ್ರಿಯೆಗಳಿಗೂ ಅಡ್ಡಿಯಾಗುತ್ತದೆ. ಯಾವುದಾದರೊಂದು ಆಟ ಅಥವಾ ತಿಂಡಿ ಇಷ್ಟವಾದರೆ ಅದನ್ನೇ ಪುನಃ ಪುನಃ ಬಯಸುತ್ತಾರೆ.

3. ಸ್ವಲೀನತೆ ಇರುವ ಮಕ್ಕಳಲ್ಲಿ ಗ್ರಹಣಶಕ್ತಿ ಬಹಳ ಕಡಮೆ ಇರತ್ತದೆ. ಪ್ರಶ್ನೆ ಕೇಳಿ ಅರ್ಧ ಘಂಟೆ ಕಳೆದ ಬಳಿಕ ಮರುತ್ತರ ನೀಡುತ್ತಾರೆ. ಯಾವುದೇ ವಾಕ್ಯವನ್ನು ಪರಿಪೂರ್ಣ ಮಾಡುವುದೇ ಇಲ್ಲ. ವಾಕ್ಯವನ್ನು ಅರ್ಧಕ್ಕೆ ಹಠಾತ್ ಆಗಿ ನಿಲ್ಲಿಸುತ್ತಾರೆ. ಮತ್ತು ಅರ್ಥವಾಗದ ರೀತಿಯಲ್ಲಿ ಎರಡೆರಡು ಶಬ್ದಗಳ ನಡುವೆ ಬಹಳ ಅಂತರ ನೀಡಿ ಮಾತನಾಡುತ್ತಾರೆ. ಯಾವುದೇ ಕೆಲಸವನ್ನು ಸರಿಯಾಗಿ ಮಾಡುವಷ್ಟು ಏಕಾಗ್ರತೆ ಬರುವುದೇ ಇಲ್ಲ. ತನ್ನ ಪರಿಸರವನ್ನು ಮತ್ತು ರೂಮನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಈ ಮಕ್ಕಳ ದೃಷ್ಟಿ ಸಂಪರ್ಕ ಬಹಳ ಕಳಪೆಯಾಗಿರುತ್ತದೆ. ಮುಖಕ್ಕೆ ಮುಖ ಮಾಡಿ ಪ್ರತಿಕ್ರಿಯಿಸುವುದೇ ಇಲ್ಲ.

4. ಮನಸ್ಸಿನ ಭಾವನೆಗಳನ್ನು ಮುಖದಲ್ಲಿ ಹಾವಭಾವಗಳಿಂದ ತೋರಿಸಲು ಸಾಧ್ಯವಾಗುವುದಿಲ್ಲ. ಸ್ವಲೀನತೆ ಇರುವ ಮಕ್ಕಳು ಅವರ ಮಾತಿನ ದಾಟಿ, ಮುಖದ ಭಾವನೆಗಳು, ಹಾವಭಾವಗಳು ಕಣ್ಣಿನ ನೋಟ ಎಲ್ಲವೂ ಒಂದಕ್ಕೊಂದು ತಾಳೆಯಾಗುವುದೇ ಇಲ್ಲ.

5. ಸ್ವಲೀನತೆ ಇರುವ ಮಕ್ಕಳು ಇತರ ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಾರದು. ತನ್ನ ಭಾವನೆಗಳನ್ನು ಕೆಲವೊಮ್ಮೆ ಅರ್ಥೈಸಿಕೊಳ್ಳಲು ಈ ಮಕ್ಕಳಿಗೆ ಕಷ್ಟವಾಗದು.

6. ಪದೇ ಪದೇ ದೇಹದ ಭಾಗಗಳನ್ನು ಅಲ್ಲಾಡಿಸುವುದು, ಹಿಂದೆ ಮುಂದೆ ಹೋಗುವುದು, ಕುಳಿತಲೇ ತಿರುಗುವುದು ಮುಂತಾದ ಕ್ರಿಯೆಗಳನ್ನು ಮಾಡುತ್ತಾರೆ.

7.ಬೆಳಕಿನ ಮೂಲದ ಕಡೆಗೆ ದಿಟ್ಟಿಸಿ ನೋಡುವುದು, ತಿರುಗುವ ವಸ್ತುಗಳನ್ನು ನೋಡುವುದು, ಕೆಲವೊಂದು ವಿಷಯಗಳ ಬಗ್ಗೆ ವಿಪರೀತ ಆಸಕ್ತಿ ಅಥವಾ ನಿರಾಶಕ್ತಿ ತೋರಿಸಬಹುದು.

ಕಾಳಜಿ, ಪ್ರೀತಿ ಮತ್ತು ಮಮತೆಯಿಂದ ಕಾಣಬೇಕು:

ಆಟಿಸಂ ಇರುವ ಮಕ್ಕಳನ್ನು ವಿಶೇಷ ಕಾಳಜಿ, ಪ್ರೀತಿ ಮತ್ತು ಮಮತೆಯಿಂದ ಕಾಣಬೇಕು. ಆರಂಭಿಕ ಹಂತದಲ್ಲಿಯೇ ಗುರುತಿಸಿ, ಮಗುವಿನ ವರ್ತನೆ, ವಿಧ್ಯಾಭ್ಯಾಸ ಮತ್ತು ಕುಟುಂಬ ಇವೆಲ್ಲವನ್ನು ಗಣನೆಗೆ ತೆಗೆದುಕೊಂಡು ಪರಿಪೂರ್ಣ ಚಿಕಿತ್ಸೆ ನೀಡಬೇಕು. ಮಾತು ಕಲಿಕೆಗೆ ವಿಶೇಷವಾದ ತರಬೇತಿ ಅವಶ್ಯಕ. ತೀವ್ರತರವಾದ ಸ್ವಲೀನತೆಯಿಂದ ಬಳಲುವ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಕಷ್ಟವಾಗಬಹುದು. ಆದರೆ ಸಣ್ಣ ಪ್ರಮಾಣದ ಸ್ವಲೀನತೆಯನ್ನು ಆರಂಭಿಕ ಹಂತದಲ್ಲಿ ಗುರುತಿಸಿದ್ದಲ್ಲಿ ಅಂತಹ ಮಕ್ಕಳನ್ನು ಸಹಜ ಮಕ್ಕಳಂತೆ ಮಾಡಲು ಸಾಧ್ಯವಾಗಬಹುದು.

ತಮ್ಮ ಮಕ್ಕಳಿಗೆ ಆಟಿಸಂ ಇದೆ ಎಂದು ತಿಳಿದಾಗ ಹೆತ್ತವರು ಅಂತಹ ಮಕ್ಕಳಿಗೆ ವಿಶೇಷ ಪ್ರೀತಿ ವಾತ್ಸಲ್ಯ ಮತ್ತು ಕಾಳಜಿ ವಹಿಸಬೇಕು. ಅಕ್ಕರೆಯಿಂದ ಪಾಲನೆ ಮಾಡಬೇಕು. ಅದು ಬಿಟ್ಟು ಅಂತಹ ಮಕ್ಕಳನ್ನು ಭಿನ್ನ್ನಚೇತನ ಶಾಲೆಗೆ ಸೇರಿಸಿ, ತಂದೆತಾಯಂದಿರು ಹಾಯಾಗಿರುವುದು ಅಪಾಯಕಾರಿ. ಸಮಾಜ ಅಥವಾ ಕುಟುಂಬದಲ್ಲಿ ಯಾರು ಅಂತಹ ಮಕ್ಕಳನ್ನು ನಿರ್ಲಕ್ಷ್ಯಿಸಲೇಬಾರದು. ಇತರ ಮಕ್ಕಳಂತೆ, ಬಹಳ ಮುತುವರ್ಜಿವಹಿಸಿ ಅಕ್ಕರೆಯಿಂದ ಪೋಷಿಸಬೇಕು. ಅವರಲ್ಲಿ ಇರುವ ಪ್ರತಿಭೆಯನ್ನು ಹೊರಹಾಕಲು ಪೂರಕವಾದ ವಾತಾವರಣ ಕಲ್ಪಸಿಕೊಡಬೇಕು. ಸಂವಹನ ಕೊರತೆ ಇರುವಂತಹ ಮಕ್ಕಳಿಗೆ ವಿಶೇಷ ಶಿಕ್ಷಣ ಮತ್ತು ತರಬೇತಿ ನೀಡಿ ಅವರ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಬೇಕು.

ಯಾವ ಕಾರಣಕ್ಕೂ ಅಂತಹ ಮಕ್ಕಳನ್ನು ದೂಷಿಸಬಾರದು. ಇತರ ಮಕ್ಕಳ ಜೊತೆ ಹೋಲಿಸಬಾರದು. ಎಲ್ಲರ ಎದುರು ಅವರನ್ನು ಬಡಿದು ಬೈದು ಹೀಯಾಳಿಸಬಾರದು. ನಿರಂತರವಾಗಿ ಅಂತಹ ಮಕ್ಕಳಿಗೆ ಪ್ರೀತಿ ವಿಶ್ವಾಸ ಮಮತೆ ವಾತ್ಸಲ್ಯವನ್ನು ಸಮಾಜಕ್ಕೆ ಮತ್ತು ಹೆತ್ತವರು ಧಾರೆಯೆರೆಯಬೇಕು. ಹಾಗಾದಲ್ಲಿ ಮಾತ್ರ ಈ ಸ್ವಲೀನತೆ ಇರುವ ಮಕ್ಕಳು ಇತರ ಮಕ್ಕಳಂತಾಗಿ ಸಮಾಜಕ್ಕೆ ಆಸ್ತಿಯಾಗಲೂಬಹುದು. ಇಲ್ಲವಾದ್ಲಲ್ಲಿ ಅಂತಹ ಮಕ್ಕಳು ಸಮಾಜದ ಹೊರೆಯಾಗುವ ಎಲ್ಲ ಸಾಧ್ಯತೆಗಳು ಇದೆ. ಈ ನಿಟ್ಟಿನಲ್ಲಿ ಹೆತ್ತವರು ಮತ್ತು ಸಮಾಜ ಈ ಆಟಿಸಂ ಇರುವ ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಯಿಸಬೇಕು.

Dr.-Murali-Mohana-Chuntaru. ಡಾ| ಮುರಲೀ ಮೋಹನ್ ಚೂಂತಾರು ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323 ದೂ.: 04998-273544, 235111  ಮೊ.: 9845135787 www.surakshadental.com

ಡಾ| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ,
ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787

www.surakshadental.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!