Vydyaloka

ಆರೋಗ್ಯ ವಿಷನ್ ವರದಿ ಬಿಡುಗಡೆ – ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ

ಆರೋಗ್ಯ  ವಿಷನ್ ವರದಿ ದೇಶದಲ್ಲೇ ಮೊದಲ ಬಾರಿಗೆ ತಯಾರಾಗಿದೆ. ದೂರದೃಷ್ಟಿಯನ್ನೊಳಗೊಂಡ ವಿಷನ್ ವರದಿ ಇದಾಗಿದ್ದು ವರದಿಯನ್ನು ಮುಖ್ಯಮಂತ್ರಿಗಳೇ ಬಿಡುಗಡೆ ಮಾಡಲಿದ್ದಾರೆ. ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ, ಮೂಡಿಸಬೇಕಿದೆ.

ಬೆಂಗಳೂರು: ಬದುಕಿರುವಾಗ ರಕ್ತದಾನ ಮಾಡುವಂತೆಯೇ ಮೃತರಾದ ಬಳಿಕ ಅಂಗಾಂಗ ದಾನ ಮಾಡುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸ್ಪರ್ಶ್ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಬಳಿಕ ಮಾತನಾಡಿದ ಸಚಿವರು, ದೇಶದಲ್ಲಿ ಸುಮಾರು 2 ಲಕ್ಷ ಅಂಗಾಂಗ ಕಸಿಗೆ ಬೇಡಿಕೆ ಇದೆ. ಆದರೆ ಇದರಲ್ಲಿ ಶೇ.4 ರಷ್ಟು ಅಂಗಾಂಗ ದೊರೆಯುತ್ತಿದೆ. ಇದರಿಂದಾಗಿ ಅನೇಕರಿಗೆ ಅಂಗಾಂಗಗಳು ದೊರೆಯದೆ ನಿಧನ ಹೊಂದುತ್ತಿದ್ದಾರೆ. ವ್ಯಕ್ತಿ ಮರಣ ಹೊಂದಿದ ಬಳಿಕ ಅಂಗಾಂಗಗಳ ಮೂಲಕ ಎಂಟು ಜನರ ಜೀವ ಉಳಿಸಲು ಸಾಧ್ಯವಿದೆ. ಆದರೆ ಅನೇಕ ತಪ್ಪು ತಿಳಿವಳಿಕೆಯಿಂದ ಅಂಗಾಂಗ ದಾನ ಕಡಿಮೆಯಾಗಿದೆ. ಬದುಕಿರುವಾಗ ರಕ್ತದಾನ ಮಾಡುವಂತೆಯೇ ಸತ್ತ ನಂತರ ಅಂಗಾಂಗ ದಾನ ಮಾಡುವುದು ಅಗತ್ಯ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಜನ್ ಗಳಿಗೂ ಅಂಗಾಂಗ ಕಸಿ ಬಗ್ಗೆ ತರಬೇತಿ ನೀಡುವ ಬಗ್ಗೆ ಇಲ್ಲಿನ ತಜ್ಞರಿಗೆ ಕೋರಲಾಗಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಬಡ ಕುಟುಂಬಗಳ ವ್ಯಕ್ತಿಗಳಿಗೆ ಅಗತ್ಯವಿರುವವರಿಗೆ ಆಧುನಿಕ ತಂತ್ರಜ್ಞಾನ ಬಳಸಿ ಅಂಗಾಂಗ ಕಸಿ ಮಾಡಲು ಕ್ರಮ ವಹಿಸಲಾಗುವುದು ಎಂದರು.

ನಿಮ್ಹಾನ್ಸ್ ನಲ್ಲಿ ಮೆದುಳು ಸತ್ತ ಪ್ರಕರಣಗಳು ಹೆಚ್ಚಾಗಿ ದೊರೆಯುತ್ತವೆ. ಆದ್ದರಿಂದ ಈ ಸಂಸ್ಥೆಯೊಂದಿಗೆ ಅಂಗಾಂಗ ಕಸಿಗಾಗಿ ಟೈ ಅಪ್ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ. ನಾಲ್ಕು ಹಳೆ ಮೆಡಿಕಲ್ ಕಾಲೇಜುಗಳಲ್ಲಿ ಅಂಗಾಂಗ ಕಸಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.

ಉತ್ತಮ ಮನೆ ಐಸೋಲೇಶನ್

ಕೇಂದ್ರ ಆರೋಗ್ಯ ಸಚಿವರು ವೀಡಿಯೋ ಸಭೆ ನಡೆಸಿ ಕೋವಿಡ್ ನಿರ್ವಹಣೆ ಕುರಿತು ಮಾಹಿತಿ ಪಡೆದಿದ್ದಾರೆ. ಮನೆ ಐಸೋಲೇಶನ್ ನಲ್ಲಿರುವವರ ಮೇಲೆ ಹೆಚ್ಚು ನಿಗಾ, ಇ-ಸಂಜೀವಿನಿಯಲ್ಲಿ ಎರಡನೇ ಸ್ಥಾನದಲ್ಲಿರುವುದು, ಅದಕ್ಕೂ ಹೆಚ್ಚಾಗಿ ಆಪ್ತಮಿತ್ರ ಮೂಲಕ ಟೆಲಿ ಟ್ರಯಾಜಿಂಗ್ ಮೊದಲಾದ ಮಾಹಿತಿಗಳನ್ನು ಅವರು ಪಡೆದಿದ್ದಾರೆ. ಬಹಳ ಯಶಸ್ವಿಯಾಗಿ ದೂರವಾಣಿ ಮೂಲಕ ನಿರ್ವಹಣೆ ಮಾಡುತ್ತಿರುವುದು ವಿಶೇಷವಾಗಿದೆ. ಶೇ.95 ರಷ್ಟು ಸೋಂಕಿತರು ಮನೆಯಲ್ಲಿದ್ದರೂ ಆತಂಕವಿಲ್ಲ. ಶೇ.4 ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.

ರಾಜ್ಯದಲ್ಲಿ ಮರಣ ಪ್ರಮಾಣ 0.005% ಮಾತ್ರ ಇದೆ. ಇದು ಅಧಿಕವಾಗಿಲ್ಲ. ಸಹ ಅಸ್ವಸ್ಥತೆ ಸೇರಿದಂತೆ ಸಾವಿಗೆ ಹಲವು ಕಾರಣಗಳಿವೆ. ಇದಕ್ಕಾಗಿ ಡೆತ್ ಆಡಿಟ್ ನಡೆಸಲಾಗುತ್ತಿದೆ. ಆರೋಗ್ಯ ಕ್ಷೇತ್ರದ ವಿಷನ್ ವರದಿಯನ್ನು ಮುಖ್ಯಮಂತ್ರಿಗಳೇ ಬಿಡುಗಡೆ* ಮಾಡಲಿದ್ದಾರೆ. ದೂರದೃಷ್ಟಿಯನ್ನೊಳಗೊಂಡ ವಿಷನ್ ವರದಿ ಇದಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಈ ರೀತಿ ವರದಿ ತಯಾರಾಗಿದೆ. ಸುಮಾರು 750 ತಜ್ಞರು ಇದರ ರಚನೆಯಲ್ಲಿ ಭಾಗಿಯಾಗಿದ್ದಾರೆ ಎಂದರು.

Share this: