ಮಧುಮೇಹ ನಿಯಂತ್ರಿಸುವುದು ಹೇಗೆ?

ಮಧುಮೇಹ ನಿಯಂತ್ರಿಸುವುದು ಅತೀ ಅವಶ್ಯಕ. ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಮಾರ್ಪಾಡು ಮಾಡಿ, ದೈಹಿಕ ಕಸರತ್ತಿನ ಮುಖಾಂತರ ಮಧುಮೇಹ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.

ಮಧುಮೇಹ ನಿಯಂತ್ರಿಸುವುದು ಹೇಗೆ?

ಮಧುಮೇಹ ಎನ್ನುವ ರೋಗ, ತಡೆಗಟ್ಟಬಹುದಾದ ಮತ್ತು ಚಿಕಿತ್ಸೆಯಿಂದ ಗುಣಪಡಿಸಬಹುದಾದ ಸಾಂಕ್ರಾಮಿಕವಲ್ಲದ ರೋಗವಾಗಿದ್ದು ದಿನೇ ದಿನೇ ಈ ರೋಗಗಳ ಸಂಖ್ಯೆ ಹೆಚ್ಚುತ್ತಿದೆ. ವಿಶ್ವ ಸಂಸ್ಥೆಯ ಅಂದಾಜಿನ ಪ್ರಕಾರ ಸುಮಾರು 350 ಮಿಲಿಯನ್ ಮಂದಿ ಈ ರೋಗದಿಂದ ಬಳಲುತ್ತಿದ್ದು ಸುಮಾರು 1.5 ಮಿಲಿಯನ್ ಮಂದಿ ಮಧುಮೇಹದಿಂದಲೇ ಸಾವನ್ನಪ್ಪುತ್ತಿದ್ದಾರೆ. 2025ರ ಹೊತ್ತಿಗೆ ಜಾಗತಿಕವಾಗಿ 500 ಮಿಲಿಯನ್ ಮಂದಿ ಮಧುಮೇಹ ರೋಗದಿಂದ ಬಳಲಬಹುದು ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಮಧುಮೇಹ ರೋಗವನ್ನು ತಡೆಗಟ್ಟುವುದು, ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುವುದು ಮತ್ತು ರೋಗದಿಂದ ಉಂಟಾಗುವ ಪ್ರಾಣ ಹಾನಿಯನ್ನು ತಪ್ಪಿಸುವುದರ ಬಗ್ಗೆ ಹೆಚ್ಚಿನ ಒತ್ತು ನೀಡಿ ರೋಗ ನಿಯಂತ್ರಣಕ್ಕೆ ಹೊಸ ರೂಪರೇಷೆಯನ್ನು ನೀಡಲಾಗಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಮಾರ್ಪಾಡು ಮಾಡಿ, ದೈಹಿಕ ಕಸರತ್ತಿನ ಮುಖಾಂತರ ಮಧುಮೇಹ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.

ಸಕ್ಕರೆ ಖಾಯಿಲೆ ಅಥವಾ ಮಧುಮೇಹ ರೋಗ ಎನ್ನುವುದು ಬಹಳ ಪುರಾತನವಾದ ಖಾಯಿಲೆ. ಪ್ರಾಚೀನ ಈಜಿಪ್ಟ್ ತಾಡಪತ್ರೆಗಳಲ್ಲಿ “ಅತಿಯಾದ ಮೂತ್ರ ವಿಸರ್ಜಿಸುವ ರೋಗ” ಎಂದು ನಮೂದಿಸಲಾಗಿದೆ. ಪ್ರಾಚೀನ ಭಾರತೀಯ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲಿಯೂ ಈ ರೋಗದ ಸ್ಥಿತಿಯನ್ನು ಮಧುಮೇಹರೋಗ ಮತ್ತು ಸಿಹಿಮೂತ್ರ ರೋಗ ಎಂದು ಉತ್ತೇಜಿಸಲಾಗಿದೆ. ಇರುವೆಗಳನ್ನು ಆಕರ್ಷಿಸುವ ಮೂತ್ರ- ಡಯಾಬಿಟಿಸ್ ಎಂಬ ಶಬ್ದವನ್ನು ಕ್ರಿ.ಶ. 2ನೇ ಶತಮಾನದಲ್ಲಿ ಗ್ರಿಸ್‍ನ ಅರಿಯೇಟಸ್ ಎಂಬ ವೈದ್ಯ ನೀಡಿದನು. ಕ್ರಿ.ಶ. 1600ರಲ್ಲಿ ಥೋಮಸ್ ವಿಲ್ಸನ್ ಎಂಬಾತ ಡಯಾಬಿಟಿಸ್ ಇನ್‍ಸಿಪಿಡಸ್ (ಅತಿಯಾದ ಮೂತ್ರ) ಮತ್ತು ಡಯಾಬಿಟಿಸ್ ಮೆಲಿಟಸ್ (ಸಿಹಿಮೂತ್ರ) ಎಂದು ಎರಡು ಪ್ರತ್ಯೇಕ ರೋಗಗಳೆಂದು ಹೇಳಿದನು. ಒಟ್ಟಿನಲ್ಲಿ ಮಧುಮೇಹ, ಸಿಹಿಮೂತ್ರ, ಸಕ್ಕರೆ ಖಾಯಿಲೆ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ರೋಗ ಆಧುನಿಕ ಜಗತ್ತಿಗೆ ಈ ಶತಮಾನದ ಕೊಡುಗೆ ಎಂದರೂ ತಪ್ಪಲ್ಲ.

ಭಾರತ ದೇಶಕ್ಕೂ ಮಧುಮೇಹ ರೋಗಕ್ಕೂ ಬಹಳ ನೆಂಟಸ್ತಿಕೆ ಇದೆ.ಮಧುಮೇಹ ಜಗತ್ತಿನ ರಾಜಧಾನಿ  ಭಾರತ. ಸಧ್ಯಕ್ಕೆ ಜಗತ್ತಿನ ಮಧುಮೇಹ ರೋಗಿಗಳಲ್ಲಿ ಬಾರತೀಯರ ಪಾಲು ಶೇಕಡಾ 20ರಿಂದ 25. ಸರಿಸುಮಾರು 6ರಿಂದ 8 ಕೋಟಿ ಭಾರತೀಯರು ಮಧುಮೇಹಿಗಳು ಎಂಬುದು ಗಮನಾರ್ಹ ಅಂಶ. ಈ 6ರಿಂದ ಕೋಟಿಯಲ್ಲಿ ಹೆಚ್ಚಿನವರು ಯುವಕರು ಎನ್ನುವುದು ಕೂಡಾ ಇನ್ನೊಂದು ಕಳವಳಕಾರಿ ಅಂಶ (ಸುಮಾರು 50 ಶೇಕಡಾ ಯುವಜನತೆ ಬಿಸಿರಕ್ತದ ಜೊತೆಗೆ ಸಿಹಿರಕ್ತವನ್ನು ಹೊಂದಿರುವುದು ಬಹಳ ಅವಮಾನಕರವಾದ ಬೆಳವಣಿಗೆ.) ಇದರಿಂದಾಗಿ ಮಧುಮೇಹದ ಜೊತೆಗೆ ಹೃದ್ರೋಗ, ಅಧಿಕ ರಕ್ತದೊತ್ತಡ, ಲಕ್ವ, ಅಂಧತ್ವ, ಲೈಂಗಿಕ ಸಾಮಾಥ್ರ್ಯ ಕ್ಷೀಣೀಸುವುದು ಎಲ್ಲಾ ಉಚಿತವಾಗಿಯೇ ಸಿಗುತ್ತದೆ.  ವಯಸ್ಸಾದಂತೆ ಈ ರೋಗಗಳಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗುತ್ತದೆ. 65 ವರ್ಷ ದಾಟಿದ ಬಳಿಕ ಈ ಸಾಧ್ಯತೆ ಮೂರು ಪಟ್ಟು ಜಾಸ್ತಿ ಹೆಚ್ಚಾಗುತ್ತದೆ ಎಂದು ಅಂಕಿ ಅಂಶಗಳು ಹೇಳುತ್ತದೆ.

ಈ ಮಧುಮೇಹಿಗಳಲ್ಲಿ ಶೇಕಡಾ 75ರಷ್ಟು ನಗರ ವಾಸಿಗಳು ಮತ್ತು 25ರಷ್ಟು ಗ್ರಾಮೀಣ ವಾಸಿಗಳು. ನಗರವಾಸಿಗಳಲ್ಲಿ ಶೇಕಡಾ 50ರಷ್ಟು ಮಂದಿ 40 ವರ್ಷಗಳಿಗಿಂತ ಕೆಳಗಿನವರು ಇದ್ದು, ನಮ್ಮ ನಗರವಾಸಿಗಳ ಬದಲಾಗುತ್ತಿರುವ ಜೀವನಶೈಲಿ, ಆಹಾರಪದ್ಧತಿ ಮತ್ತು ಕೆಲಸದ ಒತ್ತಡ ಇತ್ಯಾದಿಗಳಿಗೆ ಹಿಡಿದ ಕನ್ನಡಿ ಎಂದರೂ ತಪ್ಪಲ್ಲ. ಇದಲ್ಲದೆ ನಮ್ಮ ದೇಶದ ಮಧುಮೇಹ ಪೀಡಿತರಲ್ಲಿ ಶೇಕಡಾ 75 ಮಂದಿಗೆ ತಾವು ಮಧುಮೇಹ ರೋಗಿಗಳು ಎಂಬುದರ ಅರಿವೂ ಇರುವುದಿಲ್ಲ. ಇದೇ ಕಾರಣಕ್ಕಾಗಿಯೇ ಮಧುಮೇಹ ರೋಗ ಉಲ್ಭಣಿಸಿ ಇತರ ಖಾಯಿಲೆಗಳಿಗೆ ಕಾರಣವಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ರೋಗವನ್ನು ಹತೋಟಿಯಲ್ಲಿರಿಸಿ, ಇನ್ನಿತರ ಅಂಗಾಂಶಗಳಿಗಾಗುವ ತೊಂದರೆಯನ್ನು ತಪ್ಪಿಸಿ, ಮಧುಮೇಹಿಗಳು ಇತರರಂತೆ ಸುಖವಾಗಿ ಬಾಳಬಹುದು.

ಯಾರಿಗೆ ಮಧುಮೇಹ ಬರಬಹುದು ?

ಹೆಚ್ಚಾಗಿ ಅನುವಂಶೀಯವಾಗಿ ಬರುವ ಮಧುಮೇಹ ಸಾಮಾನ್ಯವಾಗಿ 40 ವರ್ಷ ದಾಟಿದ ಮೇಲೆ ಬರುತ್ತಿತ್ತು. ಆದರೆ ಈಗೀಗ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಸಣ್ಣ ಮಕ್ಕಳು ಮತ್ತು ಯುವಜನತೆಯು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ನಾಗರೀಕತೆಯ ನೆಪದಲ್ಲಿ ಮತ್ತು ಸಂಸ್ಕತಿಯ ಸೋಗಿನಲ್ಲಿ ನಾವೆಲ್ಲಾ ನೈಸರ್ಗಿಕ ಆಹಾರದಿಂದ ಕೃತಕ ಸಂಸ್ಕರಿತ ಆಹಾರಕ್ಕೆ ಮಾರು ಹೋಗಿದ್ದೇವೆ. ಚಟುವಟಿಕೆಯ ಜೀವನದಿಂದ ಆಲಸ್ಯದ ಬದುಕಿಗೆ ಹೊಂದಿಹೋಗಿದ್ದೇವೆ. ಈ ವ್ಯತಿರಿಕ್ತ ಬದಲಾವಣೆಗಳ ಬಲುವಳಿಯಾಗಿ ನಮಗೆ ದೊರಕಿರುವ ಆನೇಕ ಕಾಯಿಲೆಗಳಲ್ಲಿ ಅಗ್ರಸ್ಥಾನ ಮಧುಮೇಹರೋಗಕ್ಕೆ ಸಲ್ಲುತ್ತದೆ.

ಅನುವಂಶೀಯ ಕಾರಣಗಳು, ವಿಪರೀತ ಬೊಜ್ಜು, ಆಲಸ್ಯ ಮತ್ತು ಸೋಮಾರಿ ಜೀವನ, ಅತಿಯಾಗಿ ಸಂಸ್ಕರಿತ ಕೃತಕ ಆಹಾರ ಸೇವನೆ, ಮಧ್ಯಪಾನ, ಮಾನಸಿಕ ಒತ್ತಡ, ವೇದನೆ, ಮೇಧೂಜಿರಕ ಗ್ರಂಥಿಯ ಸೋಂಕು ಮುಂತಾದವುಗಳಿಂದ ಮಧುಮೇಹ ಬರುವ ಸಾಧ್ಯತೆ ಇದೆ. ನಗರೀಕರಣ, ಕೈಗಾರೀಕರಣ, ಪರಿಸರ ಮಾಲಿನ್ಯ, ಬದಲಾದ ಜೀವನ ಶೈಲಿ, ಆಹಾರ ಶೈಲಿ ಮತ್ತು ಪದ್ಧತಿ, ಒತ್ತಡದ ಬದುಕು ಇವೆಲ್ಲವೂ ಮೆಳೈಸಿ ನಮ್ಮ ಸುಸಂಸ್ಕತ ಸಮಾಜ ಆಧುನಿಕತೆಯ ನೆಪದಲ್ಲಿ ರತ್ನಕಂಬಳಿ ಹಾಸಿ ಮಧು ಮೇಹ ರೋಗವನ್ನು ಆಹ್ವಾನಿಸುತ್ತದೆ. ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ರೋಗ ಈಗೀಗ ಹಳ್ಳಿಗಳಿಗೂ ತನ್ನ ಕದಂಬ ಬಾಹುಗಳನ್ನು ವಿಸ್ತರಿಸುತ್ತದೆ.

ಸಿರಿವಂತರ ಕಾಯಿಲೆ (ಕೂತುಣ್ಣುವವರ ಕಾಯಿಲೆ) ಎಂಬ ಹೆಗ್ಗಳಿಕೆ ಹೊಂದಿದ ಮಧುಮೇಹ, ಈಗೀಗ ಬಡವರಲ್ಲೂ ಕಾಣಿಸಿಕೊಂಡು ತಮ್ಮ ಶ್ರೀಮಂತಿಕೆ ಮತ್ತು ಪ್ರತಿಷ್ಠೆಯನ್ನು ಕಳಕೊಂಡು ಬಿಟ್ಟಿದೆ. ತಂದೆತಾಯಂದಿರಿಗೆ ಮಧುಮೇಹವಿದ್ದಲ್ಲಿ ಶೇಕಡಾ 90ರಷ್ಟು ಮಕ್ಕಳಿಗೂ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಬ್ಬ ಪೋಷಕ ಮಧುಮೇಹಿ ಮತ್ತೊಬ್ಬ ಪೋಷಕ ಮಧುಮೇಹಿ ಕುಟುಂಬದಿಂದ ಬಂದಿದ್ದಲ್ಲಿ ಮಕ್ಕಳಿಗೆ ಮಧು ಮೇಹ ಬರುವ ಸಾಧ್ಯತೆ ಶೇಕಡಾ 60ರಿಂದ 70. ಯಾರಾದರೊಬ್ಬರು ಪೋಷಕರು ಮಧುಮೇಹಿಗಳಾಗಿದ್ದಲ್ಲಿ ಜನಿಸುವ ಮಕ್ಕಳಿಗೆ ಮಧುಮೇಹ ಬರುವ ಸಾಧ್ಯತೆ ಶೇಕಡಾ 50% ತಂದೆ ತಾಯಂದಿರಿಗೆ ಮಧುಮೇಹವಿಲ್ಲದಿದ್ದರೂ ರಕ್ತ ಸಂಬಂಧಿಗಳಿಗೆ ಮಧುಮೇಹದ್ದಲ್ಲಿ, ಮಧುಮೇಹ ರಹಿತ ದಂಪತಿಗಳಿಗೆ ಜನಿಸುವ ಮಕ್ಕಳಿಗೆ ಮಧುಮೇಹ ಉಂಟಾಗುವ ಸಾಧ್ಯತೆ ಶೇಕಡಾ 25%.

ಈ ಕಾರಣಗಳಿಂದ ಮಧು ಮೇಹ ಪರೀಕ್ಷೆ ಮಾಡುವಾಗ ತಂದೆ ತಾಯಂದಿರ ಜೊತೆಗೆ ರಕ್ತ ಸಂಬಂಧಿಗಳನ್ನೂ ಪರಿಗಣಿಸಬೇಕಾಗುತ್ತದೆ. ಯಾವುದೇ ವಯಸ್ಸಿನಲ್ಲಿ ಮಧುಮೇಹ ರೋಗ ಕಾಡಬಹುದು. ಸಾಮಾನ್ಯವಾಗಿ 2 ರೀತಿಯ ಮಧುಮೇಹ ರೋಗವಿದ್ದು ಒಂದನೇ ವಿಧದ ಮಧುಮೇಹ ಇನ್ಸುಲಿನ್ ರಸದೂತದ ವ್ಯತ್ಯಾಸದ ಕಾರಣದಿಂದಾಗಿ ಸಣ್ಣ ಪ್ರಾಯದಲ್ಲಿಯೇ ಬರಬಹುದು. ಇದಕ್ಕೆ ಜೀವಮಾನ ಪರ್ಯಂತ ಇನ್ಸುಲಿನ್ ರಸದೂತದ ಅವಶ್ಯಕತೆ ಇದೆ. ಇನ್ನೊಂದು ಪಂಗಡದವರಿಗೆ ಕೇವಲ ನಿಯಮಿತ ಆಹಾರ, ದೈನಂದಿನ ವ್ಯಾಯಾಮ ಚಟುವಟಿಕೆ ಮತ್ತು ಮಾತ್ರೆಗಳ ಮುಖಾಂತರ ದೇಹದ ಸಕ್ಕರೆಯನ್ನು ಹತೋಟಿಯಲ್ಲಿಡಬಹುದು. ಇದು ಸಾಮಾನ್ಯವಾಗಿ 40 ವಯಸ್ಸು ದಾಟಿದ ಬಳಿಕ ಬರಬಹುದು.

ಮಧುಮೇಹ ರೋಗದ ಚಿಹ್ನೆಗಳು

ಮಧುಮೇಹ ರೋಗದ ಚಿಹ್ನೆಗಳು ವಯಸ್ಸು ಮತ್ತು ಯಾವ ರೀತಿಯ ಮಧುಮೇಹ ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ. ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಮಧುಮೇಹ ರೋಗದ ಚಿಹ್ನೆಗಳು ಭಿನ್ನವಾಗಿರಲೂಬಹುದು. ವಯಸ್ಕರಲ್ಲಿ ಸಾಮಾನ್ಯವಾಗಿ ಅತಿಯಾದ ಮೂತ್ರ ವಿಸರ್ಜನೆ , ಅತಿ ದಾಹ, ಅತಿ ಬಳಲಿಕೆ ಅತಿಯಾದ ಹಸಿವು ಹೆಚ್ಚಾಗಿ ಕಾಣಸಿಗುತ್ತದೆ. ಇದರ ಜೊತೆಗೆ ಅತಿಯಾದ ಬಳಲಿಕೆ ಆಲಸ್ಯ, ಮೈ ಕೈ ನೋವು, ಅಂಗೈ ಮತ್ತು ಅಂಗಾಲುಗಳು ಉರಿಯುವುದು, ಗುಣವಾಗದ ಗಾಯಗಳು, ದೃಷ್ಟಿಮಾಂದ್ಯತೆ, ಯೋನಿಯ ಸೋಂಕು, ಲೈಗಿಂಕ ನಿರಾಸಕ್ತಿ ಇತ್ಯಾದಿ ಕಾಣಬಹುದು. ಮಕ್ಕಳಲ್ಲಿ ಉದರ ನೋವು, ವಾಂತಿ, ಅಶಕ್ತಿ, ಬಳಲಿಕೆ, ಪದೇ ಪದೇ ಮತಿ ತಪ್ಪುವುದು ಮೊಟ್ಟ ಮೊದಲ ರೋಗದ ಚಿಹ್ನೆಗಳಾಗಿರಬಹುದು. ಅನೇಕ ಮಧುಮೇಹಿಗಳಲ್ಲಿ ಏನೂ ತೊಂದರೆ ಇಲ್ಲದೇ, ಆಕಸ್ಮಿಕ ಮೂತ್ರ ಪರೀಕ್ಷೆಯಿಂದ ಪತ್ತೆಯಾಗಬಹುದು.

ಗುಣವಾಗದ ಗಾಯದ ಹುಣ್ಣು, ಬಾಯಿಯ ವಾಸನೆ ಅಥವಾ ಇನ್ನಾವುದೇ ಕಾರಣದಿಂದ ರಕ್ತ ಪರೀಕ್ಷೆ ಮಾಡಿದಾಗ ಮಧುಮೇಹ ರೋಗ ಗೋಚರವಾಗ ಬಹುದು. ಒಟ್ಟಿನಲ್ಲಿ ದೇಹದ ತೂಕ ಜಾಸ್ತಿಯಾದಲ್ಲಿ,ಕುಟುಂಬದಲ್ಲಿ ಅಥವಾ ಹೆತ್ತವರು ಮಧುಮೇಹಿಗಳಾಗಿದ್ದಲ್ಲಿ, ಜೀವನ ಶೈಲಿ ಮುತ್ತು ಆಹಾರ ಪದ್ಧತಿ ಅಸಮರ್ಪಕವಾಗಿದ್ದಲ್ಲಿ, ನಿಮಗೆ ಮಧುಮೇಹ ಬರುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಸಾಕಷ್ಟು ಮುಂಜಾಗರೂಕತೆ ವಹಿಸಿ ಶಿಸ್ತುಬದ್ಧ ಜೀವನ, ದೈಹಿಕ ವ್ಯಾಯಾಮ, ಕ್ರಮಬದ್ಧ ಆಹಾರ, ಒತ್ತಡವಿಲ್ಲದ ಬದುಕು ಮುಂತಾದವುಗಳನ್ನು ರೂಢಿಸಿಕೊಂಡಲ್ಲಿ ಮಧುಮೇಹ ಬಂದರೂ ಎಲ್ಲರಂತೆ  ಸುಖ ಮತ್ತು ನೆಮ್ಮದಿಯ ಜೀವನ ನಡೆಸಬಹುದು.

ಮಧುಮೇಹ ರೋಗದಿಂದಾಗಬಹುದಾದ ತೊಂದರೆಗಳು

ಇತರ ಸಾಮಾನ್ಯ ಮಂದಿಗೆ ಹೋಲಿಸಿದಲ್ಲಿ ಮಧುಮೇಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ತೊಂದರೆಗಳು ಈ ರೀತಿ ಇದೆ.

  1. ಕುರುಡುತನ ಅಥವಾ ಅಂಧತ್ವ ಕಾಣಿಸಿಕೊಳ್ಳುವ ಅಪಾಯ 25ರಷ್ಟು ಜಾಸ್ತಿ.
  2. ಹೃದಯಾಘಾತದ ಅಪಾಯ ಎರಡರಿಂದ ಮೂರು ಪಟ್ಟು ಹೆಚ್ಚು.
  3. ಲಕ್ವ (ಪಕ್ಷಪಾತ) ಹೊಡೆಯುವ ಸಾಧ್ಯತೆ ಸುಮಾರು ಎರಡು ಪಟ್ಟು ಜಾಸ್ತಿ.
  4. ಮೂತ್ರಪಿಂಡಗಳ ವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಸುಮಾರು 15 ಪಟ್ಟು ಜಾಸ್ತಿ.
  5. ಗ್ಯಾಂಗ್ರಿನ್‍ನಿಂದಾಗಿ (ಕಾಲು, ಕೈ ಬೆರಳುಗಳು ಮತ್ತು ಕಾಲ್ಬೆರಳು ಕೊಳೆಯುವಿಕೆ) ಅಂಗಚ್ಚೇದವಾಗುವ ಅಪಾಯ 30ರಿಂದ 35 ಪಟ್ಟು ಜಾಸ್ತಿ.

ನೆನಪಿರಲಿ, ಮಧುಮೇಹದಿಂದಾಗಿ ಜನರು ದಿನ ಬೆಳಗಾಗುವುದರಲ್ಲಿ ಸಾಯುವುದಿಲ್ಲ. ಸರಿಯಾದ ನಿಯಂತ್ರಣವಿಲ್ಲದ ಮಧುಮೇಹದಿಂದಾಗಿ ಕ್ಷಣ ಕ್ಷಣಕ್ಕೂ ಜೀವಕೋಶಗಳಿಗೆ ಹಾನಿಯಾಗಿ ಹೃದಯ, ಕಣ್ಣು, ಮೆದುಳು ಮೂತ್ರಪಿಂಡ, ನರಮಂಡಲ ಹೀಗೆ ಎಲ್ಲವನ್ನು ಆಪೋಶನ ತೆಗೆದುಕೊಂಡು, ನಿಧಾನವಾಗಿ ವ್ಯಕ್ತಿಯ ಎಲ್ಲಾ ಅಂಗಾಂಗಗಳನ್ನು ವೈಕಲ್ಯಗೊಳಿಸುತ್ತದೆ ಮತ್ತು ನಿಧಾನವಾಗಿ ಕೊಲ್ಲುತ್ತದೆ. ಈ ಕಾರಣಕ್ಕಾಗಿಯೇ ಮಧುಮೇಹಿಗಳು ‘ಮಧುಮೇಹ’ ರೋಗವನ್ನು ಯಾವಾಗಲೂ ನಿಯಂತ್ರಣದಲ್ಲಿ ಇಡಬೇಕಾದ ಅನಿವಾರ್ಯತೆ ಇದೆ.

ಚಿಕಿತ್ಸೆ ಹೇಗೆ?

ಮಧುಮೇಹ ರೋಗದ ಚಿಕಿತ್ಸೆಯ ಹೊಣೆಗಾರಿಕೆಯನ್ನು ವೈದ್ಯರಿಗೆ ಬಿಡಿ. ನೀವು ಯಾವತ್ತೂ ನಿಮ್ಮ ಇಚ್ಛೆಯಂತೆ ಅಥವಾ ಅನುಕೂಲಕ್ಕೆ ತಕ್ಕಂತೆ ಔಷಧಿಗಳನ್ನು ಸೇವಿಸಬಾರದು. ಸ್ವಯಂ ಮದ್ದುಗಾರಿಕೆ ಮತ್ತು ನಿಮ್ಮಿಷ್ಟದಂತೆ ಔಷಧಿಯ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು ಯಾವತ್ತೂ ಅಪಾಯಕಾರಿ. ಪದೇ ಪದೇ ವೈದ್ಯರನ್ನು ಬದಲಿಸಬೇಡಿ. ನಿಮ್ಮ ಕೆಲಸ ಏನಿದ್ದರೂ ದೇಹದ ತೂಕವನ್ನು ನಿಯಂತ್ರಿಸುವುದು, ಸರಿಯಾದ ಸಮತೋಲಿತ ವೈದ್ಯರು ತಿಳಿಸಿದ ಆಹಾರವನ್ನು ಕಾಲಕಾಲಕ್ಕೆ ತೆಗೆದುಕೊಳ್ಳುವುದು ಮತ್ತು ನಿರಂತರ, ನಿಯಮಿತ ದೈಹಿಕ ವ್ಯಾಯಾಮ ಮಾಡಿಕೊಂಡು ದೇಹದ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸೀಮಿತವಾಗಿರಬೇಕು. ವೈದ್ಯರ ಸಲಹೆ ಇಲ್ಲದೆ ಮಧುಮೇಹ ರೋಗದ ಮಾತ್ರೆಯ ಪ್ರಮಾಣ ಮತ್ತು ಇನ್ಸುಲಿನ್ ರಸದೂತದ ಪ್ರಮಾಣವನ್ನು ಬದಲಾಯಿಸಬಾರದು. ಚಿಕಿತ್ಸೆಯ ಹೊಣೆಗಾರಿಕೆಯನ್ನು ನಿಮ್ಮ ವೈದ್ಯರಿಗೆ ಬಿಟ್ಟುಕೊಟ್ಟಲ್ಲಿ, ಹೆಚ್ಚಿನ ಅಪಾಯಗಳನ್ನು ತಡೆಗಟ್ಟಬಹುದು.

1. ನಿರಂತರ ಮತ್ತು ನಿಯಮಿತ ವ್ಯಾಯಾಮ ಮಧುಮೇಹ ನಿಯಂತ್ರಣಕ್ಕೆ ಅತೀ ಅಗತ್ಯ. ವ್ಯಾಯಾಮ ಮಾಡಿದಾಗ ಮಾಂಸಖಂಡಗಳು ಮತ್ತು ಸ್ನಾಯುಗಳು ಕ್ರಿಯಾಶೀಲವಾಗುತ್ತದೆ ಹಾಗೂ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಈ ಶಕ್ತಿಯು ರಕ್ತದಲ್ಲಿರುವ ಗ್ಲೂಕೋಸ್‍ನಿಂದ ಸ್ನಾಯುಗಳಿಗೆ ಸರಬರಾಜು ಆಗುತ್ತದೆ. ವ್ಯಾಯಾಮದಿಂದ ಜೀವಕೋಶಗಳು ಚಯಾಪಚಯ ಕ್ರಿಯೆಗಳು ವೇಗವಾಗುತ್ತ, ಹಾಗಾದಾಗ ಹೆಚ್ಚಿನ ಕ್ಯಾಲರಿ (ಶಕ್ತಿ)ಯ ಅವಶ್ಯಕತೆ ಉಂಟಾಗಿ, ಗ್ಲೂಕೋಸ್‍ನಿಂದ ಶಕ್ತಿ ದೊರಕಿ, ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ದಿನಕ್ಕರ್ಧ ಗಂಟೆಗಳ ವ್ಯಾಯಾಮ, ಬಿರುಸು ನಡಿಗೆ ಬರೀ ಮಧುಮೇಹ ರೋಗಕ್ಕೆ ಮಾತ್ರವಲ್ಲ, ಹೃದಯ ರೋಗ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೂ ಅತೀ ಅವಶ್ಯಕ.

2. ಸೇವಿಸುವ ಆಹಾರ ಯಾವತ್ತೂ ಕೊಬ್ಬು, ಪ್ರೊಟೀನ್ ಮತ್ತು ಪಿಷ್ಟಗಳಿಂದ ಕೂಡಿದ್ದು ಸಮತೋಲಿನ ಆಹಾರವಾಗಿರಬೇಕು. ಆಹಾರವು ಅನ್ನ ಸತ್ವಗಳು (ವಿಟಮಿನ್‍ಗಳು) ಮತ್ತು ಖನಿಜಗಳಿಂದ ಕೂಡಿರಬೇಕು. ಕೇವಲ ಶರ್ಕರ ಪಿಷ್ಟಗಳು ಹೆಚ್ಚಾಗಿರುವ ಆಹಾರ ಒಳ್ಳೆಯದಲ್ಲ. ನಿಮ್ಮ ಆಹಾರ ಸೊಪ್ಪು, ಹಸಿರು ತರಕಾರಿ, ಕಾಳು ಬೇಳೆಗಳಿಂದ ಕೂಡಿರಲಿ. ಸಂಸ್ಕರಿತ ಕೃತಕ ಆಹಾರ ಬೇಡವೇ ಬೇಡ. ಮೂಲಾಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸೇವಿಸುವ ಆಹಾರ  ದೇಹದ ಗಾತ್ರ ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿರಲಿ. ಆಹಾರ ಬರೀ ರುಚಿಗಾಗಿ ಇರದೆ, ದೇಹದ ಆರೋಗ್ಯಕ್ಕೆ ಪೂರಕವಾಗಿರಲಿ. ನಾರುಯುಕ್ತ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿ. ಕೊಬ್ಬಿನಾಂಶ ಜಾಸ್ತಿ ಇರುವ ಕರಿದ ತಿಂಡಿಗಳು ಇರುವ ತಿನಿಸುಗಳಿಗೆ ಕಡಿವಾಣ ಹಾಕಬೇಕು.

3. ಮಾನಸಿಕ ಒತ್ತಡ ಕಡಿಮೆಯಾಗುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಒತ್ತಡದ ಸಂದರ್ಭಗಳಲ್ಲಿ ರಸದೂತಗಳ ಸ್ರವಿಸುವಿಕೆ ಜಾಸ್ತಿಯಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಜಾಸ್ತಿಯಾಗಬಹುದು. ಬಿಡುವಿಲ್ಲದ ಒತ್ತಡದ ದೈಹಿಕ ವ್ಯಾಯಾಮವಿಲ್ಲದ ಜೀವನ ಶೈಲಿಯು ‘ಮಧುಮೇಹ’ ರೋಗಕ್ಕೆ ಮುನ್ನುಡಿ ಬರೆಯುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ದೇಹಕ್ಕೆ ಮತ್ತು ಮನಸ್ಸಿಗೂ ಹಿತವಾದ ಸಂಗೀತ ಆಲಿಸುವುದು, ಯೋಗ, ಧ್ಯಾನ, ಪ್ರಾಣಯಾಮ ಇತ್ಯಾದಿಗಳಿಂದ ಮಾನಸಿಕ ಉದ್ವೇಗ, ತುಮುಲತೆಯನ್ನು ಕಡಿಮೆ ಮಾಡಿ ಮಾನಸಿಕ ನೆಮ್ಮದಿ, ಶಾಂತಿ ದೊರೆತಲ್ಲಿ ಮಧುಮೇಹ ಮಾತ್ರವಲ್ಲ ಇನ್ನೂ ಹತ್ತು ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು.

4. ತಜ್ಞ ವೈದ್ಯರ ಸಲಹೆಯಂತೆ ಚಾಚುತಪ್ಪದೆ ಔಷಧಿಯನ್ನು ಸೇವಿಸಬೇಕು. ಔಷಧಿಗಳ ಪ್ರಮಾಣ ಮತ್ತು ಹೊತ್ತುಗಾರಿಕೆಯನ್ನು ವೈದ್ಯರು ನಿರ್ಧರಿಸುತ್ತಾರೆ. ಒಟ್ಟಿನಲ್ಲಿ ಚಿಕಿತ್ಸೆಯ ಉದ್ದೇಶ ರೋಗವನ್ನು ಗುಣಪಡಿಸುವುದು ಆಗಿರದೆ, ರೋಗವನ್ನು ನಿಯಂತ್ರಣದಲ್ಲಿಡುವುದಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಿದಲ್ಲಿ ಬರಬಹುದಾದ ಎಲ್ಲಾ ಅಡ್ಡ ಪರಿಣಾಮಗಳನ್ನು ಮತ್ತು ಅಪಾಯವನ್ನು ತಡೆಗಟ್ಟಬಹುದು.

ಮಧುಮೇಹ ರೋಗ ಮಾರಣಾಂತಿಕ ರೋಗವಲ್ಲದಿದ್ದರೂ ಮುಂದೆ ಬಂದೊದಗುವ ಮರಣಕ್ಕೆ ಮುನ್ನುಡಿ ಬರೆಯುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತದೆ. ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲದಿದ್ದರೂ, ರೋಗವನ್ನು ಹತೋಟಿಯಲ್ಲಿಡುವ ಮತ್ತು ರೋಗದಿಂದಾಗುವ ಅಪಾಯಗಳನ್ನು ನಿಭಾಯಿಸುವುದಕ್ಕೆ ಹೆಚ್ಚಿನ ಆದ್ಯತೆ ಅತೀ ಅವಶ್ಯಕ. ಮಧುಮೇಹವನ್ನು ನಿರ್ಲಕ್ಷಿಸದೇ, ಸಾಕಷ್ಟು ಮುಂಜಾಗರೂಕತೆ ವಹಿಸಿದಲ್ಲಿ ಮಾತ್ರ ಈ ರೋಗದ ಅಟ್ಟಹಾಸಕ್ಕೆ ಲಗಾಮು ಹಾಕಲು ಸಾಧ್ಯವಾಗಬಹುದು. ಇಲ್ಲವಾದಲ್ಲಿ ಮುಂದಿನ ಪೀಳಿಗೆಯ ಮಕ್ಕಳು ಹುಟ್ಟುತ್ತಲೇ ಮಧುಮೇಹಿಗಳಾಗಿರಬಹುದು ಮತ್ತು ಮುಂಬರುವ ದಿನಗಳಲ್ಲಿ ಮಧುಮೇಹ ರೋಗ ಮನುಕುಲದ ಬಹುದೊಡ್ಡ ವೈರಿಯಾಗುವುದರಲ್ಲಿ ಎಳ್ಳಷ್ಟೂ ಸಂಶಯವೇ ಇಲ್ಲ.

dr-muralee-mohan

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ, ಮಂಜೇಶ್ವರ – 671323

ದೂ.: 04998-273544, 235111     ಮೊ.: 9845135787

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!